ಅಬುಧಾಬಿ (www.vknews.com) : ನಾಡ ಹಬ್ಬ ಮೈಸೂರು ದಸರಾ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಾಗೂ ದುಬೈ ಯುವರಾಜ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಅವರ ಆದೇಶದ ದುಬೈ ಫಿಟ್ನೆಸ್ ಚಾಲೆಂಜ್ ಬೆಂಬಲವಾಗಿ ದುಬೈ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕನ್ನಡ ಸಂಘವು “ನಾಡ ಹಬ್ಬ ಅರಬ್ ನಾಡಲ್ಲಿ” ಎಂಬ ಶೀರ್ಷಿಕೆಯೊಂದಿಗೆ ದುಬೈ ದಸರಾ ಕ್ರೀಡೋತ್ಸವ- 2021ರನ್ನು ನಾದಲ್ ಶಿಬಾದಲ್ಲಿರುವ ಕೆಂಟ್ ಕಾಲೇಜು ಹೊರ ಮತ್ತು ಒಳ ಕ್ರೀಡಾಂಗಣದಲ್ಲಿ ಬಹಳ ಅದ್ಧೂರಿಯಾಗಿ ಆಚರಿಸಿದರು, 05.11.2021ರಂದು ಬೆಳಿಗ್ಗೆಯಿಂದ ಪ್ರಾರಂಭವಾದ ಕ್ರೀಡಾಕೂಟ ಮತ್ತು ಸಮಾರೋಪ ಕಾರ್ಯಕರ್ಮದಲ್ಲಿ “ದುಬೈ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ”, ಮಕ್ಕಳು ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ರೀತಿಯ ಕ್ರೀಡೆಗಳು, ಕಲಾ ಸ್ಪರ್ಧೆ, ಸಾಹಿತ್ಯ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು, ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರ ಗೀತೆ, ಭಾರತದ ರಾಷ್ಟ್ರ ಗೀತೆ ಮತ್ತು ಕರ್ನಾಟಕ ನಾಡ ಗೀತೆ ಜೊತೆ ದೀಪ ಬೆಳಗಿಸಿ ಅಗಲಿದ ಕರುನಾಡ ಯುವರತ್ನ ಪುನೀತ್ ರಾಜಕುಮಾರ್ ಅಪ್ಪು ಅವರಿಗೆ ಶೋಕಾಚರಣೆಯನ್ನು ಮಾಡಿ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಪ್ರಾಂಭಿಸಲಾಯಿತು.
ಕೆಂಟ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುವಾದ ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು” ಕರ್ನಾಟಕ ಮತ್ತು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಅರ್ಜುನ ಪ್ರಶಸ್ತಿ ವಿಜೇತ ಹಾಲಿ ದೆಹಲಿ ಕಬಡ್ಡಿ ತಂಡದ ಕೋಚ್ ಆಗಿರುವ “ಡಾ. ಹೊನ್ನಪ್ಪ ಗೌಡ” ಅವರಿಗೆ ನೀಡಿ ಗೌರವಿಸಲಾಯಿತು, ಡಾ.ಹೊನ್ನಪ್ಪ ಗೌಡ ಅವರು ಮಾತನಾಡಿ ಮಕ್ಕಳಿಗೆ ಮೊಬೈಲ್ ಕಂಪ್ಯೂಟರ್ ಆಟಗಳಿಗಿಂತ ದೈಹಿಕವಾಗಿ ಬಾಗಿಯಾಗುವ ಆಟೋಟಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ನೆರೆದ ಪೋಷಕರಿಗೆ ಕಿವಿಮಾತು ನುಡಿದರು, ತಮಗೆ ರಾಜ್ಯ ಪ್ರಶಸ್ತಿ ಬರುವಾಗ ಇಂದು ಸೇರಿದ ಅನಿವಾಸಿ ಕನ್ನಡಿಗರಷ್ಟು ಜನ ಇರಲಿಲ್ಲ ಮತ್ತು ದುಬೈ ಕ್ರೀಡಾ ರತ್ನ ಪ್ರಶಸ್ತಿ ತಮ್ಮ ಜೀವನದ ಮುಖ್ಯ ಪ್ರಶಸ್ತಿ ಲಭಿಸಿದೆ ಎಂದು ಅನಿವಾಸಿ ಕನ್ನಡಿಗರ ಪ್ರೀತಿ ವಿಶ್ವಾಸ ಗೌರವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ದಿನಗಳಿಂದ ದೈಹಿಕವಾಗಿ ಮತ್ತು ಅಂತರ್ಜಾಲ ಮುಖಾಂತರ ನಡೆದ ಹಲವು ಕ್ರೀಡಾ ಸ್ಪರ್ಧೆ, ಕಲಾ ಸ್ಪರ್ಧೆ, ಸಾಹಿತ್ಯ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಪದಕ ಮತ್ತು ಪ್ರಮಾಣ ಪತ್ರವನ್ನು ಸಂಘಟಕರು ಮತ್ತು ಆಗಮಿಸಿದ ಅತಿಥಿಗಳು ಸೇರಿ ವಿತರಣೆ ಮಾಡಿ ಗೌರವಿಸದರು ಹಾಗೂ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಕನ್ನಡ ಮಕ್ಕಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮತ್ತು ಶೇಕ್ ಹಂದಾನ್, ಶೇಕ್ ಡಾ.ಸುಲ್ತಾನ್ ಅವಾರ್ಡ್ ಪಡೆದ ಕನ್ನಡ ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ತಾಯಿನಾಡಲ್ಲಿ ಪ್ರಳಯ ಮತ್ತು ಕೋವಿಡ್ ಕಾಲದಲ್ಲಿ ಕನ್ನಡಿಗರು ಸಂಕಷ್ಟ ಎದುರಿಸುತ್ತಿದ್ದಾಗ ಮತ್ತು ಕೋವಿಡ್ ಕಾಲದಲ್ಲಿ ದುಬೈಯಲ್ಲಿ ಮತ್ತು ಇತರ ಎಮಿರೇಟುಗಳಲ್ಲಿ ಕನ್ನಡಿಗರು ಸೇರಿ ಭಾರತೀಯರು ಮತ್ತು ವಿದೇಶಿ ಪ್ರಜೆಗಳು ಊಟಕ್ಕೂ ಸಹ ಸಂಕಷ್ಟ ಪಡುತ್ತಿದ್ದಾಗ ಆಹಾರ, ವಸತಿ, ವೈದ್ಯಕೀಯ ಸಹಾಯ ಮತ್ತು ಉಚಿತ ವಿಮಾನ ಟಿಕೆಟ್ ಮೊದಲಾದ ಸಹಾಯ ಹಸ್ತ ನೀಡಿ ಹೆಮ್ಮೆಯ ಕನ್ನಡಿಗರೊಂದಿಗೆ ಬೆನ್ನೆಲುಬಾಗಿ ನಿಲ್ಲುತ್ತಿರುವ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಗೌರವಾಧ್ಯಕ್ಷ ರು ಮತ್ತು ಎಮ್ಸ್ಕ್ವೇರ್ ಎಂಜಿನಿರಿಂಗ್ ಕನ್ಸಲ್ಟ್ಯಾನ್ಸಿ ಮಾಲೀಕರಾದ ಹೆಮ್ಮೆಯ ಕನ್ನಡಿಗ “ಶ್ರೀಯುತ ಮೊಹಮ್ಮದ್ ಮುಸ್ತಫಾ” ಅವರಿಗೆ “ಆಪತ್ಬಾಂಧವ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು ಅವರು ನೆರವೇರಿಸಿದರು, ಕೋವಿಡ್ ವ್ಯಥೆ ಮುಗಿಯದ ಈ ಕಾಲದಲ್ಲೂ ದುಬೈ ಆಡಳಿತದ ಕೋವಿಡ್ ನಿಯಮ ಪಾಲಿಸಿ ಯುಎಇಯಲ್ಲಿ ದೈಕವಾಗಿ ಭಾಗವಾಗಿ ನಡೆದ ಮೊದಲ ಕನ್ನಡ ಕಾರ್ಯಕ್ರಮ ಈ ದಸರಾ ಕ್ರೀಡೋತ್ಸವ ಎಂದು ಅಧ್ಯಕ್ಷರ ಭಾಷಣದಲ್ಲಿ ನುಡಿದರು ಮತ್ತು ಕ್ರೀಡೋತ್ಸವ ನಡೆಸಲು ಕೋವಿಡ್ ನಿಬಂಧನೆ ಕಾರಣ ಸೂಕ್ತ ಸ್ಥಳ ಸಿಗಲು ಆಯೋಜಕರು ಪರದಾಡಿದ ಸನ್ನಿವೇಶವನ್ನು ವಿವರಿಸಿದರು.
ಮಹಾಮಾರಿ ಕೊರೋನಾ ಸಮಯದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಹಲವು ಭಾಗಗಳಲ್ಲಿ ಮದ್ಯ ರಾತ್ರಿ ಸಹ ಊಟಕ್ಕೆ ಕಷ್ಟಪಡುತ್ತಿದ್ದ ಕನ್ನಡಿಗರು ಸೇರಿ ಅನೇಕ ಭಾರತೀಯರು ಮತ್ತು ವಿದೇಶಗರಿಗೆ ಆಹಾರ ಕಿಟ್ ತಲುಪಿಸುವಲ್ಲಿ, ವೈದ್ಯಕೀಯ ಸಹಾಯ ತಲುಪಿಸಲು ಶ್ರಮಿಸಿದವರಿಗೆ, ವಾಸಿಸಲು ಸ್ಥಳ ಇಲ್ಲದವರಿಗೆ ವಾಸ ಸ್ಥಳದ ಅನುಕೂಲತೆ ಒದಗಿಸಿಕೊಟ್ಟವರಿಗೆ, ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಅರೋಗ್ಯ ಸಲಹೆ ನೀಡಿದ ಯುಎಇ ಕನ್ನಡ ವೈದ್ಯರುಗಳಿಗೆ ಮುಂತಾದ ಕೋವಿಡ್ ಸೇವಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಗಲ್ಫ್ ಸ್ಟ್ರೀಮ್ ಕಂಟ್ರಾಕ್ಟಿನ್ಗ್ ಸಂಸ್ಥೆಯ ಮಾಲೀಕರಾದ ಶ್ರೀಯುತ ಶೇಖರ್ ರೆಡ್ಡಿ, ರಿವಾ ಲೇಸರ್ ಮೆಡಿಕಲ್ ಮತ್ತು ಇನ್ಸ್ಟಿಟ್ಯೂಟ್ ಮಾಲೀಕರಾದ ಡಾ.ರಶ್ಮಿ ನಂದಕಿಶೋರ್, ಪಾನ್ ವರ್ಲ್ಡ್ ಎಜುಕೇಶನ್ ಸೊಲ್ಯೂಷನ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ರಾಘವೇಂದ್ರ ಮನ್ಬೋಲ್, ದಿ ಫ್ರೆಶ್ ಆನ್ಲೈನ್ ಫಿಶ್ ಮಾರ್ಕೆಟ್ ಸಂಸ್ಥೆಯ ಮಾಲೀಕರಾದ ಶ್ರೀಯುತ ಹಿದಾಯತ್ ಅಡ್ಡೋರ್, ಫಾರ್ಚ್ಯೂನ್ ಗ್ರೂಪ್ ಹೋಟೆಲ್ ಮಾಲೀಕರಾದ ಶ್ರೀಯುತ ಪ್ರವೀಣ್ ಶೆಟ್ಟಿ, ಗಾಯಕರು ಮತ್ತು ಬಿಸ್ನೆಸ್ಮನ್ ಶ್ರೀಯುತ ನವೀದ್ ಮಾಗುಂಡಿ, ಯುಎಇ ಕೆ ಎಮ್ ಸಿ ಸಿ ಕಾನೂನು ಸಲಹೆಗಾರರಾದ ಅಡ್ವೋಕೇಟ್ ಖಲೀಲ್ ಕಾಸರಗೋಡು, ಚಿತ್ರ ನಿರ್ಮಾಪಕರಾದ ಎಮ್ ಎಸ್ ಖಾನ್ ಮುಂತಾದವರು ಆಗಮಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಉಪ ಸಮಿತಿ ಸದಸ್ಯರಾದ ನವೀನ್ ಭಾರದ್ವಾಜ್ ಬೆಂಗಳೂರು ಮತ್ತು ಶ್ರೀಮತಿ ಆಶಾ ಶಂಕರ್ ಕುಂದಾಪುರ ಅವರು ನೆರವೇರಿಸಿದರು, ಆಗಮಿಸಿದ ಎಲ್ಲಾ ಅತಿಥಿಗಳನ್ನು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು , ಕ್ರೀಡಾಪಟುಗಳನ್ನು ಮತ್ತು ಪ್ರೇಕ್ಷಕರನ್ನು ದುಬೈ ಕನ್ನಡ ಸಾಹಿತ್ಯ ವಿಭಾಗದ ಸಂಚಾಲಕರಾದ ವಿಷ್ಣುಮೂರ್ತಿ ಮೈಸೂರು ಅವರು ಸ್ವಾಗತ ಮಾಡಿದರು, ದಸರಾ ಕ್ರೀಡೋತ್ಸವದ ಭಾಗವಾಗಿ ಯುನೈಟೆಡ್ ಅರಬ್ ಎಮಿರೇಟಿನಲ್ಲಿ ನೆಲಸಿರುವ ಕನ್ನಡಿಗರಿಗಾಗಿ ನಡೆದ ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಓಟದ ಸ್ಪರ್ಧೆ, ರಂಗೋಲಿ ಸ್ಪರ್ಧೆ, ದಸರಾ ಬೊಂಬೆ ಸ್ಪರ್ಧೆ, ಕನ್ನಡ ರಸ ಪ್ರಶ್ನೆ ಸ್ಪರ್ಧೆ,ಅಂತ್ಯಾಕ್ಷರಿ ಸ್ಪರ್ಧೆ, ಕವಿತೆ ಮತ್ತು ಲೇಖನ ಸ್ಪರ್ಧೆ, ಕೇರಂ ಚೆಸ್ ಲೂಡೋ ಸ್ಪರ್ಧೆ ಮುಂತಾದ ಆಟೋಟಗಳನ್ನು ನಡೆಸಲು ಹೆಮ್ಮೆಯ ಕನ್ನಡಿಗರು ತಂಡದ ಜೊತೆ ಸೇರಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸದವರಿಗೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದ ಪುಟಾಣಿ ಮಕ್ಕಳಿಗೆ ಮತ್ತು ಭರತ ನಾಟ್ಯ ಪ್ರದರ್ಶಿಸಿದ ನವೀನ್ ಅವರ ಧರ್ಮ ಪತ್ನಿ ಅವರಿಗೆ ಹೆಮ್ಮೆಯ ಯುಎಇ ಕನ್ನಡ ವೈದ್ಯರುಗಳ ಗುಂಪಿನ ಮುಖ್ಯ ಸಂಚಾಲಕರಾದ ಡಾ.ಸವಿತಾ ಮೋಹನ್ ಮೈಸೂರು ಅವರು ಧನ್ಯವಾದಗಳನ್ನು ತಿಳಿಸಿದರು .
ದುಬೈ ದಸರಾ ಕ್ರೀಡೋತ್ಸವವು ಬಹಳ ಅಚ್ಚುಕಟ್ಟಾಗಿ ನಡೆಯಲು ಕಳೆದ ಹಲವು ದಿನಗಳಿಂದ ಹಗಲಿರುಳೆನ್ನದೆ ಶ್ರಮಿಸಿದ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮುಖ್ಯ ಕಾರ್ಯದರ್ಶಿ ಸೆಂತಿಲ್ ಬೆಂಗಳೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಯುಎಇ ಕನ್ನಡಿಗಾಸ್ ಬಿಸ್ನೆಸ್ ಫೋರಮ್ ಸಂಚಾಲಕರಾದ ಶಂಕರ್ ಬೆಳಗಾವಿ, ಮೊಯಿನುದ್ದೀನ್ ಬೆಳಗಾವಿ, ದುಬೈ ಕನ್ನಡ ಸಾಹಿತ್ಯ ವಿಭಾಗದ ಸಂಚಾಲಕರಾದ ವಿಷ್ಣುಮೂರ್ತಿ ಮೈಸೂರು, ಹೆಮ್ಮೆಯ ಕನ್ನಡತಿಯರು ಮಹಿಳಾ ಘಟಕದ ಸಂಚಾಲಕಿಯರಾದ ಮಮತಾ ಶಾರ್ಜಾ,ಹಾದಿಯ ಮಂಡ್ಯ, ಪಲ್ಲವಿ ದಾವಣಗೆರೆ, ಅನಿತಾ ಬೆಂಗಳೂರು, ಕನ್ನಡ ವೈದ್ಯರುಗಳ ಗುಂಪಿನ ಮುಖ್ಯ ಸಂಚಾಲಕಿ ಡಾ.ಸವಿತಾ ಮೋಹನ್ ಮೈಸೂರು ಮುಂತಾದವರಿಗೆ ತಂಡದ ಅಧ್ಯಕ್ಷರು ಧನ್ಯವಾದಗಳನ್ನು ತಿಳಿಸಿದರು.
ವರದಿ : ದುಬೈ ವಾರ್ತೆಗಳು ನ್ಯೂಸ್ ಡೆಸ್ಕ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.