ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) : ಬಿಡ್ದಾರರಿಗೆ ಮಳಿಗೆಗಳನ್ನು ಬಿಡಿಸಿಕೊಡಬೇಕೆಂದು ಆಗ್ರಹಿಸಿ ಡಾ.ಸೈಯದ್ ಹಾಸೀಮ್ ಅಶ್ರಫ್ ತಂಡದವರು ಇಲ್ಲಿನ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು .
ಕಳೆದ ಒಂದೂವರೆ ವರ್ಷದ ಹಿಂದೆ ನಗರಸಭೆ ಮಳಿಗೆಗಳನ್ನು ಹರಾಜಿನಲ್ಲಿ ಕೂಗಿ ಯಶಸ್ವಿ ಆಗಿದ್ದರೂ ಇದುವರೆಗೂ ಅಂಗಡಿಗಳನ್ನು ಬಿಡ್ದಾರರಿಗೆ ಬಿಟ್ಟುಕೊಡದೆ ಪೌರಾಯುಕ್ತರು ಮೀನಾಮೇಷ ಎಣಿಸುತ್ತಿದ್ದು ರಾಜಕೀಯ ಹಾಗೂ ಹಣದ ಒತ್ತಡಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರೆಂದು ಡಾ.ಅಶ್ರಫ್ ಆರೋಪಿಸಿದರು .
ಹರಾಜು ಕೂಗಿದ ಮರುಗಳಿಗೆಯೇ ಶೇ .೫೦ ಹಣ ಪಾವತಿ ಆಗಿದ್ದು ೨೦ ದಿನದ ಹಿಂದೆ ಪೂರ್ಣ ಮೊತ್ತ ಪಾವತಿ ಮಾಡಿ ನಗರಸಭೆಯಿಂದ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆಯನ್ನು ನೋಂದಣಿ ಮಾಡಿಸಿದ ನಂತರವೂ ಸಬೂಬು ಹೇಳಲಾಗುತ್ತಿದೆ .
ಅಕ್ಟೋಬರ್ ೧ ರಿಂದ ಬಾಡಿಗೆ ಕೊಡಬೇಕೆಂದು ನಗರಸಭೆ ಕರಾರು ಹಾಕಿದ್ದು , ಅಂಗಡಿಗಳನ್ನು ವಶಕ್ಕೆ ಕೊಡದೆಯೇ ಬಾಡಿಗೆ ಪಾವತಿ ಮಾಡುವುದು ಹೇಗೆ ? ನಿಮ್ಮ ಹೆಸರಿನಲ್ಲಿ ಮಳಿಗೆ ನೋಂದಣಿ ಆಗಿದ್ದು ವಶಕ್ಕೆ ಕೊಡಲು ಯಾವುದೇ ಸಮಸ್ಯೆ ಇಲ್ಲ , ಪೌರಾಯುಕ್ತರನ್ನು ಭೇಟಿ ಮಾಡಿ ನೀವು ಮಳಿಗೆ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರೆ ಪೌರಾಯುಕ್ತರು ನಾನಾ ಕಾರಣಗಳನ್ನು ಕೊಟ್ಟು ಕಾಲ ತಳ್ಳುತ್ತಿದ್ದಾರೆ . ಅಂಗಡಿ ಬಳಿ ಹೋದರೆ ಅನಧೀಕೃತವಾಗಿ ಇರುವ ವ್ಯಾಪಾರಿಗಳು ಪಾಣ ಬೆದರಿಕೆ ಹಾಕುತ್ತಿದ್ದಾರೆ . ಸಾಲ , ಸೋಲ ಮಾಡಿ ಬಡ್ಡಿಗೆ ಹಣ ತಂದು ನಗರಸಭೆಗೆ ಲಕ್ಷಾಂತರ ರೂ . ಕಟ್ಟಿರುವ ನಮ್ಮ ಪಾಡಾದರೂ ಏನು ಎಂದು ಡಾ.ಅಶಫ್ ಪಶ್ನಿಸಿದರು .
ಯಾವುದೇ ರಾಜಕೀಯ ಮತ್ತು ಹಣಬಲಕ್ಕೆ ಮಣಿಯದ ಹೈಕೋರ್ಟ್ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಪೌರಾಯುಕ್ತರು ನಡೆದುಕೊಳ್ಳಬೇಕು . ಅತಿ ಶೀಘ್ರವಾಗಿ ಮಳಿಗೆಗಳನ್ನು ಬಿಡ್ದಾರರಿಗೆ ಬಿಡಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದ ಪೌರಾಯುಕ್ತ ಪ್ರಸಾದ್ ಅವರು , ೨೨೦ ಮತ್ತು ೭೮ ಅಂಗಡಿಗಳನ್ನು ನಗರಸಭೆಯಿಂದ ಎರಡು ಸ್ಲಾಬ್ನಲ್ಲಿ ಹರಾಜು ಮಾಡಿದ್ದು ಪಿತೃಪಕ್ಷದ ಕಾರಣಕ್ಕಾಗಿ ಅಂಗಡಿ ತೆರವು ಮಾಡಲು ಸಬ್ಸ್ದಾರರು ಸಮಯಾವಕಾಶ ಕೇಳಿದ್ದರು . ಸೋಮವಾರ ಮತ್ತೊಮ್ಮೆ ಅಂಗಡಿ ಖಾಲಿ ಮಾಡುವಂತೆ ಮೌಕಿಕವಾಗಿ ಎಚ್ಚರಿಕೆ ನೀಡುವ ಮೂಲಕ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತದೆ .
ಇದೀಗ ಅಂಗಡಿಯಲ್ಲಿರುವ ವ್ಯಾಪಾರಿಗಳ ಮೇಲೆ ನನಗೆ ಯಾವುದೇ ಪ್ರೀತಿಯಿಲ್ಲ , ಹೊಸ ಬಿಡ್ ಮಾಡಿರುವ ಮಂದಿಯಾರೂ ನನ್ನ ಶತೃಗಳಲ್ಲ ಎಂಬುದನ್ನು ಡಾ.ಅಶ್ರಫ್ ಅವರು ಅರ್ಥ ಮಾಡಿಕೊಳ್ಳಬೇಕು . ಒಂದೂವರೆ ತಿಂಗಳಲ್ಲಿ ಎಲ್ಲ ಬಿಡ್ದಾರರಿಗೂ ಮಳಿಗೆಗಳನ್ನು ಬಿಟ್ಟುಕೊಡಲಾಗುತ್ತದೆ ಎಂದು ಭರವಸೆ ನೀಡಿದರು . ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಮಂಜನಾಥ್ , ನಗರಸಭೆ ಸದಸ್ಯ ಪ್ರಸಾದಬಾಬು , ರಾಕೇಶ್ , ಸುರೇಶ್ , ಕಂದಾಯ ಅಧಿಕಾರಿ ಚಂದ್ರು ಇದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.