ಬಂಟ್ವಾಳ, ಸೆಪ್ಟೆಂಬರ್ 17, 2020 (ವಿಶ್ವಕನ್ನಡಿಗ ನ್ಯೂಸ್) : ಬಂಟ್ವಾಳ ಬಿ.ಜೆ.ಪಿ ಕ್ಷೇತ್ರ ಸಮಿತಿ ಪದಾಧಿಕಾರಿಗಳ, ವಿವಿಧ ಮೋರ್ಚಾಗಳ ಅಧ್ಯಕ್ಷ ಮತ್ತು ಪ್ರಧಾನಕಾರ್ಯದರ್ಶಿಗಳ, ಮಂಡಲ ಮಹಾಶಕ್ತಿ ಕೇಂದ್ರಗಳ ಪದಾಧಿಕಾರಿಗಳ, ಹಾಗೂ ಜಿಲ್ಲೆಯಿಂದ ನೇಮಕಗೊಂಡಿರುವ ಪ್ರಮುಖರ ಸಭೆಯು ಬಿ.ಸಿ.ರೋಡು ಬಿ.ಜೆ.ಪಿ ಕಛೇರಿಯಲ್ಲಿ ಗುರುವಾರ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಯು ರಾಜೇಶ್ ನಾಯ್ಕ್ ಗ್ರಾಮ ಪಂಚಾಯತ್ ಚುನಾವಣೆಯನ್ನು ಗೆಲ್ಲುವ ದೃಷ್ಠಿಯಲ್ಲಿ ಸರ್ವರೂ ಒಗ್ಗೂಡಿ ಕೆಲಸ ಮಾಡಬೇಕು. ನನ್ನ ಶಾಸಕತ್ವ ಅವಧಿಯಲ್ಲಿ ಪ್ರತಿ ಗ್ರಾಮಕ್ಕೆ ಅನುದಾನವನ್ನು ನೀಡಲಾಗಿದೆ. ಈಗಾಗಲೇ 400 ಕೋಟಿಗಿಂತಲೂ ಅಧಿಕ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಕೇಂದ್ರ ಸರಕಾರದ ಅನುದಾನವು ನೇರ ಪಂಚಾಯತಿಗಳಿಗೆ ಈಗಾಗಲೇ ಬಂದಿದ್ದು, ಮುಂದಿನ ದಿನಗಳಲ್ಲಿ ವರ್ಷಕ್ಕೆ ಕೋಟಿ ಅನುದಾನ ಬರುವ ಯೋಜನೆಯಿದೆ ಎಂದರು. ಈ ಚುನಾವಣೆಯನ್ನು ಎಲ್ಲಾ ಪಂಚಾಯತ್ಗಳಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಜಯಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಶಾಸಕ ರಾಜೇಶ್ ನಾಯಕ್ ಕರೆ ನೀಡಿದರು.
ಬಂಟ್ವಾಳ ಬಿಜೆಪಿ ಉಪಾಧ್ಯಕ್ಷ ಚಿದಾನಂದ ರೈ ಸಭಾಧ್ಯಕ್ಷತೆ ವಹಿಸಿದ್ದರು. ಚುನಾವಣಾ ಪೂರ್ವ ತಯಾರಿಯ ಬಗ್ಗೆ ಪೂರ್ಣ ಮಾಹಿತಿಯನ್ನು ಬಂಟ್ವಾಳದ ಮಂಡಲದ ಪಂಚಾಯತ್ ಚುನಾವಣಾ ಪ್ರಭಾರಿ ದೇವದಾಸ್ ಶೆಟ್ಟಿ ಸಭೆಗೆ ವಿವರಿಸಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ರಾಜ್ಯ ಬಿ.ಜೆ.ಪಿಯವರು ನೀಡಿದ ಕಾರ್ಯ ಸೂಚಿಯ ಬಗ್ಗೆ ಮಾಹಿತಿ ನೀಡಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.