ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಬಿ ಮೂಡ ಗ್ರಾಮದ ಕಾಮೆರಕೋಡಿ ನಿವಾಸಿ ಪುಷ್ಪ ಕೋಂ ದೇವು ಮೂಲ್ಯ ಅವರ ವಾಸ್ತವ್ಯದ ಮನೆ ಹಾನಿಗೊಂಡಿದ್ದು, ಸುಮಾರು 1 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಸಜಿಪಮುನ್ನೂರು ಗ್ರಾಮದ ನಿವಾಸಿ ಅಶ್ರಫ್ ಬಿನ್ ಮುಹಮ್ಮದ್ ಅವರ ಮನೆಯ ತಡೆಗೋಡೆ ಹಾಗೂ ಹೊಸ ಮನೆ ನಿರ್ಮಾಣಕ್ಕಾಗಿ ಹಾಕಲಾಗಿದ್ದ ಪಂಚಾಂಗ ಕುಸಿದಿದೆ. ಮೇರಮಜಲು ಗ್ರಾಮದ ತೇವುಕಾಡು ನಿವಾಸಿ ಹರಿಶ್ಚಂದ್ರ ಅವರ ಮನೆಯ ತಡೆಗೋಡೆ ಕುಸಿತಗೊಂಡಿದೆ. ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ಪಿ ರಾಮಚಂದ್ರ ಬಿನ್ ಬಾಬು ಮೂಲ್ಯ ಅವರ ಪಕ್ಕಾ ಮನೆಯ ಮಾಡು ಕುಸಿದು ಹಾನಿ ಸಂಭವಿಸಿದೆ. ವೀರಕಂಭ ಗ್ರಾಮದ ಬೊಣ್ಯಕುಕ್ಕು ನಿವಾಸಿ ಶ್ರೀಧರ್ ಬೆಳ್ಚಡ ಬಿನ್ ಕೊರಗ ಬೆಳ್ಚಡ ಅವರ ವಾಸದ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸೇಸಪ್ಪ ಮೂಲ್ಯ ಅವರ ಭತ್ತದ ಗದ್ದೆಗೆ ನೀರು ತುಂಬಿ ಹಾನಿ ಸಂಭವಿಸಿದೆ ಎಂದು ಬಂಟ್ವಾಳ ತಾಲೂಕು ಕಛೇರಿ ಮಳೆ ಹಾನಿ ವಿಭಾಗದ ವಿಷಯ ನಿರ್ವಾಹಕ ವಿಶುಕುಮಾರ್ ತಿಳಿಸಿದ್ದಾರೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.