ಬೆಂಕಿ ಬದುಕು…
(ವಿಶ್ವ ಕನ್ನಡಿಗ ನ್ಯೂಸ್) : ಈ ನೋವುಗಳಿಗೆ ಅದೆಷ್ಟು ನೆನಪಿನ ಶಕ್ತಿ? ನನ್ನ ಹೃದಯದ ವಿಳಾಸವ ಎಂದೂ ಮರೆಯುವುದಿಲ್ಲ! ಎಚ್ಚರ ತಪ್ಪಿದಾಗಲೂ ಕೂಡ!!
ಸುಡುವ ಕರಾಳ ಕಾಲ ಎಲ್ಲಿಂದಲಾದರೂ ಸರಿಯೇ ಅಂಚೆ ಪೆಟ್ಟಿಗೆಗೊಗೆದರೆ ತ್ವರಿತವಾಗಿ ಬಂದು ಸೇರುವವು ಕರಾರುವಾಕ್ಕಾಗಿ ನಾನೇ ಅವಕ್ಕಾಗುವಂತೆ!
ಬಾಗಿಲ ಸಂಖ್ಯೆ ರಸ್ತೆ, ತಿರುವು, ಹಂತ ಯಾವುದು ತಪ್ಪಿದ್ದರೂ ನನ್ನ ಹೃದಯದ ವಿಳಾಸಕ್ಕೆ ಚಾಚೂ ತಪ್ಪದೇ ಬಂದು ತಲುಪುವವು ಕಡಲೊಕ್ಕುವ ನದಿಯಂತೆ!
ಮೈದೊಗಲು ಸುಕ್ಕಾಗದ ಅಜ್ಜನ ಕಣ್ಣದೀಪವಾರಿಸಿದ್ದು ಅಪ್ಪನ ಹೆಗಲಲ್ಲಿ ಮಾಯದ ಉರಿವ ಆಳ ಗಾಯ ಮಾಡಿದ್ದು ಅವ್ವನ ತುಟಿಯ ನಗುವ ಕಸಿದು ಮೌನದ ಕಣಿವೆಗೆ ನೂಕಿದ್ದು ಕ್ರಾಂತಿಯ ಪಂಜನ್ನಿಡಿದವನಿಗೆ ನಂಜುಣಿಸಿ ಕಂಗೆಡಿಸಿದ್ದು ಈ ನಿಷ್ಕುರುಣಿ ನೋವುಗಳೇ…
ಉಸಿರಿರುವವರೆಗೂ ಒಲವಿನ ಕೊಡೆಯಿಡಿದು “ತೋಳಿಗೊತ್ತಿಕೊಂಡೇ ದಾರಿಗುಂಟ ಹೆಜ್ಜೆ ಹಾಕುವನೆಂದು” ಹೇಳಿದ್ದ ಜೀವದ ಗೆಳತಿ… ಅದೊಂದು ದಿನ ಕೈಕೊಡವಿಕೊಂಡು ದುಃಖದ ಗೀತೆಯ ಗೀಚಿ ಹೋದ ದಿನದಿಂದಲೂ ಈ ವಿಷಕಾರಿ ನೋವುಗಳು ನನ್ನ ತಬ್ಬಿ ಮೋಹಿಸುತ್ತಲಿವೆ ಜೀವಭಾವಕ್ಕೂ ಹಬ್ಬಿ ದಹಿಸುತ್ತಲಿವೆ
ಸತತ ಬೆಂಬಿಡದೆ ಕಾಡುವ ಸಂಕಟದ ಚೂರಿಯಿಂದ ಕೊಲ್ಲುವ ಈ ದುರಿತ ನೋವುಗಳ ಪಳಗಿಸಿ ಕಾವ್ಯದ ಗೂಟಕ್ಕೆ ಬಿಗಿಯುವುದ ನಾನೀಗ ಚೆನ್ನಾಗಿ ಕಲಿತಿರುವೆ ಸರಸವಾಡುವಷ್ಟು ಬಲಿತಿರುವೆ! ಅದೆಷ್ಟೋ ನೋವುಗಳ ಜಿದ್ದಿನಿಂದಲೇ ಗೆದ್ದಿರುವೆ ಅನಾಯಸ ಗುದ್ದಿರುವೆ ಸುಖಾಸುಮ್ಮನೆ ಮುದ್ದಿಸಿರುವೆ ಅದಕ್ಕೆ ನಾನು ಈ ನೋವುಗಳ ಮೋಹಿಸುವ ಕಡು ಹುಕಿಗೆ ಬಿದ್ದಿರುವೆ! ನನಗೀಗ ನೋವುಗಳೆಂದರೆ ಬೆಂಕಿ ಬದುಕು ಅನುಭವದ ಬೆಳಕು!!
ರಚನೆ: – ಟಿ. ಸತೀಶ್ ಜವರೇಗೌಡ, ಮಂಡ್ಯ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.