(www.vknews.com) : ಗೃಹರಕ್ಷಕದಳ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರಿಗೆ 2019 ಇಸವಿಯ ಪ್ರತಿಷ್ಠಿತ ಮುಖ್ಯ ಮಂತ್ರಿಗಳ ಚಿನ್ನದ ಪದಕವನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಮಾನ್ ಬಿ.ಎಸ್ ಯಡಿಯೂರಪ್ಪ ಇವರು ದಿನಾಂಕ 13-07-2021ನೇ ಮಂಗಳವಾರದಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರಧಾನ ಮಾಡಿ ಗೌರವಿಸಿದರು.
ಡಾ|| ಮುರಲೀ ಮೋಹನ್ ಚೂಂರಾರು ಇವರು ವೃತ್ತಿಯಲ್ಲಿ ದಂತ ವೈದ್ಯರು ಮತ್ತು ಬಾಯಿ, ಮುಖ ಹಾಗೂ ದವಡೆ ಶಸ್ತ್ರಚಿಕಿತ್ಸಕರು. ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಸಂದರ್ಶಕ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ಮಂಜೇಶ್ವರದ ಹೊಸಂಗಡಿಯಲ್ಲಿ ಸುಮಾರು 25 ವರ್ಷಗಳಿಂದ ತಮ್ಮ ದಂತ ಚಿಕಿತ್ಸಾಲಯವನ್ನು ನಡೆಸುತ್ತಿದ್ದಾರೆ. 2015ನೇ ಜನವರಿ 6 ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿದ ಕೂಡಲೇ ನಿಷ್ಕ್ರಿಯಗೊಂಡಿದ್ದ ಎಲ್ಲಾ ಘಟಕಗಳನ್ನು ಪುನಶ್ವೇತನಗೊಳಿಸಿ ಗೃಹರಕ್ಷಕ ಇಲಾಖೆಗೆ ನೇಮಕಾತಿ ರ್ಯಾಲಿಗಳನ್ನು ಆಯೋಜಿಸಿ, ಖಾಲಿ ಇದ್ದ ಗೃಹರಕ್ಷಕರ ಸ್ಥಾನಗಳನ್ನು ಭರ್ತಿಮಾಡಿದರು. 2015ರಲ್ಲಿ ಕೇವಲ 300 ರಷ್ಟಿದ್ದ ಗೃಹರಕ್ಷಕರ ಸಂಖ್ಯೆ 2017ರಲ್ಲಿ 1000ಕ್ಕೆ ಬಂದು ನಿಂತಿತು. ದಕ್ಷಿಣ ಕನ್ನಡ ಜಲ್ಲೆಯ ಎಲ್ಲಾ 15 ಘಟಕಕ್ಕೂ ಹಲವಾರು ಬಾರಿ ಭೇಟಿ ನೀಡಿ, ಗೃಹರಕ್ಷಕರಿಗೆ ಸ್ಪೂರ್ತಿ ತುಂಬಿಸಿ, ಹುರಿದುಂಬಿಸಿ ಎಲ್ಲಾ ಘಟಕಗಳನ್ನು ಕ್ರಿಯಾಶೀಲ ಘಟಕಗಳನ್ನಾಗಿ ಪರಿವರ್ತಿಸಿದರು. ಗೃಹರಕ್ಷಕರ ಹಿತ ಕಾಯುವ ಉದ್ದೇಶದಿಂದ ವೈದ್ಯಕೀಯ ಶಿಬಿರ, ಹೃದಯ ತಪಾಸಣಾ ಶಿಬಿರ, ನೇತ್ರ ತಪಾಸಣಾ ಶಿಬಿರ, ಮಧುಮೇಹ ತಪಾಸಣಾ ಶಿಬಿರ ಆಯೋಜಿಸಿದರು, ಜೊತೆಗೆ ಜಿಲ್ಲೆಯಾದ್ಯಂತ ಸಂಚರಿಸಿ ಎಲ್ಲಾ ಘಟಕಗಳಲ್ಲಿ ಸ್ವಚ್ಚತಾ ಆಂದೋಲನವನ್ನು ಆರಂಭಿಸಿ ಯಶಸ್ವಿಯಾಗಿ ನಿರ್ವಹಿಸಿದರು.
“ಒಬ್ಬ ಗೃಹರಕ್ಷಕರಿಗೆ ಒಂದು ಗಿq”À ಎಂಬ ಹೊಸ ಪರಿಕಲ್ಪನೆಯೊಂದಿಗೆ ಎಲ್ಲಾ ಘಟಕಗಳಲ್ಲಿ ವನಮಹೋತ್ಸವ ಆಚರಣೆಯನ್ನು 2016ರಲ್ಲಿ ಆರಂಭಿಸಿ ಕಳೆದ 5 ವರ್ಷಗಳಿಂದ ನಿರಂತರವಾಗಿ ಗಿಡ ನೆಟ್ಟು ಬೆಳೆಸಿ, ಗೃಹರಕ್ಷಕರಲ್ಲಿ ‘ಪರಿಸರ ಜಾಗೃತಿ’ ಮೂಡಿಸಿದರು. ಈವರೆಗೆ ಸುಮಾರು 1000 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಿರುತ್ತಾರೆ. ಹೊಸದಾಗಿ ಸೇರ್ಪಡೆಗೊಂಡ ಗೃಹರಕ್ಷಕರಿಗಾಗಿ 4 ಬಾರಿ ಮೂಲ ತರಬೇತಿ ಶಿಬಿರ ಆಯೋಜಿಸಿ ಗೃಹರಕ್ಷಕರ ಪಡೆಗೆ ಹೊಸ ಆಯಾಮ ನೀಡಿ ನವ ಚೈತನ್ಯ ತುಂಬಿದರು. ಇದಲ್ಲದೆ ನೆರೆ ಪರಿಹಾರ, ಶಾಂತಿ ಸುವ್ಯವಸ್ಥೆ ಪಾಲನೆ, ಬಂದೋಬಸ್ತ್ ಕರ್ತವ್ಯ, ಚುನಾವಣಾ ಕರ್ತವ್ಯ ಹೀಗೆ ಎಲ್ಲಾ ಕರ್ತವ್ಯದಲ್ಲಿ ಪೊಲೀಸರೊಂದಿಗೆ ಮತ್ತು ಜಿಲ್ಲಾಡಳಿತದ ಜೊತೆಗೆ ಕೈಜೋಡಿಸಿ, ಗೃಹರಕ್ಷಕರಿಗೆ ಹೆಚ್ಚು ಆತ್ಮವಿಶ್ವಾಸ ತುಂಬಿ, ಹೆಚ್ಚು ಕ್ರಿಯಶೀಲರಾಗಿ ತೊಡಗಿಸಿಕೊಳ್ಳುವಂತೆ ಮಾಡಿದರು. ಉತ್ತಮ ಕೆಲಸ ನಿರ್ವಹಿಸಿದ ಹಿರಿಯ ಗೃಹರಕ್ಷಕರನ್ನು ಗುರುತಿಸಿ ‘ತಿಂಗಳ ಗೃಹರಕ್ಷಕರು’ ಎಂದು ಗೌರವ ನೀಡಿ ಸನ್ಮಾನ ಮಾಡುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು .ಈ ವರೆಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ಗೃಹರಕ್ಷಕರಿಗೆ ಈ ರೀತಿ ಸನ್ಮಾನ ಮಾಡುವುದು ರಾಜ್ಯದಲ್ಲಿಯೇ ಮೊದಲು. 2020ರಲ್ಲಿ ಬೀಚ್ ಕ್ಲೀನಿಂಗ್ ಅಭಿಯಾನವನ್ನು ಆರಂಭಿಸಿ ಮಂಗಳೂರಿನ ಎಲ್ಲಾ 8 ಬೀಚ್ಗಳನ್ನು ಎರಡೆರಡು ಬಾರಿ ಸ್ವಚ್ಚಮಾಡಲಾಯಿತು. ಗೃಹರಕ್ಷಕರಿಗಾಗಿ ಯೋಗ ತರಬೇತಿ ಶಿಬಿರವನ್ನು ಆರಂಭಿಸಿದ ಹೆಗ್ಗಳಿಕೆ ಡಾ|| ಚೂಂತಾರು ರವರಿಗೆ ಸಲ್ಲುತ್ತದೆ. ಶ್ರೀಯುತರ ವೃತ್ತಿ ಪರತೆ ಮತ್ತು ಜನಾನುರಾಗಿ ಕಾರ್ಯವೈಖರಿಯನ್ನು ಮೆಚ್ಚಿ ,ಘನವೆತ್ತ ಕರ್ನಾಟಕ ಸರಕಾರ ಎರಡನೇ ಬಾರಿಗೆ ಸಮಾದೇಷ್ಟರಾಗಿ ನೇಮಕ ಮಾಡಿತು.
ಉತ್ತಮ ಕಾರ್ಯಸಾಧನೆಗಾಗಿ 2019 ರ ಮುಖ್ಯಮಂತ್ರಿಗಳ ಚಿನ್ನದ ಪದಕಕಕ್ಕೆ ಡಾ|| ಚೂಂತಾರು ಅವರನ್ನು ಗೃಹರಕ್ಷಕ ಇಲಾಖೆ ಸರಕಾರಕ್ಕೆ ಶಿಫಾರಸು ಮಾಡಿತು ಮತ್ತು ಘನತೆವೆತ್ತ ಕರ್ನಾಟಕ ಸರಕಾರ ಪದಕ ನೀಡಿ ಡಾ|| ಚೂಂತಾರು ಅವರಿಗೆ ಮತ್ತಷ್ಟು ಕೆಲಸ ಮಾಡಲು ಪ್ರೇರೇಪಣೆ ನೀಡಿತು ಎಂದರೂ ತಪ್ಪಾಗಲಾರದು. 2020 ಮಾರ್ಚ್ ತಿಂಗಳಲ್ಲಿ ಹೊಸದಾಗಿ ಆರಂಭಿಸಿದ ದ.ಕ ಜಿಲ್ಲಾ ಪೌರರಕ್ಷಣಾ ದಳದ ಮುಖ್ಯಪಾಲಕರಾಗಿ ಡಾ|| ಚೂಂತಾರು ಅವರನ್ನು ನೇಮಕ ಮಾಡಿ ಇನ್ನು ಹೆಚ್ಚಿನ ಜವಾಬ್ದಾರಿಯನ್ನು ನೀಡಿತು. ಒಟ್ಟಿನಲ್ಲಿ ಸಾರ್ವಜನಿಕ ಬದುಕಿನಲ್ಲಿ ಪಾರದರ್ಶಕವಾಗಿ ಕೆಲಸಮಾಡಿ, ಗೃಹರಕ್ಷಕ ಇಲಾಖೆಗೆ ಹೊಸ ಆಯಾಮವನ್ನು ನೀಡಿ, ಗೃಹರಕ್ಷಕರ ಎಲ್ಲಾ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ, ಜಿಲ್ಲೆಯಾದ್ಯಂತ ಗೃಹರಕ್ಷಕ ಇಲಾಖೆಯತ್ತ ಜನರು ಆಕರ್ಷಿತರಾಗುವಂತೆ ಮಾಡಿದ ಶ್ರೇಯಸ್ಸು ಡಾ|| ಚೂಂತಾರು ಅವರಿಗೆ ಸಲ್ಲುತ್ತದೆ. ಅರ್ಹವಾಗಿಯೇ ಅವರ ಜನಪರಕಾಳಜಿ, ನಿಷ್ಕಾಮಸೇವೆ ಮತ್ತು ಪ್ರಾಮಾಣಿಕ ಕೆಲಸಕ್ಕೆ ಪ್ರಶಸ್ತಿ ಸಂದಿದೆ ಮತ್ತು ಪ್ರಶಸ್ತಿಯ ಗೌರವ ಇನ್ನೂ ಹೆಚ್ಚಾಗಿದೆ ಎಂದರೂ ಅತಿಶಯೋಕ್ತಿಯಲ್ಲ
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.