(www.vknews.com) : ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ದಕ್ಷಿಣ ಕರ್ನಾಟಕ ಯಾವತ್ತೂ ಒಂದು ಹೆಜ್ಜೆ ಮುಂದೆಯೇ ನಿಲ್ಲುತ್ತದೆ. ಆದ್ದರಿಂದಲೇ ದಕ್ಷಿಣ ಭಾಗದಿಂದ ಹಲವಾರು ದಾಈಗಳು ಉತ್ತರದತ್ತ ತೆರಳಿ ಸಂಘಟನೆ, ಸಂಸ್ಥೆ ಸಮುಚ್ಚಯಗಳ ಮೂಲಕ ಬದಲಾವಣೆಗೆ ಯತ್ನಿಸುತ್ತಿದ್ದಾರೆ. ದಕ್ಷಿಣ ಕರ್ನಾಟಕದ ಈ ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ನಮ್ಮ ಉಲಮಾಗಳು ಎಂದರೆ ಖಂಡಿತ ತಪ್ಪಾಗಲಾರದು. ಸಣ್ಣ ವಯಸ್ಸಿನಲ್ಲೇ ಕೇರಳ ಹಾಗೂ ಇನ್ನಿತರ ಕಡೆಗಳಿಗೆ ತೆರಳಿ ಅಲ್ಲಿನ ಅಗ್ರಗಣ್ಯ ಉಲಮಾಗಳ ಬಳಿ ಕುಳಿತು ಧೀರ್ಘ ಕಾಲ ಅಧ್ಯಯನ ನಡೆಸಿ ಅಲ್ಲಿ ತಾವು ಪಡೆದ ಸುಜ್ಞಾನವನ್ನು ಮಸೀದಿ ಮದ್ರಸಾಗಳ ಮೂಲಕ, ಪಳ್ಳಿ ದರ್ಸ್ಗಳ ಮೂಲಕ, ಸಂಸ್ಥೆ ಸಮುಚ್ಚಯಗಳ ಮೂಲಕ ಹರಡಿ ಇಲ್ಲಿನ ಜ್ಞಾನ ದಾಹವನ್ನು ಇಂಗಿಸಿದವರು ಈ ವಿದ್ವಾಂಸರು. ಆದ್ದರಿಂದಲೇ ಈ ಕಳೆದ ಐದು ದಶಕಗಳಲ್ಲಿ ದಕ್ಷಿಣ ಕರ್ನಾಟಕದ ಮುಸ್ಲಿಮರು ಬಹಳಷ್ಟು ಅಭಿವೃದ್ಧಿಯನ್ನು ಸಾಧಿಸಿದ್ದಾರೆ. ನಮ್ಮ ಉಲಮಾಗಳು ಅಲ್ಲಿ ಕಲಿತು ಬಂದಿರುವುದು ಕೇವಲ ಧಾರ್ಮಿಕ ವಿದ್ಯಾಭ್ಯಾಸ ಮಾತ್ರವಾಗಿದ್ದರೂ ಕೂಡ ಕಾಲದ ವೇಗದ ದಿಕ್ಕನ್ನು ಅರಿತ ವಿದ್ವಾಂಸರು ನಮ್ಮೂರಿನ ಮಕ್ಕಳಿಗೆ ಧಾರ್ಮಿಕ ವಿದ್ಯೆಯ ಜೊತೆಗೆ ಆಧುನಿಕ ಶಿಕ್ಷಣವನ್ನೂ ನೀಡಿ ವೈಜ್ಞಾನಿಕ ಜಗತ್ತಿನ ಸಂಚಲನದೊಂದಿಗೆ ಸ್ಪಂದಿಸಬಲ್ಲ ಸಮರ್ಥರನ್ನು ಸೃಷ್ಟಿಸುವಲ್ಲಿ ಸಫಲರಾದರು. ಮತ್ತೊಂದೆಡೆ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸಿ ವಿದ್ಯಾರ್ಥಿಗಳನ್ನು, ಯುವಜನತೆಯನ್ನು ಸಮುದಾಯದ ಸದುನ್ನತಿಗಾಗಿ ದುಡಿಯುವಲ್ಲಿ ಪ್ರೇರೇಪಿಸಿದರು.
ಇದರಲ್ಲಿ ಪ್ರಮುಖರ ಪಾತ್ರ ವಹಿಸಿದ್ದ ಶೈಖುನಾ ಮಹಮೂದ್ ಉಸ್ತಾದ್ ಎಡಪ್ಪಾಲಂ ಉಸ್ತಾದ್ ಇಂದು ನಮ್ಮನ್ನಗಲಿದರು. ಇನ್ನಾಲಿಲ್ಲಾಹ್… ಅಂದು ತಾಜುಲ್ ಉಲಮಾ ಎಂಬ ಅನುಗ್ರಹೀತ ತೇಜಸ್ಸನ್ನು ಕಳೆದುಕೊಂಡ ಬಳಿಕ ನಿರಂತರವಾಗಿ ಒಂದೊಂದೇ ಬೆಳಕುಗಳು ನಂದಿ ಹೋಗುತ್ತಿದೆ!
ಶೈಖುನಾ ತಾಜುಲ್ ಫುಖಹಾ ಬೇಕಲ್ ಉಸ್ತಾದ್, ಶೈಖುನಾ ಅಬ್ಬಾಸ್ ಉಸ್ತಾದ್, ಇದೀಗ ಮಹಮೂದ್ ಉಸ್ತಾದ್ ಕೇವಲ ಒಂದೆರಡು ವರ್ಷಗಳಲ್ಲಿ ನಮ್ಮನ್ನು ಬಿಟ್ಟು ಹೋದ ಮಹಾಶಕ್ತಿಗಳು. ಶೈಖುನಾ ಮಾಣಿ ಉಸ್ತಾದ್ ಒಂದು ಬಿಟ್ಟರೆ ಆ ಒಂದು ತಲೆಮಾರಿನ ಪ್ರಮುಖರೆಲ್ಲರೂ ಕಣ್ಮರೆಯಾದರು. ಉಸ್ತಾದರಿಗೆ ಅಲ್ಲಾಹು ಆರೋಗ್ಯಪೂರ್ಣ ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ-ಆಮೀನ್
ಆದರೆ ಅವರು ನಿದ್ದೆ ಬಿಟ್ಟು ಕಷ್ಟಪಟ್ಟು ಕಟ್ಟಿಕೊಟ್ಟ ಸಂಘಟನೆ ನಮ್ಮೊಂದಿಗಿದೆ, ಅವರು ಆರೋಗ್ಯವನ್ನೂ ಲೆಕ್ಕಿಸದೆ ಪುರುಷಾಯುಷ್ಯ ಪೂರ್ತಿ ಸವೆಸಿ ಕಟ್ಟಿಬೆಳೆಸಿದ ಸಂಸ್ಥೆ ಸಮುಚ್ಚಯಗಳಿವೆ. ಎಲ್ಲಕ್ಕೂ ಮಿಗಿಲಾಗಿ ಅವರ ಆಧ್ಯಾತ್ಮಿಕ ನಿಯಂತ್ರಣವಿದೆ. ನಿಷ್ಕಳಂಕ ಕಾರ್ಯಾಚರಣೆಗಳ ಮೂಲಕ ಅವರು ತೋರಿಸಿ ಕೊಟ್ಟ ಹಾದಿಯಲ್ಲಿ ಸಾಗೋಣ. ಸೃಷ್ಟಿಕರ್ತ ಅನುಗ್ರಹವಾಗಿ ನೀಡಿದ ಈ ಹೃಸ್ವಕಾಲ ಅವನ ಸಂತೃಪ್ತಿಗಾಗಿ ಸವೆಸಿ ಆ ನಮ್ಮ ನಾಯಕರಂತೆ ಸಂತೋಷದೊಂದಿಗೆ ಕಣ್ಣು ಮುಚ್ಚೋಣ. ಅಲ್ಲಾಹು ತೌಫೀಖ್ ನೀಡಲಿ-ಆಮೀನ್
ಶೈಖುನಾ ಮಹಮೂದ್ ಉಸ್ತಾದ್ ರವರಿಗಾಗಿ ಎಲ್ಲರೂ ದುಆ ಮಾಡಿ. ಅಲ್ಲಾಹು ಅವನ ಸುಖಲೋಕ ಸ್ವರ್ಗದಲ್ಲಿ ಸಂತೋಷದೊಂದಿಗೆ ನಮ್ಮನ್ನು ಒಟ್ಟುಗೂಡಿಸಲಿ – ಆಮೀನ್
✍️ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ (ಕೋಶಾಧಿಕಾರಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.