ನಿವೃತ್ತ ಶಿಕ್ಷಕಿ ಶ್ರೀಮತಿ ಸುಶೀಲ ಭವಾನಿಶಂಕರ ರಾವ್ ಮನದಾಳದ ಮಾತು.
(ವಿಶ್ವ ಕನ್ನಡಿಗ ನ್ಯೂಸ್), ಶಿವಮೊಗ್ಗ: ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಬೂತನಕೆರೆ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದವರು. ಆದರೆ ಇವರ ಕಾರ್ಯಕ್ಷೇತ್ರ ಶಿಕಾರಿಪುರವಾಯಿತು.
ಇವರ ಹೆಸರನ್ನು ಯಾರೇ ಹೇಳಲಿ ಸತ್ಯಕ್ಕೆ ಇನ್ನೊಂದು ಹೆಸರೇ ನಮ್ಮ ಯಡಿಯೂರಪ್ಪನವರು ಎನ್ನುವ ಏಕೈಕ ಪದ. ವಿದ್ಯಾರ್ಥಿದೆಸೆಯಿಂದಲೇ ಸಾಮಾಜಿಕ ಹೋರಾಟದಲ್ಲಿ ಧುಮುಕಿದರು.
ನಾನೊಬ್ಬ ಶಿಕ್ಷಕಿ ನಮ್ಮ ಶಾಲೆ ಶಿಕಾರಿಪುರದ ಹತ್ತಿರವಿರುವ ಒಂದು ಪುಟ್ಟ ಗ್ರಾಮ. ಹೊಸಗೊದ್ದನಕೊಪ್ಪ. 1969-70ರಲ್ಲಿ ನಮ್ಮ ಶಾಲೆಯ ಎಲ್ಲಾ ಶಿಕ್ಷಕರನ್ನು ವಿಶ್ವ ಹಿಂದೂ ಪರಿಷತ್ಗೆ ಸದಸ್ಯರನ್ನಾಗಿಸಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದು ಸಮ್ಮೇಳನಕ್ಕೆ ಕರೆದೊಯ್ದರು. ಆಗ ಇವರು ಆರ್.ಎಸ್.ಎಸ್.ನ ಮೇಧಾವಿಗಳು. ಇವರ ಒಂದೊಂದು ಮಾತು ಈಗಲೂ ಕಿವಿಯಲ್ಲಿ ಗುಂಯ್ಗುಡುತ್ತದೆ. ಅಪಾರವಾದ ದೇಶಪ್ರೇಮ, ಅಚಲವಾದ ದೃಡಸಂಕಲ್ಪ ಅವರ ನಡೆ ನುಡಿಯಲ್ಲಿ ಸ್ಪಷ್ಟವಾದ ನಿಲುವು, ನಿರರ್ಗಳವಾದ ಮಾತು ಇವೆಲ್ಲವೂ ಇವರು ಮೈಗೂಡಿಸಿಕೊಂಡಿದ್ದ ಗುಣಗಳು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟನೆಯನ್ನು, ಸಾರ್ವಜನಿಕರ ಸಂಪರ್ಕವನ್ನು ಬೆಳೆಯುವ ಮೂಲಕ ರಾಜಕೀಯ ಕ್ಷೇತ್ರದ ನೆಲೆಗಟ್ಟನ್ನು ಭದ್ರಗೊಳಿಸಿದರು.
ಸಾರ್ವಜನಿಕರನ್ನು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಅಭ್ಯಾಸ ಬೆಳೆಸುವದರೊಂದಿಗೆ ರಾಜ್ಯದಲ್ಲಿ ಬಿ.ಜೆ.ಪಿ. ಪಕ್ಷ ಕಟ್ಟಿ ಬೆಳೆಸಿದರು.
ಇವರು ಸದಾ ಹಸನ್ಮುಖಿ, ಸರಳಜೀವಿ ಜನರ ಕಷ್ಟಕ್ಕೆ ಸ್ಪಂದನೆ ನೀಡುವ ಇಚ್ಚಾ ಶಕ್ತಿಯೊಂದಿಗೆ ಅವರ ಕಷ್ಟದಲ್ಲೂ ಸ್ಪಂದಿಸುವ ಹೃದಯವಂತರು, ರಾಜ್ಯದ ಮುಖ್ಯಮಂತ್ರಿಯಾಗಿ ಉನ್ನತ ಸ್ಥಾನದಲ್ಲಿದ್ದರು, ಎಂದೋ ಪರಿಚಯದ ವ್ಯಕ್ತಿಯನ್ನು ಕಂಡಾಗ ಅವರನ್ನು ಅಭಿಮಾನದಿಂದ ಮಾತನಾಡಿಸುವ ಸಹೃದಯಿ ಇವರು.
ಇಂತಹ ಅವಕಾಶ ನನಗೆ ಕಳೆದ ವರ್ಷ ದೊರಕಿತ್ತು. ನಾನು ಅವರಿಗೆ ನಮಸ್ಕರಿಸಿದಾಗ ಅವರು ನಗುನಗುತ್ತಾ ನನ್ನನ್ನು ಮಾತನಾಡಿಸಿ, ಈಗ ಎಲ್ಲಿ ಕೆಲಸ ಮಾಡುತ್ತಿರುವೆಯಮ್ಮ ಎಂದು ಕೇಳಿದರು. ನಾನು ನಿವೃತ್ತಿಯಾಗಿರುವೆ ಎಂದು ಉತ್ತರಿಸಿದೆ. ಅಧಿಕಾರದ ಉನ್ನತ ಸ್ಥಾನದಲ್ಲಿರುವ ಯಡಿಯೂರಪ್ಪನವರು ಸರಳತೆಯೊಂದಿಗೆ ನನ್ನನ್ನು ಮಾತನಾಡಿಸಿದಾಗ ನನಗೆ ಹೃದಯ ತುಂಬಿ ಬಂದು ಮಾತೇ ಹೊರಡದಾಯಿತು.
ಯಡಿಯೂರಪ್ಪನವರು ರಾಜಕಾರಣವನ್ನು ಅಧಿಕಾರಕ್ಕಾಗಿ ಎಂದೂ ಬಳಸದೆ ರಾಜ್ಯದ ಅಭಿವೃದ್ಧಿಗಾಗಿ, ಜನತೆಯ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು,ಕರ್ನಾಟಕದ ಜನ ಮೆಚ್ಚಿದ ನಾಯಕನಾಗಿ, ರಾಜ್ಯದ ಜನತೆಯ ಕಣ್ಮಣಿಯಾಗಿ ನೂರು ಕಾಲ ಆರೋಗ್ಯದಿಂದ, ಸುಖವಾಗಿ ಬಾಳಲಿ ಎಂಬುದೇ ಈ ನಿವೃತ್ತ ಶಿಕ್ಷಕಿ ಸುಶೀಲಭವಾನಿಶಂಕರ್ರಾವ್ ಮನದಾಳದ ಮಾತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.