ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದ.ಕ. ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ವ್ಯವಸ್ಥಿತ ಕೊಲೆ ಯತ್ನ ಪ್ರಕರಣಗಳು ಕಂಡು ಬರುತ್ತಿದ್ದು, ಈ ಎಲ್ಲಾ ಪ್ರಕರಣಗಳನ್ನು ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆಗೊಳಪಡಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಆಗ್ರಹಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಮುಹಮ್ಮದ್ ಶೆರೀಫ್ ಆಲಾಡಿ ಹಾಗೂ ಕಿನ್ನಿಗೋಳಿಯ ನೌಷದ್ ಎಂಬ ಇಬ್ಬರು ಯುವಕರ ಮೇಲೆ ಒಂದೇ ತಂಡವು ಕೊಲೆಗೆ ವಿಫಲ ಯತ್ನ ನಡೆಸಿತ್ತು. ಇದೀಗ ಮಾಜಿ ತಾ.ಪಂ. ಸದಸ್ಯ ಯೂಸೂಫ್ ಎಂಬವರ ಮೇಲೆ ದಾಳಿ ನಡೆಸಿ ಕೊಲೆ ಯತ್ನ ನಡೆಸಲಾಗಿದೆ. ಈ ದುಷ್ಕೃತ್ಯಗಳಲ್ಲಿ ಬಂಧಿತರಾಗಿರುವ ಆರೋಪಿಗಳೆಲ್ಲಾ ಸಂಘಪರಿವಾರದ ಕಾರ್ಯಕರ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘಪರಿವಾರವು ಮುಸ್ಲಿಮ್ ಯುವಕರ ಹತ್ಯೆ ನಡೆಸಿ ಜಿಲ್ಲೆಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿದೆ.
ಕೊಲೆ ರಾಜಕೀಯದ ಮೂಲಕ ಸಂಘಪರಿವಾರವು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಿದ ಬಹಳಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಈ ನಿಟ್ಟಿನಲ್ಲಿ ಈ ಎಲ್ಲಾ ಪ್ರಕರಣಗಳನ್ನು ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆಗೊಳಪಡಿಸಿ ಅರೋಪಿಗಳ ಹಿಂದಿರುವ ಕಾಣದ ಶಕ್ತಿಗಳನ್ನು ಬಂಧಿಸಬೇಕು ಮತ್ತು ಈ ದುಷ್ಕೃತ್ಯಗಳ ಹಿಂದಿನ ಷಡ್ಯಂತ್ರವನ್ನು ಕೂಡಲೇ ಬಯಲಿಗೆಳೆಯಬೇಕೆಂದು ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.