ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಗೆಳೆಯರೇ… ಒಂದು ಕ್ಷಣ ಸುಮ್ಮನೆ ಯೋಚನೆ ಮಾಡಿ ನೋಡಿ, ನಮ್ಮ- ನಿಮ್ಮ ನಡುವಿನ ಭಾವನೆಗಳ ಅಭಿವ್ಯಕ್ತಿ ಗೆ ‘ಭಾಷೆ’ ಅನ್ನುವ ಸಾಧನ ಇರದಿದ್ದರೆ ಏನಾಗ್ತಿತ್ತು ? ನನಗನ್ನಿಸುತ್ತೇ…ಖಂಡಿತವಾಗಿಯೂ ಮನುಷ್ಯ ಇಷ್ಟು ಮುಂದುವರೀತಾ ಇರಲಿಲ್ಲ..! ಸಮುದ್ರದ ಆಳಕ್ಕೆ ಹೋಗಿ ಸಂಶೋಧಿಸುವ, ಆಕಾಶದಲ್ಲಿ ಹಾರಾಡುವ ಸಾಮರ್ಥ್ಯವನ್ನು ಮನುಷ್ಯ ಹೊಂದುತ್ತಲೇ ಇರಲಿಲ್ಲ. ಯಾವಾಗ ಕಾಡಿನ ಅನಾಗರಿಕ ಬದುಕಿನಿಂದ ನಾಗರಿಕ ಜಗತ್ತಿಗೆ ಮನುಷ್ಯ ಬಂದನೋ, ಅಂದೇ ಭಾಷೆಯ ಉಗಮ ಆಗಿರಬಹುದು. ಕಾಲಕ್ಕೆ ತಕ್ಕ ಹಾಗೇ ಬದಲಾಗುತ್ತ, ಇನ್ನೂ ಬದಲಾಗುತ್ತಲೇ ಇರುವ ಭಾಷೆ ಈ ಜಗದ ಒಂದು ಅದ್ಭುತ ಶೋಧನೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಭಾಷೆಯ ಆಧಾರದ ಮೇಲೆ ರಾಜ್ಯಗಳು ಅರಳಿದ ಮೇಲಂತೂ ಭಾಷಾ ಪ್ರೇಮ ಪ್ರತಿಯೊಬ್ಬನಲ್ಲೂ ಇದೆ, ಅದು ಇರಬೇಕಾಗಿದ್ದು ಕೂಡ.
ಅಂಬೆಗಾಲಿಕ್ಕುತ್ತಾ ತೊದಲು ಮಾತನಾಡಲು ಕಲಿತ ನಾವೆಲ್ಲಾ ಉಚ್ಛರಿಸಿದ ಮೊದಲ ಪದ “ಅಮ್ಮ”, ಇನ್ನೂ ಉದಾಹರಣೆ ಕೊಡಬೇಕೆಂದರೆ, ರಾಮಾಯಣ ಬರೆದ ವಾಲ್ಮೀಕಿ ಒಬ್ಬ ನಿರಕ್ಷರಕುಕ್ಷಿ , ವಾಲ್ಮೀಕಿಗೆ ‘ರಾಮ’ ಎನ್ನಲು ಬಾರದಿರುವಾಗ ನಾರದರು ಅಲ್ಲೇ ಸುತ್ತಮುತ್ತಲಿನ ಮರಗಳನ್ನು ತೋರಿಸಿ ” ಮರ” ಎನ್ನುವ ಶಬ್ದ ಸತತವಾಗಿ ಉಚ್ಚರಿಸಲು ಹೇಳುತ್ತಾರೆ. ವಾಲ್ಮೀಕಿ ಪದೇ ಪದೇ ಅದನ್ನೇ ಉಚ್ಚರಿಸಿದಾಗ ಅದು ‘ರಾಮ ರಾಮ ‘ಎಂದಾಗಿದೆ. “ಮರ ” ಎನ್ನುವ ಶಬ್ದ ಕನ್ನಡದ ಹೊರತು ವಿಶ್ವದ ಯಾವುದೇ ಭಾಷೆಯಲ್ಲಿ ಬಳಕೆ ಇಲ್ಲ, ಹೀಗಾಗಿ ಕನ್ನಡಕ್ಕೆ 5600 ವರ್ಷಗಳ ಇತಿಹಾಸವಿದೆ ಎಂದು ಡಿವಿಜಿಯವರು ಒಂದು ಕಡೆ ತಮ್ಮ ಲೇಖನದಲ್ಲಿ ದಾಖಲಿಸ್ತಾರೆ.
ಎಂಟು ಜ್ಞಾನಪೀಠಗಳು, ಎರಡು ಸರಸ್ವತಿ ಸಮ್ಮಾನ್ ಪುರಸ್ಕಾರ, ಪಂಪ ರನ್ನ ಜನ್ನರಂತಹ ಕವಿರತ್ನತ್ರಯರು, ಪುರಂದರ ಕನಕರಂತಹ ದಾಸವರೇಣ್ಯರು, ಬಸವಣ್ಣ ಅಲ್ಲಮ ಅಕ್ಕಮಹಾದೇವಿರಂತಹ ವಚನವೃಣ್ಯರು, ಕುಮಾರವ್ಯಾಸ ಕಾಳಿದಾಸರಂತಹ ಕವಿತ್ವಸಂಪನ್ನರು, ಕುವೆಂಪು ಕಾರಂತ ಅಡಿಗರಂತಹ ಪ್ರತಿಭಾರತ್ನಗಳು, ಮಂಕುತಿಮ್ಮನ ಕಗ್ಗ ಮರುಳಮುನಿಯನ ಕಗ್ಗದಂತಹ ಆಧುನಿಕ ಭಗವದ್ಗೀತೆ…!!ಹೀಗೆ ಹೇಳುತ್ತಾ ಸಾಗಿದರೆ ದಿನವಿಡೀ ಮಾತನಾಡುವಷ್ಟು ಬಲಿಷ್ಠ ಶ್ರೇಷ್ಠ ಉತ್ಕೃಷ್ಟ ಭಾಷೆ ಅದು ಕನ್ನಡ ಕರುನಾಡ ಕನ್ನಡ…!
“ಸುಲಿದ ಬಾಳೆಯ ಹಣ್ಣಿನಂತೆ ಸಿಗುರು ತೆಗೆದ ಕಬ್ಬಿನಂತೆ” ಸುಲಭ ಲಾಲಿತ್ಯಪೂರ್ಣ ಭಾಷೆ ಅದು ಕನ್ನಡ. ಉದಾಹರಣೆಗೆ -ಈಗ ಕನ್ನಡದಲ್ಲಿ ‘ರಾಮ ರಾವಣನನ್ನು ಕೊಂದನು ಎಂದರು ನಡೆಯುತ್ತದೆ, ರಾವಣನನ್ನು ರಾಮ ಕೊಂದನು ಎಂದರೂ ನಡೆಯುತ್ತದೆ. ಅದೇ ನೀವು ಇಂಗ್ಲಿಷ್ ಭಾಷೆಯಲ್ಲಿ Rama killed Raavan ಅನ್ನುವುದನ್ನ ಆಚೀಚೆ ಮಾಡಿ Raavan killed Rama ಎಂದರೆ ಇಡೀ ರಾಮಾಯಣವನ್ನೇ ಪುನಃ ಬರೆಯಬೇಕಾದೀತು.. !! ಈ ಮಾತು ಯಾಕೆ ಅಂದ್ರೆ ಮನಸ್ಸಿನ ಯಾವುದೇ ಭಾವನೆಗಳನ್ನು ಸ್ಪಷ್ಟವಾಗಿ, ನೇರವಾಗಿ ಅಭಿವ್ಯಕ್ತಿಸಬಹುದಾದ ಒಂದೇ ಒಂದು ಭಾಷೆ ಎಂದರೆ ಅದು ಕನ್ನಡ.. ! “ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತೀರ್ಥ” ಎಂದು ನಿಸಾರ್ ಅಹ್ಮದ್ ಬರೆದಿದ್ದ ಸಾಲುಗಳು ಕನ್ನಡದ ಬಗ್ಗೆ ನಮಗಿರಬೇಕಾದ ಅದಮ್ಯ ಪ್ರೀತಿ-ಭಕ್ತಿಯನ್ನು ಹೇಳುತ್ತದೆ.ಅಂತಹ ಕನ್ನಡ ಪ್ರೇಮವನ್ನು ಜಗತ್ತಿನಲ್ಲೆಡೆ ಒಂದೇ ದಿನ ತಲುಪಿಸುವ ನೆನಪಿಸುವ ಎಲ್ಲರೊಳಗೊಂದಾಗಿ ಚಿಂತಿಸುವ ಒಂದು ಸುಸಂದರ್ಭ ಈ ನವೆಂಬರ್ 1 ರಾಜ್ಯೋತ್ಸವದಾಚರಣೆ.
ಇದು ಕೇವಲ ಸಾಂಕೇತಿಕ ಸಮಾರಂಭವಾಗದೆ ನಾಡು-ನುಡಿ ಕಲೆ ಸಂಸ್ಕೃತಿ ಮತ್ತು ವ್ಯಕ್ತಿ ಸ್ವಾತಂತ್ರ್ಯದತ್ತ ಬೆಳಕು ಚೆಲ್ಲುವ ವಿಶ್ಲೇಷಣೆ ಮಾಡುವ ದಿನವಾಗಬೇಕು. ಇದು ಬರೇ ನವೆಂಬರ್ -೧ರ ಭಾವಾತಿರೇಕದ ಕನ್ನಡ ದಿನಾಚರಣೆಯಾಗದೇ, ಕನ್ನಡೇತರರಿಂದ ಕನ್ನಡ ಹೇಳಿಸುವುದು, ಹಾಡಿಸುವುದು,ಒಂದು ದಿನದ ಮಟ್ಟಿಗೆ ಕನ್ನಡಾಭಿಮಾನದ ಹಾಡುಗಳನ್ನು ಗಟ್ಟಿಯಾಗಿ ಮೊಬೈಲ್, ಧ್ವನಿವರ್ಧಕಗಳಲ್ಲಿ ಕಿರುಚುವಂತೆ ಹಾಕುವುದು, ಕನ್ನಡದ ಬಾವುಟವನ್ನು ಒಂದೆರಡು ದಿನ ಮೈ -ಕೈಗೆ ಸುತ್ತಿಕೊಳ್ಳುವುದರಿಂದ ಕನ್ನಡ ನೆಲದ ಭಾಷೆಯ ಉಳಿವು ಆಸಾಧ್ಯ..!ಬದಲಾಗಿ ಕನ್ನಡದಲ್ಲೇ ಬಾಳಬೇಕು, ಬದುಕಬೇಕು, ಬದುಕುವ ದಾರಿ ತೋರಿಸಬೇಕು , ಬದುಕಿನ ಕಡೆವರೆಗೂ “ನಂಬರ್- ೧ ” ಕನ್ನಡಿಗರಾಗಿ ಕನ್ನಡ ಪ್ರೀತಿಯನ್ನು ಮೆರೆಯಬೇಕು. ಆದರೇ ಈಗಂತೂ ನಾಡಿನೆಲ್ಲೆಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಾಗುತ್ತಿರುವ ದಬ್ಬಾಳಿಕೆ, ಪ್ರಹಾರಗಳನ್ನು ಗಮನಿಸಿದರೆ ಭಯವಾಗುತ್ತದೆ..!! ಹೆಜ್ಜೆ-ಹೆಜ್ಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರವೃತ್ತಿ ಆಳುವವರಲ್ಲಿ ಹೆಚ್ಚಿದರೆ ಸಾಹಿತ್ಯ , ಭಾಷೆ ಎಲ್ಲಿ ಉಳಿದೀತು ? ನಾಡು ಹೇಗೆ ಬೆಳೆದೀತು ? ನಮ್ಮಲ್ಲೂ ಕೂಡ ಯಾರೋ ಆಕ್ಷೇಪಿಸಿದರೆಂದು ಪ್ರಕಟಿತ ಪುಸ್ತಕಗಳನ್ನು ಸರ್ಕಾರವೇ ನಿರ್ಬಂಧಿಸಿದ ಕೆಟ್ಟ ನಿದರ್ಶನಗಳಿವೆ. ಒಂದು ಸಣ್ಣ ಅಭಿಪ್ರಾಯ ವ್ಯಕ್ತಪಡಿಸುವುದರೊಳಗೆ ಅಲ್ಲೆಲ್ಲೊ ‘ಎಡ’ವಾಗಿ ಮತ್ತೆ ‘ಬಲ’ಕ್ಕೆ ತಿರುಗಿ ಆತ ತಾನು ‘ಮಧ್ಯಮ’ನೆಂದು ಕೂಗಿ ಕೊನೆಗೆ “ಅದಮ” ನೆಂಬ ಸಾರ್ವಜನಿಕ ಹಣೆಪಟ್ಟಿ ಯೊಂದಿಗೆ ಎಲ್ಲೋ ಮರೆಯಾಗಿ ಬಿಡುತ್ತಾನೆ ! ಇಲ್ಲವೇ ಬೀದಿ ಹೆಣವಾಗ್ತಾನೆ, ಇಲ್ಲಾ ಜೀವಂತ ಆತ್ಮಹತ್ಯೆ ಮಾಡಿಕೊಳ್ಳಲೂಬಹುದು !! ಬಹು ದೊಡ್ಡ ಪ್ರಜಾಪ್ರಭುತ್ವವಿದ್ದ ಈ ದೇಶದ ರಾಜ್ಯಗಳಲ್ಲಿ ಇಂತಹ ನಿರಂಕುಶವಾದಿ ಕ್ರಮಗಳ ಬಗ್ಗೆ ಹೇಸಿಗೆ ಎನಿಸುತ್ತದೆ. ಎಳೆಯರಿಂದ ಹಳೆಯರತನಕ ತಿರುಗಿ ನಿಂತರಷ್ಟೆ ಇದಕ್ಕೊಂದು ಕೊನೆ.
“ಜೋಗದ ಸಿರಿಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯೇ ನಿನಗೆ ನಿತ್ಯೋತ್ಸವ” ಅಂತ ನಿಸ್ಸಾರರ ಕವಿತೆಯನ್ನು ನಿತ್ಯವು ಕನ್ನಡಮ್ಮನಿಗೆ ಪ್ರಾರ್ಥನೆ ರೂಪದಲ್ಲಿ ಮಾಡುವ ಕನ್ನಡ ಮಕ್ಕಳು ನಾವಾಗಬೇಕಿದೆ. ” ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು”-ಎಂದ ಕುವೆಂಪುರವರ ನುಡಿ ನಮ್ಮದೆಯ ಹೊಕ್ಕಬೇಕಿದೆ. “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎನ್ನುವ ಪಂಪನಿಗಿದ್ದ ತಾಯಿ ನೆಲದ ಪ್ರೀತಿ ನಮ್ಮೊಳಗೂ ಹರಿಯಬೇಕಿದೆ.
ಕನ್ನಡವೆಂದರೆ ಬರಿ ಭಾಷೆಯಲ್ಲ. ಸಾವಿರಾರು ವರ್ಷಗಳ ಕಾಲ ಈ ನಮ್ಮ ನೆಲದಲ್ಲಿ ಬಾಳಿ ಬದುಕಿದ ಹಿರಿಯರ ಕಲೆ ,ಆಚಾರ , ವಿಚಾರ, ಆಹಾರ , ನಡೆ-ನುಡಿ, ವೇಷ-ಭೂಷಣ ಜೀವನಶೈಲಿಯ ಒಟ್ಟು ಸಂಸ್ಕೃತಿಯ ಹಬ್ಬ. ಸಂಸ್ಕೃತಿ ಹರಿವು ಕನ್ನಡಿಗರ ರಕ್ತದಲ್ಲಿ ನಿರಂತರವಾಗಿರಬೇಕು.
ಸ್ನೇಹಿತರೇ…, ಪಾಶ್ಚಾತ್ಯ ಭಾಷೆಗಳಲೆಯಲ್ಲಿ ಕೊಚ್ಚಿ ಹೋಗುತ್ತಿರುವ ಕನ್ನಡವನ್ನು ಆದಷ್ಟು ಹೆಚ್ಚು ಬಳಸಿ ಬಳಸಿ ಬೆಳೆಸಬೇಕು. ಭಾಷೆಯ ನಿರಂತರ ಬಳಕೆಯೇ ಅದರ ಉಳಿವಿನ ರಹದಾರಿ. ಒಂದಂತೂ ನೆನಪಿಡಿ,’ ಆಂಗ್ಲ ಅಥವಾ ಮತ್ತಿನ್ಯಾವುದೋ ಭಾಷೆಯ ವಿರೋಧಿಯಾಗದೇ ಭಾಷಾ ಸಮೃದ್ಧಿಗೆ ನಾಂದಿ ಹಾಡಬೇಕು. “ಎಲ್ಲಾ ದಿಕ್ಕುಗಳಿಂದ ಹೊಸಗಾಳಿ ಬರಲಿ, ಆದರೆ ನಮ್ಮ ಕಾಲು ನಮ್ಮ ನಾಡಿನಲ್ಲೇ ನೆಲೆಗೊಳ್ಳಲಿ” ಎನ್ನುವ ಕಾರಂತರ ಸಂದೇಶ ಸಮಸ್ತರಿಗೂ ಅರ್ಥವಾಗಲಿ, ಚೆಲುವ ಕನ್ನಡ ನಾಡು ಸುವರ್ಣ ಸಂಭ್ರಮದ ಬೀಡು ಬೆಳಗಿ ಬೆಳೆಯಲಿ. ಎಲ್ಲರ ಬದುಕು ಬರಹಗಳಿಗೊಂದು ಬೆಲೆ-ನೆಲೆ ಸಿಗಲಿ.
✍️ಸುಪ್ರೀತಾ_ಜಾನುವಾರುಕಟ್ಟೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.