20 ರೂಪಾಯಿ ಡಾಕ್ಟರ್ ….!
ಸಾಮಾನ್ಯವಾಗಿ ರೋಗಗಳಲ್ಲಿ ಎರಡು ವಿಧ. ಒಂದು ಮಾನಸಿಕ ಇನ್ನೊಂದು ಶಾರೀರಿಕ. ಎರಡಕ್ಕೂ ಅವಿಭಾಜ್ಯ ಸಂಬಂಧ ಉಂಟು. ನಿಪುಣ ವೈದ್ಯರು ರೋಗಿಯನ್ನು ನೋಡಿ, ಒಂದೆರಡು ನಿಮಿಷ ಮಾತನಾಡಿದಾಕ್ಷಣ ರೋಗಿಯ ಮನಸ್ಥಿತಿಯನ್ನು ಬಲ್ಲರು. ರೋಗಿಗಳಿಗೆ ಮಾತ್ರೆಗಳಿಗಿಂತ ಹೆಚ್ಚಾಗಿ ವೈದ್ಯರ ಭರವಸೆಯ ಮಾತುಗಳು ಅರ್ಧ ಖಾಯಿಲೆಯನ್ನು ಗುಣಪಡಿಸಿಬಿಡುತ್ತವೆ. ನೀವು ಗಮನಿಸಿರಬಹುದು, ಕೆಲವು ಕ್ಲಿನಿಕ್ಕುಗಳಲ್ಲಿ ವೈದ್ಯರು ರೋಗಿಗಳಿಗೆ ಕಾದು ಕುಳಿತಿರುತ್ತಾರೆ. ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವುದಿಲ್ಲ. ಮತ್ತೊಂದು ವೈದ್ಯರ ಬಳಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇದಕ್ಕೆ ಕಾರಣ ಏನಿರಬಹುದು? ಸಾಮಾನ್ಯವಾಗಿ ಆ ವೈದ್ಯರ ಕೈಗುಣ ಚೆನ್ನಾಗಿದೆ ಎನ್ನುತ್ತೇವೆ. ಅದು ನಿಜವೇ ಆದರೂ ಅವರ ಇನ್ನೊಂದು ಅಂತರಾತ್ಮದ ಮಾನಸಿಕ ಗುಣ ಇರುತ್ತದೆ. ಅದುವೇ ಅವರ ನೀಯತ್ತು. ನನ್ನ ಬಳಿ ಬರುವ ರೋಗಿಗಳು ಶೀಘ್ರ ಗುಣಮುಖರಾಗಲಿ ಎಂಬ ನಿಷ್ಕಲ್ಮಶ ಮನೋಭಾವ. ಮನಸ್ಸು ಶುದ್ಧವಾಗಿದ್ದರೆ ಅದರ ಪರಿಣಾಮ ರೋಗಿಗಳ ಮೇಲೆ ಬೀಳದೆ ಇರುತ್ತದೆಯೇ? ಮತ್ತೆ ಕೆಲ ವೈದ್ಯರ ನಿಯ್ಶತ್ತು ಹೇಗಿರುತ್ತದೆಂದರೆ, ರೋಗಿಗಳು ಪುನಹ ಪುನಹ ನನ್ನ ಬಳಿ ಬರಬೇಕು. ಒಂದೇ ಸಮನೆ ಗುಣಮುಖರಾಗಿಬಿಟ್ಟರೆ ದುಡ್ಡು ಹೋಯಿತಲ್ಲವೇ.! ಅವರವರ ನಿಯ್ಶತ್ತು ಅವರವರಿಗೆ ಬಿಟ್ಟಿದ್ದು.
ಈ ಕರೋನಾ ಕರಾಳ ದಿನಗಳಲ್ಲಿ ನಾವು ಕಂಡ ಹಾಗೆ ಅದೆಷ್ಟೋ ವೈದ್ಯರು ತನ್ನ ಪ್ರಾಣ ಒತ್ತೆ ಇಟ್ಟು ರೋಗಿಗಳ ಪ್ರಾಣ ಕಾಪಾಡಿರುವುದುಂಟು. ತನ್ನ ಸ್ವಂತ ಹಣ ಸಹ ಖರ್ಚು ಮಾಡಿರುವುದುಂಟು. ನಾನಾ ರೀತಿಯಲ್ಲಿ ರೋಗಿಗಳ ಮತ್ತು ಅವರ ಕುಟುಂಬಸ್ಥರ ಸಹಾಯ ಮಾಡಿರುವುದುಂಟು. ಹಗಲಿರುಳು ಎನ್ನದೆ ಸಮಾಜ ಸೇವೆ ಮಾಡಿರುವ ನಿದರ್ಶನಗಳು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಎಷ್ಟೋ ಸಂಸಾರಗಳಿಗೆ ಬೆಳಕಾದರು. ಎಷ್ಟೋ ಮಕ್ಕಳಿಗೆ ತಬ್ಬಲಿಯಾಗುವುದರಿಂದ ತಪ್ಪಿಸಿದರು. ಎಷ್ಟೋ ಮಹಿಳೆಯರಿಗೆ ವಿಧವೆಯಾಗುವುದರಿಂದ ತಪ್ಪಿಸಿದರು.. ದೇವರು ಅಂತಹ ವೈದ್ಯರ ನಿರಪೇಕ್ಷ ಸೇವೆಯನ್ನು ನಿರ್ಲಕ್ಷಿಸುವುದಿಲ್ಲ. ಎರಡು ಲೋಕಗಳಲ್ಲಿಯೂ ಅವರಿಗೆ ತಕ್ಕ ಉಡುಗೊರೆ ದೊರಕಲಿ. ಅವರ ಜೀವನ ಸಂತೋಷದ ಸಾಗರವಾಗಲಿ.
ಇನ್ನೊಂದು ವೈದ್ಯರ ತಂಡ ಉಂಟು. ಅವರದು ಮನಸ್ಸಲ್ಲ, ಕಲ್ಲು. ಮಾತುಗಳಲ್ಲೇ ರೋಗಿಗಳನ್ನು ಅವರ ಕುಟುಂಬಸ್ಥರನ್ನು ಕೊಂದುಬಿಡುವರು. ವೈದ್ಯವೃತ್ತಿಯನ್ನು ಕೇವಲ ಹಣ ಲೂಟಿ ಮಾಡುವ ಒಂದು ಸಾಧನ ಮಾಡಿಕೊಂಡಿದ್ದಾರೆ. ನಾವು ಹೆಚ್ಚಾಗಿ ಅವರ ಬಗ್ಗೆ ಮಾತನಾಡುವುದು ಬೇಡ. ಯಾರ ಮನಸ್ಸು ಅವರಿಂದ ನೊಂದಿದೆಯೋ ಅವರ ತಬ್ಬಲಿ ಮಕ್ಕಳ ಶಾಪವೇ ಸಾಕು.
ಹಣ ಖರ್ಚು ಮಾಡಿ, ಓದಿ ವೈದ್ಯರ ಪದವಿ ಪಡೆದುಕೊಳ್ಳಬಹುದು ಆದರೆ ಎಲ್ಲರೂ ವೈದ್ಯರಾಗಲು ಸಾಧ್ಯವಿಲ್ಲ…..!
ಕ್ಲಿನಿಕ್ ಗಳು, ಆಸ್ಪತ್ರೆಗಳು ಮತ್ತು ಲ್ಯಾಬ್ಗಳು ದುಬಾರಿಯಾಗಿ ಹೋಗಿವೆ. ಸಾಮಾನ್ಯ ಕ್ಲಿನಿಕ್ಕುಗಳಲ್ಲಿ ತಲಾ ೧೦೦ ರೂಗಳಿಂದ ೪೫೦ ರೂಗಳ ತನಕ ಶುಲ್ಕ ತೆಗೆದುಕೊಳ್ಳುತ್ತಾರೆ. ಕೆಲವರು ಸರ್ಕಾರಿ ಆಸ್ಪತ್ರೆಯ ದಾರಿ ನೋಡಿದರೆ, ಮತ್ತೆ ಕೆಲವರು ಮನೆ ಹತ್ತಿರದ ವೈದ್ಯರ ಬಳಿ ಹೋಗುತ್ತಾರೆ.
.ಪ್ರತಿ ಏರಿಯಾದಲ್ಲಿ ಮಸೀದಿ ಮತ್ತು ಮಂದಿರಗಳಿವೆ. ನೂರಾರು ಜನರು ಭಕ್ತಾದಿಗಳು ಬರುತ್ತಾ ಹೋಗುತ್ತಾ ದೇಣಿಗೆ ನೀಡುತ್ತಿರುತ್ತಾರೆ. ದೇಣಿಗೆ ಹಣದಿಂದ ಪ್ರತಿ ಮಂದಿರ ಮಸೀದಿ ಅಥವಾ ಚರ್ಚುಗಳ ಒಂದು ಮೂಲೆಯಲ್ಲಿ ಸಾಮಾನ್ಯ ಜನರಿಗೆ, ಬಡಬಗ್ಗರಿಗೆ ಒಂದು ಕ್ಲಿನಿಕ್ ಅನ್ನು ನಡೆಸಲು ಸಾಧ್ಯವಿಲ್ಲವೇ? ಉಚಿತವಾಗಿ ಏನು ಮಾಡಬೇಡಿ. ತಲಾ 20 ರೂಗಳನ್ನು ತೆಗೆದುಕೊಳ್ಳಿ. ವೈದ್ಯರ ಸಂಬಳ ತಿಂಗಳಿಗೆ ಇಪ್ಪತ್ತರಿಂದ ಮೂವತ್ತು ಸಾವಿರ ಆಗಬಹುದು. ಮಸೀದಿ ಮಂದಿರದ ಕಮಿಟಿಗಳು ಅದನ್ನು ಪಾವತಿಸಲು ಸಾಧ್ಯವಿಲ್ಲವೇ? ಸಣ್ಣ ಪ್ರಮಾಣದಲ್ಲಿ ಪ್ರಾರಂಭ ಮಾಡಿ ನೋಡಿ. ಎಷ್ಟೋ ಬಡ ಬಗ್ಗರಿಗೆ ಸಹಾಯ ಆಗುತ್ತದೆ. ಈಗಿನ ಪ್ರಪಂಚದ ಪರಿಸ್ಥಿತಿ ನೋಡಿದರೆ ಬಡತನ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಸರ್ಕಾರಿ ಆಸ್ಪತ್ರೆಗಳು ಕ್ಲಿನಿಕ್ ಗಳು ಎಷ್ಟಿದ್ದರೂ ನಮ್ಮ ದೇಶದ ಜನಸಂದಣಿಗೆ ಸಾಲದು. ನಾವೇ ಪ್ರಾಯೋಗಿಕವಾಗಿ ಸಮಸ್ಯೆಗಳ ಪರಿಹಾರ ಹುಡುಕಿಕೊಂಡರೆ ಒಳಿತು.
Zabiulla Khan
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.