ಕೋಲಾರ (ವಿಶ್ವಕನ್ನಡಿಗ ನ್ಯೂಸ್) : ಕರ್ನಾಟಕ ವಿಧಾನ ಪರಿಷತ್ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ 6 ತಾಲ್ಲೂಕುಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ . ವಿಧಾನ ಪರಿಷತ್ ದೈವಾರ್ಷಿಕ ಚುನಾವಣೆಯ ಮತದಾನವನ್ನು ಡಿಸೆಂಬರ್ 10 ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ | ಆರ್.ಸೆಲ್ವಮಣಿ ಅವರು ತಿಳಿಸಿದರು.
ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಪರಷತ್ ನಂ .18 ರ ಕೋಲಾರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ದೈವಾರ್ಷಿಕ ಚುನಾವಣೆ 2021 ರ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆಯ ಅಧಿಸೂಚನೆಯನ್ನು ನವೆಂಬರ್ 16 ರಂದು ಹೊರಡಿಸಲಾಗುವುದು . ನಾಮ ಪತ್ರಗಳನ್ನು ಸಲ್ಲಿಸಲು ನವೆಂಬರ್ 23 ಕೊನೆಯ ದಿನಾಂಕವಾಗಿದೆ .
ನಾಮ ಪತ್ರಗಳ ಪರಿಶೀಲನೆಯನ್ನು ನವೆಂಬರ್ 24 ರಂದು ಮಾಡಲಾಗುವುದು . ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನವೆಂಬರ್ 26 ಕೊನೆಯ ದಿನಾಂಕವಾಗಿದೆ . ಮತದಾನವು ಡಿಸೆಂಬರ್ 10 ರಂದು ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಡೆಯುತ್ತದೆ . ಮತಗಳ ಎಣಿಕೆಯನ್ನು ಡಿಸೆಂಬರ್ 14 ರಂದು ಮಾಡಲಾಗುವುದು ಹಾಗೂ ಡಿಸೆಂಬರ್ 16 ರಂದು ಚುನಾವಣೆ ಮುಕ್ತಾಯವಾಗುತ್ತದೆ ಎಂದು ಅವರು ತಿಳಿಸಿದರು .
ಕರ್ನಾಟಕ ವಿಧಾನ ಪರಿಷತ್ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮತದಾರರ ಪಟ್ಟಿಗಳನ್ನು ತಯಾರಿಸಲಾಗಿದೆ . ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 5208 ಗ್ರಾಮ ಪಂಚಾಯ್ತಿ ಸದಸ್ಯರು , 372 ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು , ಇಬ್ಬರು ಲೋಕಸಭಾ ಸದಸ್ಯರು , 11 ವಿಧಾನಸಭಾ ಸದಸ್ಯರು ಮತ್ತು 5 ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 5598 ವ್ಯಕ್ತಿಗಳು ಚುನಾವಣೆಯಲ್ಲಿ ಮತದಾರರಾಗಿದ್ದಾರೆ ಎಂದು ಅವರು ತಿಳಿಸಿದರು.
ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ 158 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 163 ಮತದಾನ ಕೇಂದ್ರಗಳನ್ನು ಒಳಗೊಂಡಿದೆ . ಪ್ರತಿ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಕಛೇರಿಗಳು , ನಗರಸಭಾ , ಪುರಸಭಾ , ಪಟ್ಟಣ ಪಂಚಾಯ್ತಿ ಕಛೇರಿಗಳನ್ನು ಮತಗಟ್ಟೆಗಳನ್ನಾಗಿ ಮಾಡಲಾಗಿದೆ. ಮತ ಎಣಿಕಾ ಕೇಂದ್ರವನ್ನು ಕೋಲಾರದಲ್ಲಿ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಚುನಾವಣಾ ಸಂಬಂಧ ಜಿಲ್ಲೆಯಲ್ಲಿ ದೂರುಗಳನ್ನು ಸ್ವೀಕರಿಸಲು ಚುನಾವಣಾ ಶಾಖೆಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ . ದೂರವಾಣಿ ಸಂಖ್ಯೆ 243507 ರಲ್ಲಿ 24/7 ದೂರುಗಳನ್ನು ಸ್ವೀಕರಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ . ಅದೇ ರೀತಿ ತಾಲ್ಲೂಕು ಕಛೇರಿಗಳಲ್ಲಿಯೂ ಸಹ ದೂರು ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಉಕೇಶ್ ಕುಮಾರ್ , ಚುನಾವಣಾ ತಶೀಲ್ದಾರರಾದ ನಾಗವೇಣಿ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.