ಕೋಲಾರ (ವಿಶ್ವಕನ್ನಡಿಗ ನ್ಯೂಸ್) : – ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 55 ವರ್ಷದ ವೃದ್ದರೊಬ್ಬರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ಅಪರೂಪದ ಘಟನೆ ಇಂದು ಕಂಡು ಬಂತು. ಕೊವಿಡ್ ಆತಂಕದ ನಡುವೆ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಿದೆ.
ಈ ನಡುವೆ ಕೋಲಾರದ ಬಾಲಕಿಯರ ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ೫೫ ವರ್ಷದ ವೃದ್ಧ ಕಠಾರಿಪಾಳ್ಯದ ನಿವಾಸಿ ಮಂಜುನಾಥ್ ಉತ್ಸಾಹದಿಂದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಮಂಜುನಾಥ್ ಸದ್ಯ ಬೆಂಗಳೂರು ಸಶಸ್ತ್ರ ಪೊಲೀಸ್ ಮೀಸಲು ಪಡೆಯಲ್ಲಿ ಕೆಲಸ ಮಾಡುತ್ತಿದ್ದು , ೧೯೯೩ ರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ನಾಲ್ಕನೇ ತರಗತಿ ಪಾಸ್ ಆಗಿದ್ದರೆ ಕೆಲಸ ಸಿಗುತ್ತಿತ್ತು ಎನ್ನಲಾಗಿದೆ. ತದ ನಂತರ ಅಂದರೆ ೧೯೯೬ ನಂತರ ಪೊಲೀಸ್ ಪೇದೆ ಕೆಲಸಕ್ಕೆ ಸೇರಲು ಹತ್ತನೇ ತರಗತಿ ಉತ್ತೀರ್ಣ ಕಡ್ಡಾಯ ಮಾಡಿದ್ದಾರೆ.
ಕಳೆದ ವರ್ಷವೂ ಪರೀಕ್ಷೆ ಬರೆದು ಅನುತ್ತೀರ್ಣರಾಗಿದ್ದ ಮಂಜುನಾಥ್ ಎಷ್ಟು ವರ್ಷ ಸೇವೆ ಸಲ್ಲಿಸಿದರೂ ಕೂಡಾ ಅವರಿಗೆ ಬಡ್ತಿ ಸಿಕ್ಕಿರಲಿಲ್ಲ . ಈ ಹಿನ್ನಲೆಯಲ್ಲಿ ಮಂಜುನಾಥ್ ಈಗ ಅವರಿಗೆ ಕಡ್ಡಾಯವಾಗಿ ಹತ್ತನೇ ತರಗತಿ ಪಾಸ್ ಮಾಡಬೇಕು.
ಅದಕ್ಕಾಗಿ ಮಂಜುನಾಥ್ ಯಾವುದೇ ಸಂಕೋಚವಿಲ್ಲದೆ ಪರೀಕ್ಷೆ ಬರೆಯಲು ಇಂದು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ . ಈ ಬಾರಿ ಹತ್ತನೇ ತರಗತಿ ಪಾಸ್ ಆದರೆ ಮಂಜುನಾಥ್ ಅವರಿಗೆ ಮುಖ್ಯ ಪೊಲೀಸ್ ಪೇದೆಯಾಗಿ ಪ್ರಮೋಷನ್ ಸಿಗಲಿದೆ .
ಮಂಜುನಾಥ್ ಪರೀಕ್ಷೆ ಬರೆಯಲು ಬಂದಾಗ ಅಲ್ಲಿದ್ದ ಕೆಲವರು ಇವರನ್ನು ನೋಡಿ ಆಶ್ಚರ್ಯ ಪಟ್ಟರು . ಇವರು ಶಿಕ್ಷಕರೋ , ಇಲ್ಲಾ ಮುಖ್ಯ ಶಿಕ್ಷಕರೋ ಇರಬೇಕು ಎಂದುಕೊಂಡರು. ಆದರೆ ಅವರು ಒಬ್ಬ ವಿದ್ಯಾರ್ಥಿಯಂತೆ ಪರೀಕ್ಷೆ ಬರೆಯಲು ಕುಳಿತಾಗ ಆಶ್ಚರ್ಯಚಕಿತರಾಗಿ ನೋಡಿದರು.
ಮಂಜುನಾಥ್ ಅವರಿಗೆ ಮಕ್ಕಳು , ಮೊಮ್ಮಕ್ಕಳಿದ್ದಾರೆ . ಆದರೂ ಅವರು ಯಾವುದೇ ಬೇಸರ ಸಂಕೋಚವಿಲ್ಲದೆ ಇಂದು ಪರೀಕ್ಷೆ ಬರೆಯಲು ಬಂದಿದ್ದಾರೆ.
ಇವರಲ್ಲದೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆಯ ೫೧ ವರ್ಷದ ಅಶೋಕ್ ಎಂಬುವವರು ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದು , ಇವರು ಕೂಡಾ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.