ಅಂಕೋಲ(ವಿಶ್ವಕನ್ನಡಿಗ ನ್ಯೂಸ್): ಮಾನವೀಯ ಮೌಲ್ಯಗಳಿಗೆ ಒತ್ತು ಕೊಟ್ಟು ಪ್ರವಾದಿ ವರ್ಯರಿಂದ ಬೋಧನೆ ಗೊಂಡ ಪವಿತ್ರ ಪರಂಪರೆಯ ಸಂದೇಶಗಳನ್ನು ಪ್ರಾಯೋಗಿಕವಾಗಿ ಅನುಸರಿಸಿ ಸಮುದಾಯವನ್ನು ಸಮುಧ್ಧರಿಸುವ ಮಹತ್ತರ ಹೊಣೆಗಾರಿಕೆಯು ಪ್ರವಾದಿವರ್ಯರ ಉತ್ತರಾಧಿಕಾರಿಗಳಾದ ಉಲಮಾಗಳ ಮೇಲಿದೆ ಎಂದು ಕುಂಬೋಳ್ ಅಸ್ಸಯ್ಯಿದ್ ಅಲಿ ತಂಙಳ್ ನುಡಿದರು.
ಅವರು ರಾಜ್ಯ ಫೈಝೀಸ್ ಎಸೋಶಿಯೇಶನ್ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ದ ಫತ್ಹುಲ್ಲಾ ಶಾ ದರ್ಗಾ ವಠಾರದಲ್ಲಿ ನಡೆದ ರಬೀಹ್ ಕ್ಯಾಂಪೈನ್ ನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರವಾದಿ ಜನ್ಮದಿನದಿಂದ ಪುನೀತ ಗೊಂಡ ಪವಿತ್ರ ಮಾಸದಲ್ಲಿ ಮಾಸ ಪೂರ್ತಿ ಪ್ರವಾದಿ ಪ್ರಕೀರ್ತನೆ ಗಳನ್ನೂ ಸಂದೇಶಗಳ ಪ್ರಚಾರವನ್ನೂ ರಾಜ್ಯದ ವಿವಿಧ ಕಡೆಗಳಲ್ಲಿ ಹಮ್ಮಿಕೊಂಡು ಪ್ರವಾದಿ ಪ್ರೇಮಿಗಳಿಗೆ ಹೊಸ ಹುರುಪನ್ನು ನೀಡಿದ ಕಾರ್ಯಕ್ರಮವನ್ನು ತಂಙಳ್ ಶ್ಲಾಘಿಸಿದರು.
ಫೈಝೀಸ್ ಉಪಾಧ್ಯಕ್ಷರಾದ ಅಲ್ಹಾಜ್ ಶರೀಫ್ ಫೈಝಿ ಕಡಬ ಅಧ್ಯಕ್ಷತೆ ವಹಿಸಿದ್ದರು. ಮದ್ಹುರ್ರರಸೂಲ್ ಪ್ರಭಾಷಣ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಖಾಝಿಗಳಾದ ಇಶ್ತಿಯಾಕ್ ಅಹ್ಮದ್ ಮುಫ್ತಿ ಮಾತನಾಡಿ ಪ್ರವಾದಿಯ ಮಹತ್ವವನ್ನು ವಿವರಿಸಿ ಪ್ರವಾದಿಯ ಹಾದಿಯ ವ್ಯತಿ ಚಲನೆ ಶೈತಾನನ ಹಾದಿಯ ಅನುಕರಣೆ ಎಂದರು. ಫೈಝೀಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಮಿತ್ತಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಶೇಖ್ ಮುಹಮ್ಮದ್ ಫೈಝಿ ಉರ್ದುವಿನಲ್ಲೂ ಸಿರಾಜುದ್ದೀನ್ ಫೈಝಿ ಮಾಡನ್ನೂರು ಕನ್ನಡದಲ್ಲೂ ಅಬ್ದುಲ್ ಕರೀಂ ಫೈಝಿ ಮಲಯಾಳಂನಲ್ಲೂ ಸಂದೇಶ ಭಾಷಣ ನೀಡಿದರು. ,’ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರ’ ಎಂಬ ಕೇಂದ್ರೀಯ ವಿಷಯದಲ್ಲಿ ನಡೆದ ಅಭಿಯಾನದ ಸಮಾರೋಪ ದಲ್ಲಿ ಸಂದೇಶ ಭಾಷಣಗಾರರು ಮನುಷ್ಯ ಹಾಗೂ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಪ್ರವಾದೀ ಶಿಕ್ಷಣವನ್ನು ವ್ಯಾಪಕಗೊಳೀಸಬೇಕಾದ ಅನಿವಾರ್ಯತೆಯನ್ನು ವಿವರಿಸಿದರು. ಸದ್ಗುಣಗಳ ಪೂರ್ತೀಕರಣವೇ ಪ್ರವಾದಿ ಆಗಮನದ ಉದ್ದೇಶವಾಗಿದ್ದು, ಪ್ರವಾದಿಗಳ ಸದ್ಗುಣ ಚರ್ಯೆಗಳ ಅನುಕರಣೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ, ನ್ಯಾಯ,ಸಚ್ಚಾರಿತ್ರ್ಯ ಮತ್ತು ಸಮಾನತೆ ನೆಲೆಗೊಳ್ಳಲು ಸಾಧ್ಯ ಎಂದರು.
ಪ್ರಸಕ್ತ ಸಂದರ್ಭದಲ್ಲಿ ಅಮಲು ಪದಾರ್ಥಗಳ ಉಪಯೋಗ, ಅನೈತಿಕತೆ, ಅನಾಚಾರಗಳು ಮುಗಿಲು ಮುಟ್ಟುವಂತಿದ್ದು ಸಮಾಜವನ್ನು ಪ್ರವಾದೀ ಶಿಕ್ಷಣದ ಮೂಲಕ ಜಾಗ್ರತಿ ಗೊಳಿಸುವುದು ಜರೂರತ್ತಾಗಿದೆ ಎಂದು ಸಂದೇಶ ಭಾಷಣಕಾರರು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾಗಿ ಅಂಕೋಲದ ಅಹ್ಲ್ ಬೈತ್ ಪ್ರಮುಖರಾದ ಪ್ರಮುಖರಾದ ಸಯ್ಯಿದ್ ಇಸ್ಮಾಯಿಲ್ ನೂರುಲ್ಲಾ ಫೀರ್ಝಾದೆ, ಅಂಕೋಲಾ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಮಂಝರ್ ಹುಸೈನ್ ಸಯ್ಯಿದ್, ಫೈಝೀಸ್ ರಾಜ್ಯ ಕೋಶಾಧಿಕಾರಿ ಅಲ್ ಹಾಜ್ ಸುಲೈಮಾನ್ ಫೈಝಿ ಕನ್ಯಾನ, ಉಪಾಧ್ಯಕ್ಷರಾದ ಉಮರ್ ಫೈಝಿ ಸಾಲ್ಮರ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ರಾದ ಖ್ಯಾತ ವಿದ್ವಾಂಸ ಅಬ್ದುರ್ರಹ್ಮಾನ್ ಫೈಝಿ ಬಜಾಲ್, ಫೈಝೀಸ್ ಚಿಕ್ಕಮಗಳೂರು ಜಿಲ್ಲಾ ಸಮಿತಿ ನಿರ್ವಾಹಕರಾದ ಮುಹಮ್ಮದ್ ಸಲೀಂ ಫೈಝಿ ಇರ್ಫಾನಿ ಮೂಡಿಗೆರೆ, ಬೆಂಗಳೂರು ಜಿಲ್ಲಾ ಸಮಿತಿಯ ನಿರ್ವಾಹಕರಾದ ಉಸ್ಮಾನ್ ಫೈಝಿ ಬೆಂಗಳೂರು, ಉತ್ತರ ಕನ್ನಡ ಜಿಲ್ಲೆಯ ಫೈಝೀಸ್ ನಿರ್ವಾಹಕರಾದ ಝುಬೈರ್ ಫೈಝಿ ಅಂಕೋಲ, ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ವೈಸ್ ಚೇರ್ ಮೇನ್ ನವಾಝ್ ಅಬ್ದುಲ್ಲಾ ಶೇಖ್ ,ಸಯ್ಯಿದ್ ಅಬ್ದುರ್ರಹ್ಮಾನ್ ಖಾದ್ರಿ, ಅಂಕೋಲಾ ಅಂಜುಮನ್ ಇಸ್ಲಾಂ ಕಾರ್ಯದರ್ಶಿ ನಿಝಾರ್ ಅಹ್ಮದ್ ಉಸ್ಮಾನ್ ಶಾ, ಉಪಾಧ್ಯಕ್ಷರಾದ ರಿಜ್ವಾನ್ ಝಮೀರ್ ಮುಲ್ಲಾ, ಗಂಗಾವತಿ ಮಸೀದಿ ಅಧ್ಯಕ್ಷರಾದ ಅಹ್ಮದ್ ಬಶೀರ್ ಮೊದಲಾದವರು ಉಪಸ್ಥಿತರಿದ್ದರು.
ಫೈಝೀಸ್ ಹೊರತಂದ ಕ್ಯಾಲೆಂಡರನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ವಿತರಣೆಗೆ ಇದೇ ಸಂದರ್ಭದಲ್ಲಿ ಉತ್ತರ ಕನ್ನಡ ಖಾಝಿಗಳು ಚಾಲನೆ ನೀಡಿದರು. ಎಸ್ಕೆಎಸ್ಸೆಸ್ಸೆಫ್ ಗಂಗಾವತಿ ಯೂನಿಟ್ ಕಾರ್ಯಕರ್ತರು ಫೈಝೀಸ್ ರಾಜ್ಯ ಸಮಿತಿ ಹಾಗೂ ಸಮಾರಂಭದ ಅತಿಥಿ ಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನೆಬಿ ಕೀರ್ತನಾ ಮಜ್ಲಿಸ್ ಹಾಗೂ ಇತ್ತೀಚೆಗೆ ನಿಧನರಾದ ಫೈಝೀಸ್ ಅಧ್ಯಕ್ಷರಾದ ಉಸ್ಮಾನುಲ್ ಫೈಝಿಯವರ ಧರ್ಮಪತ್ನಿ ಮರ್ಹೂಮಾ ನಫೀಸಾ ರಿಗೆ ಖತ್ಮುಲ್ ಕುರ್ಆನ್ ವಿಶೇಷ ಪ್ರಾರ್ಥನೆಯು ಕುಂಬೋಳ್ ತಂಙಳ್ ರವರ ನೇತೃತ್ವದಲ್ಲಿ ನಡೆಯಿತು.
ಫೈಝೀಸ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಬೂ ಸಾಲಿಹ್ ಫೈಝಿ ಯವರು ವಿವಿಧ ಜಿಲ್ಲೆಗಳ ಫೈಝಿ ವಿದ್ವಾಂಸರನ್ನು ಒಟ್ಟು ಸೇರಿಸಿ ಬಸ್ ಸೌಕರ್ಯ ಏರ್ಪಡಿಸಿ ಸಮಾರಂಭಕ್ಕೆ ತಲುಪಿಸುವಲ್ಲಿ ಮೇಲ್ನೋಟ ವಹಿಸಿದ್ದರು. ಫೈಝೀಸ್ ನ ಹಿರಿಯ ಸದಸ್ಯರೂ ಕಿರಿಯ ಸದಸ್ಯರೂ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರರಷ್ಟು ವಿದ್ವಾಂಸರು ಭಾಗವಹಿಸಿದ್ದರು.ಸಮಿತಿ ಕಾರ್ಯಕರ್ತರಾದ ಮುಹಮ್ಮದ್ ಸಲೀಂ ಫೈಝಿ ಇರ್ಫಾನಿ ಯಾತ್ರಾ ಮುಖ್ಯಸ್ಥರಾಗಿಯೂ ಜಾಬಿರ್ ಫೈಝಿ ಸಹಾಯಕ ಮುಖ್ಯಸ್ಥ ರಾಗಿಯೂ ಕಾರ್ಯ ನಿರ್ವಹಿಸಿದರು. ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಫೈಝಿ ಕರಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.