ಧಾರವಾಡ (www.vknews.com) : ಭಾರತದಲ್ಲಿ ಉನ್ನತ ವ್ಯಾಸಂಗದ ಅವಕಾಶಗಳು, ವ್ಯಾಪಕ ಸಂಶೋಧನೆ ಮತ್ತು ವಿದ್ಯಾವಿಕಾಸದ ಮಾರ್ಗಗಳಿಗೆ ತಮ್ಮದೇ ಆದ ಅಪೂರ್ವ ಕೊಡುಗೆಯನ್ನು ನೀಡಿ ಶಿಕ್ಷಣಕ್ಕೊಂದು ಮೌಲ್ಯ ತಂದುಕೊಟ್ಟ ಮೌಲಾನಾ ಅಬುಲ್ ಕಲಂ ಆಜಾದ್ ಅವರು ‘ಭಾರತ ರತ್ನ’ವಾಗಿ ಇಂದಿಗೂ ಕೀರ್ತಿಶೇಷರಾಗಿದ್ದಾರೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಭಾರಿ ಪ್ರಾಚಾರ್ಯ ವೈ.ಬಿ. ಬಾದವಾಡಗಿ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಡಯಟ್ದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ಮೌಲಾನಾ ಅಬುಲ್ ಕಲಂ ಆಜಾದ್ ಅವರ 133ನೇ ಜನ್ಮದಿನೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಉರ್ದು, ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಸಾಹಿತ್ಯ ರಚಿಸಿ, ಕೇವಲ 16ನೇ ವಯಸ್ಸಿನಲ್ಲಿಯೇ ಪತ್ರಿಕೆಗಳಲ್ಲಿ ಪಾಂಡಿತ್ಯಪೂರ್ಣ ಲೇಖನ ಬರೆದು ಅನೇಕ ವಿದ್ವಾಂಸರ ಗಮನ ಸೆಳೆದಿದ್ದರು. ಆಜಾದ್ ಅವರು ಶಿಕ್ಷಣತಜ್ಞರಾಗಿ, ರಾಜನೀತಿಜ್ಞರಾಗಿ, ಶ್ರೇಷ್ಠ ವಾಗ್ಮಿ ಮತ್ತು ಅಪ್ರತಿಮ ಲೇಖಕರಾಗಿ ಖ್ಯಾತಿ ಹೊಂದಿದ್ದರು ಎಂದರು.
ಲಘು ಉಪನ್ಯಾಸ ನೀಡಿದ ಡಯಟ್ ಹಿರಿಯ ಉಪನ್ಯಾಸಕ ಜೆ.ಜಿ. ಸೈಯ್ಯದ, ಉಪನ್ಯಾಸಕಿ ಡಾ.ರೇಣುಕಾ ಅಮಲಝರಿ ಹಾಗೂ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಹ ಸಂಪಾದಕ ರಾಜು ಭೂಶೆಟ್ಟಿ ಅವರು, ಭಾರತದ ಶಿಕ್ಷಣ ಕ್ಷೇತ್ರದಲ್ಲಿಯ ವ್ಯಾಪಕ ಬದಲಾವಣೆಗಳಿಗೆ ಮೌಲಾನಾ ಆಜಾದ್ ಕಾರಣಕರ್ತರಾಗಿದ್ದಾರೆ. 1948ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ರಚನೆ, 1951ರಲ್ಲಿ ಖರಗಪುರದಲ್ಲಿ ದೇಶದ ಮೊದಲ ಐಐಟಿ-ಐಐಟಿ ಸ್ಥಾಪನೆ, 1952ರಲ್ಲಿ ಪ್ರೌಢ ಶಿಕ್ಷಣ ಆಯೋಗದ ರಚನೆ ಮಾಡಿ ಶಿಕ್ಷಣ ರಂಗವನ್ನು ಪ್ರಗತಿ ಪಥದತ್ತ ಕೊಂಡೊಯ್ದ ಕೀರ್ತೀ ಇವರಿಗೆ ಸಲ್ಲುತ್ತದೆ. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದ್ದ ಆಜಾದ್ ಅವರು 1956ರಲ್ಲಿ ಯುನೆಸ್ಕೋದ ಸಾಮಾನ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು. 1947 ರಿಂದ 1958 ರವರೆಗೆ ಭಾರತ ಸರಕಾರದ ಶಿಕ್ಷಣ ಮಂತ್ರಿಗಳಾಗಿ ಶ್ಲ್ಯಾಘನೀಯ ಸೇವೆಯನ್ನು ನೀಡಿದ್ದಾರೆ ಎಂದರು.
ಡಯಟ್ ಉಪನ್ಯಾಸಕರು, ಲಿಪಿಕ ನೌಕರರು ಹಾಗೂ ಇತರೇ ಸಿಬ್ಬಂದಿ ಸಮಾರಂಭದಲ್ಲಿ ಪಾಲ್ಗೊಂಡು ಮೌಲಾನಾ ಅಬುಲ್ ಕಲಂ ಆಜಾದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಗೌರವವನ್ನು ಸಲ್ಲಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.