ಉಳ್ಳಾಲ (www.vknews.com) : ಉಳ್ಳಾಲ ದರ್ಗಾ ಉರೂಸ್ ಡಿಸೆಂಬರ್ನಲ್ಲಿ ನಡೆಯಲಿರುವುದರಿಂದ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದ.ಕ. ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸೂಚಿಸಿದ್ದಾರೆ.
ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಬುಧವಾರ ದರ್ಗಾಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ದರ್ಗಾದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೊರೋನ ನಿಯಂತ್ರಣ, ಜಾಗೃತಿ ನಮ್ಮ ಜವಾಬ್ದಾರಿ. ಕೋವಿಡ್ ನಿಯಮ ಪಾಲನೆ ಮಾಡಿ ಕಾರ್ಯಕ್ರಮ ನಡೆಸಬೇಕು. ಈ ವಿಚಾರದಲ್ಲಿ ದರ್ಗಾ ಆಡಳಿತ ಸಮಿತಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಣೆ ಮಾಡಬೇಕು. ಕೋವಿಡ್ ಡೋಸ್ ತೆಗೆಯದವರು ಶೀಘ್ರ ಡೋಸ್ ಹಾಕಿಸುವ ವ್ಯವಸ್ಥೆ ಆಗಬೇಕು. ಇದಕ್ಕಾಗಿ ದರ್ಗಾದಲ್ಲಿ ಖಾಯಂ ಕೋವಿಡ್ ಸೆಂಟರ್ ತೆರೆಯಬೇಕು. ಕೋವಿಡ್ ಡೋಸ್ ಆಗದ ಭಕ್ತಾದಿಗಳಿಗೆ ದರ್ಗಾ ವಠಾದಲ್ಲಿಯೇ ಡೋಸ್ ನೀಡುವ ವ್ಯವಸ್ಥೆ ಆಗಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ನಿಗಾ ಇಟ್ಟುಕೊಂಡು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಆರೋಗ್ಯ ವಿಚಾರದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೈಜೋಡಿಸಬೇಕು ಎಂದು ಹೇಳಿದರು.
ಉಳ್ಳಾಲ ಉರೂಸ್ ಪ್ರಯುಕ್ತ 1.25 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತಯಾರಿಸಿದ ಕ್ರಿಯಾ ಯೋಜನೆ ಪಟ್ಟಿ ಬಗ್ಗೆ ಶೀಘ್ರ ಪರಿಶೀಲನೆ ನಡೆಸಲಾಗುವುದು. ಈ ಯೊಜನೆ ಪ್ರಕಾರ ಕಾಮಗಾರಿ ಡಿಸೆಂಬರ್ ತಿಂಗಳೊಳಗೆ ಮಾಡಲಾಗುತ್ತದೆಯೇ ಎಂಬುದು ಮುಖ್ಯವಾಗಿರುತ್ತದೆ. ಕಾಮಗಾರಿ ಆಗುತ್ತದೆ ಎಂದಾದರೆ ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಜತೆಗೆ ಉರೂಸ್ ಪ್ರಯುಕ್ತ ದರ್ಗಾಗೆ ಬರುವ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ವಿಶೇಷ ಅನುದಾನದ ಬಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಉಳ್ಳಾಲದಲ್ಲಿ ನಿರ್ಮಾಣ ಆಗುವ ಯಾತ್ರೀ ನಿವಾಸ್ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ನಿರ್ಮಿಸಿದ ಕಟ್ಟಡ ಜನರ ಪ್ರಯೋಜನಕ್ಕೆ ಬರಬೇಕು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಸೂಚಿಸಿದರು.
ನಗರ ಸಭಾ ಪೌರಾಯುಕ್ತ ರಾಯಪ್ಪ, ಅಧ್ಯಕ್ಷ ಚಿತ್ರಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಝರೀನ ರವೂಫ್, ಕಂದಾಯ ನಿರೀಕ್ಷಕ ಪ್ರಸಾದ್, ಗ್ರಾಮಕರಣಿಕ ಪ್ರಮೋದ್, ನವನೀತ್, ಉಪ ತಹಶೀಲ್ದಾರ್ ವಿನಯಾ, ವಕ್ಫ್ ಅಧಿಕಾರಿ ಅಬೂಬಕರ್, ಮೆಸ್ಕಾಂ ಎ.ಇ.ದಯಾನಂದ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು, ದರ್ಗಾದ ಉಪಾಧ್ಯಕ್ಷ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಪ್ರ.ಕಾರ್ಯದರ್ಶಿ ತ್ವಾಹಾ ಹಾಜಿ, ಜೊತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್ ಹಾಗೂ ದರ್ಗಾ ಮೇಲ್ವಿಚಾರಣೆ ಮತ್ತು ಉರೂಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಸ್ವಾಗತಿಸಿದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.