(www.vknews.com) : ಸಮಾಜದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ನಾವು ಕೇವಲ ಮಾತಿನಿಂದ ಸಹಾನುಭೂತಿ -ಅನುಕಂಪ ವ್ಯಕ್ತ ಪಡಿಸಿ ಕೈ ತೊಳೆದು ಕೊಳ್ಳದೇ ಅವರಲ್ಲೊಬ್ಬರಾಗಿ ಅವರ ಸಮಸ್ಯೆಗಳನ್ನು ಆಲಿಸಿ ಸಾದ್ಯವಾದಷ್ಟು ಮಟ್ಟಿಗೆ ಅದನ್ನು ಪರಿಹರಿಸಿ ಕೊಡುವುದೇ ನಿಜವಾದ ಪುಣ್ಯ ಕರ್ಮ ಎಂದು ಮುಲ್ಕಿ ಶಾಪೀ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಹೇಳಿದ್ದಾರೆ.
ನಮ್ಮ ಸಂಪರ್ಕದಲ್ಲಿರುವ ಸುತ್ತಮುತ್ತಲಿನ ಪ್ರತಿಯೊಬ್ಬರ ಬಗ್ಗೆ ನಾವು ಕಾಳಜಿ ವಹಿಸ ಬೇಕಾಗುತ್ತದೆ. ಕುಟುಂಬದ ಸದಸ್ಯರಿಂದ ಹಿಡಿದು ನೆರೆಕರೆಯವರು,ಆಪ್ತರು,ಗುರು ಹಿರಿಯರು ಮಾತ್ರವಲ್ಲ ಮೂಕ ಪ್ರಾಣಿಗಳ ತನಕ ಪ್ರತಿಯೊಂದು ಜೀವ ಜಾಲದ ಬಗ್ಗೆ ಕಾಳಜಿ ವಹಿಸುವಂತೆ ಇಸ್ಲಾಂ ನಮಗೆ ಆದೇಶ ನೀಡಿದ್ದು ದಯಾಪರ ನಿಲುವಿನಿಂದ ನಮಗೂ ,ಇತರರಿಗೂ ಮನಸಂತೃಪ್ತಿ ದೊರಕುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ವ್ಯಕ್ತಿಯೊಬ್ಬನ ಏಕೈಕ ಮಗು ತೀರಿಕೊಂಡಿತ್ತು. ಇದರಿಂದ ಬಹಳಷ್ಟು ನೊಂದು ಕೊಂಡಿದ್ದ ಆತ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ. ದೇವನ ಬಗ್ಗೆಯೇ ನಿರಾಸೆ ಪಟ್ಟಿದ್ದ. ಪರಿಹಾರಕ್ಕಾಗಿ ಸಂಪರ್ಕಿಸಿದ ಕಿರಿಯ ಧರ್ಮಗುರು ಎಲ್ಲಾವೂ ದೇವನ ಇಚ್ವೆ ಎಂದು ಹೇಳಿ ಸಾಗ ಹಾಕಿದ. ಹಿರಿಯ ಗುರು ಗ್ರಂಥಗಳ ಹಲವು ವಚನಗಳನ್ನು ಹೇಳಿಕೊಟ್ಟ. ಇದ್ಯಾವುದೂ ಆತನಿಗೆ ನಾಟಲಿಲ್ಲ. ಕೊನೆಗೆ ಸೂಫಿಸಂತನ ಬಳಿ ಅಳಲು ತೋಡಿಕೊಂಡ. ಅಗ ಅವನೊಂದಿಗೆ ಸೂಫಿಯೂ ಅಳಲು ಆರಂಭಿಸಿದ!
ತನ್ನ ಮಗುವೂ ತೀರಿಕೊಂಡ ಬಗ್ಗೆ ಹೇಳಿದ. ನಮ್ಮಿಬ್ಬರ ಮಕ್ಕಳನ್ನೂ ನಾವು ಸ್ವರ್ಗದಲ್ಲಿ ಬೇಟಿಯಾಗುವ ಎಂದು ಸಂತೈಸಿದ. ಇದರಿಂದಾಗಿ ಆತನ ಜಿಗುಪ್ಸೆ ಹೊರಟು ಹೋಗಿ ಆತ ಪೂರ್ವ ಸ್ಥಿತಿಗೆ ಮರಳಿದ. ಈ ಉಧಾಹರಣೆಯನ್ನು ಉಲ್ಲೇಖಿಸಿದ ಖತೀಬರು ತೊಂದರೆಗೊಳಗಾದ ಜನರಿಗೆ ನಮ್ಮ ಸಾಂತ್ವನದ ನುಡಿಗಳು, ಸೇವಾ ಮನೋಭಾವದ ಕ್ರಿಯೆಗಳು ಜನರಲ್ಲಿ ಶಕ್ತಿಯನ್ನು ತುಂಬಲು ಸಹಕಾರಿಯಾಗುತ್ತದೆ ಎಂದರು.
ಜನರಿಗೆ ಇಂದು ಇತರರ ಬಗ್ಗೆ ಚಿಂತಿಸಲು ಸಮಯವೇ ಇಲ್ಲದಾಗಿದ್ದು ಸ್ವಂತ ಮಡದಿ ಮಕ್ಕಳ ಬಗ್ಗೆಗೂ ಕಾಳಜಿ ವಹಿಸಲು ಸಾದ್ಯವಾಗುತ್ತಿಲ್ಲ. ಬದುಕಿನಲ್ಲಿ ಹಣ ಮಾಡುವ ಜಂಜಾಟದಲ್ಲಿ ಹಲವು ಸಂಭಂದಗಳನ್ನು ನಾವು ಮೆರೆತು ಬಿಡುತ್ತೇವೆ. ಮತ್ತೆ ಆರೋಗ್ಯ ಹದಗೆಟ್ಟ ನಂತರ ಹಿಂದೆ ಮಾಡಿದ ತಪ್ಪುಗಳನ್ನು ನೆನೆದು ವ್ಯಾಕುಲ ಪಡುತ್ತೇವೆ ಎಂದು ಹೇಳಿದ ಅವರು ನಮ್ಮ ಕುಟುಂಬ ವರ್ಗದವರಿಗಾಗಿ ನಮ್ಮ ಅಮೂಲ್ಯ ಸಮಯದ ಒಂದಿಷ್ಟು ಮೀಸಲಿಡುವುದು ಅತ್ಯಗತ್ಯ ಎಂದರು.
ಶಾಲೆಯಲ್ಲಿ ಅದ್ಯಾಪಕಿಯೊಬ್ಬಳು ಮಕ್ಕಳೊಂದಿಗೆ ನೀವು ಏನಾಗ ಬಯಸುತ್ತೀರಿ? ಎಂಬುದನ್ನು ಬರೆದು ಕೊಡಿ ಎನ್ನುತ್ತಾಳೆ. ಮಕ್ಕಳೆಲ್ಲರೂ ಬರೆದು ಕೊಡುತ್ತಾರೆ. ಎಲ್ಲವನ್ನೂ ನೋಡಿದ ಅದ್ಯಾಪಕಿ ಒಂದು ಪೇಪರ್ ನೋಡಿ ಅತ್ತು ಬಿಟ್ಟಳು.
ಒಬ್ಬ ವಿದ್ಯಾರ್ಥಿ ನಾನು ಟೀವಿ ಯಾಗಲು ಬಯಸುತ್ತೇನೆ ಎಂದು ಬರೆದಿದ್ದ. ಟೀವಿಯಾದರೆ ತಂದೆ ತಾಯಿ ಅಣ್ಣ ಅಕ್ಕ ಎಲ್ಲರೂ ನನ್ನ ಬಳಿ ಇರುತ್ತಾರೆ. ನನ್ನ ಮಾತನ್ನು ಆಲಿಸುತ್ತಾರೆ. ನನ್ನನ್ನು ಪ್ರೀತಿಸುತ್ತಾರೆ. ಕೇಡಾದರೆ ಕೂಡಲೇ ಸರಿ ಪಡಿಸುತ್ತಾರೆ. ಹೀಗೆ ಹಲವು ಕಾರಣಗಳನ್ನೂ ಬರೆದಿದ್ದ. ಅಳುತ್ತಲೇ ಇದ್ದ ಟೀಚರನ್ನು ಅದ್ಯಾಪಕನಾದ ಅವಳ ಪತಿ ವಿಚಾರಿಸಿದಾಗ ವಿದ್ಯಾರ್ಥಿಯ ಪೇಪರ್ ಕೊಟ್ಟು ಓದಿ ಎಂದಳು. ಆತ ಓದುತ್ತಲೇ ಈ ಹುಡುಗನ ಪೋಷಕರು ಎಂಥಾ ಮನುಷ್ಯರಪ್ಪಾ ಎಂದು ಹೇಳಲು ನೋಡಿದಾಗ ಕೊನೆಯಲ್ಲಿ ಇವನದೇ ಮಗುವಿನ ಹೆಸರು ಬರೆದಿತ್ತು. ಇದು ನೋಡಿ ಆತನೂ ದಂಗಾಗಿದ್ದ .
ಈ ಉಧಾಹರಣೆ ಹೇಳಿದ ಉಸ್ತಾದರು ಇಸ್ಲಾಂ ಧರ್ಮದ ಆಶಯ ಆದರ್ಶ ಗಳನ್ನು ನಾವು ಮೈಗೂಡಿಸಿ ಕೊಂಡರೆ ಇಂತಹ ಎಡವಟ್ಟುಗಳು ನಮ್ಮಿಂದ ಉಂಟಾಗುವುದಿಲ್ಲ ಎಂದರು.
ಪ್ರೀತಿ,ಕರುಣೆ,ದಯೆ ,ಅನುಕಂಪ,ಸಹಾನುಭೂತಿ, ಸಾಂತ್ವನ ಮೊದಲಾದ ಪದಗಳೇ ಧರ್ಮ ಪುಸ್ತಕಗಳಲ್ಲಿ ಹೆಚ್ಚಾಗಿ ಬಳಕೆಯಾಗಿದ್ದು ಇದೆಲ್ಲವೂ ಕೇವಲ ಪುಸ್ತಕದ ಬದನೆಕಾಯಿಯಾಗದೇ ಕ್ರಿಯಾರೂಪದಲ್ಲಿ ಇರಬೇಕಾಗಿದೆ ಎಂದ ಅವರು ಹಾತಿಮುತ್ವಾಹಿ (ರ) ಎಂಬ ಸಹಾಬಿವರ್ಯರು ದಿನ ನಿತ್ಯ ಊಟ ಸೇವಿಸಿ ಬಾಕಿ ಉಳಿದದ್ದನ್ನು ಮನೆಯ ಸುತ್ತಲಿನ ಇರುವೆಗಳಿಗೆ ಹಾಕಿ ಅವುಗಳು ನಮ್ಮ ನೆರೆಕರೆಯ ಸದಸ್ಯರು ಎನ್ನುತ್ತಿದ್ದರು.
ಹಝ್ರತ್ ಖಲಿಫಾ ಉಮರ್( ರ) ರವರು ತನ್ನ ಸೇವಕ ಒಂಟೆಯನ್ನು ಎರಡು ದಿನ ಸುತ್ತಾಡಿಸಿ ಹುಡುಕಿ ತಂದ ಮೀನನ್ನು ತಿರಸ್ಕರಿಸಿದ್ದರು. ಈ ಒಂಟೆಯನ್ನು ಇಷ್ಟು ತೊಂದರೆಗೊಳಪಡಿಸಿ ತಂದ ಮೀನನ್ನು ನಾನು ಸೇವಿಸಲಾರೆ ಖಲೀಫ ಹೇಳಿದ್ದು ಮೂಕ ಪ್ರಾಣಿಗಳೊಂದಿಗೆ ಅವರಿಗಿದ್ದ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.