ಪರಿಸ್ಥಿತಿಗೆ ಹೊಂದಿಕೊಂಡು ಹೋಗಲು ಜನರ ಮನಸ್ಥಿತಿ ಸಿದ್ಧವಾಗಿ ಬಿಟ್ಟಿದೆ
ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಯೋಜನೆಗಳನ್ನು ರೂಪಿಸಿದ್ದರು. ಜನಾಗ್ರಹ ತಂಡವೂ ಸಹ ಕಾರ್ಯನಿರತವಾಗಿತ್ತು. ಜನರ ಸಲಹೆಗಳನ್ನು ಸ್ವೀಕರಿಸಲು ಕಾಲ್ ಸೆಂಟರ್ ಮಾಡಲಾಗಿತ್ತು. ಸಿ.ಎಂ. ಈಮೇಲ್ ಅಡ್ರೇಸ್ ಕೊಡಲಾಗಿತ್ತು. ಬೆಂಗಳೂರಿನ ಆಕರ್ಷಣೆಯಲ್ಲಿ ಉದ್ಯಾನವನಗಳ ಪಾಲು ಬಹಳ ಪ್ರಮುಖ ಪಾತ್ರವಹಿಸುತ್ತದೆ. ಕೃಷ್ಣರವರ ಕಾಲದಲ್ಲಿ ಸಾಫ್ಟ್ವೇರ್ ಕಂಪನಿಗಳು ಉದ್ಯಾನವನಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದರು. ಬೆಂಗಳೂರು ನಗರವನ್ನು ಸ್ವಚ್ಛವಾಗಿಡಲು ಪ್ರತಿ ನಗರ ಪಾಲಿಕೆವಾರ್ಡ್ ಗಳಲ್ಲಿ ದಿನಕ್ಕೆ ಎರಡು ಸಲ ಬೀದಿಗಳನ್ನು ಗುಡಿಸುವಂತೆ ಸೂಚಿಸಲಾಗಿತ್ತು. ನಗರದ ಸ್ಲಮ್ಮುಗಳು ಸಹ ಕಸಮುಕ್ತ ವಾಗತೊಡಗಿದವು. ಅಲ್ಲಲ್ಲಿ ಪಾರ್ಕುಗಳು ಕಣ್ಸೆಳೆಯುವಂತಾದವು. ಇಂದು ಸಿಮೆಂಟ್ ರೋಡು ಹಾಕಿ ಮನೆ ಮುಂದೆ ಗಿಡ ಬೆಳೆಸಿ ಎನ್ನುತ್ತಾರೆ. ಫ್ರೀಡಂ ಪಾರ್ಕು ಸಹ ಕೃಷ್ಣರವರ ಕೊಡುಗೆ. ನಗರದ ಹೃದಯಭಾಗದಲ್ಲಿ ಅಷ್ಟೊಂದು ದೊಡ್ಡ ಜಾಗವನ್ನು ಬಿಲ್ಡರ್ಗಳು ಬಿಡುತ್ತಿದ್ದರೆ…! ಪಕ್ಷ ಯಾವುದೇ ಇರಲಿ ದೂರದೃಷ್ಟಿಯುಳ್ಳ ದಕ್ಷ ಆಡಳಿತಗಾರರು ಇದ್ದರೆ ನಮ್ಮ ನಗರವೇನು, ದೇಶವನ್ನೇ ಎಲ್ಲಾ ದೃಷ್ಟಿಕೋನಗಳಿಂದ ಸುಂದರವಾಗಿ ಪ್ರಬಲವಾಗಿ ಮಾಡಬಹುದು.
ನಗರದ ಚರಂಡಿಗಳು, ಫುಟ್ಪಾತುಗಳು ಮತ್ತು ರಸ್ತೆಗಳನ್ನು ಗಮನಿಸಿ ನೋಡಿ. ಕಾಮಗಾರಿ ಪ್ರಾರಂಭಿಸುತ್ತಾರೆ ಅರ್ಧಕ್ಕೆ ಬಿಡುತ್ತಾರೆ. ಕೆಲವು ತಿಂಗಳುಗಳ ನಂತರ ಪುನಃ ಪರಂಭಿಸುತ್ತಾರೆ. ಮತ್ತೆ ಅದೇ ರಾಗ ಅದೇ ಹಾಡು. ಪೂತ್ಪಾಟ್ ಸರಿಪಡಿಸಿದ ಕೆಲವೇ ತಿಂಗಳುಗಳಲ್ಲಿ ಹಾಳಾಗಿ ಹೋಗುತ್ತದೆ. ಕಾರಣ ಕಳಪೆ ಕಾಮಗಾರಿ. ಅಭಿವೃದ್ಧಿಯ ಹೆಸರಿನಲ್ಲಿ ಹಣ ಬಿಡುಗಡೆಯಾದರೆ ಸಾಕು, ಕಳಪೆ ಕೆಲಸ ಮಾಡಿಸಿ ಕೈ ತೊಳೆದು ಕೊಳ್ಳುತ್ತಾರೆ. ಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಚೆನ್ನಾಗಿರಬೇಕು ಎಂಬ ಯೋಚನೆ ಬಹುಶಹ ಇಂದು ಯಾವ ಅಧಿಕಾರಿಗಳ ಮನಸ್ಸುಗಳಲ್ಲಿಯೂ ಸಹ ಬರುತ್ತಿಲ್ಲವೇನೋ…! ಕೆ.ಆರ್.ಎಸ್ ಈಗಿನ ಅಧಿಕಾರಿಗಳಿಗೆ ನಿರ್ಮಾಣಮಾಡಲು ಕೊಟ್ಟಿದ್ದಿದ್ದರೆ ಏನಾಗುತ್ತಿತ್ತೋ…! ಯೋಚಿಸಿದರೆ ಭಯವಾಗುತ್ತದೆ.
ಎಷ್ಟೋ ಏರಿಯಾಗಳಲ್ಲಿ ಮಳೆ ನೀರು ಇನ್ನೂ ಮನೆಗಳಿಗೆ ನುಗ್ಗುತ್ತದೆ. ನಗರದ ಹೆಸರಾಂತ ಏರಿಯಾಗಳಲ್ಲೂ ಸಹ ಈ ಸಮಸ್ಯೆ ಉಂಟು. ನೀರು ಸರಾಗವಾಗಿ ಹೋಗಲು ಚರಂಡಿಗಳು ಸುಸ್ಥಿತಿಯಲ್ಲಿರಬೇಕು. ವರ್ಷಗಳು ಕಳೆದರೂ ಹೇಳೋರಿಲ್ಲ ಕೇಳೋರಿಲ್ಲ. ಪರಿಸ್ಥಿತಿಗೆ ಹೊಂದಿಕೊಂಡು ಹೋಗಲು ಜನರ ಮನಸ್ಥಿತಿ ಸಿದ್ಧವಾಗಿ ಬಿಟ್ಟಿದೆ. ಇಂಥದರಲ್ಲಿ ಬದಲಾವಣೆ ಕಾಣಲು ಸಾಧ್ಯವೇ? ಹಳ್ಳಿಯಾಗಲಿ ಪಟ್ಟಣವಾಗಲಿ ಎಲ್ಲಿಯವರೆಗೆ ಜನರ ಮನಸ್ಥಿತಿ ಬದಲಾಗುವುದಿಲ್ಲವೋ ನಮ್ಮ ಸುತ್ತಮುತ್ತ ಬದಲಾವಣೆ ಕಾಣಲು ಸಾಧ್ಯವಿಲ್ಲ. ಅಧಿಕಾರಿಗಳು ತಮ್ಮ ಕಾರ್ಯವೈಖರಿಯಲ್ಲಿ ದಕ್ಷತೆಯಿಂದ ಮುಂದುವರೆದರೆ ಮಾತ್ರ ಅವರು ನಿಜವಾದ ದೇಶಪ್ರೇಮಿ ಆಗಲು ಸಾಧ್ಯ. ಸಾಮೂಹಿಕ ಜವಾಬ್ದಾರಿ ಎಷ್ಟು ಮುಖ್ಯವೋ, ವೈಯಕ್ತಿಕ ಜವಾಬ್ದಾರಿಯೂ ಸಹ ಅಷ್ಟೇ ಮುಖ್ಯ. ಏಳಿ ಎದ್ದೇಳಿ, ಪ್ರಶ್ನೆಗಳನ್ನು ಕೇಳಲು ಕಲಿಯಿರಿ.
-ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.