(www.vknews in) ಹಲವು ಸುತ್ತಿನ ಚರ್ಚೆಗಳ ನಂತರ ರಾಜ್ಯದಲ್ಲಿ ೧ ರಿಂದ ೯ ನೇ ತರಗತಿಯ ಮಕ್ಕಳನ್ನು ಮುಂದಿನ ತರಗತಿಗಳಿಗೆ ಯಾವುದೇ ಆನ್ಲೈನ್ /ಆಫ್ ಲೈನ್ ಪರೀಕ್ಷೆಯಿಲ್ಲದೆ ಮೌಲಾಂಕ್ಯನದ ಮೂಲಕ ಮುಂದಿನ ತರಗತಿಗೆ ತೇರ್ಗಡೆ ಮಾಡಲು ಹೊರಡಿಸಿರುವ ಸರ್ಕಾರದ ಸುತ್ತೋಲೆಯನ್ನು ಖ್ಯಾತ ಶಿಕ್ಷಣ ತಜ್ಞ ಹಾಗೂ ಎಸ್ಡಿಎಂಸಿ ಸಮನ್ವಯ ವೇದಿಕೆಯ ಮಹಾಪೋಷಕರಾದ ಡಾ.ನಿರಂಜನಾರಾಧ್ಯ. ವಿ. ಪಿ ರವರು ಸ್ವಾಗತಿಸಿದ್ದಾರೆ
ಶಿಕ್ಷಣ ಇಲಾಖೆ ಶಿಕ್ಷಣ ಹಕ್ಕು ಕಾಯಿದೆ ೨೦೦೯ ಹಾಗು ನಿಯಮಗಳ ಮೂಲ ಆಶಯದಂತೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ(ಸಿಸಿಇ) ಅಡಿಯಲ್ಲಿ ಮಕ್ಕಳ ಕಲಿಕೆಯನ್ನು ಸಮಗ್ರವಾಗಿ ಪರಿಶೀಲಿಸಿ, ಸಿಸಿಇ ಅನ್ವಯ ಹಲವು ಹಂತಗಳಲ್ಲಿ ನಡೆದಿರುವ *ಸಂಚಿತ ಕಲಿಕೆ* (Cumulative learning ) ಹಾಗು *ಮಗವಿನ ಸಾಧನೆಯ ಸಂಕ್ಷಿಪ್ತ ಚಿತ್ರಣ*(Child performance profile) ವನ್ನು ಆಧರಿಸಿ ತೇರ್ಗಡೆ ಮಾಡುವ ತೀರ್ಮಾನ ಕಾನೂನು ಬದ್ಧವಾಗಿದ್ದು ಶಿಕ್ಷಣದ ಮೂಲಭೂತ ಹಕ್ಕಿನ ಆಶಯವನ್ನು ಎತ್ತಿ ಹಿಡಿಯುತ್ತದೆ. ಇದಕ್ಕಾಗಿ ಮಾನ್ಯ ಸಚಿವರಿಗೆ ಅಭಿನಂದನೆಗಳು.
ಬಹಳ ಮುಖ್ಯವಾಗಿ, ಮಕ್ಕಳನ್ನು ಉತ್ತೀರ್ಣ/ಅನುತ್ತೀರ್ಣ ಎಂದು ಅವೈಜ್ಞಾನಿಕವಾಗಿ ತೀರ್ಮಾನಿಸುವ ಬದಲು, ಮೇಲಿನ ತೇರ್ಗಡೆ ಪ್ರಕ್ರಿಯೆಗೆ ಅನುಸರಿಸುವ ಮಾನದಂಡವನ್ನು ಆಧರಿಸಿ ಮಕ್ಕಳಲ್ಲಿ ಕಂಡುಬರುವ ಕಲಿಕಾ ನ್ಯೂನತೆಯನ್ನು ವಿಷಯವಾರು/ತರಗತಿವಾರು ಗುರುತಿಸಿ, ವಿಶ್ಲೇಷಿಸಿ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾದ ಕೂಡಲೇ ಮಕ್ಕಳು ಈ ಕಲಿಕಾ ನ್ಯೂನತೆಗಳನ್ನು ಸರಿಪಡಿಸಲು ಶಾಲೆಗಳು ಅಗತ್ಯ ಕ್ರಮವಹಿಸುವ ಬಗ್ಗೆ ಸುತ್ತೋಲೆಯಲ್ಲಿ ಪ್ರಸ್ತಾಪಿಸಿರುವುದು ಮಕ್ಕಳ ಕಲಿಕಾ ದೃಷ್ಟಿಯಿಂದ ಮಹತ್ವದ ಹೆಜ್ಜೆ.
ಇದು ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ ೧೬, ೨೪ ಮತ್ತು ೨೯ ಹಾಗು ನಿಯಮ ೨೩ ರ ಆಶವನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನವಾಗಿದೆ. ಇದು ನಿಜವಾಗಿಯೂ ಜಾರಿಯಾಗಬೇಕಾದರೆ, ಏಪ್ರಿಲ್ ೩೦ ರ ಒಳಗೆ ಫಲಿತಾಂಶಗಳು ಹೊರಬಿದ್ದ ಕೂಡಲೇ ಸಿದ್ಧತೆ ಪ್ರಾರಂಭಿಸುವಂತೆ ಮಾನ್ಯ ಸಚಿವರು ಸಂಬಂಧಿಸಿದ ಶೈಕ್ಷಣಿಕ ಸಿಬ್ಬಂದಿಗೆ ಸೂಚಿಸುವುದು ಬಹಳ ಮುಖ್ಯವೆಂದು ಭಾವಿಸುತ್ತೇನೆ.
ಶೈಕ್ಷಣಿಕ ಪ್ರಗತಿಗಾಗಿಯೇ ಇರುವ ಗುಚ್ಛ ಸಂಪನ್ಮೂಲ ಕೇಂದ್ರ (ಸಿ ಆರ್ ಸಿ), ಕ್ಷೇತ್ರ ಸಂಪನ್ಮೂಲ ಕೇಂದ್ರ( ಬಿಆರ್ ಸಿ) , ಡಯಟ್ ಮತ್ತು ಡಿಎಸ್ ಇ ಆರ್ ಟಿ ಗಳು ಈ ಕೆಲಸವನ್ನು ಮೇ ೧ ರಿಂದಲೇ ಪ್ರಾರಂಭಿಸುವುದು ಸೂಕ್ತ.
ಈ ಫಲಿತಾಂಶಗಳ ಕಲಿಕಾ ವಿಶ್ಲೇಷಣೆಗಳ ಆಧಾರದಲ್ಲಿ , ಶಿಕ್ಷಣ ಇಲಾಖೆ ಒಂದು ಕಾರ್ಯ ಯೋಜನೆ ತಯಾರಿಸಿ, ಶಾಲಾವಾರು ಶಿಕ್ಷಕರು ಮಾಡಿಕೊಳ್ಳಬೇಕಾದ ಸಿದ್ಧತೆ ಹಾಗು ವ್ಯವಸ್ಥೆಗಳನ್ನು ಆನ್ ಲೈನ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ರಜಾ ಅವಧಿಯಲ್ಲಿ ತರಬೇತಿ ನೀಡಿದಲ್ಲಿ ಶಾಲೆಗಳು ಪುನಾರಂಭವಾದ ತಕ್ಷಣ ಕಾರ್ಯಸನ್ನದ್ಧರಾಗಲು ಸಹಾಯವಾಗುತ್ತದೆ.
ಮಕ್ಕಳಿಗೆ ಆಗಿರುವ ಕಲಿಕಾ ನಷ್ಟವನ್ನು ತುಂಬಿಕೊಡಲು , ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸುವಂತೆ ನಾನು ಸನ್ಮಾನ್ಯ ಶಿಕ್ಷಣ ಸಚಿವರಲ್ಲಿ ಮನವಿ ಮಾಡುತ್ತೇನೆ. ನಿರಂಜನಾರಾಧ್ಯ.ವಿ.ಪಿ ಅಭಿವೃದ್ಧಿ ಶಿಕ್ಷಣ ತಜ್ಞ ಹಾಗು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಹರಿಕಾರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.