(www.vknews.com) : ದೇಶ ಕೊರೊನಾ ಮೊದಲ ಮತ್ತು ಎರಡನೇ ಅಲೆಯ ಏರುಗತಿಯನ್ನು ಕಂಡಿದೆ. ಕೊರೊನಾದಿಂದಾಗಿ ದೇಶದ ಜನಜೀವನ ಅದರಲ್ಲು ಅಸಂಘಟಿತ ವಲಯ, ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಅಂದಂದಿನ ದುಡಿಮೆಯನ್ನು ನಂಬಿ ಜೀವನ ನಡೆಸುತ್ತಿದ್ದ ಜನರ ಬದುಕು ದುಸ್ತರವಾಗಿದೆ. ಲಾಕ್ ಡೌನ್ ಘೋಷಣೆಯಿಂದಾಗಿ ದೇಶದ ದುಡಿಯುವ ವರ್ಗದ ಬದುಕು ಅಕ್ಷರಶಃ ನರಕವಾಗಿದೆ. ಕೊರೊನಾ ದೇಶ ಪ್ರವೇಶಿಸಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡೂ ಅನೇಕ ನಿಟ್ಟಿನಲ್ಲಿ ಸೋತಿವೆ. ರಾಜ್ಯದಲ್ಲಿ ಮೊದಲನೆ ಅಲೆಗಿಂತ ಎರಡನೇ ಅಲೆ ಭೀಕರ ಪರಿಸ್ಥಿತಿಯನ್ನು ನಿರ್ಮಿಸಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಗದಂತಹ ಪರಿಸ್ಥಿತಿಗೆ ಸರ್ಕಾರಗಳು ಕಾರಣವಾಗಿವೆ. ತಮ್ಮ ಬಂಧುಬಳಗವನ್ನು ಕಳೆದುಕೊಂಡ ನಾಗರಿಕರು ಕಣ್ಣೀರ ಕೋಡಿ ಹರಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಏಕೆಂದರೆ, ಮೊದಲ ಅಲೆಯ ಸಮಯದಲ್ಲೇ ತಜ್ಞರು 2021ರ ಮೇ, ಜೂನ್ ತಿಂಗಳಲ್ಲಿ 2ನೇ ಅಲೆ ದೇಶಾದ್ಯಂತ ವ್ಯಾಪಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದವು. ಈ ಭೀಕರತೆಯನ್ನು ಎದುರಿಸಲು ಸಜ್ಜಾಗಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾಗಳು ದಿವ್ಯ ನಿರ್ಲಕ್ಷ್ಯವನ್ನು ತೋರಿದವು.
ಉದಾಹರಣೆಗೆ ಮೊದಲನೇ ಅಲೆಯ ವೇಳೆ ಬೆಂಗಳೂರಿನಲ್ಲಿ 10,000 ಬೆಡ್ ಸಾಮರ್ಥ್ಯದ ಕೊರೊನಾ ಕೇರ್ ಕೇಂದ್ರವನ್ನು ರಾಜ್ಯ ಸರ್ಕಾರ ಸ್ಥಾಪಿಸಿತು. ಮೊದಲನೇ ಅಲೆ ಇಳಿಕೆಯಾದ ನಂತರ ಈ ಕೇಂದ್ರವನ್ನು ಮುಚ್ಚಿಬಿಟ್ಟಿತು. ಆದರೆ, ಮೊದಲನೇ ಅಲೆಗಿಂತ 2ನೇ ಅಲೆ ಭೀಕರ ಎಂಬ ತಜ್ಞರ ಮುನ್ನೆಚ್ಚರಿಕೆಯನ್ನು ಸರ್ಕಾರ ಕಡೆಗಣಿಸಿಬಿಟ್ಟಿತ್ತು. ಇದರ ದುಷ್ಪರಿಣಾಮ ಜನರ ಮೇಲಾಯಿತು.
ವಾಸ್ತವದಲ್ಲಿ ಎರಡನೇ ಅಲೆ ತಡೆಯಲು ಬೆಂಗಳೂರಿನಲ್ಲಿ ನಿರ್ಮಿಸಲಾದ 10,000 ಬೆಡ್ ಸಾಮರ್ಥ್ಯದ ಕೊರೊನಾ ಕೇರ್ ಕೇಂದ್ರದಂತೆ ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕೊರೊನಾ ಕೇರ್ ಕೇಂದ್ರಗಳನ್ನು ಸ್ಥಾಪಿಸಬೇಕಿತ್ತು. ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ 5000, ತಾಲೂಕು ಕೇಂದ್ರದಲ್ಲಿ ಕನಿಷ್ಠ 3,000 ಹೋಬಳಿ ಮಟ್ಟದಲ್ಲಿ ಕನಿಷ್ಠ 500 ಬೆಡ್ ಸಾಮರ್ಥ್ಯದ ಕೊರೊನಾ ಕೇರ್ ಕೇಂದ್ರಗಳನ್ನು ರಾಜ್ಯ ಸರ್ಕಾರ ಸಜ್ಜುಗೊಳಿಸಬೇಕಿತ್ತು. ಆದರೆ, ಸರ್ಕಾರ ಹೊಸ ಕೊರೊನ ಕೇರ್ ಕೇಂದ್ರಗಳನ್ನು ತೆರೆಯುವ ಬದಲು, ತೆರೆಯಲಾಗಿದ್ದ ಕೇಂದ್ರಗಳನ್ನು ಮುಚ್ಚಿತು.
ಇನ್ನು ಕೋವ್ಯಾಕ್ಸಿನ್ ಸಂಶೋಧನೆಯ ನಂತರ ದೇಶದ ನಾಗರಿಕರಿಗೆ ಚುಚ್ಚುಮದ್ದು ಕೊಡುವ ಬದಲು ಕೇಂದ್ರ ಸರ್ಕಾರ ತನ್ನ ಇಮೇಜ್ ವೃದ್ಧಿ ಮತ್ತು ದೊಡ್ಡಣ್ಣನ ಫೋಜ್ ಕೊಡಲು ವಿದೇಶಗಳಿಗೆ ನೆರವು, ರಫ್ತು ಮಾಡುವುದರಲ್ಲಿ ಬಿಜಿಯಾಗಿತ್ತು. ಇದರೊಂದಿಗೆ ಆಕ್ಸಿಜನ್ ಉತ್ಪಾದನೆ ಮತ್ತು ರಾಜ್ಯಗಳಿಗೆ ಸರಬರಾಜು ವಿಚಾರದಲ್ಲಿ ಕೂಡ ಕೇಂದ್ರ ಇಂತಹದ್ದೇ ನಡೆಯನ್ನು ಇಟ್ಟಿತು.
ಇಂತಹ ದೂರದೃಷ್ಟಿ ಇಲ್ಲದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡೆಯಿಂದಾಗಿ ಜನ ಚಿಕಿತ್ಸೆ ಸಿಗದೆ, ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಗದೆ ಪರದಾಡಿದರು. 10 ಲಕ್ಷ ಕೊಡುತ್ತೇನೆ ಬೆಡ್ ಕೊಡಿ ಎಂಬಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಯಿತು. ಇನ್ನು ಕೊರೊನಾ ಸಮಯದಲ್ಲಿ ನಡೆದ ಅಕ್ರಮಗಳ ಕುರಿತು ಮಾತಾಡದಿರುವುದೇ ಒಳಿತು. ಏಕೆಂದರೆ, ಬೆಡ್ ಬ್ಲಾಕಿಂಗ್ ದಂಧೆ ಕುರಿತು ಸುದ್ದಿಗೋಷ್ಠಿ ನಡೆಸಿದವರೆ ದಂಧೆಯ ರೂವಾರಿಯಾದ ಸುದ್ದಿ ಮತ್ತು ಬೆಡ್ ಬ್ಲಾಕಿಂಗ್ ಹಗರಣ ಹೊರಗೆಳೆದವರೇ ಕೋವ್ಯಾಕ್ಸಿನ್ ದಂಧೆಯ ಸೂತ್ರಧಾರಿ, ಪಾತ್ರಧಾರಿಗಳಾದ ವರದಿಗಳು ಬಿತ್ತರವಾದವು.
ಒಟ್ಟಿನಲ್ಲಿ ದೇಶ ಹಿಂದೆಂದೂ ಕಾಣದ ಕಷ್ಟಕಾರ್ಪಣ್ಯಗಳಿಗೆ ಸಿಲುಕಿದ್ದು ಮಾತ್ರ ನಿಜ. ಕೊರೊನಾದ ಇನ್ನೂ ಎಷ್ಟು ಅಲೆಗಳಿವೆ, ಕೊರೊನಾದಿಂದ ಸಾಯುತ್ತೇವೆಯೋ, ಹಸಿವಿನಿಂದ ಸಾಯುತ್ತೇವೆಯೋ ಎಂಬಂತಹ ಆತಂಕದ ಪರಿಸ್ಥಿತಿಯಲ್ಲಿ ದೇಶದ ಜನ ದಿನ ನೂಕುವಂತಹ ವಾತಾವರಣ ಸದ್ಯಕ್ಕಿದೆ.
ಇಂತಹ ಸಮಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯನ್ನು ಆಯೋಜಿಸಲಾಗಿದೆ.
ಒಟ್ಟಾರೆ ರಾಜ್ಯ ಮತ್ತು ದೇಶದ, ಆರೋಗ್ಯ, ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ದಿನಾಂಕ 10 ಜೂನ್ 2021 ದಿಂದ ದಿನಾಂಕ 20 ಜೂನ್ 2021ರವರೆಗೆ 10 ದಿನ ನಡೆಸಲು ಉದ್ದೇಶಿಸಲಾಗಿದೆ. ವೆಬಿನಾರ್ ಪ್ರತಿ ದಿನ ಸಂಜೆ 7ರಿಂದ ಆರಂಭವಾಗುತ್ತದೆ. ವೆಬಿನಾರ್ ನಲ್ಲಿ ಭಾಗವಹಿಸುವವರು ಸಂಪನ್ಮೂಲ ವ್ಯಕ್ತಿಗಳೊಡನೆ ಕೊರೊನಾಗೆ ಸಂಬಂಧಿಸಿದಂತೆ ತಮಗೆ ಎದುರಾದ ಸಮಸ್ಯೆಗಳನ್ನು ಹಂಚಿಕೊಳ್ಳಲು ಮತ್ತು ಅವುಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಅವಕಾಶವಿದೆ.
ವೆಬಿನಾರ್ ನ ವಿಷಯಗಳು
1. ಕೋವಿಡ್ ಎದುರಿಸುವುದು ಹೇಗೆ ? 2. ಕೋವಿಡ್ ಎದುರಿಸಿದವರ ಅನುಭವ ಹಂಚಿಕೆ 3. ಕೋವಿಡ್ ಮತ್ತು ಪಂಗಸ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಯುವುದು ಹೇಗೆ? 4. ಮಕ್ಕಳು ಮತ್ತು ಗರ್ಭಿಣಿಯರನ್ನು ಕೋವಿಡ್ ಮೂರನೇ ಅಲೆಯಿಂದ ಕಾಪಾಡುವುದು ಹೇಗೆ ? 5.ಕೊರೊನಾ: ಜನರಲ್ಲಿನ ಭಯ ಮತ್ತು ಆತಂಕ 6. ಕೋವಿಡ್ ಎದುರಿಸುವಲ್ಲಿ ಸರ್ಕಾರಗಳ ವೈಫಲ್ಯಗಳು 7. ಕೊರೊನಾ ನೆಗೆಟಿವ್ ಆದನಂತರದ ಆರೋಗ್ಯ ಸಂಬಂಧಿಸಿದ ಸವಾಲುಗಳು 8.ಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳು 9. ಕೋವಿಡ್ ಮತ್ತು ಮೂಢನಂಬಿಕೆಗಳು 10. ಕೋವಿಡ್ ಮತ್ತು ಶೈಕ್ಷಣಿಕ ಸವಾಲುಗಳು ವಿಷಯಗಳ ಕುರಿತು ವೆಬಿನಾರ್ ನಡೆಯಲಿದೆ.
ವೆಬಿನಾರ್ ನಲ್ಲಿ ವೈದ್ಯರಾದ ಡಾ ಗಿರೀಶ್ ಮೂಡ್, ಡಾ ಸುಜಾತ ರಾಥೋಡ, ಡಾ. ಪುರುಷೋತ್ತಮ, ಡಾ. ಹರೀಶ, ಡಾ. ಗೀತಾ, ಡಾ ಸಿ ಆರ್ ಚಂದ್ರಶೇಖರ್, ಡಾ, ಸೌಮ್ಯ ಹಿತೇಂದ್ರ, ಡಾ. ಸಂದೀಪ, ವಿ ಪಿ ನಿರಂಜನಾರಾಧ್ಯ, ವಕೀಲರಾದ ಬ್ರಿಜೇಶ್ ಕಾಳಪ್ಪ, ಆಹಾರ ತಜ್ಞ ಕೆ ಸಿ ರಘು ಮೊದಲಾದ ವಿಷಯ ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ.
ಜೂಮ್ ಮೀಟಿಂಗ್ ಮೂಲಕ ನಡೆಯುವ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆ – ಕರ್ನಾಟಕ ಫೇಸ್ ಬುಕ್ ಪೇಜ್ ನಲ್ಲಿ ಮತ್ತು MBV Karnataka ಯೂಟ್ಯೂಬ್ ಚಾನಲ್ ಮೂಲಕ ಕೂಡ ವೆಬಿನಾರ್ ನೇರ ಪ್ರಸಾರವಾಗಲಿದೆ.
Topic: ಆರೋಗ್ಯ ಬಂಧುತ್ವ ವೆಬಿನಾರ್ Time: Jun 10, 2021 07:00 PM Join Zoom Meeting
https://us02web.zoom.us/j/88334287525?pwd=cEFNOFBZcGJuTjZjaVZQZmJVcGlzQT09
Meeting ID: 883 3428 7525 Passcode: Manava Meeting ID: 883 3428 7525 Passcode: 046978
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.