(www.vknews.com) : ಯಾರು ಏನೇ ತಿಪ್ಪರಲಾಗ ಹಾಕಿದರೂ ಇಸ್ಲಾಂ ಧರ್ಮದ ಶಾಂತಿಯ,ವಿಶ್ವ ಮಾನವೀಯತೆಯ ಸಂದೇಶಗಳನ್ನು ಗೌಣವಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಧರ್ಮದ ಮಾನವೀಯ ಸಂಧೇಶಗಳನ್ನು ಸಾರುವ ಮದ್ರಸಗಳು ವ್ಯವಸ್ಥಿತ ರೀತಿಯಲ್ಲಿ ಕಾರ್ಯಚರಿಸುವ ಕಡೆ ಎಲ್ಲಾ ಧರ್ಮ ಜಾತಿ ಭಾಂದವರು ಅನ್ಯೋನ್ಯತೆಯಿಂದ ಬದುಕು ಸವೆಸುತ್ತಿದ್ದಾರೆ. ಅಷ್ಟೂ ಮುಸ್ಲಿಂ ರಾಷ್ಟ್ರಗಳಲ್ಲಿ ಮತ್ತು ಮುಸ್ಲಿಮರು ಬಹುಸಂಖ್ಯಾತರಿರುವ ಹಲವಾರು ದೇಶಗಳಲ್ಲಿ ಮುಸ್ಲಿಮೇತರ ಧರ್ಮೀಯರು ಬಹಳ ಶಾಂತಿಯುತವಾಗಿ ಬದುಕಲು ಅವಕಾಶವಿದೆ.
ಮಾನವ ಕುಲವನ್ನು ಗೌರವಿಸಿ ಅವರೊಂದಿಗೆ ಅನ್ಯೋನ್ಯತೆಯಿಂದ ವರ್ತಿಸ ಬೇಕೆಂಬ ಇಸ್ಲಾಂ ಧರ್ಮದ ಆಶಯವನ್ನು ಮದ್ರಸಗಳಲ್ಲಿ ಕಲಿಸುತ್ತಿರುವ ಕಾರಣಕ್ಕಾಗಿ ಇದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಡಳಿತ ಪಕ್ಷದ ಒಬ್ಬ ಶಾಸಕರಾಗಿ ಸಮಾಜದಲ್ಲಿ ಶಾಂತಿ- ಪ್ರೀತಿ ಪ್ರಚಾರ ಮಾಡ ಬೇಕಿದ್ದ ಜಾಗದಲ್ಲಿ ಸಿ ಟಿ ರವಿ ಎಂಬವರು ತಮ್ಮ ಸ್ಥಾನ ಮಾನಕ್ಕೆ ಶೋಭೆಯಲ್ಲದ ಹೇಳಿಕೆಗಳನ್ನು ನೀಡಿ ರಾಜ್ಯದ ಎರಡು ಪ್ರಬಲ ಸಮುದಾಯದ ಮಧ್ಯೆ ಅಪನಂಬಿಕೆ ಸೃಷ್ಟಿಸಿ ಕ್ಷೋಭೆ ಹರಡಲು ಹವಣಿಸುತ್ತಿರುವುದು ಖಂಡನೀಯ.
ಮದ್ರಸಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ಎಂಬ ಸಿ ಟಿ ರವಿಯ ಹೇಳಿಕೆ ಬಾಲಿಶವೂ ಬೇಜವಾಬ್ದಾರಿತನದ್ದೂ ಆಗಿದೆ. ಇದನ್ನು ರಾಜ್ಯದ ಬಹು ಸಂಖ್ಯಾತ ಹಿಂದೂ ಭಾಂದವರು ತಿಪ್ಪೆಗುಂಡಿಗೆ ಎಸೆಯುತ್ತಾರೆಂಬುದು ಖಚಿತ. ದೇಶದ ಮುಸ್ಲಿಂ ಬಾಂದವರ ಬಗ್ಗೆ ಅವರು ಎಂಥವರು ಎಂದು ಇಲ್ಲಿನ ಕೋಟ್ಯಾಂತರ ಹಿಂದೂ ಭಾಂದವರು ಅರ್ಥ ಮಾಡಿ ಕೊಂಡಿದ್ದಾರೆ. ಆಪತ್ತು ಘಟ್ಟದಲ್ಲಿ ಧರ್ಮ -ಜಾತಿ -ಭಾಷೆ- ಊರು ನೋಡದೇ ಪ್ರತಿಯೊಬ್ಬ ಮಾನವವನ ನೆರವಿಗೆ ಮೈಕೈ ಮೆರೆತು ಧಾವಿಸಿ ಬರುವವರಲ್ಲಿ ಮುಸ್ಲಿಮರದ್ದೇ ಎತ್ತಿದ ಕೈ. ಇದಕ್ಕೆ ಅವರಿಗೆ ಪ್ರಚೋದನೆ ಸಿಗುವುದು ಮದ್ರಸಗಳಲ್ಲಿ ಕಲಿಸುವ ಇಸ್ಲಾಂ ಧರ್ಮದ ಪ್ರಭೋದನೆಯಿಂದಾಗಿದೆ.
ಭೂಮಿಯಲ್ಲಿರುವ ಸಕಲ ಸೃಷ್ಟಿಜಾಲಗಳೂ ದೇವನ ಕುಟುಂಬದ ಅಂಗವಾಗಿದೆ. ಅವುಗಳಿಗೆಲ್ಲಾ ನೀವು ಒಳಿತನ್ನು ಮಾಡಿರಿ ಎಂಬ ಪ್ರವಾದಿ ವಚನವನ್ನು ಅಕ್ಷರಶಃ ಪಾಲಿಸುವವನೇ ಒಬ್ಬ ನೈಜ ಮುಸ್ಲಿಮ. ಹಿಂದೂ ಧರ್ಮದಲ್ಲೂ ಸರ್ವೇಜನ ಸುಖಿನೋಭವಂತು ಎಂಬಂತಹ ಉದಾತ್ತ ತತ್ವಗಳು ಬಹಳಷ್ಟು ಇದೆ. ಇಂತಹ ಹಿಂದೂ ಧರ್ಮದ ಮೌಲ್ಯಗಳನ್ನು ಕಲಿಸಲು ಸಿ ಟಿ ರವಿಯಂತವರು ಮುಂದೆ ಬಂದು ಮದ್ರಸಗಳಂತೆಯೇ ಕಾರ್ಯಚರಿಸುವ ಗುರುಕುಲ ಗಳನ್ನು ಸ್ಥಾಪಿಸಿದರೆ ಇಂದು ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟು ಕೆಲ ಉಗ್ರ ಮನೋಭಾವದ ಯುವಕರು ನಡೆಸುತ್ತಿರುವ ತಾಲಿಬಾನೀ ಸ್ಟೈಲ್ ಅಕ್ರಮಣವನ್ನು ನಿಯಂತ್ರಿಸ ಬಹುದಾಗಿದೆ.
ಆದರೆ ಜನರು ಹಿಂದೂ ಧರ್ಮವನ್ನು ಸರಿಯಾಗಿ ಅರ್ಥೈಸಿದರೆ ಇವರ ನೀಚ ರಾಜಕಾರಣಕ್ಕೆ ಬಹುಫರಾಕ್ ಹೇಳಲು ಯಾರೂ ಸಿಗಲಾರರು ಎಂಬ ಭಯದಿಂದ ಇಂತಹ ಪುಣ್ಯ ಕೆಲಸಕ್ಕೆ ಇವರು ಮುಂದಾಗುವುದಿಲ್ಲ. ಭಾರತದ ವಿವಿಧ ಕಡೆಗಳಿಂದ ವರದಿಯಾಗುತ್ತಿರುವ ಸಂಘೀ ಪ್ರೇರಿತ ದೌರ್ಜನ್ಯಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತು ಹಿಂದೂ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತಿದೆಯಾದರೂ ಆ ಬಗ್ಗೆ ಇವರು ತಲೆ ಕೆಡಿಸಿ ಕೊಳ್ಳುವುದಿಲ್ಲ.
ಇವರ ಅಧಿಕಾರದ ದಾಹಕ್ಕೆ ಜನರ ನೆತ್ತರು ಬೇಕು. ಅಧಿಕಾರಕ್ಕೆ ತಲುಪಲು ಶವಗಳ ಮೆಟ್ಟಿಲು ಬೇಕು ಅಷ್ಟೆ. ಇದನ್ನು ಶಾಂತಿ ಪ್ರಿಯ ಹಿಂದೂ ಬಾಂದವರು ಆದಷ್ಟು ಬೇಗ ಅರ್ಥ ಮಾಡಿಕೊಂಡು ಅಭಿವೃದ್ದಿ ಬಗ್ಗೆ ಕಾಳಜಿ ಇಲ್ಲದ ಬರೀ ಧರ್ಮವನ್ನು ಮುಂದಿಟ್ಟು ರಾಜಕಾರಣ ಮಾಡುವವರನ್ನು ತಿರಸ್ಕರಿಸ ಬೇಕಾಗಿದೆ.
ಮದ್ರಸಗಳಲ್ಲಿ ಕಲಿತವರೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಎಂಬ ಇತಿಹಾಸವನ್ನು ಸಿಟಿ ರವಿ ಮತ್ತು ಅವರ ಬೆಂಬಲಿಗರು ಕಲಿಯಬೇಕು. ಜಗತ್ತಿನಲ್ಲಿರುವ ಅಷ್ಟೂ ಮುಸ್ಲಿಂ ರಾಷ್ಟ್ರಗಳಲ್ಲಿ ಮತ್ತು ಇತರ ದೇಶಗಳಲ್ಲಿ ಮದ್ರಸಗಳು ಕಾರ್ಯಚರಿಸುತ್ತಿದ್ದರೂ ಅಲ್ಲಿ ತಾಲಿಬಾನಿಗಳ ನೆರಳನ್ನೂ ಕೂಡಾ ಕಾಣಲು ಸಾದ್ಯವಿಲ್ಲ.
ಅದೇ ವೇಳೇ ಇದಕ್ಕಿಂತ ಬಿನ್ನವಾಗಿ ಕಾಶ್ಮೀರ ಪಾಕಿಸ್ತಾನ ಅಪ್ಘಾನ್ ನಂತಹ ಕೆಲವೇ ಕೆಲವು ಕಡೆಗಳಲ್ಲಿ ರಾಜಕೀಯ ಕಾರಣಕ್ಕಾಗಿ ಕೆಲ ದಾರಿ ತಪ್ಪಿದ ಯುವಕರು ಇಸ್ಲಾಂ ಧರ್ಮವನ್ನು ರಾಜಕೀಯಕ್ಕೆ ಎಳೆದು ತಂದು ಮಾಡ ಬಾರದ ಅನಾಹುತವನ್ನು ತಂದೊಡ್ಡುತ್ತಿರುವುದನ್ನು ಅಲ್ಲಗೆಳೆಯುವುದಿಲ್ಲ.
ಆದರೆ ಇದನ್ನು ಜಾಗತಿಕ ಮುಸ್ಲಿಂ ಉಲಾಮ ಸಂಘಟನೆಗಳ ಸಮೇತ ಜವಾಬ್ದಾರಿಯುತ ಎಲ್ಲಾ ಸಂಘಟನೆಗಳು ಖಂಡಿಸುತ್ತಿದೆ ಮತ್ತು ಅದರ ವಿರುದ್ದ ಪ್ರತೀ ಮಸೀದಿಗಳಲ್ಲಿ ಜನಜಾಗೃತಿ ಉಂಟು ಮಾಡಲಾಗುತ್ತಿದೆ. ಭಾರತದಲ್ಲಿ ಇಂದು ನಡೆಯುತ್ತಿರುವ ಅದೇ ರೀತಿಯ ಧರ್ಮ ರಾಜಕಾರಣ ಈ ಮೇಲೆ ಹೇಳಿದ ಕೆಲವು ಕಡೆಗಳಲ್ಲೂ ನಡೆಯುತ್ತಿದೆ ಎಂದರೆ ತಪ್ಪಾಗದು.
ಇತರ ಧರ್ಮೀಯರಲ್ಲಿ ಬಲಾತ್ಕಾರವಾಗಿ ಅಲ್ಲಾಹು ಅಕ್ಬರ್ ಹೇಳಿಸಿ ಹಲ್ಲೆ ಮಾಡುವುದು ಯಾವ ರೀತಿ ಭಯೋತ್ಪಾದನೆಯೋ ಅದೇ ರೀತಿ ಜೈ ಶ್ರೀರಾಂ ಎಂದು ಹೇಳಿಸಿ ಹಲ್ಲೆ ಕೊಲೆ ಮಾಡುವುದು ಭಯೋತ್ಪಾಧನೆಯಾಗಿದೆ.
ತಾಲಿಬಾನಿಗಳ ನೀಚ ಕೃತ್ಯಗಳನ್ನು ಉಲಮಾ ವರ್ಗ ಒಕ್ಕೊರಳಿನಿಂದ ಖಂಡಿಸಿದಂತೆ ಭಾರತದ ಸಂಘೀ ತಾಲಿಬಾನಿಗಳ ಇಂತಹ ನೀಚ ಕೃತ್ಯಗಳನ್ನು ಸ್ವಾಮೀಜಿ ವರ್ಗ ವಿರೋಧಿಸ ಬೇಕು. ಒಟ್ಟಿನಲ್ಲಿ ಇಪ್ಪತ್ತು ಕೋಟಿ ಭಾರತೀಯ ಮುಸ್ಲಿಮರ ಪೈಕಿ ಮದ್ರಸಗಳಲ್ಲಿ ಉತ್ಪತ್ತಿಯಾದ ತಾಲಿಬಾನಿಗಳ ಅಂಕಿ ಸಂಖ್ಯೆಯ ಲೆಕ್ಕವನ್ನು ಸಿ ಟಿ ರವಿ ಜನತೆಯ ಮುಂದೆ ಕರಾರುವಕ್ಕಾಗಿ ಮಂಡಿಸ ಬೇಕಾಗಿದೆ.
ನಿಮ್ಮ ಹೇಳಿಕೆಯು ಉತ್ತರಕ್ಕೆ ಅರ್ಹವಲ್ಲದಿದ್ದರೂ ನಿಮ್ಮ ಅಧಿಕಾರದ ಭದ್ರೆತೆಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವಿರೆಂದು ನಮಗೆ ಗೊತ್ತಿದ್ದರೂ ನಾವು ಮೌನ ವಹಿಸಿದರೆ ಕೆಲವಷ್ಟು ಜನರಾದರೂ ನಂಬುವ ಸಾಧ್ಯತೆ ಇರುವುದರಿಂದ ಇಷ್ಟು ಬರೆಯ ಬೇಕಾಯಿತು.
ಉಸಿರು ಇರುವ ತನಕ ನಮಗೆ ಇಲ್ಲಿ ಮೂರು ದಿನ ಬದುಕಬಹುದು.ಆದರೆ ಉಸಿರು ನಿಂತ ನಂತರ ಎಲ್ಲಾ ಜನರೂ ಹಾಡಿಹೊಗಳುವಂತಹ ಒಳಿತು ಮಾಡಿ ಇಲ್ಲಿಂದ ಹೋದರೆ ಅದಕ್ಕೆ ಸಾರ್ಥಕ ಜೀವನ ಎನ್ನುತ್ತಾರೆ ಸಿ ಟಿ ಯವರೇ. ನೀವು ಬದಲಾಗುವಿರೆಂಬ ನಿರೀಕ್ಷೆಯೊಂದಿಗೆ..
– ಎಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.