(www.vknews.com) : ಪ್ರೊ.ಎಂ. ಅಬೂಬಕರ್ ತುಂಬೆ – ಈ ಹೆಸರು ನೆನಪಾಗುವಾಗ ಥಟ್ಟನೆ ಹೊಳೆಯುವುದು ತುಂಬೆ ಶಾಲೆಯ ಶಿಸ್ತು ಮತ್ತು ನಿಶ್ಯಬ್ಧತೆ. ನಾನು 1993-1995 ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಯಾಗಿದ್ದ ಆ ಸಂದರ್ಭದಲ್ಲಿ ತುಂಬೆ ಕಾಲೇಜಿನ ಪ್ರಾಚಾರ್ಯರಾಗಿದ್ದ ಅಬೂಬಕರ್ ಸರ್ ರವರು ತೋರಿದ ಶಿಸ್ತು, ರೀತಿ-ನೀತಿಗಳು, ವೃತ್ತಿಪರತೆ, ವಿದ್ಯಾರ್ಥಿಗಳಿಗೆ ಅವರು ನೀಡುತ್ತಿದ್ದ ಮಾರ್ಗದರ್ಶನ ಎಲ್ಲವೂ ವಿವರಣಾತೀತವಾಗಿದ್ದು ಬದುಕಿನಲ್ಲಿ ಅಪಾರ ಪ್ರಭಾವ ಬೀರಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿಯೇ ಸ್ಮರಿಸಿಕೊಳ್ಳುತ್ತೇನೆ.
ಅಬೂಬಕರ್ ಸರ್ ರವರು ತರಗತಿ ತಪಾಸಣೆ ನಡೆಸುತ್ತಿದ್ದ ರೀತಿ ಅವಿಸ್ಮರಣೀಯವಾದದ್ದು. ಅವರ ಶೂ ಸಪ್ಪಳ ಕೇಳುತ್ತಲೇ ನಾವು ಭಯದಿಂದ ನಡುಗುತ್ತಿದ್ದೆವು ಮತ್ತು ಒಂದು ವೇಳೆ ಅವರು ತರಗತಿಯ ಕೊಠಡಿಯೊಳಗೆ ಪ್ರವೇಶಿಸಿದರೆಂದರೆ ನಮ್ಮ ಹಣೆ ಬೆವರುತ್ತಿತ್ತು. ಇವೆಲ್ಲವುಗಳ ಮಧ್ಯೆಯೂ ಅಬೂಬಕರ್ ಸರ್ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದರು. ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ನನ್ನನ್ನು ಹಲವೆಡೆಗೆ ಕರೆದುಕೊಂಡು ಹೋಗಿದ್ದರು. ತುಂಬೆ ಶಾಲೆಯ ವಿದ್ಯಾರ್ಥಿಯಾಗಿದ್ದ ಆ ಸಂದರ್ಭದಲ್ಲಿ ಅವರು ನನಗೆ ನೀಡಿದ ಪ್ರೋತ್ಸಾಹ ಮತ್ತು ಬೆಂಬಲವನ್ನು ಜೀವಮಾನದಲ್ಲೆಂದೂ ಮರೆಯಲು ಸಾಧ್ಯವಿಲ್ಲ.
1995 ರಲ್ಲಿ ಕೌಟುಂಬಿಕ ಸಮಸ್ಯೆಯಿಂದಾಗಿ ನಾನು ತುಂಬೆ ಶಾಲೆಯನ್ನು ತೊರೆದ ಬಳಿಕ ಅಬೂಬಕರ್ ಸರ್ ರೊಂದಿಗಿನ ಸಂಪರ್ಕ ಇಲ್ಲದಾಯಿತು. ನಂತರ ನಾನು ಅವರನ್ನು ಭೇಟಿಯಾದದ್ದು 2001ರಲ್ಲಿ. ಹಲವು ವಿಷಯಗಳನ್ನು ಚರ್ಚಿಸಿದ ಬಳಿಕ ನನ್ನ ಪಾಲಿಗೆ ಗಲ್ಫ್ ಗೆ ತೆರಳುವುದೇ ಸೂಕ್ತವೆಂದು ಅಬೂಬಕರ್ ಸರ್ ರವರು ನನಗೆ ಮನದಟ್ಟು ಮಾಡಿಕೊಟ್ಟರು. ಅದರ ಬಳಿಕ ನಮ್ಮಿಬ್ಬರ ಗುರು-ಶಿಷ್ಯ ಸಂಬಂಧ ಮತ್ತಷ್ಟೂ ಸುದ್ರಢಗೊಂಡಿತು. ನಿಜಕ್ಕೂ ಆ ಭೇಟಿ ನನ್ನ ಜೀವನವನ್ನೇ ಬದಲಿಸಿದ ಮುಖ್ಯ ತಿರುವೇ ಆಗಿತ್ತು.
2003 ರಲ್ಲಿ ಉದ್ಯೋಗವನ್ನು ಅರಸುತ್ತಾ ವಿಸಿಟಿಂಗ್ ವೀಸಾ ಮೂಲಕ ಯುಎಇ ಗೆ ಕಾಲಿಟ್ಟಾಗ ಅಬೂಬಕರ್ ಸರ್ ರವರ ಸ್ವಅನುಭವದಿಂದ ಕೂಡಿದ ಮಾರ್ಗದರ್ಶನ ಮತ್ತು ಅವರು ನನ್ನೊಂದಿಗೆ ತೋರಿದ ಸಹಕಾರ ಮತ್ತು ಉದಾರತೆಯನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಆ ಸಂದರ್ಭ ನಾನು ಹೆಚ್ಚಿನ ಸಮಯವನ್ನು ಅವರೊಂದಿಗೆ ಕಳೆಯಲು ಸಾಧ್ಯವಾಗಿದ್ದು ನನ್ನ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ ಎನ್ನಲು ಬಹಳ ಸಂತೋಷ ಪಡುತ್ತೇನೆ.
ಅಬೂಬಕರ್ ಸರ್ ರವರ ಗುಣ ಸ್ವಭಾವ, ದೈವನಿಷ್ಠೆ, ಪ್ರಬುದ್ಧತೆ, ಸರಳತೆ ಮತ್ತು ವಿನಯವಂತಿಕೆ ನಿಸ್ಸಂಶಯವಾಗಿಯೂ ಮೆಚ್ಚಬೇಕಾದದ್ದೇ. ಸಮಯ ಪಾಲನೆ ಅವರ ವಿಶಿಷ್ಟ ಗುಣಗಳಲ್ಲೊಂದು. ಸಮಯದ ಮಹತ್ವವನ್ನು ಅವರು ಚೆನ್ನಾಗಿ ಅರಿತುಕೊಂಡಿದ್ದರು. ಯೌವ್ವನದ ಕಿಚ್ಚಿನಲ್ಲಿ ಎತ್ತಲೋ ಸಾಗಬೇಕಿದ್ದ ಹಲವು ಯುವ ಪಡೆಯನ್ನು ತನ್ನ ಸಾರವತ್ತಾದ ಧಾರ್ಮಿಕ ಉಪದೇಶದ ಮೂಲಕ ಅವರನ್ನು ಸರಿ ದಾರಿಗೆ ತರಲು ಪ್ರಯತ್ನಿಸಿ ಯಶಸ್ಸು ಕಂಡದ್ದು ಪ್ರಶಂಸನೀಯವೇ ಆಗಿದೆ. ನಾನಾ ಕಾರಣಗಳಿಂದಾಗಿ ಶಾಲೆಯನ್ನು ತೊರೆದ ಅದೆಷ್ಟೋ ವಿದ್ಯಾರ್ಥಿಗಳನ್ನು ತನ್ನ ಅಪ್ರತಿಮ ಕೌನ್ಸೆಲ್ಲಿಂಗ್ ಮೂಲಕ ಮತ್ತೆ ಕಲಿಕೆಯನ್ನು ಮುಂದುವರಿಸುವಂತೆ ಪ್ರೇರೇಪಿಸಿದ್ದು ಅವರ ಹೃದಯ ವೈಶಾಲ್ಯತೆಯ ಕೆಲವೊಂದು ಪ್ರತ್ಯಕ್ಷ ಉದಾಹರಣೆಗಳಷ್ಟೇ.
ತೀರಾ ಬಡ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದು ಹಂತ ಹಂತವಾಗಿ ಯಶಸ್ಸಿನ ಶಿಖರವನ್ನೇರುತ್ತಿದ್ದ ಪ್ರೊ.ಎಂ.ಅಬೂಬಕರ್ ಸರ್ ರವರು ಬಡವರ ಬಗ್ಗೆ ತೀವ್ರ ಕಾಳಜಿ ಮತ್ತು ಅಪಾರ ಅನುಕಂಪ ಹೊಂದಿದ್ದರಲ್ಲದೆ ಕೊಡುಗೈ ದಾನಿಯೂ ಆಗಿದ್ದರು. ಪ್ರಚಾರ ಮತ್ತು ಮುಖಸ್ತುತಿ ಯನ್ನು ಅವರು ಎಳ್ಳಷ್ಟೂ ಇಷ್ಟ ಪಡುತ್ತಿರಲಿಲ್ಲ.
ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪ್ರೊ.ಎಂ.ಅಬೂಬಕರ್ ಸರ್ ರವರು ಇಡೀ ಮಾನವ ಸಮುದಾಯದ ಅಮೂಲ್ಯ ಸೊತ್ತಾಗಿದ್ದರು ಮಾತ್ರವಲ್ಲದೆ ಅವರ ನಿಧನದಿಂದಾಗಿ ನಾವು ಓರ್ವ ಅತ್ಯುತ್ತಮ ಶಿಕ್ಷಣ ತಜ್ಞರನ್ನು ಕಳೆದುಕೊಂಡಿದ್ದೇವೆ. ತನ್ನ ಅದ್ವಿತೀಯ ಗುಣ ಸ್ವಭಾವ ಮತ್ತು ಸೇವಾ ಮನೋಭಾವನೆಯಿಂದ ಕೂಡಿದ ಸದ್ವರ್ತನೆಯಿಂದಾಗಿ ಸರ್ವರ ಮನ ಗೆದ್ದಿರುವ ಅಬೂಬಕರ್ ಸರ್ ರವರು ನಮ್ಮಿಂದ ಕಣ್ಮರೆಯಾಗಿದ್ದರೂ ನಮ್ಮ ಮನಸ್ಸಿನಿಂದ ಎಂದೆಂದಿಗೂ ಮರೆಯಾಗಲಾರರು ನಿಶ್ಚಿತ.
ಹಲವಾರು ಸಮಾಜ ಪೂರಕ ಯೋಜನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಸಾರ್ಥಕ ಜೀವನ ನಡೆಸಿ ಸೃಷ್ಟಿಕರ್ತನ ಅನುಲ್ಲಂಘನೀಯ ಕರೆಗೆ ಓಗೊಟ್ಟು ನಮ್ಮಿಂದ ಅಗಲಿ ಹೋದ ಅಬೂಬಕರ್ ಸರ್ ಇನ್ನು ಕೇವಲ ನೆನಪು ಮಾತ್ರ. ಸರ್ವಶಕ್ತನಾದ ಅಲ್ಲಾಹನು ಅವರ ತಪ್ಪುಗಳನ್ನೆಲ್ಲಾ ಮನ್ನಿಸಿ ಸ್ವರ್ಗೋದ್ಯಾನದಲ್ಲಿ ಪ್ರವೇಶ ಗೊಳಿಸಲಿ. ಆಮೀನ್ ಆಮೀನ್ ಆಮೀನ್ ಯಾ ರಬ್ಬಲ್ ಆಲಮೀನ್
✍️ ಮುಹಮ್ಮದ್ ಕುತುಬುದ್ದೀನ್ ಫಯಾಝ್, ದುಬೈ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.