ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :- ಮುಂಗಾರು ಮಳೆಗಾಲ ಪ್ರಾರಂಭವಾಗಿರುವುದರಿಂದ ಮನೆಗಳ ಸುತ್ತಮುತ್ತ ನೀರು ನಿಂತು ಹೆಚ್ಚಿನ ಸಂಖ್ಯೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ . ಸಾರ್ವಜನಿಕರಲ್ಲಿ ಮಲೇರಿಯಾ ರೋಗದ ಬಗ್ಗೆ ಅರಿವು ಮೂಡಿಸಿ , ಮನೆ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಮಲೇರಿಯಾ ರೋಗವನ್ನು ತಡೆಗಟ್ಟಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು ಅವರು ತಿಳಿಸಿದರು .
ಇಂದು ಕೋಲಾರ ಪತ್ರಕರ್ತರ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ , ಕೋಲಾರ ವತಿಯಿಂದ ಹಮ್ಮಿಕೊಂಡಿದ್ದ ಮಲೇರಿಯಾ ವಿರುದ್ಧ ಮಾಸಾಚರಣೆಯ 2021 ರ ಬಗ್ಗೆ ಪತ್ರಕರ್ತರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ || ರಮ್ಯಾ ದೀಪಕ್ ಅವರು ಮಾತನಾಡಿ ಪ್ರತಿವರ್ಷ ಮಲೇರಿಯಾದ ಕುರಿತು ಎಲ್ಲಾ ವರ್ಗದವರಿಗೂ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ , ಬೀದಿ ನಾಟಕ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಪ್ರಬಂಧ , ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು . ಮಲೇರಿಯಾ ರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು ಪ್ಲಾಸ್ಕೋಡಿಯಂ ಎಂಬ ರೋಗಾಣು ಹೊಂದಿದ ಅನಾಫಿಲಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ .
ಅನಾಫಿಲಿಸ್ ಹೆಣ್ಣು ಸೊಳ್ಳೆಯು 3 ರಿಂದ 4 ದಿನಗಳಲ್ಲಿ ಅದರ ಜೀವನ ಚಕ್ರವನ್ನು ನಡೆಸಿ ಸಾಮಾನ್ಯ ವ್ಯಕ್ತಿಯನ್ನು ಕಚ್ಚಿದಾಗ ರೋಗಾಣು ದೇಹ ಸೇರುತ್ತದೆ . 2 ರಿಂದ 14 ದಿನಗಳ ಒಳಗೆ ರೋಗಲಕ್ಷಣಗಳಾದ ಚಳಿ ನಂತರ ವಿಪರೀತ ಜ್ವರ , ಮೈ ಬೆವರುವುದು , ಮೈಕೈ ನೋವು , ತಲೆನೋವು , ವಾಂತಿ ಮತ್ತು ನಿಶ್ಯಕ್ತಿ ಕಂಡುಬರುತ್ತದೆ . ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿಕೊಟ್ಟು , ರಕ್ತಲೇಪನ ಪರೀಕ್ಷೆ ಮಾಡಿಸಿಕೊಳ್ಳಬೇಕು .
ಮಲೇರಿಯಾ ಎಂದು ದೃಢಪಟ್ಟಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಂಪೂರ್ಣ ಚಿಕಿತ್ಸೆ ನೀಡುತ್ತಾರೆ . ಚಿಕಿತ್ಸೆ ಪಡೆದುಕೊಂಡರೆ ಕಾಯಿಲೆಯು ಸಂಪೂರ್ಣ ವಾಸಿಯಾಗುತ್ತದೆ . ಕಾಯಿಲೆಯೂ ತೀವ್ರವಾಗುವರೆಗೆ ನಿರ್ಲಕ್ಷಿಸದೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಅವರು ತಿಳಿಸಿದರು .
ಮಲೇರಿಯಾ ರೋಗ ಬಾರದಂತೆ ತಡೆಯಲು ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು , ಆದಷ್ಟು ಸೊಳ್ಳೆಗಳು ಕಚ್ಚದಂತೆ ನೋಡಿಕೊಳ್ಳಬೇಕು , ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ಒಂದು ಗಂಟೆ ಕಾಲ ಧೂಪ ಮತ್ತು ಬೇವಿನ ಸೊಪ್ಪಿನ ಹೊಗೆ ಹಾಕಬೇಕು , ಮನೆಯ ಬಾಗಿಲು ಕಿಟಕಿಗಳಿಗೆ ಜಾಲರಿ ಅಳವಡಿಸಬೇಕು , ಕೀಟನಾಶಕ ಸಿಂಪಡಿಸಬೇಕು ಹಾಗೂ ಬಾವಿ , ಕೆರೆ , ಕುಂಟೆ , ಹೊಂಡ ಹಾಗೂ ಮನೆಗಳಲ್ಲಿ ನೀರಿನ ತೊಟ್ಟಿ , ಡ್ರಮ್ , ಟ್ಯಾಂಕ್ಗಳಲ್ಲಿ ಸೊಳ್ಳೆಮರಿಗಳನ್ನು ತಿನ್ನುವ ಗಪ್ಪಿ ಮತ್ತು ಗಂಬೂಸಿಯಾ ಮೀನುಗಳನ್ನು ಬಿಟ್ಟು ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬಹುದು ಎಂದು ಅವರು ತಿಳಿಸಿದರು . ಮಲೇರಿಯಾ ರೋಗ ಬಂದ ನಂತರ ನಿಯಂತ್ರಿಸುವುದು ಕಷ್ಟ , ರೋಗ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಮಲೇರಿಯಾ ನಿಯಂತ್ರಿಸಬಹುದು . 2025 ಕ್ಕೆ ಮಲೇರಿಯಾ ಸಂಪೂರ್ಣ ನಿರ್ಮೂಲನೆ ಮಾಡುವ ಆಶಯ ಹೊಂದಿದ್ದೇವೆ . ಇದಕ್ಕೆ ಎಲ್ಲಾ ಇಲಾಖೆಯವರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ತಿಳಿಸಿದರು . ಜಿಲ್ಲಾ ಕೀಟಶಾಸ್ತ್ರಜ್ಞರಾದ ಡಾ || ವೇಣುಗೋಪಾಲ್ ಅವರು ಮಾತನಾಡಿ ಸೊಳ್ಳೆಗಳಿಂದ ಮಲೇರಿಯಾ , ಫೈಲೇರಿಯಾ , ಮೆದುಳು ಜ್ವರ , ಡೆಂಗ್ಯೂ ಹಾಗೂ ಚಿಕನ್ಗುನಿಯಾ ಎಂಬ ಕಾಯಿಲೆಗಳು ಬರುತ್ತವೆ . ಒಂದು ಸೊಳ್ಳೆ 50 ರಿಂದ 80 ಮೊಟ್ಟೆ ಇಡುತ್ತದೆ , 20 ರಿಂದ 30 ದಿನಗಳ ಕಾಲ ಬದುಕಿರುತ್ತದೆ . ನಿಂತ ನೀರು , ಹಸಿರು ಹೆಚ್ಚು ಇರುವ ಪ್ರದೇಶ , ಮನೆ ಸುತ್ತಮುತ್ತ ಘನತ್ಯಾಜ್ಯ ವಸ್ತುಗಳು ಹಾಗೂ ನೀರಿನ ಟ್ಯಾಂಕ್ಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತವೆ . ಸೊಳ್ಳೆಗಳ ಉತ್ಪಾದನಾ ತಾಣಗಳನ್ನು ನಾಶ ಪಡಿಸುವುದರಿಂದ ಉತ್ಪತ್ತಿ ಹಾಗೂ ಕಾಯಿಲೆಗಳು ಬರದಂತೆ ತಡೆಯಬಹುದು ಎಂದು ಅವರು ತಿಳಿಸಿದರು . ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ.ಗೋಪಿನಾಥ್ ಅವರು ಮಾತನಾಡಿ ಮಲೇರಿಯಾ ರೋಗವನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು . ಮಲೇರಿಯಾ ಒಂದು ಸಾಂಕ್ರಾಮಿಕ ರೋಗವಾಗಿದ್ದು , ಮಳೆಗಾಲ ಪ್ರಾರಂಭವಾಗಿರುವುದರಿಂದ ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಂಡು ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸಬೇಕು .
ಈ ಸಮಯದಲ್ಲಿ ಕೋವಿಡ್ ಬಗ್ಗೆ ಕೂಡ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು . ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಆರ್.ಸತ್ಯನಾರಾಯಣ ಗೌಡ ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.