ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕು ಲಕ್ಕೂರು ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ನಾಡೋಜ ಡಾ.ಸಿದ್ದಲಿಂಗಯ್ಯ ನವರಿಗೆ ನುಡಿ ನಮನ, ಸಾಧಕರಿಗೆ ಪ್ರತಿಭಾ ಪುರಸ್ಕಾರ, ಕಾವ್ಯ ನಮನ, ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಲಕ್ಕೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ನಿವೃತ್ತ ಜಂಟಿ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪುರ ಗ್ರಾಮದ ಕೆ.ವೆಂಕಟೇಶಪ್ಪ ಮಾತನಾಡಿ “ಡಾ.ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯಕ್ಕೆ ಹೊಸ ಕಣ್ಣು ನೀಡಿದ್ದ ಕವಿ. ಅವರ ಹಾಡುಗಳು ದಲಿತ ಸಂಘರ್ಷ ಸಮಿತಿಯ ಪ್ರಾರ್ಥನಾ ಗೀತೆಗಳಾಗಿದ್ದವು. ಅವರ ಕಾವ್ಯ ಒಂದು ಸಮುದಾಯವನ್ನೇ ಬದಲಿಸಿತ್ತು,ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳಿಗೆ ಸಿದ್ದಲಿಂಗಯ್ಯನವರ ಕೊಡುಗೆ ಅಪಾರ ಅವರೊಂದಿಗೆ ಒಡನಾಟ ಇಂದಿಗೂ ನನಗೆ ಅಮರ, ಬೂಸ ಸಾಹಿತ್ಯದ ಚಳುವಳಿ ದಲಿತ ಸಾಹಿತ್ಯದ ಹುಟ್ಟಿಗೂ ಸಹ ಕಾರಣ, ಅವರ ಗೀತೆಗಳಲ್ಲಿ ಹೋರಾಟದ ಶಕ್ತಿ ಇತ್ತು. ಎಡಶಕ್ತಿಗಳ ಪ್ರತಿರೋಧ ಎದುರಿಸಿದ್ದ ಅವರು ಹಾಸ್ಯ ಪ್ರಜ್ಞೆ ಮೈಗೂಡಿಸಿಕೊಂಡಿದ್ದರು. ಅವರು ಸದಾ ಅಮರ” ಎಂದು ಮಾತನಾಡಿದರು.
ನುಡಿನಮನವನ್ನು ಅರ್ಪಿಸಿದ ಚೈತನ್ಯ ಕಲಾನೀಕೇತನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಹಿರಿಯ ಕವಿಗಳಾದ ಡಾ.ಜ.ಮು.ಚಂದ್ರ ರವರು ಮಾತನಾಡಿ “ಸಿದ್ದಲಿಂಗಯ್ಯ ಜೊತೆಗಿನ ಒಡನಾಟದ ನೆನಪುಗಳು ಎಂದಿಗೂ ಮಾಸುವುದಿಲ್ಲ. ಅವರ ಬೌದ್ಧಿಕ ಚಿಂತನೆಗಳಲ್ಲಿ ನವಿರಾದ ಹಾಸ್ಯ ಅಡಗಿರುತ್ತಿತ್ತು. ಸಿದ್ದಲಿಂಗಯ್ಯ, ಅಂಬೇಡ್ಕರ್ ಹಾಗೂ ಮಾರ್ಕ್ಸ್ವಾದಿಯಾಗಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅವರು ಸಂಘಟನಾ ಶಕ್ತಿಯಾಗಿದ್ದರು. ತಳಮಟ್ಟದ ಜನರ ಒಡನಾಡಿಯಾಗಿ ಕನ್ನಡಕ್ಕೆ ಹೊಸ ಪರಿಭಾಷೆಯ ಕಾವ್ಯಗಳನ್ನು ನೀಡಿದರು. ಅವರ ಕವಿತೆಗಳು ಜನರನ್ನು ಆಯಷ್ಕಾಂತದಂತೆ ಸೆಳೆದವು, ಇವರ ವಿಚಾರಧಾರೆಗಳು ಎಲ್ಲಾರಿಗೂ ಅಗತ್ಯ’ ಎಂದು ತಿಳಿಸಿದರು.
ಕಾರ್ಯಕ್ರಮದ ಉಪಸ್ಥಿತಿಯಲ್ಲಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯ ಶಾಸ್ತ್ರ ಪ್ರಾಧ್ಯಪಕರಾದ ಲಕ್ಕೂರಿನ ಅನಂತಮೂರ್ತಿ ರವರು ಮಾತನಾಡಿ “ಜೀವಿತಾವಧಿಯಲ್ಲಿ ಮರೆಯಲಾರದ ಹಾಡುಗಳನ್ನು ಅವರು ನೀಡಿದ್ದರು. ದ.ಸಂ.ಸ ಹಾಗೂ ಬಂಡಾಯ ಸಾಹಿತ್ಯದ ಸಂಗಾತಿಯಾಗಿ, ನಿಜವಾದ ಜನಕವಿಯಾಗಿದ್ದರು. ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿದ್ದರು. ಅವರು ಸಾಂಸ್ಕೃತಿಕ ಲೋಕವನ್ನು ವ್ಯಾಪಿಸಿಕೊಂಡ ಶಕ್ತಿ. ಅಲಕ್ಷಿತರ ಪ್ರತಿನಿಧಿಯಾಗಿ ಸಾಂಸ್ಕೃತಿಕ ಲೋಕದಲ್ಲಿ ಹೆಜ್ಜೆಗುರುತು ಮೂಡಿಸಿದ್ದರು. ವಿನಯದ ಪ್ರತಿರೂಪದಂತಿದ್ದರು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಾಗನಂದ ಕೆಂಪರಾಜ್ ಮಾತನಾಡಿ “ಸಿದ್ದಲಿಂಗಯ್ಯನವರ ಬರವಣಿಗೆಯಲ್ಲಿ ಹೊಸತನವಿತ್ತು. ಬಂಡಾಯ ಸಾಹಿತ್ಯದ ಹುಟ್ಟಿಗೆ ಕಾರಣರಾದವರಲ್ಲಿ ಅವರು ಕೂಡ ಒಬ್ಬರು.ಸಾಹಿತ್ಯವು ಸಮಾಜವನ್ನು ಬದಲಿಸುತ್ತದೆ ಎಂಬುದಕ್ಕೆ ಸಿದ್ದಲಿಂಗಯ್ಯ ಸಾಕ್ಷಿಯಂತಿದ್ದರು. ಅವರ ಹಾಡುಗಳಿಂದ ಪ್ರಭಾವಿತಗೊಂಡ ಅನೇಕರು ಅಂಬೇಡ್ಕರ್ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು’ ಎಂದು ಹೇಳಿದರು.
ಕಾವ್ಯ ನಮನದಲ್ಲಿ ಬರಗೂರು ಪ್ರಕಾಶ್, ನರಸಿಂಹಮೂರ್ತಿ, ವಂಸತ್, ಲಕ್ಕೂರು ಎಂ.ನಾಗರಾಜ್, ಸತೀಶ್, ಲಕ್ಕೂರು ರಾಜೇಶ್, ಶ್ರೀನಿಧಿ, ಸರ್ವೇಶ್, ದೊಡ್ಡಿ ಪ್ರವೀಣ್ ಇತರರು ಕವಿತೆ ವಾಚನ ಮಾಡುವ ಮೂಲಕ ಗೌರವ ಅರ್ಪಿಸಿದರು.
ಶಿಕ್ಷಕರು ಹಾಗೂ ಬಹುಮುಖ ಕಲಾವಿದರಾದ ಎನ್.ವೆಂಕಟಪತಿ ರವರಿಗೆ ಗೌರವ ಸನ್ಮಾನ ಮಾಡಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನವಾಗಿ ಅಂತರಾಷ್ಟ್ರೀಯ ಮಟ್ಟದ ಸೂಪರ್ ಮೆಮೋರಿ ಕಿಡ್, ಗ್ರ್ಯಾಂಡ್ ಮಾಸ್ಟರ್ ತಾನೀಶ್.ಎನ್. ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಕುಮಾರಿ ಅಂಬುಜಾ.ಸಿ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲ್ಯೂಕಿಗೆ ಪ್ರಥಮ ಸ್ಥಾನ ಪಡೆದ ಕುಮಾರಿ ವರ್ಷೀಣಿ.ಸಿ ಇವರಿಗೆ ಹಿರಿಯರು ಗೌರವ ಸಾಧಕ ಪುರಸ್ಕಾರ ಮಾಡಿ ಅಭಿನಂದನೆ ಅರ್ಪಿಸಿದರು.
ಕಾರ್ಯಕ್ರಮದ ಉಪಸ್ಥಿತಿಯನ್ನು ಡಾ.ಅನಂತಮೂರ್ತಿ, ಲಕ್ಕೂರು ಆನಂದ್, ಎ.ಕೆ.ವೆಂಕಟೇಶ್, ಟಿ.ಎಂ.ವೆಂಕಟೇಶ್, ಕೆಂಪಣ್ಣ, ಪಿ.ರಮೇಶ್, ಲಕ್ಕೂರು ವೆಂಕಟೇಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ದಾ.ಮು.ವೆಂಕಟೇಶ್, ನ.ಗುರುಮೂರ್ತಿ, ಎಸ್.ನಾರಾಯಣಸ್ವಾಮಿ, ಪ್ರಶಾಂತ್.ಎಂ.ವಿ. ಹಾಗೂ ಲಕ್ಕೂರಿನ ಅನೇಕ ಹಿರಿಯರು, ಸಾಹಿತ್ಯಾಭಿಮಾನಿಗಳು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.