ಮಂಗಳೂರು (www.vknews.com) : ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಇಲ್ಲಿ ಸರ್ಕಾರಿ ಪ್ರಾಂಶುಪಾಲರುಗಳಿಗೆ ಮತ್ತು NEP ಸಂಯೋಜಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರಾದ ಡಾ. ಜೆನಿಫರ್ ಲೊಲಿಟಾ ಸಿ ಅವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಭಾರತವನ್ನು ವಿಶ್ವಗುರುವನ್ನಾಗಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿ, ಕರ್ನಾಟಕ ಸರ್ಕಾರವು ಈಗಾಗಲೇ NEPಯನ್ನು ಕಾರ್ಯಗತಗೊಳಿಸಲು ಆದೇಶಿಸಿ ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಜವಾಬ್ದಾರಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರ, ಉಪನ್ಯಾಸಕರ ಮೇಲಿದೆಯೆಂದು ತಿಳಿಸಿ ಜವಾಬ್ದಾರಿಯುತವಾಗಿ ಸಹಕರಿಸುವಂತೆ ಸೂಚಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಬಾಲಕೃಷ್ಣ ಕಲ್ಲೂರಾಯ ಪ್ರಾಧ್ಯಾಪಕರು, ರಸಾಯನ ಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಇವರು ಮಾತನಾಡಿ NEPಯನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಅದು ಅತ್ಯಂತ ಸರಳವಾಗಿದ್ದು, ಯಾವುದೇ ಗೊಂದಲವಿಲ್ಲದೇ ಕಾರ್ಯಗತಗೊಳಿಸಬಹುದಾಗಿದ್ದು ಇದರಿಂದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಉಂಟಾಗಿ, ಅವರನ್ನು ವಿಶ್ವದರ್ಜೆಯ ಸಂಪನ್ಮೂಲ ವ್ಯಕ್ತಿಯಾಗಿ ಪರಿವರ್ತಿಸಲು ಸಾಧ್ಯವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಅಮುಕ್ತ್ ನ ಅಧ್ಯಕ್ಷರಾದ ಡಾ. ಎನ್.ಎಮ್. ಜೋಸೆಫ್ ಅವರು ಮಾತನಾಡಿ, ಅತ್ಯುತ್ತಮವಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಬಗ್ಗೆ ವಿಶ್ವವಿದ್ಯಾನಿಲಯ, ಕಾಲೇಜುಗಳು, ಶಿಕ್ಷಣ ತಜ್ಞರು ಕೈ ಜೋಡಿಸಿ ಯಾವುದೇ ರೀತಿಯ ಗೊಂದಲವಿಲ್ಲದೇ ಕಾರ್ಯರೂಪಕ್ಕೆ ತರಲು ಕರೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಕಾಲೇಜುಗಳ ಮಂಗಳೂರು ವಲಯದ NEP ಸಂಯೋಜಕರು ಹಾಗೂ ಜಂಟಿನಿರ್ದೇಶಕರ ಕಛೇರಿಯ ವಿಶೇಷಾಧಿಕಾರಿ ಪ್ರೊ. ಸ್ಟೀವನ್ ಕ್ವಾಡ್ರಸ್ ಇವರು ಪ್ರಾಸ್ತವಿಕವಾಗಿ ಮಾತನಾಡಿ ತರಬೇತಿಯ ಅವಶ್ಯಕತೆಯ ಬಗ್ಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ, ಅವರು ದೇಶದಲ್ಲಿ ಪ್ರಥಮ ಬಾರಿಗೆ ಕಾರ್ಯಗತಗೊಂಡ ಈ ನೂತನ ಶಿಕ್ಷಣ ಕ್ರಮವು ದೇಶದ ಅಭಿವೃದ್ಧಿಗೆ ಪೂರಕ ಎಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಮಂಗಳೂರು ವಲಯದ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರುಗಳು ಮತ್ತು NEP ಸಂಯೋಜಕರು ಭಾಗವಹಿಸಿದ್ದರು. ಕಾರ್ಯಗಾರದ ಮುಖ್ಯ ಸಂಯೋಜಕರಾದ ಡಾ. ಪ್ರಕಾಶಚಂದ್ರ ಬಿ ಅವರು ಸ್ವಾಗತಿಸಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿನಿರ್ದೇಶಕರ ಕಛೇರಿಯ ವಿಶೇಷಾಧಿಕಾರಿ ಪ್ರೊ. ದೇವಿ ಪ್ರಸಾದ್ ಅವರು ವಂದಿಸಿದರು. ವೇದಿಕೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿನಿರ್ದೇಶಕರ ಕಛೇರಿಯ ವಿಶೇಷಾಧಿಕಾರಿಗಳಾದ ಪ್ರೊ. ಶ್ರೀಧರ್ ಮಣಿಯಾಣಿ ಮತ್ತು ಡಾ. ಜಯಕರ ಭಂಡಾರಿ ಎಂ ಇವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.