ಕೋಲಾರ(ವಿಶ್ವಕನ್ನಡಿಗ ನ್ಯೂಸ್) ಯಾವುದೇ ಅನಾರೋಗ್ಯ ಲಕ್ಷಣಗಳಿದ್ದರೆ ವಿಳಂಬ ಮಾಡದೆ ೧೦೪ ಸಹಾಯವಾಣಿ ಅಥವಾ ಇ – ಸಂಜೀವಿನಿ ಆಪ್ ಮೂಲಕ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಕೋವಿಡ್ ಹರಡದಂತೆ ಎಚ್ಚರವಹಿಸಬೇಕೆಂದು ಮುನಿಸಿಪಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಮೇಶ್ ಸಲಹೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮಹಿಳಾ ಒಕ್ಕೂಟದಿಂದ ಆಯೋಜಿಸಲಾಗಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೋವಿಡ್ ಮೂರನೆ ಅಲೆ ಬರುವ ನಿರೀಕ್ಷೆಯಲ್ಲಿರುವುದರಿಂದ ಪ್ರತಿಯೊಬ್ಬರೂ ಎಚ್ಚರವಹಿಸಿ. ಕೊವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೋವಿಡ್ ಹರಡದಂತೆ ಜಾಗೃತರಾಗಿರಬೇಕೆಂದು ಹೇಳಿದರು.
ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳನ್ನು ಸಾಮಾಜಿಕ ಸೌಹಾರ್ದತೆಗಾಗಿ ಏರ್ಪಡಿಸಲಾಗುತ್ತಿದ್ದು , ವರಮಹಾಲಕ್ಷ್ಮಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗಿದೆಯಂದರು.
ಅಧ್ಯಕ್ಷತೆವಹಿಸಿದ್ದ ಧರ್ಮಸ್ಥಳ ಜನಜಾಗೃತಿ ವೇದಿಕೆ ಸದಸ್ಯರಾದ ಅರುಣಮ್ಮ ಮಾತನಾಡಿ , ಧರ್ಮಸ್ಥಳ ಸ್ವಸಹಾಯ ಸಂಘಗಳಿಂದ ನೂರಾರು ಮಹಿಳೆಯರಿಗೆ ಆರ್ಥಿಕವಾಗಿ ಅನುಕೂಲವಾಗುತ್ತಿದ್ದು , ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸುವಲ್ಲಿ ಯಶಸ್ವಿಯಾಗಿದೆ. ಮಹಿಳೆಯರಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಉಂಟು ಮಾಡಲು ಸಾಮೂಹಿಕವಾಗಿ ಸತ್ಯನಾರಾಯಣ ಪೂಜೆ ಮತ್ತು ವರಮಹಾಲಕ್ಷ್ಮಿ ಹಬ್ಬಗಳನ್ನು ಕೋವಿಡ್ ಮಾರ್ಗಸೂಚಿ ಪ್ರಕಾರ ಆಯೋಜಿಸಲಾಗಿದೆಯೆಂದರು. ಉದಯವಾಣಿ ಜಿಲ್ಲಾ ವರದಿಗಾರರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಹಬ್ಬಗಳನ್ನು ನಂಬಿಕೆ , ಏಕಾಗ್ರತೆ ಮತ್ತು ಮನಸ್ಸಿನ ಮೇಲೆ ಹತೋಟಿ ಸಾಸಲು ಆಚರಿಸಬೇಕೆ ಹೊರತು ಸಾಲ ಮಾಡಿ ಅದ್ದೂರಿಯಾಗಿ ಹಬ್ಬಗಳನ್ನು ಆಚರಿಸುವಂತಿರಬಾರದು , ಬಡತನದಿಂದ ಹಬ್ಬ ಮಾಡಲು ಸಾಧ್ಯವಾಗದಿದ್ದವರಿಗೂ ಸಾಮೂಹಿಕ ಆಚರಣೆಗಳು ಸಹಕಾರಿ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ , ಧರ್ಮಸ್ಥಳ ಸಂಘಗಳಲ್ಲಿ ಈಗ ಕೊಡುತ್ತಿರುವ ಸಾಲವನ್ನು ೫ ಲಕ್ಷ ರೂಪಾಯಿಗಳಿಗೇರಿಸಬೇಕೆಂದು ಸಲಹೆ ನೀಡಿದರು . ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಚಂದ್ರಶೇಖರ್ ಉಪಸ್ಥಿತರಿದ್ದರು. ಅರ್ಚಕ ಚಂದ್ರಶೇಖರ್ ದೀಕ್ಷಿತ್ ಸಾಮೂಹಿಕ ವರ ಮಹಾಲಕ್ಷ್ಮಿ ವ್ರತವನ್ನು ಸಂಪ್ರದಾಯಬದ್ಧವಾಗಿ ನಡೆಸಿಕೊಟ್ಟರು.
ಕೋವಿಡ್ ಸಂದರ್ಭದಲ್ಲಿ ನಿಧನರಾದ ಕುಟುಂಬಕ್ಕೆ ಮಹಿಳಾ ಸಂಘದಿಂದ ವಿಮಾ ಯೋಜನೆಯಡಿ ೨ ಲಕ್ಷ ರೂಪಾಯಿಗಳ ಚೆಕ್ಕನ್ನು ವಿತರಿಸಲಾಯಿತು . ಅರುಣಮ್ಮ , ವನಜ , ಶಶಿಕುಮಾರಿ , ಸೌಮ , ಇತರರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಕಾರ್ಯಕ್ರಮದಲ್ಲಿ ಕೋಲಾರ ನಗರದ ವಿವಿಧ ವಾರ್ಡುಗಳ ಧರ್ಮಸ್ಥಳ ಸ್ವಸಹಾಯ ಸಂಘಗಳ ಪ್ರತಿನಿಗಳು ಪಾಲ್ಗೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.