ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ರೈಲ್ವೆ ಅಧಿಕಾರಿಗಳು ಫರಂಗಿಪೇಟೆ ಮುಖ್ಯ ರಸ್ತೆ ಸಮೀಪದ ವರದೇಶ್ವರ ದೇವಸ್ಥಾನದ ಹಿಂಭಾಗದಲ್ಲಿದ್ದ ಚರಂಡಿ ಮುಚ್ಚಿ ಅವೈಜ್ಞಾನಿಕವಾಗಿ ನಿರ್ಮಿಸಿದ ಕಂಪೌಂಡ್ ಇದೀಗ ಅನಾಹುತ ಸೃಷ್ಟಿಸಿ ಹಾಕಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೆ ದೇವಸ್ಥಾನದ ಒಳಗೆ ಮಳೆ ನೀರು ಹರಿದು ಬರುತ್ತಿದೆ.
ದೇವಸ್ಥಾನದ ಒಳಭಾಗದಲ್ಲಿ ಮಳೆ ನೀರು ತುಂಬಿದ್ದು, ದೇವಳದ ಅರ್ಚಕರು ಹಾಗೂ ಆಡಳಿತ ಸಮಿತಿ ಕಂಗಾಲಾಗಿದೆ. ಘಟನಾ ಸ್ಥಳಕ್ಕೆ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಪಿಡಿಒ ಹರೀಶ್ ಕೆ ಎ ಅವರು ಭೇಡಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಶಾಸಕರು ಹಾಗೂ ಸಂಸದರಿಗೆ ಮತ್ತು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪಂಚಾಯತ್ ವತಿಯಿಂದ ಪತ್ರ ಬರೆದು ಸೂಕ್ತ ಕ್ರಮಕ್ಕೆ ಸೂಚಿಸುವುದಾಗಿ ಅಧ್ಯಕ್ಷ ರಮ್ಲಾನ್ ತಿಳಿಸಿದ್ದಾರೆ. ಈ ಸಂದರ್ಭ ವರದೇಶ್ವರ ದೇವಸ್ಥಾನದ ಮೊಕ್ತೇಸರರಾದ ಪೊಳಲಿ ಕೃಷ್ಣತಂತ್ರಿ ಹಾಗೂ ರಾಮ್ ಮೋಹನ್ ತಂತ್ರಿ ಉಪಸ್ಥಿತರಿದ್ದು, ಸ್ಥಳೀಯರಾದ ಜಗದೀಪ್ ಕುಂಪಣಮಜಲು, ಜಗದೀಶ್ ಆರ್ಕುಳ, ಸುರೇಶ್ ಕುಚ್ಚೂರ್, ಮನೀಶ್ ಕುಂಪಣಮಜಲು, ಶಶಾಂಕ್ ಫರಂಗಿಪೇಟೆ, ರಾಕೇಶ್ ತೆಕ್ಕೆಹಿತ್ಲು, ಪ್ರಣಯ್ ಕುಂಜತ್ಕಳ, ರಾಕೇಶ್ ಮೊದಲಾದವರು ದೇವಸ್ಥಾನದ ಒಳಗಿನ ನೀರು ತೆರವುಗೊಳಿಸುವಲ್ಲಿ ಸಹಕರಿಸಿದರು.
ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಯಿಂದ ಆಗಬೇಕಾದ ಹಲವು ಕೆಲಸ-ಕಾರ್ಯಗಳು ಉದಾಹರಣೆಗೆ ರೈಲ್ವೆ ಕ್ರಾಸಿಂಗ್, ಬೀದಿ ಬೀಪಗಳ ಅಳವಡಿಕೆ ಸೇರಿದಂತೆ ಎಲ್ಲವೂ ಇನ್ನೂ ನೆನೆಗುದಿಗೆ ಬಿದ್ದಿದ್ದು, ಪಂಚಾಯತ್ ಅಧಿಕಾರಿಗಳು ಹಾಗೂ ಆಡಳಿತ ಈ ಬಗ್ಗೆ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತವಾಗಿ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಇದೀಗ ದೇವಸ್ಥಾನದ ಸಮೀಪದ ನೀರು ಹರಿದು ಹೋಗುವ ಚರಂಡಿ ಮುಚ್ಚಿ ಸಮಸ್ಯೆ ಸೃಷ್ಟಿ ಆಗಿರುವ ಬಗ್ಗೆ ಇಲಾಖೆ ಯಾವ ರೀತಿಯ ಸ್ಪಂದನೆ ನೀಡೀತು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.