ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಪ್ರಾಥಮಿಕ ಶಾಲಾ ಶಿಕ್ಷಕರ ಕಡ್ಡಾಯ ಮತ್ತು ಹೆಚ್ಚುವರಿ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೇ ಮಂಗಳವಾರ ನಡೆದಿದ್ದು , ೨೧ ಮಂದಿ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ತಿಳಿಸಿದರು .
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆದ ಕಡ್ಡಾಯ ಮತ್ತು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡ ಶಿಕ್ಷಕರಿಗೆ ಆದೇಶಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು . ಇಂದಿನ ಕೌನ್ಸಿಲಿಂಗ್ನಲ್ಲಿ ೩೩ ಶಿಕ್ಷಕರು ಭಾಗವಹಿಸಿದ್ದು , ೨೧ ಮಂದಿ ಸ್ಥಳ ಆಯ್ಕೆ ಮಾಡಿಕೊಂಡರೆ ಉಳಿದ ೧೧ ಮಂದಿ ಸ್ಥಳ ಆಯ್ಕೆಗೆ ನಿರಾಕರಿಸಿದರು ಮತ್ತು ಒಬ್ಬ ಶಿಕ್ಷಕರು ಕೌನ್ಸಿಲಿಂಗ್ಗೆ ಗೈರಾಗಿದ್ದಾರೆ ಎಂದು ಮಾಹಿತಿ ಮೀಡಿದ್ದಾರೆ . ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಇದೀಗ ಚಾಲನ ಸಿಕ್ಕಿದ್ದು , ಮೊದಲ ಹಂತವಾಗಿ ಕಡ್ಡಾಯ , ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ ಎಂದು ತಿಳಿಸಿದ್ದಾರೆ .
ನ .೨ ರಿಂದಲೇ ಪೂರ್ಣ ಶಾಲೆ ಸರ್ಕಾರದ ಸುತ್ತೋಲೆಯಂತೆ ಈಗಾಗಲೇ ಅ .೨೫ ರಿಂದ ೧-೫ನೇ ತರಗತಿಗಳು ಆರಂಭಗೊಂಡಿದ್ದು , ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ , ಪೋಷಕರು ಸ್ಪಂದಿಸಿದ್ದು , ಮಕ್ಕಳನ್ನು ಶಾಲೆಗೆ ಒಪ್ಪಿಗೆ ಪತ್ರದೊಂದಿಗೆ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು . ಮಕ್ಕಳ ಹಾಜರಾತಿ ಎರಡನೇ ದಿನವೂ ಜಿಲ್ಲೆಯಲ್ಲಿ ಶೇ .೮೦ ಕ್ಕಿಂತ ಹೆಚ್ಚಿದ್ದು , ಕೋವಿಡ್ ಹೆಮ್ಮಾರಿಯ ಆತಂಕ ದೂರವಾಗಿರುವುದು ಇದಕ್ಕೆ ನಿದರ್ಶನವಾಗಿದೆ ಎಂದ ಅವರು , ಪೋಷಕರ ಸ್ಪಂದನೆಯಿಂದ ಶಾಲೆಗಳಲ್ಲಿ ಕಲಿಕೆಗೆ ಹೆಚ್ಚಿನ ಪ್ರೇರಣೆ ಸಿಕ್ಕಿದೆ ಎಂದು ತಿಳಿಸಿದರು .
ಶಾಲೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗ ಸೂಚಿ ಪಾಲಿಸುವ ಮೂಲಕ ಮಕ್ಕಳ ಸುರಕ್ಷತೆಗೆ ಒತ್ತು ನೀಡಲು ಸೂಚಿಸಲಾಗಿದೆ , ಈ ಕುರಿತು ಮಕ್ಕಳಿಗೆ ಮೊದಲ ದಿನವೇ ಮಾರ್ಗದರ್ಶನ ನೀಡಲಾಗಿದೆ ಮತ್ತು ಪೋಷಕರು ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಕುರಿತು ದಢಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು .ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಲು ವರ್ಗಾವಣೆ ಪ್ರಕ್ರಿಯೆ ಸಹಕಾರಿಯಾಗಲಿದ್ದು , ಸ್ಥಳ ಆಯ್ಕೆಗೊಂಡ ಶಿಕ್ಷಕರಿಗೆ ಸ್ಥಳದಲ್ಲೇ ಆದೇಶ ಪತ್ರ ನೀಡಲಾಗಿದ್ದು , ಶೀಘ್ರ ಶಾಲೆಗಳಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು .
ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್ , ಸಿ.ಆರ್.ಅಶೋಕ್ , ಬಿಇಒಗಳಾದ ರಾಮಕೃಷ್ಣಪ್ಪ , ಕೃಷ್ಣಮೂರ್ತಿ , ಉಮಾದೇವಿ , ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್ ವಿಷಯ ಪರಿವೀಕ್ಷಕರಾದ ಗಾಯತ್ರಿ ಶಶಿವಧನ , ಕೃಷ್ಣಪ್ಪ , ಬಿ.ವೆಂಕಟೇಶಪ್ಪ , ಸಿರಾಜುದ್ದೀನ್ , ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯಗೌಡ , ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ , ತಾಲ್ಲೂಕು ಅಧ್ಯಕ್ಷ ಅಶ್ವಥನಾರಾಯಣ , ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಹಾಜರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.