ಮಂಗಳೂರು (www.vknews.com) : “ಸೌಹಾರ್ದಕ್ಕಾಗಿ ಜೀವನ” ವೇದಿಕೆಯ ವತಿಯಿಂದ ಕಳೆದ ಕೊರೋನಾ ಸಂಕಷ್ಟದ ಸಮಯದಲ್ಲಿ ಅದ್ವಿತೀಯ ಮಾನವೀಯ ಸೇವೆಯನ್ನು ಮಾಡಿದಂತಹ ಮಂಗಳೂರಿನ ಖ್ಯಾತ ಸಮಾಜಸೇವಾ ಸಂಘಟನೆ ಟೀಂ ಬಿ-ಹ್ಯೂಮನ್ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರಿಗೆ ಸನ್ಮಾನ ಕಾರ್ಯಕ್ರಮ ಸೋಮೇಶ್ವರ ಉಚ್ಚಿಲದ ಕಿಯಾಂಝ ಗಾರ್ಡನ್ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ‘ಸೌಹಾರ್ದಕ್ಕಾಗಿ ಜೀವನ’ ವೇದಿಕೆಯ ಮುಖ್ಯ ಕಾರ್ಯನಿರ್ವಾಹಕರಾದ ಮುಝಫರ್ ಅಹ್ಮದ್, ಸ್ಥಳೀಯ ರಹ್ಮಾನಿಯಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಸಲಾಂ ಉಚ್ಚಿಲ್, ಮುಂಬಯಿಯ ಉದ್ಯಮಿ ಹಾಜಿ ಸಿ.ಎ ಮಜೀದ್, 407 ಜುಮಾ ಮಸೀದಿ ನಿಕಟಪೂರ್ವ ಅಧ್ಯಕ್ಷರಾದ ಯು.ಬಿ ಮಹಮ್ಮದ್ ಹಾಜಿ, ಕಾಂಗ್ರೆಸ್ ನಾಯಕರಾದ ಯು.ಬಿ ಸಲೀಂ ಮುಂತಾದವರು ಭಾಗವಹಿಸಿದ್ದರು.
ಕಳೆದ ವರ್ಷದಿಂದ ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದಂತಹ ಕೋರೋನ ವೈರಸ್ ನ ಭೀಕರತೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಯಾವುದೇ ಜಾತಿ ಮತ ಭೇದವೆನ್ನದೆ ಕೊರೋನ ಪೀಡಿತ ರೋಗಿಗಳಿಗೆ ಉಚಿತ ಆಕ್ಸಿಜನ್ ವಿತರಣೆಯ ವ್ಯವಸ್ಥೆ, ಉಚಿತ ಆಸ್ಪತ್ರೆಯ ಸಹಾಯವಾಣಿ, ಮಾಸ್ಕ್ ವಿತರಣೆ, ಲಾಕ್ಡೌನ್ ನಿಂದ ಅತಂತ್ರರಾದ ಪರವೂರಿನ ಕಾರ್ಮಿಕರಿಗೆ ಪ್ರತಿದಿನ ಉಚಿತ ಊಟದ ವ್ಯವಸ್ಥೆ, ರೋಗಿಗಳಿಗೆ ಉಚಿತ ಆಂಬುಲೆನ್ಸ್ ಅವಸ್ಥೆ, ಅರ್ಹರಿಗೆ ಉಚಿತ ರೇಷನ್ ಕಿಟ್ ವಿತರಣೆ, ಉಚಿತ ವೀಲ್ ಚೇರ್ ವಿತರಣೆ, ಕೊರೋನ ಪೀಡಿತ ರೋಗಿಗಳ ಮನೆ ಸಾನಿಟೈಸೇಷನ್, ಹಾಗೂ ಕೊರೋನದಿಂದ ಮೃತಪಟ್ಟು ಸ್ವಂತ ಸಂಭಂದಿಕರೂ ಹತ್ತಿರ ಸುಳಿಯದ ಸಂದರ್ಭದಲ್ಲಿ ಅವರವರ ಧರ್ಮದ ಆಚಾರಗಳಂತೆ ಅಂತಿಮ ಸಂಸ್ಕಾರದ ವ್ಯವಸ್ಥೆ ಮುಂತಾದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನ ತಂಡವನ್ನು ಕಟ್ಟಿ ಹಗಲು-ರಾತ್ರಿಯೆನ್ನದೆ ಅಸಹಾಯಕರ ಸಹಾಯದಲ್ಲಿ ಸದಾ ಮುಂಚೂಣಿಯಲ್ಲಿದ್ದ ಟೀಂ ಬಿ-ಹ್ಯೂಮನ್ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರಿಗೆ ಈ ಒಂದು ಸಮಾರಂಭದಲ್ಲಿ ಮೈಸೂರು ಪೇಟವನ್ನು ತೊಡಿಸಿ,ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸೌಹಾರ್ದಕ್ಕಾಗಿ ಜೀವನ ವೇದಿಕೆಯ ಕಾರ್ಯನಿರ್ವಾಹಕರಾದ ಮುಝಫರ್ ಅಹ್ಮದ್ ರವರು ಸನ್ಮಾನ ಫಲಕವನ್ನು ಪ್ರಧಾನ ಮಾಡಿದರೆ ವೇದಿಕೆಯಲ್ಲಿದ್ದ ಇತರ ಗಣ್ಯರು ಶಾಲುಹೊದಿಸಿ ಮೈಸೂರು ಪೇಟ ವನ್ನು ತೊಡಿಸಿ ಸಮಾಜಕ್ಕೆ ನೀಡಿದಂತಹ ಒಂದು ಕಿರು ಸಹಾಯಕ್ಕಾಗಿ ಶ್ರೀಯುತರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಝಫರ್ ಅಹಮದ್ ರವರು ಆಸಿಫ್ ರವರ ಸಾಧನೆಗಳನ್ನು ವೇದಿಕೆಯಲ್ಲಿದ್ದ ಸಭಿಕರಿಗೆ ತಿಳಿಯಪಡಿಸಿದರು ಹಾಗೂ ಅವರಿಂದ ಸ್ಪೂರ್ತಿ ಪಡೆದು ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಪ್ರತಿಯೊಬ್ಬರೂ ಪಣತೊಡಬೇಕೆಂದು ಉಪದೇಶಿಸಿದರು.
ಕೊನೆಯಲ್ಲಿ ಮಾತನಾಡಿದ ಸನ್ಮಾನಿತರಾದ ಆಸಿಫ್ ಡೀಲ್ಸ್ ರವರು ತಾವು ಯಾವುದೇ ಸನ್ಮಾನಕ್ಕಾಗಿ ಅಥವಾ ಯಾವುದೇ ಇತರ ಹೆಗ್ಗಳಿಕೆಗಾಗಿ ಸಮಾಜಸೇವೆ ಕೆಲಸಗಳನ್ನು ಮಾಡುತ್ತಿಲ್ಲ ಬದಲಾಗಿ ಅಲ್ಲಾಹನು ನೀಡಿದಂತಹ ಈ ಒಂದು ಆಯಸ್ಸಿನಲ್ಲಿ ಸಂಕಷ್ಟದಲ್ಲಿದ್ದವರಿಗೆ ಏನಾದರೂ ತಮ್ಮ ಕೈಲಾದ ಸಹಾಯ ಮಾಡುವುದೇ ತಮ್ಮ ಉದ್ದೇಶ ಹಾಗೂ ನನ್ನಿಂದಾಗಿ ಇತರ ಜನರು ಸ್ಫೂರ್ತಿಪಡೆದು ಸಂಕಷ್ಟದಲ್ಲಿದ್ದವರಿಗೆ ಯಾವುದಾದರೊಂದು ರೀತಿಯ ಸಹಾಯ ಮಾಡಿದಲ್ಲಿ ನನಗೆ ಅದುವೇ ಅತ್ಯಂತ ಖುಷಿ ಕೊಡುವ ವಿಚಾರ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಗೆ ಅಬ್ದುಲ್ ನಾಸಿರ್ ರವರು ಧನ್ಯವಾದ ಸಮರ್ಪಿಸಿದರು. ಸ್ಥಳೀಯ ರಹ್ಮಾನಿಯಾ ಶಾಲೆಯ ಸಂಚಾಲಕರಾದ ಅಬ್ದುಲ್ ಸಲಾಂ ಜಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.