ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್): 2020ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪುಸ್ತಕಗಳನ್ನು ಕಳುಹಿಸಲು ಜೂನ್ 15ರಿಂದ ಜುಲೈ 5ರ ವರೆಗೆ ಅವಕಾಶವಿದೆ.
ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿಯನ್ನು ವೈದ್ಯಕೀಯ ಶಾಸ್ತ್ರ/ ಯಂತ್ರಶಾಸ್ತ್ರ/ ವಿದ್ಯುನ್ಮಾನ ಶಾಸ್ತ್ರದಲ್ಲಿ ಕನ್ನಡದಲ್ಲಿ ರಚಿತವಾದ ವರ್ಷದ ಶ್ರೇಷ್ಠ ಪುಸ್ತಕಗಳಿಗೆ ನೀಡಲಾಗುತ್ತದೆ. ಇದು 10,000 ರೂ.ಗಳ ಮೊತ್ತವನ್ನು ಹೊಂದಿರುತ್ತದೆ.
ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ- ಮೊತ್ತ 10,000 ರೂ, ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ‘ಅನುವಾದ’ ಸಾಹಿತ್ಯಕ್ಕಾಗಿ’ ಪ್ರಶಸ್ತಿ ಕೂಡ 10,000 ರೂ.ಗಳ ಬಹುಮಾನ ಹೊಂದಿರುತ್ತದೆ.
ಈ ರೀತಿ ವಿವಿಧ ಮೊತ್ತಗಳ ಒಟ್ಟು 48 ದತ್ತಿನಿಧಿ ಪ್ರಶಸ್ತಿಗಳನ್ನು ವಿವಿಧ ಬಗೆಯ ಸಾಹಿತ್ಯ ಪ್ರಕಾರದ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡಿ ಪ್ರೋತ್ಸಾಹಿಸುತ್ತಿದೆ. ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ‘ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-560 018- ಈ ವಿಳಾಸಕ್ಕೆ ದಿನಾಂಕ 05-07-2021ರ ಒಳಗೆ ತಲುಪುವಂತೆ ಕಳುಹಿಸಬೇಕು. ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸುವುದಿಲ್ಲ.
ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಬಹುಮಾನದ ಬಗ್ಗೆ ಪರಿಷತ್ತು ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಗಮನಿಸಿ ಪರಿಷತ್ತು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಪಿ.ಎಚ್.ಡಿ ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಭಾಗವಹಿಸುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರೂ ತಮ್ಮ ಹೆಸರು, ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಯನ್ನು ಪರಿಷತ್ತಿನ ಅಂತರ್ಜಾಲ ತಾಣwww.kasapa.inಮೂಲಕ ಸಹ ಪಡೆದುಕೊಳ್ಳಬಹುದು ಎಂದು ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ಅವರ ಪ್ರಕಟಣೆ ತಿಳಿಸಿದೆ.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.