(www.vknews.com) : ಕೆಲವು ಸಿನಿಮಾಗಳು ಜೀವನದ ನೈಜ ಘಟನೆಗಳಿಗೆ ತೀರ ಹತ್ತಿರವಾಗಿಬಿಡುತ್ತವೆ. ಕೆಲವು ಪಾತ್ರಧಾರಿಗಳು ನಮ್ಮ ಸುತ್ತಮುತ್ತಲಿನ ಒಬ್ಬರಂತೆ ಗೊಚರಿಸುತ್ತವೆ.ಜೈ ಭೀಮ್ ಸಿನಿಮಾ ನನ್ನಂತಹ ಅನೇಕ ಜನರಿಗೆ ಅಂತರ್ಮುಖಿ ಯಾಗಿ ಕಾಡುತ್ತದೆ. ಜೀವನದಲ್ಲಿ ನಡೆದ ಅನೇಕ ಘಟನೆಗಳನ್ನು ಫ್ಲಾಶ್ ಬಾಕ್ಸಿನಲ್ಲಿ ಕೊಂಡೊಯ್ಯುತ್ತದೆ. ಈ ಸಿನಿಮಾದ ಗುಂಗಿನಲ್ಲಿದ್ದ ನನಗೆ ಜೈ ಭೀಮ್ ಚಲನಚಿತ್ರದ ನಾಯಕ ನಟ ವಕೀಲರ ಪಾತ್ರ ದಾರಿ ನಮ್ಮೂರ ವಕೀಲ ರಾದಕೃಷ್ಣ ನಂತೆ ಕಂಡು ಬಂದರು.ಅತಿರೇಕವೆನಿಸಿದರು… ಆಡುಭಾಷೆಯಲ್ಲಿ ಹೇಳುವುದಾದರೆ ಬಡವರ ಗೋರಿಯ ಮೇಲೆ ಶ್ರೀಮಂತರ ಮಹಲು ಕಟ್ಟುತ್ತಾರೆ ಎನ್ನುತ್ತಾರಲ್ಲ ಅಂತಹದೊಂದು ಪ್ರಕರಣದಲ್ಲಿ ನಾನು ಆರೋಪಿಯಾಗಿದ್ದೆ.
ವಕೀಲ ರಾದಕೃಷ್ಣ ಜೈ ಭೀಮ್ ಸಿನಿಮಾದ ನಾಯಕನಂತೆ ನನ್ನ ಪ್ರಕರಣದಲ್ಲಿ ವಾದಿಸಿ, ಕೇಸನ್ನು ಕಾಸು ಪಡೆಯದೆ ಗೆದ್ದು, ನಾನು ನಿರಪರಾಧಿ ಎಂದು ನಿರೋಪಿಸಿದ್ದರು.ಬೀದಿಬದಿಯಲ್ಲಿ ಬಿದಿರಿನ ಬುಟ್ಟಿ ಮಾಡಿ ಮಾರಾಟ ಮಾಡುವ ಜನಗಳನ್ನು ಏಕಾಏಕಿ ಎತ್ತಂಗಡಿ ಮಾಡಿ ಅವರನ್ನು ಬೀದಿಗೆ ತಳ್ಳಿ ಅವರ ಜೀವನ ವನ್ನು ಮೂರಾಬಟ್ಟೆ ಮಾಡಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದ್ದು.ಸಕಲೇಶಪುರದ ಹೇಮಾವತಿ ಸೇತುವೆಯ ಸಮೀಪ ಈಗಿನ ಶ್ರೀನಿವಾಸ್ ಕಲ್ಯಾಣ ಮಂಟಪದ ಮುಂಭಾಗ ಕಳೆದ 20 ವರ್ಷಗಳಿಂದ 18 ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಇವರನ್ನು ಆ ಸ್ಥಳದಿಂದ ಒಕ್ಕಲೆಬ್ಬಿಸುವ ಗುತ್ತಿಗೆಯನ್ನು ಸಕಲೇಶಪುರದ ಪುರಸಭೆ ಸದಸ್ಯರು ಸೇರಿದಂತೆ ಅನೇಕ ಅಧಿಕಾರಿಗಳು ಪಡೆದಿದ್ದರು ಮುಖ್ಯ ವಾಗಿ ಮುಖ್ಯಾಧಿಕಾರಿ ವಿಲ್ಸನ್.ಬಿದಿರಿನ ಬುಟ್ಟಿ ಮಾರಾಟಕ್ಕೆ ಈ ಸ್ಥಳ ಸೂಕ್ತವಾದ ಮಾರುಕಟ್ಟೆಯಾಗಿತ್ತು. ಹೆದ್ದಾರಿಯ ಪಕ್ಕದಲ್ಲಿ ಇದ್ದದ್ದರಿಂದ ಎಲ್ಲದಕ್ಕೂ ಸುಲಭ ವಾಗಿತ್ತು. ಬಿದಿರನ್ನು ಶೇಖರಣೆ ಮಾಡಿಕೊಳ್ಳಲು ಕೆಲಸ ಮಾಡಲು ಸೂಕ್ತವಾದ ಪ್ರದೇಶವಾಗಿತ್ತು.
ನಾನು ಎರಡು ಬಾರಿ ಕುಟುಂಬಗಳ ಬಗ್ಗೆ ಲೇಖನಗಳನ್ನು ಬರೆದಿದ್ದೆ ಬುಟ್ಟಿ ಹೆಣೆಯುವವರ ಬದುಕು ಬವಣೆ.. ಶೀರ್ಷಿಕೆ ಯಾಗಿತ್ತು.ಹರಿದ ಬಟ್ಟೆಗಳು, ಮುರಿದ ಗುಡಿಸಲುಗಳು, ಹಸಿದ ಹೊಟ್ಟೆಗಳು, ಕನಸುಗಳಿಲ್ಲದ ಮನಸ್ಸುಗಳು, ದುಡಿದು ದಳಿದ ಹೆಂಗಸರು. ಕುಡಿದು ಮಲಗುವ ಗಂಡಸರು.ಇವರ ಜೀವನದ ನಿತ್ಯ ಸಂಕಷ್ಟಗಳ ಸರಮಾಲೆಯಾಗಿತ್ತು ಈ ಲೇಖನ.ಇವರ ಬದುಕಿನ ಒಳನೊಟಗಳ ಚಿತ್ರಣವು ಜನರಲ್ಲಿ ಅನುಕಂಪ ಮೂಡಿಸಿತ್ತು.ಓದಲು ಬಾರದವರ ಕೈಗೆ ಪೇಪರ್ ಕೊಟ್ಟು..ಸಮಸ್ಯೆ ಇದ್ದರೆ ತಿಳಿಸುವಂತೆ ಹೇಳಿ ಬಂದಿದ್ದೆ…ಕೆಲದಿನದ ನಂತರ ಈ ಜನಗಳು ನನ್ನಲ್ಲಿ. ಕಷ್ಟಗಳನ್ನು ಹೇಳಿಕೊಂಡರು. ಇವರನ್ನು ಒಕ್ಕಲೆಬ್ಬಿಸುವ ನೆಪದಲ್ಲಿ ಅಧಿಕಾರಿಗಳು ನೀಡುವ ಕಿರುಕುಳಗಳು ವಿವರಿಸಿದ್ದರು. ನಾನು ಸೇರಿದಂತೆ ಅನೇಕ ಸಂಘಟನೆಗಳ ಪ್ರಮುಖರು ಇವರ ಪರವಾಗಿ ಧ್ವನಿ ಎತ್ತಿದವು.
ಇವರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಅನೇಕ ಪ್ರತಿಭಟನೆ ನಡೆಸಿ ಮನವಿಗಳನ್ನು ನೀಡಿದ್ದವು.ಪುರಸಭೆಯ ಅಧ್ಯಕ್ಷೆ ಪುಶ್ಪಾವತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾನ್ಯ ಸಭೆಯಲ್ಲಿ ಹೇಮಾವತಿ ಸೇತುವೆಯ ಬಳಿ ಇರುವ ಬುಟ್ಟಿಹೆಣೆಯುವ ಜನರ ಸಮೀಪದಲ್ಲಿ ಹೇಮಾವತಿ ಪ್ರತಿಮೆ ಹಾಗೂ ಪಾರ್ಕ್ ನಿರ್ಮಿಸುವ ನಿರ್ಣಯ ಮಾಡಲಾಯಿತು. ಈ ನಿರ್ಣಯ ಬುಟ್ಟಿಹೆಣೆಯುವ ಜನರ ಒಕ್ಕಲೆಬ್ಬಿಸುವ ತಂತ್ರಗಾರಿಕೆಯ ಬಾಗವಾಗಿತ್ತು.
2017 ಡಿಸೆಂಬರ್ 15 ಅದೊಂದು ಕರಾಳದಿನದಂದು ಹೆಂಗಸರು, ವೃದ್ಧರು ಮಕ್ಕಳು ಕೈ ಕಾಲು ಹಿಡಿದು ಬೇಡಿಕೊಂಡರು ಸಹ ಇವರ ಮನ ಕರಗಲಿಲ್ಲ..ಶ್ರೀಮಂತರ ಪರವಾಗಿರುವ ವ್ಯಕ್ತಿಗಳು ಒಗ್ಗಟ್ಟಾಗಿ ಒಂದು ದಿನ ಗುಡಿಸಲುಗಳನ್ನು ನೆಲಸಮಗೊಳಿಸಿದರು,ಹಲ್ಲೆ ನಡೆಸಿದರು,ಪುರಸಭೆಯ ಟ್ರಾಕ್ಟರ್ ನಲ್ಲಿ ಬಿದಿರು, ಗುಡಸಲಿನ ಅವಶೇಷಗಳನ್ನು ತುಂಬಿಸಿಕೊಂಡು ಬಂದು ಸಕಲೇಶಪುರದ ಸಂತೆ ಮೈದಾನದಲ್ಲಿ ಸುರಿದು ಹೋದರು.ಈ ವಿಷಯವನ್ನು ಬುಟ್ಟಿ ಹೆಣೆಯುವ ಉಮೇಶ ಅಳುತ್ತಾದೂರವಾಣಿ ಮುಖಾಂತರ ನನಗೆ ತಿಳಿಸಿದ.ನಾನು ಸ್ಥಳಕ್ಕೆ ಹೋಗಿ ನೋಡಿದಾಗ ಬುಟ್ಟಿ ಹೆಣೆಯುವವರ ರೋದನೆ ಮುಗಿಲು ಮುಟ್ಟಿತ್ತು.
ಅರ್ಧಗಂಟೆಯ ಕಾಲ ಸ್ಥಳದಲ್ಲಿ ನಿಂತು ಎಲ್ಲವನ್ನು ವೀಕ್ಷಿಸಿದೆ. ಸಿಟ್ಟು ಮತ್ತು ದುಃಖದ ಒತ್ತಡದಿಂದ ನಾನುಸ್ತಬ್ಧವಾಗಿದ್ದೆ.ಹೆಂಗಸರು ಅಳುತ್ತಾ ಬಹಳಷ್ಟು ವಿವರಿಸುತ್ತಿದ್ದರು. ಇವರುಗಳು ನಮ್ಮನ್ನು ಅನೇಕ ವರ್ಷಗಳಿಂದ ಕಿರುಕುಳ ನೀಡುತ್ತಿದ್ದರು.ರಾತ್ರಿ ಬಂದು ನುಗ್ಗಿ ಹೊಡೆಯುತ್ತಿದ್ದರು. ಬೆಂಕಿ ಕೊಡುವುದಾಗಿ ಬೆದರಿಸುತ್ತಿದ್ದರು ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು.ನಾವುಗಳು ಹೆದರಿ ಮಕ್ಕಳನ್ನೆಲ್ಲಾ ಅಪ್ಪಿಕೊಂಡು ಗುಂಪುಗೂಡಿ ಜಾಗಾರಣೆ ಮಾಡುತ್ತಿದ್ದೇವು.
ಯುವ ಕ್ಷಣದಲ್ಲಿ ಯಾರು ಏನು ಮಾಡುತ್ತಾರೆ ಎಂಬ ಭಯ ಇತ್ತು.ಹಗಲಿನ ವೇಳೆಯಲ್ಲಿ ಬಂದು ನಮ್ಮನ್ನು ಬೆದರಿಸುತ್ತಿದ್ದರು.ಬಿದಿರಿನ ಬುಟ್ಟಿ ಖರೀದಿಮಾಡಿ ಹಣ ನೀಡದೆ ಹೋಗುತ್ತಿದ್ದರು.ಇದನ್ನೆಲ್ಲಾ ಸಹಿಸಿಕೊಂಡು ಅನೇಕರಿಗೆ ವಿಷಯ ತಿಳಿಸಿದರು ಯಾರು ಸ್ಪಂದಿಸದ ಕಾರಣ ನಿಮ್ಮ ಬಳಿ ಬಂದು ಸಹಾಯ ಕೋರಿದೆವು. ನಂತರ ಇವರ ದೌರ್ಜನ್ಯ ಕಡಿಮೆಯಾಗಿತ್ತು ಆದರೆ ಇವತ್ತು ನಮ್ಮನ್ನು ಬೀದಿಪಾಲು ಮಾಡಿಬಿಟ್ಟರು. ನಾವು ಈಗ ಏನು ಮಾಡುವುದು ಎಲ್ಲಿಗೆ ಹೋಗುವುದು ತಿಳಿಯುತ್ತಿಲ್ಲ ಎಂದರು. ನಾನು ಅನೇಕ ಚಳವಳಿಗಾರರಿಗೆ ಪೋನ್ ಮಾಡಿ ವಿಷಯ ತಿಳಿಸಿದೆ.
ಶಾಸಕ ಹೆಚ್ ಕೆ ಕುಮಾರಸ್ವಾಮಿಯವರಿಗೆ ಕಾಲ್ ಮಾಡಿದೆ. ಅವರ ಸಂಪ್ರದಾಯದಂತೆ ಅವರು ಕಾಲ್ ರಿಸೀವ್ ಮಾಡಲಿಲ್ಲ. ನಂತರ ಅವರ ಪತ್ನಿ ಚಂಚಲ ರವರಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ ಅವರು ಪರಿಶೀಲನೆ ಮಾಡುವುದಾಗಿ ತಿಳಿಸಿದರು. ನಂತರ ಪುರಸಭೆ ಅಧ್ಯಕ್ಷರಿಗೆ, ಮುಖ್ಯಾಧಿಕಾರಿಗಳಿಗೆ, ಅನೇಕ ಪುರಸಭಾ ಸದಸ್ಯರಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ. ನನಗೆ ಈ ವಿಚಾರ ಗಂಭೀರವಾಗಿದ್ದರೂ ಅನೇಕರಿಗೆ ಗಂಭೀರವಾಗಿರಲಿಲ್ಲ ಆದರೆ..ಹೋರಾಟದ ಮನೋಭಾವದ ಹೆತ್ತೂರು ನಾಗರಾಜ್,ಧರ್ಮೇಶ್,ಅನ್ನಪೂರ್ಣ ಶ್ರೀಧರ್, ವಲಳಹಳ್ಳಿ ವೀರೇಶ್ , ಬೆಳಗೋಡು ಬಸವರಾಜ್, ನವೀನ್ ಸದಾಸೇರಿದಂತೆ ಅನೇಕರು ಸುಮಾರು 11 ಗಂಟೆಯ ಸಮಯದಲ್ಲಿ ಪುರಸಭೆಗೆ ಬಂದರು. ಪುರಸಭೆಯ ಮುಂಭಾಗ ಪ್ರತಿಭಟನೆ ನಡೆಸಿ ನ್ಯಾಯ ನೀಡುವಂತೆ ಒತ್ತಾಯಿಸಲಾಯಿತು.
2017 ಡಿಸೆಂಬರ್ 16 ರಂದು ಬೆಳಿಗ್ಗೆ 9.30 ಗಂಟೆಗೆ ನನ್ನ ವಿರುದ್ದ ದೂರು ದಾಖಲಿಸಿ. Cr.No.340/2017 ನೋಂದಾಯಿಸಿ. 504, 353, 114 R/W 34 IPC ನ. ತನಿಖೆಯನ್ನು ಪೂರ್ಣಗೊಳಿಸಿದ ನಂತರ ಚಾರ್ಜ್ ಶೀಟ್ ಸಲ್ಲಿಸಲಾಯಿತು.ಕೇಸು ಸಂಪೂರ್ಣ ಸುಳ್ಳಾಗಿತ್ತು ಅಂದು ನಡೆದ ಸತ್ಯ ಘಟನೆಗಳಿಗೆ ಸ್ಥಳದಲ್ಲಿದ್ದ ಪ್ರತಿಭಟನಾಕಾರರು ಮತ್ತು ಪತ್ರಕರ್ತರು ಪ್ರತ್ಯಕ್ಷ ಸಾಕ್ಷಿಯಾಗಿದ್ದರು.ನನ್ನ ಹಿತೈಷಿಗಳು ಎಂದು ಮುಖವಾಡ ಧರಿಸಿ ಜೊತೆಯಲ್ಲೇ ಇರುತ್ತಿದ್ದ ಬಡವರ ಬಂಧುಗಳು ಪೊಲೀಸ್ ಪೊಲೀಸರಿಗೆ ಲಕ್ಷಾಂತರ ಹಣ ತಿನ್ನಿಸಿ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ವಕೀಲರಾದ ಕೃಷ್ಣರವರಿಲ್ಲಿ ನಾನು ಹಂಚಿಕೊಂಡಗಾ ಅವರು ಕೇಳಿದ್ದು ಹೇಗೆ… ಬುಟ್ಟಿ ಹೆಣೆಯುವ ಜನರು ಮತ್ತೆ ಈ ಪ್ರದೇಶದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಬಹುದು.ಈ ಪ್ರದೇಶಕ್ಕೆ ಮತ್ತೆ ಬರಬಾರದು ಎಂಬ ಕಾರಣಕ್ಕಾಗಿ ಅವರನ್ನು ಬೆಂಬಲಿಸುವವರಿಗೆ ತೊಂದರೆ ನೀಡಬೇಕು ಎಂದು ನಿಮ್ಮ ಮೇಲೆ ಕೇಸು ದಾಖಲಿಸಲಾಗಿದೆ. ಹಾಗಾಗಿ ಈ ಕೇಸನ್ನು ಕಾನೂನಾತ್ಮಕವಾಗಿ ಹೋರಾಟ ಮಾಡೋಣ ಕಾನೂನಿನ ಮೂಲಕ ಸಂತ್ರಸ್ತರಿಗೆ ನ್ಯಾಯ ಸಿಗುವುದಾದರೆ ಪ್ರಯತ್ನಿಸೋಣ ನೀವು ಹೆದರಬೇಡಿ ನಾನು ನಿಮ್ಮೊಂದಿಗೆ ಇದ್ದೇನೆ ಈ ಕೇಸನ್ನು ನಾನು ನಡೆದುಕೊಳ್ಳುತ್ತೇನೆ ಎಂದು ಧೈರ್ಯ ತುಂಬಿದರು.
2017 ಡಿಸೆಂಬರ್ 18 ರಂದು ತಾಲ್ಲೂಕು ಕಚೇರಿಯ ಮುಂದೆ ಅನೇಕ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ ಕುಮಾರ್, ರವಿ ಕುಮಾರ್ ಹಾಗೂ ಅನೇಕ ಪತ್ರಕರ್ತರು ನನ್ನ ಮೇಲಿನ ಸುಳ್ಳು ಕೇಸನ್ನು ವಿರೋಧಿಸಿ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಕಪ್ಪು ಪಟ್ಟಿ ದರಿಸಿ ವರದಿಮಾಡಿ ಪ್ರತಿಭಟನೆ ಮಾಡಿದರು.ಪೋಲಿಸರು ಪ್ರಾಮಾಣಿಕವಾಗಿ ತನಿಕೆನಡೆಸದೆ ಚಾರ್ಜ್ ಶೀಟ್ ಸಲ್ಲಿಸಿದರು. ಪ್ರಕರಣ ಆರೋಪ ಗಂಭೀರವಾಗಿತ್ತು ಪ್ರತ್ಯಕ್ಷ ಸಾಕ್ಷಿಗಳಾಗಿ ಪುರಸಭೆಯ ಅಧ್ಯಕ್ಷೆ ಪುಷ್ಪ ವತಿ,ಪರಿಸರ ಇಂಜಿನಿಯರ್ ಲಕ್ಷ್ಮೀಶ್, ಪುರಸಭೆಯ ಕಾರ್ಮಿಕರಾದಚಂದ್ರು ಮತ್ತು ಸೋಮಶೇಖರ್ ಇತರರು ಇದ್ದರು ಕೇಸನ್ನು ಮಿತ್ರರು ವಕೀಲರಾದ ರಾಧಾಕೃಷ್ಣನ್ ರವರಿಗೆ ನೀಡಿದೆ.ದೂರುದಾರರಾದ ಪುರಸಭೆ ಮುಖ್ಯಾಧಿಕಾರಿ ವಿಲ್ಸನ್ ನನ್ನನ್ನು ಜೈಲಿಗೆ ಕಳಿಸುತ್ತೇನೆ ಎಂದು ಸಾರ್ವಜನಿಕರ ಮುಂದೆ ಶಪಥ ಮಾಡಿದ್ದರು ನ್ಯಾಯಾಲಯದಲ್ಲಿವಿಚಾರಣೆ ಪ್ರಾರಂಭವಾಯಿತು. ಈತ ಪುರಸಭೆಯಲ್ಲಿ ಇದ್ದರೆ ನನ್ನ ವಿರುದ್ಧ ಪುರಸಭೆಯ ಸಿಬ್ಬಂದಿ ಸುಳ್ಳು ಸಾಕ್ಷಿಯನ್ನು ಎತ್ತಿಹಿಡಿಯುತ್ತಾರೆ ಎಂದು ಈತನನ್ನು ವರ್ಗಾವಣೆಯನ್ನು ನಾನು ಅಪೇಕ್ಷಿಸುತ್ತಿದ್ದೆ.ಆದರೆ ಪರಮ ಭ್ರಷ್ಟ ನಾಗಿದ್ದ ಮುಖ್ಯ ಅಧಿಕಾರಿ ವಿಲ್ಸನ್ ಪರಶಾಸಕ ಎಚ್ ಕೆ ಕುಮಾರಸ್ವಾಮಿ ಪ್ರಬಲವಾಗಿ ನಿಂತಿದ್ದರು.ಪುರಸಭೆಯ ಸದಸ್ಯರಾದ ಆದರ್ಶ, ಮುಕೇಶ್ ಶೆಟ್ಟಿ, ಇಸ್ರಾರ್ ಅಹಮದ್ ಹಾಗೂ ಇತರರು ಮುಖ್ಯ ಅಧಿಕಾರಿ ವಿಲ್ಸನ್ ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದ್ದರು. ವಿಲ್ಸನ್ ವರ್ಗಾವಣೆಯಾಯಿತು. ವರ್ಗಾವಣೆಯ ಮೊದಲು ವಿಲ್ಸನ್ ಕೋರ್ಟಿನಲ್ಲಿ ಹಾಜರಾಗಿ ನನ್ನ ವಿರುದ್ಧ ಹೇಳಿಕೆ ನೀಡಿದ್ದರು.ಪುರಸಭೆಯ ಅಧ್ಯಕ್ಷ ಪುಷ್ಪವತಿಹಾಗೂ ಪರಿಸರ ಇಂಜಿನಿಯರ್ ಲಕ್ಷ್ಮೀಶ್ ಸಹ ಹೇಳಿಕೆ ನೀಡಿದ್ದರು. ವಕೀಲ ರಾದಕೃಷ್ಣ ಕ್ರಾಸ್ ಸವಾಲಿನಲ್ಲಿ ಪುರಸಭೆ ಅಧ್ಯಕ್ಷೆ ಮತ್ತು ಲಕ್ಷ್ಮಿಶ್ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಪುರಸಭೆ ಅಧ್ಯಕ್ಷೆ ಮತ್ತು ಲಕ್ಷ್ಮಿಶ್ ನನ್ನ ವಿರುದ್ದ ಸುಳ್ಳು ಸಾಕ್ಷಿಹೇಳದಂತೆ ಪುರಸಭೆಯ ಮಾಜಿ ಅಧ್ಯಕ್ಷ ಇಬ್ರಾಹಿಂ , ಮುಫೀಜ್, ಮುಕೇಶ್ ಶೆಟ್ಟಿ ಹಾಗೂ ಇತರರು ಮನವಿಮಾಡಿದ್ದರು. ಇದರ ಪರಿಣಾವೂ ಎನೂ ವಕೀಲ ರಾದ ಕೃಷ್ಣ ಕ್ರಾಸ್ ಮಾಡಿದಾಗ ಕೆಲವು ನನ್ಮ ಪರವಾಗಿ ಪ್ರತಿಕೂಲ ಹೇಳಿಕೆ ನೀಡಿದ್ದು ಕಂಡು ಬಂತು.ಈ ವೇಳೆಗೆ ಮುಖ್ಯ ಅಧಿಕಾರಿ ವಿಲ್ಸನ್ ವರ್ಗಾವಣೆಯಾಗಿತ್ತು.ಇನ್ನು ಎರಡು ಸಾಕ್ಷಿಗಳು ಅಂದರೆ ಪ್ರಮುಖ ಸಾಕ್ಷಿಗಳ ವಿಚಾರಣೆ ಬಾಕಿ ಇತ್ತು ಇವರು ದಫೇದಾರ್ ಚಂದ್ರಶೇಖರ್ ಮತ್ತು ಪೌರಕಾರ್ಮಿಕ ಸೋಮಶೇಖರ್. ವಿಲ್ಸನ್ ವರ್ಗಾವಣೆ ಯಾಗಿರುವ ಕಾರಣ ಚಂದ್ರಶೇಖರ್ ಮತ್ತು ಸೋಮಶೇಖರ್ ನ್ಯಾಯಾಲಯದಲ್ಲಿ ಸುಳ್ಳು ಹೇಳುವುದಿಲ್ಲ ಎಂಬ ನಂಬಿಕೆಯೂ ನನಗಿತ್ತು ಆದರೆ ವಿಲ್ಸನ್ ನನ್ನು ಮರಳಿ ಸಕಲೇಶಪುರಕ್ಕೆವರ್ಗಾವಣೆ ಯಾಗಿದ್ದರು.ಶಾಸಕ ಎಚ್ ಕೆ ಕುಮಾರಸ್ವಾಮಿ ಯವರು ವಿಲ್ಸನ್ ರವರನ್ನು ಪುರಸಭೆಗೆ ಮರಳಿ ತರಲು ಪತ್ರನೀಡಿದ್ದರು.ವಿಲ್ಸನ್ ಪರವಾಗಿ ನೀಡಿದ್ದ ಶಿಫಾರಸು ಪತ್ರದ ನೋಡಿ ಶಾಸಕರಿಗೆ ಕಾಲ್ ಮಾಡು ನನ್ನ ಅಸಮದಾನ ವ್ಯಕ್ತಪಡಿಸಿದ್ದೆ.ಅನೇಕ ಪುರಸಭಾ ಸದಸ್ಯರು ಶತಾಯಗತಾಯ ಪ್ರಯತ್ನ ಮಾಡಿ ಮುಖ್ಯಾಧಿಕಾರಿ ಯನ್ನು ಪುರಸಭೆಗೆ ಕರೆಸಿಕೊಂಡರು.ವಿಲ್ಸನ್ ಮರಳಿ ಬಂದರೆ ನನ್ಮ ಕೇಸಿನ ಮೇಲೆ ಗಂಬೀರ ಪರಿಣಾಮ ಬೀರುತ್ತದೆ.ದಫೇದಾರ್ ಚಂದ್ರ ಶೇಕರ್ ಮತ್ತು ಸೋಮಶೇಖರ್ ನ್ಯಾಯಾಲಯದಲ್ಲಿ ಹಸಿಹಸಿ ಸುಳ್ಳು ಹೇಳುತ್ತಾರೆ ಎಂಬ ವಿಷಯವನ್ನು ತಿಳಿಸಿದ್ದರು ಇದಕ್ಕೆ ಕಿವಿಗೊಡಲಿಲ್ಲ, ಅವರಿಗೆ ಅವರದೇ ಆದ ಪ್ರತಿಷ್ಠೆ ಮುಖ್ಯವಾಗಿತ್ತು.ನಿರೀಕ್ಷೆಯಂತೆ ದಫೇದಾರ್ ಚಂದ್ರ ಶೇಕರ್ ಮತ್ತು ಸೋಮಶೇಖರ್ ನ್ಯಾಯಾಲಯದಲ್ಲಿ ಹಸಿಹಸಿ ಸುಳ್ಳು ಹೇಳಿದರು. ಹಿರಿಯ ಅಧಿಕಾರಿಗೆ ಎದುರು ಹಾಕಿಕೊಂಡು ಸತ್ಯ ಹೇಳುವ ಧೈರ್ಯ ಇವರಿಗೆ ಇರಲಿಲ್ಲ.
ಇವರ ಸುಳ್ಳು ಹೇಳಿಕೆಯಿಂದ ಪ್ರಕರಣ ಗಂಬೀರ ಪಡೆದುಕೊಂಡಿತು. ನನಗೆ ಶಿಕ್ಷೆಯಾಗುವುದು ಗ್ಯಾರೆಂಟಿ ಎಂಬ ಮನವರಿಕೆಯಾಗಿತ್ತು.ನಾನು ಮಾನಸಿಕವಾಗಿ ಎಲ್ಲವನ್ನೂ ಸ್ವೀಕರಿಸಲು ಸಿದ್ಧನಾಗಿದ್ದೆ.ಆದರೆ ವಕೀಲ ರಾಧಾಕೃಷ್ಣ ನನಗೆ ಧೈರ್ಯ ನೀಡುತ್ತಾ ಎಲ್ಲವೂ ಸರಿಯಾಗುತ್ತದೆ ಎಂದು ಹೇಳುತ್ತಿದ್ದರು.ಈ ಮಧ್ಯ ನನಗೆ ಮಾಹಿತಿ ಹಕ್ಕಿನಲ್ಲಿ ಕೆಲವು ದಾಖಲೆಗಳನ್ನು ಸಂಗ್ರಹಿಸಲು ತಿಳಿಸಿದರು.ಮುಖ್ಯಾಧಿಕಾರಿ ವಿಲ್ಸನ್ ದೂರು ನೀಡಿದ ದಿನ ಪುರಸಭೆಯಲ್ಲಿ ಯಾವುದಾದರೂ ಸಭೆ ನಡೆದಿದೆಯೇ.? ಹಾಗೂ ಚಂದ್ರಶೇಖರ್ ಮತ್ತು ಸೋಮಶೇಖರ್ ಅಂದು ಎಲ್ಲಿ ಕೆಲಸ ಮಾಡುತ್ತಿದ್ದರು? ಸಿ ಸಿ ಕ್ಯಾಮರಾ ರೆಕಾರ್ಡಿಂಗ್ ಇಂತಹ ಪ್ರಮುಖ ಅಂಶಗಳು ಮಾಹಿತಿ ಸಂಗ್ರಹಿಸಿದರು. ಎಲ್ಲಾ ಸಾಕ್ಷಿಗಳು ಭಾಗಶಹ ನನ್ನ ವಿರುದ್ಧವಾಗಿದ್ದವು.ಈ ಮಧ್ಯೆ ಮತ್ತೊಮ್ಮೆ ಪುರಸಭೆ ಮುಖ್ಯಾಧಿಕಾರಿ ವಿಲ್ಸನ್ ವರ್ಗಾವಣೆಯಾಯಿತು. ಪುರಸಭೆಗೆ ಸ್ಟೀಫನ್ ಪ್ರಕಾಶ್ ಮುಖ್ಯಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದರು.ನ್ಯಾಯಲಯದ ತಡೆಯಾಜ್ಞೆ ಮೇರೆಗೆಕೇವಲ ಎರಡು ತಿಂಗಳಲ್ಲಿ ಮತ್ತೆ ವಿಲ್ಸನ್ ಕೆಲಸಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯ ಒಬ್ಬರ ಮನೆಯಲ್ಲಿ ವಿಲ್ಸನ್ ಜೊತೆ ಭೇಟಿಯಾಗುವ ಸಂದರ್ಭ ಎದುರಾಯಿತು. ಅಂದು ವಿಲ್ಸನ್ ಮಾತುಗಳನ್ನು ಕೇಳಿ ನಿಜಕ್ಕೂ ದಿಗ್ಭ್ರಮೆ ಆಗಿತ್ತು. ವಿಲ್ಸನ್ ದೂರು ನೀಡಲು ಮುಂದಾಗಿರಲಿಲ್ಲ ದೂರು ನೀಡುವಂತೆ ವಿಲ್ಸನ್ ರವರಿಗೆ ಒತ್ತಡ ಹೇರಲಾಗಿತ್ತು ಒತ್ತಡ ಹಾಕಿದವರ ಹೆಸರುಗಳು ಕೇಳಿನನಗೂ ಕೆಲಕಾಲ ದಿಗ್ಭ್ರಮೆಯಾಗಿತ್ತು.ಏಕೆಂದರೆ ಇವರೆಲ್ಲ ನನ್ನೊಂದಿಗೆ ಬಹಳ ಆತ್ಮೀಯರಾಗಿದ್ದರು.
(ಇವರು ಹೆಸರುಗಳನ್ನು ನಾನು ಇಲ್ಲಿ ಪ್ರಕಟಿಸಿದರು ಯಾರು ನಂಬುವುದಿಲ್ಲ ಹಾಗಾಗಿ ನಾನು ಇವರುಗಳ ಹೆಸರನ್ನು ಹೇಳಲು ಮುಂದಾಗುವುದಿಲ್ಲ.)ಈ ಕೇಸನ್ನು ಗಂಭೀರವಾಗಿ ಪರಿಗಳಿಸಿದ್ದವಕೀಲರಾದ ಕೃಷ್ಣ ತಮ್ಮಕೊನೆಯ ವಾದಕ್ಕೆ..ಎರಡು ಡೇಟ್ ಪಡೆದು ನಂತರ ವಾದ ಮಂಡಿಸಲು ತಯಾರಾಗಿ ನಿಂತರು.ನ್ಯಾಯಾಧೀಶರ ಮುಂದೆ ವಕೀಲ ರಾಧಾಕೃಷ್ಣ ಒಂದು ಕಾಲು ಗಂಟೆ ಸತತವಾಗಿ ವಾದ ಮಾಡಿ ನ್ಯಾಯಾಧೀಶರ ಮುಂದೆ ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಿದರು. ಪುರಸಭೆ ಅಧ್ಯಕ್ಷೆ ಪುಷ್ಪವತಿ ರವರು ನೀಡಿದ್ದ ಹೇಳಿಕೆ ಸುಳ್ಳು ಎಂದು ಪುರಸಭೆ ಅಧ್ಯಕ್ಷೆ ಅಧಿಕೃತವಾಗಿ ಅಂದು ಯಾವುದೇ ಸಭೆಯನ್ನು ಕರೆದಿರಲಿಲ್ಲ,ಮುಖ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿರುವುದನ್ನು ಅಧ್ಯಕ್ಷೆ ನೋಡಿಲ್ಲ ಎಂಬುದನ್ನು ಇಂಥಹ ಯಾವುದೇ ಘಟನೆ ನಡೆದಿಲ್ಲ ಎಂದು ವಾದಿಸಿದರು.ನಂತರ ಪರಿಸರ ಇಂಜಿನಿಯರ್ ಲಕ್ಷ್ಮೀಶ್ ನೀಡಿರುವ ಕೇಳಿಕೆಯಲ್ಲಿ ಸತ್ಯಾಂಶವಿಲ್ಲ ಅವರು ಅಂದು ಸಭೆಯಲ್ಲಿ ಇರಲೇಇಲ್ಲ ಎಂದು ವಾದಿಸಿದ್ದರು.ಮುಖ್ಯವಾಗಿ ಪುರಸಭೆ ಮುಖ್ಯ ಅಧಿಕಾರಿ ನನ್ನ ಮೇಲೆ ನೀಡಿದ ದೂರಿಗೆ ಸಂಬಂಧಿಸಿದಂತೆ ಪೋಲಿಸರಿಗೆ ದೂರು ನೀಡಿರುವ ಸಮಯ ಹಾಗೂ ಕೋರ್ಟ್ ನಲ್ಲಿನ ಹೇಳಿಕೆಯಲ್ಲಿರುವ ಸಮಯದ ವ್ಯತ್ಯಾಸಗಳನ್ನು ತೆರೆದಿಟ್ಟರು. ನೀರಿನ ಬಾಟಲಿಯಿಂದ ಹಲ್ಲೆ ಮಾಡಲಾಗಿದೆ ಅಥವಾ ಟೇಬಲ್ಲಿನ ಮೇಲೆ ಹೊಡೆಯಲಾಗಿದೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಲಾಗದ ವಿಲ್ಸನ್ ರವರ ಹೇಳಿಕೆಯನ್ನು ಎತ್ತಿಹಿಡಿದರು. ಮುಖ್ಯವಾಗಿ ಈ ಪ್ರಕರಣದ ಹಿನ್ನೆಲೆಯನ್ನು ನ್ಯಾಯಾಧೀಶರ ಮುಂದೆ ವಿವರಿಸುತ್ತಾ ಇದೊಂದು ಬುಟ್ಟಿ ಹೆಣೆಯುವವರ ಬದುಕಿಗೆ ಸಂಬಂಧಿಸಿದಂತೆ ನಡೆದ ಹೋರಾಟ ಮಾತ್ರವಾಗಿತ್ತು ಎಂಬುದನ್ನು ಮನದಟ್ಟಾಗುವಂತೆ ವಿವರಿಸಿದ್ದರು.ಪುರಸಭೆಯ ವಿರುದ್ದ ಭ್ರಷ್ಟಾಚಾರ ಕ್ಕೆ ಸಂಬಂಸಿದಂತೆ. ಅನೇಕ ವರದಿಗಳನ್ನು ನಾನು ಮಾಡಿರುವುದನ್ನು ವಿವರಿಸಿದರು. ಬೀದಿನಾಯಿ ಹತ್ಯೆ ಅಕ್ರಮದ ಬಗ್ಗೆ ಸುಪ್ರೀಮ್ ಕೋರ್ಟ್ ನಲ್ಲಿ ಕೇಸು ದಾಖಲು ಮಾಡಿದ್ದ ದಾಖಲೆ ಗಳನ್ನು ಪ್ರದರ್ಶಿಸಿದರು. ಈ ಸಿಟ್ಟಿಗೆ ಕಕ್ಷಿದಾರರ ವಿರುದ್ದ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ವಾದಿಸಿದರು.ದೂರು ನೀಡಿದ ದಿನ ಪುರಸಭೆಯ ಸಭಾಂಗಣದಲ್ಲಿ ಯಾವುದೇ ರೀತಿಯ ಅಧಿಕೃತವಾದ ಸಭೆ ನಡೆದಿಲ್ಲವೆಂದು ಮಾಹಿತಿ ಹಕ್ಕಿನ ದಾಖಲೆ ನೀಡಿ.ನ್ಯಾಯಾಧೀಶರಿಗೆ ಮನವರಿಕೆ ಮಾಡಿದರು. ಪೋಲೀಸರು ಪ್ರಮಾಣಿಕವಾಗಿ ತನಿಖೆಯ ಮಾಡಿಲ್ಲ, ಪುರಸಭೆ ಯಲ್ಲಿದ್ದ ಸಿಸಿಟಿವಿಯನ್ನು ಸಾಕ್ಷಿಯನ್ನಾಗಿ ಸ್ವೀಕರಿಸಿಲ್ಲ ಎಂದು ವಾದಿಸಿದರು. ಸಂಪೂರ್ಣವಾಗಿ ಸುಳ್ಳು ಸಾಕ್ಷಿ ಹೇಳಿದ್ದ ಚಂದ್ರಶೇಖರ್ ಮತ್ತು ಸೋಮಶೇಖರ್ ರವರು ಅಂದು ಪುರಸಭೆಯಿಂದ ಎರಡು ಕಿಮಿ ದೂರದ ಆಚಂಗಿ ಬಡಾವಣೆಯಲ್ಲಿಮಧ್ಯಾಹ್ನ 12 ಗಂಟೆಯವರೆಗೆ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಹಕ್ಕಿನಲ್ಲಿ ಪಡೆಯಲಾಗಿದ್ದ ದಾಖಲೆಯನ್ನು ಪ್ರದರ್ಶಿಸಿದರು.ಭಾರತೀಯ ದಂಡ ಸಂಹಿತೆಯ ಕಲಂ504 ಸೆಕ್ಷನ್ ಆಗಿತ್ತು ಇದು ಪ್ರಚೋದನೆಗೆ ನೀಡಲಾಗಿದೆ ಎಂಬುದಾಗಿತ್ತು. ಪ್ರಕರಣದಲ್ಲಿ ಯಾವುದೇ ರೀತಿಯ ಪ್ರಚೋದನೆ ಗಲಾಟೆಗಳು ಸಹ ನಡೆಯದೇ ಇರುವುದರಿಂದ ಸದರಿ ಕಲಂ ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ವಾದಿಸಿದರು. ಭಾರತೀಯ ದಂಡ ಸಂಹಿತೆವ ಕಲಂ 114 ಸಾರ್ವಜನಿಕವಾಗಿ ಅಸಭ್ಯವಾಗಿ ಅಶ್ಲೀಲ ಪದಗಳಿಂದ ತೆಗಳಲಾಹಿದೆ ಎಂಬುದಾಗಿತ್ತು ಆದರೆ ಈ ರೀತಿಯ ಯಾವುದೇ ಪದ ಕಕ್ಷಿದಾರರು ಬಳಸಿಲ್ಲ ಎಂದು ನಿರೂಪಿಸಿದರು
ಭಾರತೀಯ ದಂಡ ಸಂಹಿತೆವ ಸಹ ಕಲಂ 34 ಇದರ ಅನ್ವಯ ಹಲವು ಜನರು ಸೇರಿ ಕೃತ್ಯವನ್ನು ಎಸಗಿದ್ದಾರೆ ಎಂದು ಆದರೆ ಈ ಪ್ರಕರಣದಲ್ಲಿ ಒಬ್ಬರ ಮೇಲೆ ಮಾತ್ರ ಪ್ರಕರಣ ದಾಖಲಾಗಿತ್ತು.ಈ ಕಲಂ ಸಹ ಅನ್ವಯವಾಗುವುದಿಲ್ಲ ಎಂದು ವಾದಿಸಿದ್ದರು.
ಹೀಗೆ ಅನೇಕ ಪ್ರಮುಖ ಅಂಶಗಳನ್ನು ಕಲೆ ಹಾಕಿ ವಕೀಲ ರಾದ ಕೃಷ್ಣ ಸಮರ್ಪಕವಾಗಿವಾದ ಮಂಡಿಸಿದರು.
ಸುದೀರ್ಘ ವಿಚಾರಣೆ ನಂತರ ಜೆ ಎಂ ಎಫ್ ಸಿ ನ್ಯಾಯದೇಶೆ ಪೂರ್ಣಿಮಾ ರವರು 7 ಅಕ್ಟೋಬರ್ 2021ರಂದುಕೇಸಿನಂದ ಖುಲಾಸೆ ಗೊಳಿಸಿದರು.
ಈ ಮಧ್ಯೆ ಬುಟ್ಟಿ ಹೆಣೆಯುವ ಜೀವನದಲ್ಲಿ ಅನೇಕ ಅಹಿತಕರ ಘಟನೆಗಳು ನಡೆದವು.ಎರಡು ಹೆಣ್ಣು ಮಕ್ಕಳು ಸೇರಿದಂತೆ ಗಂಡು ಮಗುವಿನ ತಂದೆಯಾಗಿದ್ದ ಉಮೇಶ ಸಂಕಷ್ಟಕ್ಕೆ ಈಡಾಗಿದ್ದ.ಉಮೇಶನಿಗೆ ಬುಟ್ಟಿ ಮಾರಾಟಮಾಡಲು ಯಾವುದೇ ಸ್ಥಳ ಸಿಗದಿದ್ದಾಗ. ಹೇಮಾವತಿ ಸೇತುವೆಯ ಬಲಭಾಗದ ಗುಂಡಿ ಒಂದರಲ್ಲಿ ಗುಡಿಸಲು ನಿರ್ಮಿಸಿ ಕೊಂಡು ವ್ಯಾಪಾರ ಮಾಡಲು ಮುಂದಾಗಿದ್ದಆದರೆ ವ್ಯವಹಾರ ಇವನಿಗೆ ಕೈ ಹಿಡಿಯಲಿಲ್ಲ. ಪಾಪಿಗಳ ಕಿರಿಕ್ ಇಷ್ಟಕ್ಕೆ ಮುಗಿದಿರಲಿಲ್ಲ. ಈ ಸ್ಥಳದಲ್ಲಿದ್ದ ಗುಡಿಸಿಲಿಗೆ ಬೆಂಕಿ ಹಚ್ಚಿದ್ದರು. ಇದೇ ಕೊರಗಿನಲ್ಲಿ 40 ವರ್ಷ ವಯಸ್ಸಿನ ಉಮೇಶ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ.ಈತನ ಕುಟುಂಬ ಅಈಗ ಬೀದಿಪಾಲಾಗಿದೆ.ಕಾಕತಾಳಿಯವೆಂಬಂತೆ ಉಮೇಶ ತೀರಿಹೋದ ಎಂಟು ದಿನಗಳ ನಂತರ ಮುಖ್ಯಧಿಕಾರಿ ವಿಲ್ಸನ್ ರವರು ಸಹ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಬುಟ್ಟಿ ಹಿಡಿಯುವವರು ಪರಿಶಿಷ್ಟ ಪಂಗಡದ ಕೊರಮ ಸಮುದಾಯಕ್ಕೆ ಸೇರಿದ ಜನಾಂಗದವರಾಗಿದ್ದರು. ಸರಕಾರಗಳು ಇವರಿಗೆ ಅನೇಕ ಸೌಲಭ್ಯಗಳು, ಮೀಸಲಾತಿ ನೀಡಿದೆ ಎಂದು ಹೇಳುತ್ತದೆ. ಇವರಿಗೆ ಯಾವುದೇ ರೀತಿಯ ಸೌಲಭ್ಯಗಳು ಇಲ್ಲ, ಇವರಲ್ಲಿ ಅನೇಕರಿಗೆ ಮತದಾರರ ಪಟ್ಟಿ, ಪಡಿತರ ಚೀಟಿ,ಆಧಾರ್ ಕಾರ್ಡುಗಳು ಸಹ ಇಲ್ಲ.ಇವರ ಜೀವನ ಮಟ್ಟ ಸುಧಾರಿಸಲು ಅನೇಕಬಾರಿ ಸಂಜೆ ವೇಳೆಯಲ್ಲಿ ಬುಟ್ಟಿ ಹೆಣೆಯುವ ಕುಟುಂಬ ಗಳನ್ನು ಒಟ್ಟಿಗೆ ಸೇರಿಸಿ ಅರಿವಿನ ಕಾರ್ಯಕ್ರಮ, ಸಭೆಗಳನ್ನು ನಾನು ಮತ್ತು ಮಿತ್ರರು ನಡೆಸುತ್ತಿದ್ದೇವು.ಈ ರೀತಿಯಾಗಿ ಗುಡಿಸಿನಲ್ಲಿ ಬದುಕುವುದಕ್ಕಿಂತ ಬಾಡಿಗೆ ಮನೆಗಳಲ್ಲಿ ಕನಿಷ್ಠ ಬಾಡಿಗೆಯಲ್ಲಿ ಬದುಕುವಂತೆ ತಿಳಿಹೇಳಿದೆ.ನಿಮಗೆ ಕಷ್ಟಗಳು ಸಾಕು ನಿಮ್ಮ ಮಕ್ಕಳು ಸುಖವಾಗಿ ಬಾಳಬೇಕು ಅದಕ್ಕಾಗಿ ಮುಂದಾಗಿ ಎಂದು ಹೇಳಿ ಬಾಡಿಗೆ ಮನೆಯಲ್ಲಿ ವಾಸಿಸುವ ಸಲಹೆ ನೀಡಿದೆ. ಇವರಿಗೆ ಸುಲಭವಾಗಿ ಮನೆಗಳು ಸಿಗುತ್ತಿರಲಿಲ್ಲ. ಮನೆ ಮಾಲಿಕರೊಂದಿಗೆ ಮಾತನಾಡಿ ಮನವಲಿಸಿ ಮನೆ ಬಾಡಿಗೆ ಸಿಗುವಂತೆ ಮಾಡಿದೆ. ಉಮೇಶನ ಕುಟುಂಬ ಮಹೇಶ್ವರಿ ನಗರದ ಬಾಡಿಗೆ ಮನೆಯೊಂದರಲ್ಲಿ ಬದುಕುತ್ತಿದೆ. ಆತನನ ಎರಡು ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹಿರಿಯ ಮಗ ಎಸ್ ಎಸ್ ಎಪ್ ಸಿ ಪಾಸಾದರು ಕಾಲೇಜಿಗೆ ಹೋಗದೆ ಕೆಲಸಕ್ಕೆ ಹೋಗುತ್ತಿದ್ದೇನೆ.ಉಮೇಶ ಪತ್ನಿ ನೇತ್ರ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳೆ.ಊರಿನಲ್ಲಿ ಬುಟ್ಟಿ ಹೆಣೆಯುವ ನಾಲ್ಕು ಕುಟುಂಬ ಗಳು ಮಾತ್ರ ಇವೆ. ಉಳಿದವರು ಹೋಟ್ಟೆಪಾಡಿಗಾಗಿ ಪರಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ.ಯಾವುದೇ ಶುಲ್ಕವಿಲ್ಲದೆ ವಕೀಲ ರಾಮಕೃಷ್ಣ ಬಹಳಷ್ಟು ಶ್ರಮಪಟ್ಟು ಈ ಕೇಸನ್ನು ಗೆದ್ದು ಕೊಟ್ಟಿದ್ದಾರೆ.ನಾನು ಕೇಸಿನಲ್ಲಿ ಸಿಕ್ಕಿಕೊಳ್ಳುತ್ತಾನೆ. ಜೈಲಿಗೆ ಹೋಗುತ್ತದೆ ಎಂದು ನಂಬಿದ್ದ ಅನೇಕರಿಗೆ ನಿರಾಸೆ ಮಾಡಿದ್ದಾರೆ ವಕೀಲ ರಾದ ಕೃಷ್ಣ. ಇದೆಲ್ಲವೂ ಕಣ್ಣಂಚಿನಲ್ಲಿ ಮತ್ತೆ ಮರುಕಳಿಸಿದ್ದು ಸಿನಿಮಾವನ್ನು ನೋಡಿದ ನಂತರ ವಕೀಲರಾದ ಕೃಷ್ಣರಿಗೆ ನನ್ನ ಜೈ ಬೀಮ್ ವಂದನೆಗಳು.ರಾದಕೃಷ್ಣ ರ ಬಗ್ಗೆ…..ವಕೀಲ ರಾದಕೃಷ್ಣ ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಕೃಷ್ಣ ಪುರ ಗ್ರಾಮದವರು. ನನ್ನ ಮತ್ತು ಇವರ ಸಂಭಾಷಣೆ ಪೋನಿನಲ್ಲಿ ಪ್ರಾರಂಭವಾಗುವುದು. ಜೈ ಭೀಮ್, ಜೈ ಭಾರತ್ ಎಂದು. ಬಹುಜನ ಚಳವಳಿ ಮೂಲಕ ಇವರ ಪರಿಚಯವಾಯಿತು. ಇವರದು ಹೋರಾಟದ ಮನಸ್ಸು, ಚಳವಳಿಗಳಲ್ಲಿ ಭಾಗವಹಿಸುತ್ತಾರೆ , ಸಮಾವೇಶಗಳಲ್ಲಿ ವಿಚಾರ ಸಂಕಿರಣಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಅರ್ಥಿವಾಗಿಯು ಸಹಾಯಮಾಡುತ್ತಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ವ್ಯಕ್ತಿಗಳ ಕೇಸನ್ನು ಸಂಭಾವನೆ ಪಡೆಯದೆ ನಡೆಸುತ್ತಾರೆ.
# ಮಲ್ನಾಡ್ ಮೆಹಬೂಬ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.