(www.vknews.com) ; ಮಕ್ಕಳು ಮನೆಯ ಬೆಳಕು.ಮನಸ್ಸಿನ ನೋವು,ದುಮ್ಮಾನಗಳಿಗೆ ಮಕ್ಕಳ ತುಂಟಾಟ,ನಗು,ಮುದ್ದು ಮಾತುಗಳೇ ಔಷಧ.ಮಕ್ಕಳ ವಿಷಯದಲ್ಲಿ ಎಲ್ಲಾ ಹೆತ್ತವರು ಸ್ವಾರ್ಥರೆ.ಅವರಿಗೆ ಸ್ವಲ್ಪ ನೋವಾದರೂ ಕರುಳು ಚುರ್ರೆನ್ನುತ್ತದೆ.ಅವರ ಸಣ್ಣ ಪುಟ್ಟ ಸಂತೋಷವು ಹೆತ್ತವರ ಮನಸ್ಸಿಗೆ ಬಹಳ ಮುದ ನೀಡುತ್ತದೆ.ಸದಾ ಮಕ್ಕಳ ಏಳಿಗೆಗಾಗಿ ಪ್ರಾರ್ಥಿಸುತ್ತಲೇ ಇರುತ್ತೇವೆ.ಮಕ್ಕಳ ತುಂಟಾಟ,ಜಗಳಕ್ಕೆ ಬೈಗುಳ,ಹೊಡೆತ,ರೇಗಾಟಗಳೆಲ್ಲವೂ ಪ್ರತೀ ಮನೆಯಲ್ಲಿದ್ದರೂ ಸ್ವಲ್ಪ ಸಮಯದ ನಂತರ ಏನೂ ಆಗಿಲ್ಲವೆಂಬ ಭಾವ ,ಹಾಗೂ ಹಗೆತನವಿಲ್ಲದಿರುವುದು ಹೆತ್ತವರ ಹಾಗೂ ಮಕ್ಕಳ ಬಾಂಧವ್ಯ ದಲ್ಲಿ ಮಾತ್ರ.ನಾವು ಎಷ್ಟೇ ದೊಡ್ಡವರಾದರೂ ಮಗುವಿನಂತಿರಬೇಕು ಎಂದು ಹೇಳುವುದನ್ನು ಕೇಳಿದ್ದೇವೆ.ಯಾಕೆಂದರೆ ದ್ವೇಷ,ಅಸೂಯೆ ಯಾವುದೂ ಇಲ್ಲದ ಮಗುವಿನ ಮನಸ್ಸು ನಿಷ್ಕಲ್ಮಶ.ತನ್ನನ್ನು ಪ್ರೀತಿಸುವವರ ಜೊತೆ ಬೆರೆಯುತ್ತಾ ,ಕೋಪಿಸುತ್ತಾ ಬೈಯುವವರಿಂದ ದೂರವಿರುತ್ತಾರೆ.
ಎಲ್ಲರೂ ಗಮನಿಸಿರಬಹುದು.ನಾವು ಅತ್ತಾಗ ಮಕ್ಕಳು ನಮ್ಮೊಂದಿಗೆ ಸೇರಿ ಅಳುವರು.ಕೆಲವೊಮ್ಮೆ ನಾವು ನೋವಲ್ಲಿದ್ದರೆ ಸಣ್ಣ ಮಕ್ಕಳು ಹೇಳುವ ಸಾಂತ್ವನ,ಅನಾರೋಗ್ಯದಲ್ಲಿದ್ದರೆ ಅವರು ತೋರಿಸುವ ಕಾಳಜಿಗೆ ನಾವು ಭಾವುಕರಾಗುತ್ತೇವೆ.ಅದೇ ಮಕ್ಕಳು ಬೆಳೆಯುತ್ತಾ ಉನ್ನತ ವ್ಯಾಸಂಗ,ಉದ್ಯೋಗ,ಮದುವೆ,ಸಂಸಾರವೆಂದು ನಮ್ಮಿಂದ ಒಬ್ಬೊಬ್ಬರಾಗಿ ದೂರ ಸರಿಯುವರು.ಮಕ್ಕಳು ತಮ್ಮ ಸ್ವಂತ ಮನೆಗೆ ಅತಿಥಿಯಾಗಿ ಬರುವ,ಅವರನ್ನು ಆತುರದಿಂದ ಕಾಯುವ ದಿನವೂ ಬರುವುದು. ಸದಾ ತನ್ನ ಕಣ್ಣ ಮುಂದೆಯೇ ಮಕ್ಕಳಿರಬೇಕೆಂದು ಬಯಸುವ ಎಲ್ಲಾ ಹೆತ್ತವರಿಗೂ ಇದು ಅರಗಿಸಿಕೊಳ್ಳಲಾಗದಿದ್ದರೂ ಅನಿವಾರ್ಯವಾಗಿ ಒಪ್ಪಿಕೊಳ್ಳ ಬೇಕಾಗಿದೆ.
ಹಾಗಾಗಿ ಮಕ್ಕಳು ನಮ್ಮೊಂದಿಗಿರುವಷ್ಟು ದಿನ ಅವರನ್ನು ಸಂತೋಷವಾಗಿರಿಸಲು ಪ್ರಯತ್ನಿಸುವ.ತಂದೆ-ತಾಯಿಯ ಜಗಳದಿಂದ ಮಕ್ಕಳು ಕುಗ್ಗಿಹೋಗಬಾರದು.ಏನೇ ಮನಸ್ತಾಪ ,ಜಗಳವಿದ್ದರೂ ಮಕ್ಕಳ ಮುಂದೆ ತಾಳ್ಮೆ ವಹಿಸುವ.ಮಕ್ಕಳೊಂದಿಗೆ ಜೊತೆಯಾಗಿ ಬೆರೆಯುವ ಈ ಬಹು ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಮಕ್ಕಳಿಗೆ ಧಾರ್ಮಿಕ,ಲೌಕಿಕ ಶಿಕ್ಷಣದ ಜೊತೆಗೆ ಬದುಕಿನಲ್ಲಿ ಅತೀ ಮುಖ್ಯವಾಗಿ ಬೇಕಾಗುವ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವ.ಸರಳ ಜೀವನವನ್ನು ಪ್ರೋತ್ಸಾಹಿಸುವ.ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದಿರುವ ಪಾಠ ಕಲಿಸುವ.ಅಲ್ಲಾಹು ತೌಫೀಕ್ ನೀಡಲಿ(ಆಮೀನ್).ನಮ್ಮೆಲ್ಲರ ಮಕ್ಕಳನ್ನು ಅಲ್ಲಾಹನು ಅನುಗ್ರಹಿಸಲಿ.ಎಲ್ಲಾ ಮುದ್ದು ಚಿಣ್ಣರಿಗೂ ನಿಮ್ಮ ದಿನದ ಶುಭಾಷಯಗಳು.
✍️ ರಹ್ಮತ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.