ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :ಆರೋಗ್ಯವಂತ ಜನತೆಯಿಂದ ಮಾತ್ರ ಬಲಿಷ್ಟ ಭಾರತ ನಿರ್ಮಾಣ ಸಾಧ್ಯವೆಂಬುದನ್ನು ಅರಿತು ಭಾವಿ ಪ್ರಜೆಗಳಾದ ಮಕ್ಕಳಲ್ಲಿನ ಅಪೌಷ್ಟಿಕತೆ ತೊಡೆದು ಹಾಕುವ ಸಂಕಲ್ಪದೊಂದಿಗೆ ಪೋಷಣ್ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತಾಲ್ಲೂಕಿನ ಅರಾಭಿಕೊತ್ತನೂರು ಶಾಲೆಯಲ್ಲಿ ಶಾಲೆಯ ವಿಜ್ಞಾನ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ್ ಕಾಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳು , ಪೋಷಕರಿಗೆ ಅರಿವು ಮೂಡಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರ ಮಕ್ಕಳಲ್ಲಿನ ಅಪೌಷ್ಟಿಕತೆ ತೊಡೆದು ಹಾಕಲು ಗರ್ಭಿಣಿ , ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಿಕೆ ಹಾಗೂ ಅರಿವು ನೀಡುವುದರ ಜತೆಗೆ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರನ್ನು ಜಿಲ್ಲಾ ಪೌಷ್ಟಿಕ ಪುನಶ್ವೇತನ ಕೇಂದ್ರಕ್ಕೆ ದಾಖಲಿಸಿಕೊಂಡು ೧೪ ದಿನಗಳ ಕಾಲ ಚಿಕಿತ್ಸೆ ನೀಡುತ್ತಿದೆ ಎಂದ ಅವರು , ಮಗುವಿನೊಂದಿಗೆ ಆಸ್ಪತ್ರೆಯಲ್ಲಿರುವ ತಾಯಿಗೆ ದಿನಕ್ಕೆ ೩೨೫ ರೂ ಭತ್ಯ ನೀಡಲಾಗುತ್ತಿದೆ ಎಂದರು. ಕೊರೋನಾ ೩ ನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬ ತಜ್ಞೆ ಸೂಚನ ಹಿನ್ನಲೆಯಲ್ಲಿ ಸರ್ಕಾರ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೋಷಣೆ ಮಾಸಾಚರಣೆ ಮಾಡುತ್ತಿದೆ ಎಂದು ತಿಳಿಸಿದರು.
ಒಂದು ವಾರಶಾಲೆಗಳಲ್ಲಿ ಪೋಷಕಾಂಶಭರಿತ ಸಸ್ಯ , ತರಕಾರಿಗಳ ಬೆಳೆಸುವುದು , ೨ ನೇ ವಾರ ಯೋಗ ತರಬೇತಿ , ಯೋಗದ ಮಹತ್ವ ತಿಳಿಸಕೊಡುವುದು , ೩ ನೇ ವಾರ ಪೌಷ್ಟಿಕ ಆಹಾರ ಕಿಟ್ ವಿತರಣೆ , ೪ ನೇ ವಾರ ಗ್ರಾಮಗಳಲ್ಲಿ ಗರ್ಭಿಣಿ , ಬಾಣಂತಿ , ಮಕ್ಕಳಿಗೆ ಚಿಕಿತ್ಸೆಸಲಹೆ , ತಪಾಸಣೆ ಮಾರ್ಗದರ್ಶನ ನೀಡಲಾಗುವುದು ಎಂದರು. ಮಕ್ಕಳು ಪ್ರತಿನಿತ್ಯ ಪ್ರೋಟೀನ್ , ಮಿನರಲ್ಸ್ , ಕಾರ್ಬೋಹೈಡ್ರೈಟ್ಸ್ ಸೇರಿದಂತೆ ಸಮತೋಲನ ಆಹಾರ ಸೇವಿಸಬೇಕು , ಮೊಳಕೆ ಕಾಳುಗಳನ್ನು ಹೆಚ್ಚು ಸೇವಿಸಿ ಎಂದು ಕಿವಿಮಾತು ಹೇಳಿದರು.
ರೋಗ ನಿರೋಧಕ ಶಕ್ತಿ ವೃದ್ಧಿಗೆ ನುಗ್ಗೆ ಸೊಪ್ಪು ತರಕಾರಿ , ಹಣ್ಣುಗಳನ್ನು ಹೆಚ್ಚು ಸೇವಿಸಿ ಎಂದ ಅವರು , ಈ ನಿಟ್ಟಿನಲ್ಲಿ ಪೋಷಕರು ಗಮನಹರಿಸಬೇಕು , ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದರೆ ರೋಗಗಳಿಗೆ ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದರು. ಪೌಷ್ಟಿಕ ವನಕ್ಕೆ ಗಿಡಗಳ ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ ಶಾಲೆಯ ಆವರಣದಲ್ಲಿ ಈಗಾಗಲೇ ಇತರೆ ಗಿಡಮರಗಳು ಹೇರಳವಾಗಿವೆ. ಇನ್ನು ಮುಂದೆ ಕೇವಲ ಹಣ್ಣಿನ ಮರಗಳನ್ನು ಬಳಸಲು ಒತ್ತು ನೀಡೋಣ , ಶಾಲೆಯ ಆವರಣದಲ್ಲಿ ನೆಡಲು ನಾನೇ ೧೦೦ ಹಣ್ಣಿನ ಗಿಡಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಶಾಲೆಯಲ್ಲಿ ಸ್ವಚ್ಛತೆಗೆ ಒತ್ತು ನೀಡಿ , ಕೋವಿಡ್ ತಡೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ , ಮನೆಯಿಂದಲೇ ಕುಡಿಯಲು ನೀರು ತಿಂಡಿ ತನ್ನಿ ಎಂದು ಕಿವಿಮಾತು ಹೇಳಿದರು . ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಮಾತನಾಡಿ , ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಹಿರಿಯರ ಮಾತು ಸತ್ಯ , ಆಹಾರ ಪದ್ದತಿಯಲ್ಲಿ ನಾವು ಸಮತೋಲನ ಆಹಾರಕ್ಕೆ ಒತ್ತು ನೀಡಿದರೆ ಯಾವುದೇ ರೋಗ ನಮ್ಮತ್ತ ಸುಳಿಯುವುದಿಲ್ಲ ಎಂದರು.
ಎಸ್ಡಿಎಂಸಿ ಸದಸ್ಯ ರಾಮಚಂದ್ರಪ್ಪಮಕ್ಕಳಿಗೆ ಪರಿಸರ ಗೀತೆಗಳನ್ನು ಹೇಳಿಕೊಟ್ಟರಲ್ಲದೇ ಪೌಷ್ಟಿಕತೆ ಹೆಚ್ಚಿಸುವ ಸೊಪ್ಪು , ತರಕಾರಿ , ಹುರಳಿ , ಗೋಧಿ , ರಾಗಿ , ಟಮೋಟೋ , ಕೋಸು ಮತ್ತಿತರ ತರಕಾರಿಗಳನ್ನು ಮಕ್ಕಳಿಗೆ ತಾವೇ ತಂದು ಪ್ರದರ್ಶಿಸಿ ಗಮನ ಸೆಳೆದರು . ಆಶಾ ಕಾರ್ಯಕರ್ತೆಯರಾದ ಅರುಣಮ್ಮ , ನಿಮ್ಮ ಮನೆಯಲ್ಲಿ ಯಾರೇ ಹಿರಿಯರು ಕೆವಿಡ್ ಲಸಿಕೆ ಪಡೆಯದಿದ್ದರೆ ಕೂಡಲೇ ಪಡೆಯಲು ತಿಳಿಸಿ , ಇಲ್ಲವಾದಲ್ಲಿ ಅವರಿಗೆ ಆರೋಗ್ಯ ಸಮಸ್ಯೆಯಾದರೆ ಅದರ ದುಷ್ಪರಿಣಾಮ ನಿಮಗೂ ಆಗುತ್ತದೆ , ಲಸಿಕಾ ಅಭಿಯಾನ ಗ್ರಾಮದಲ್ಲಿ ನಡೆಸುತ್ತಿದ್ದು , ಇದರ ಪ್ರಯೋಜನ ಪಡೆಯಲು ನಿಮ್ಮ ಪೋಷಕರ ಮನವೊಲಿಸಿ ಕಳುಹಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತ ಚಂದಮ್ಮ , ಶಿಕ್ಷಕರಾದ ಸಚ್ಚಿದಾನಂದಮೂರ್ತಿ , ಭವಾನಿ , ಶ್ವೇತಾ , ಸುಗುಣಾ , ಲೀಲಾ , ವೆಂಕಟರೆಡ್ಡಿ , ಫರೀದಾ , ಶ್ರೀನಿವಾಸಲು , ಸೌಮ್ಯರಘು , ವೆಂಕಟರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.