(www.vknews.com) ; ಮೊನ್ನೆ ದಿನ ಸ್ಕೂಲ್ ಬಸ್ ಮಿಸ್ಸಾಯಿತು ಎಂಬ ಕಾರಣಕ್ಕಾಗಿ ನೊಂದುಕೊಂಡು ಒಂಬತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಇದು ಅತ್ಯಂತ ಆಘಾತಕಾರಿ ವಿಚಾರವಾಗಿದೆ. ಮಕ್ಕಳ ಸೂಕ್ಷ್ಮ ಮನಸ್ಸುಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬುವುದು ಹೆತ್ತವರ ಪಾಲಿಗೆ ಸವಾಲಾಗಿ ಬಿಟ್ಟಿದೆ. ಮಕ್ಕಳಿಗೆ ಗದರಿಸಿದರೆ, ಬೈದರೆ, ಜೋರು ಮಾಡಿದರೆ ಏನು ಮಾಡಿಕೊಳ್ಳುತ್ತಾರೋ ಎಂಬ ಆತಂಕದಲ್ಲಿ ಬಹಳಷ್ಟು ಹೆತ್ತವರಿದ್ದಾರೆ. ಸಣ್ಣ ಸಣ್ಣ ವಿಚಾರಗಳಿಗೆ ಕೋಪಗೊಂಡು, ನೊಂದುಕೊಂಡು ಚಿಕ್ಕ ಚಿಕ್ಕ ಮಕ್ಕಳು ತಮ್ಮ ಅಮೂಲ್ಯವಾದ ಪ್ರಾಣವನ್ನು ತಮ್ಮ ಕೈಯಾರೆ ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ಕೊಡಲಿಲ್ಲ, ಕೇಳಿದ ಬೈಕ್ ಕೊಡಲಿಲ್ಲ, ಫಿಜ್ಜಾ ಬರುವಾಗ ತಡವಾಯಿತು, ಅಪ್ಪ ಗದರಿಸಿದರು, ಯಾರೋ ಅವಮಾನದ ಮಾತುಗಳನ್ನು ಆಡಿದರು, ಪರೀಕ್ಷೆಯಲ್ಲಿ ನಿರೀಕ್ಷಿಸಿದ ಅಂಕ ಬರಲಿಲ್ಲ , ನೀಟ್ ನಲ್ಲಿ ಒಳ್ಳೆಯ ರ್ಯಾಂಕ್ ಬರಲಿಲ್ಲ ಲವ್ ಕೈಕೊಟ್ಟಿತು, ಹೀಗೆ ಸಣ್ಣ ಸಣ್ಣ ವಿಚಾರಕ್ಕಾಗಿ ದುಡುಕಿ ತಪ್ಪು ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳ ಬಗ್ಗೆ ಹೆತ್ತವರಾದ ನಾವು ಬಹಳಷ್ಟು ಎಚ್ಚರಿಕೆ ವಹಿಸಬೇಕಾಗಿದೆ.
ಮಕ್ಕಳಿಗೆ ಸೋಲನ್ನು ಸ್ವೀಕರಿಸಲು ಕಲಿಸಿ
ಆ ಬಸ್ಸು ಮಿಸ್ಸಾದುದು ಅತ್ಯಂತ ಸಣ್ಣ ವಿಷಯ. ಆದರೆ ಆ ಹುಡುಗ ಪ್ರತಿಭಾವಂತ ಮತ್ತು ತರಗತಿಯಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಿದ್ದ. ಆ ದಿನದ ತರಗತಿ ಮಿಸ್ಸಾಯ್ತು, ಆದ್ದರಿಂದ ನನ್ನ ಕಲಿಕೆಗೆ ತೊಂದರೆಯಾಗಿ ನನ್ನ ಪ್ರಥಮ ಸ್ಥಾನ ಕಳೆದುಕೊಂಡು ಬಿಡುತ್ತೇನೋ ಎನ್ನುವ ಆತಂಕ ಆ ಬಾಲಕನಿಗೆ ಇದ್ದುದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು . ಬಹುಶಃ ಗೆಲುವಿನ ಓಟವನ್ನು ಮಾತ್ರ ಕಂಡಿದ್ದ ಆತನಿಗೆ ಸೋಲು ಎಂಬುದನ್ನು ಕಲಿಸಿರಲಿಕ್ಕಿಲ್ಲ. ಯಾವಾಗಲೂ ಪ್ರಥಮ ಸ್ಥಾನವನ್ನೇ ಪಡೆಯಬೇಕು, ಎಲ್ಲರಿಗಿಂತ ಮುಂದೆ ಇರಬೇಕು ಎನ್ನುವ ಒತ್ತಡ ಇದ್ದಿರಬಹುದು.
ಮಕ್ಕಳಿಗೆ ಗೆಲುವಿನ ಹಾಗೆ ಸೋಲು ಕೂಡ ಸಹಜ ಎಂಬುದನ್ನು ಕಲಿಸಿಕೊಡಬೇಕು. ಸೋಲನ್ನು ಸ್ವೀಕರಿಸುವ ಧೈರ್ಯವನ್ನು ತುಂಬಬೇಕು. ಈ ಜಗತ್ತಿನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಕ್ರೀಡಾ ತಾರೆಗಳು, ಶ್ರೀಮಂತ ಉದ್ಯಮಿಗಳು ತಮ್ಮ ಪ್ರಥಮ ಸ್ಥಾನವನ್ನು ಕಳೆದುಕೊಂಡಿರುತ್ತಾರೆ. ಪರಿವರ್ತನೆ ಜಗದ ನಿಯಮ. ಮೇಲಕ್ಕೆ ಏರಿದವನು ಕೆಳಕ್ಕೆ ಇಳಿಯಲೇಬೇಕು. ಉದಯಿಸಿದ ಸೂರ್ಯ ಅಸ್ತಮಿಸಲೇಬೇಕು. ಹಾಗೆ ನಮ್ಮ ಬದುಕಿನಲ್ಲಿ ಸೋಲು ಕೂಡ ಕೆಲವೊಮ್ಮೆ ಬರುತ್ತದೆ. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಧೈರ್ಯ ತುಂಬುವ ಕೆಲಸ ಹೆತ್ತವರು ಮಾಡಲೇಬೇಕು. ಸೋತವರು ಮತ್ತೆ ಗೆದ್ದು ಎದ್ದು ನಿಂತಿದ್ದಾರೆ. ಈ ಜಗತ್ತಿನಲ್ಲಿ ಅವಕಾಶಗಳು ಮತ್ತೆ ಮತ್ತೆ ಸಿಗುತ್ತವೆ ಎನ್ನುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು.
ಮಕ್ಕಳು ಕೇಳಿದ್ದನ್ನೆಲ್ಲ ಕೊಡುವುದು ಪ್ರೀತಿಯಲ್ಲ.
ಪ್ರೀತಿ ಅಂದರೆ ಮಕ್ಕಳು ಕೇಳಿದ್ದನ್ನೆಲ್ಲ ಕೊಡುವುದು ಎಂದು ಕೆಲವು ಹೆತ್ತವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಮಕ್ಕಳನ್ನು ಪ್ರೀತಿಸುವುದು ಅಂದರೆ ಮಕ್ಕಳನ್ನು ಅವರ ಸ್ವಂತ ಕಾಲಿನಲ್ಲಿ ನಿಲ್ಲುವಂತೆ ಮಾಡುವುದು. ಅವರ ಕೆಲಸವನ್ನು ಅವರೇ ಮಾಡುವಂತೆ ಪ್ರೇರೇಪಿಸುವುದು. ಮಗು ಕೇಳಿದ್ದನ್ನೆಲ್ಲ ಕೊಡುತ್ತಾ ಹೋದರೆ ಮುಂದೊಂದು ದಿನ ಮಗುವಿನ ಯಾವುದೋ ಬೇಡಿಕೆಯನ್ನು ಈಡೇರಿಸಲು ಹೆತ್ತವರಿಗೆ ಸಾಧ್ಯವಾಗುವುದಿಲ್ಲ. ಆಗ ಮಗು ನಿರಾಶೆಯಿಂದ ತನ್ನ ಬದುಕಿಗೆ ಅಂತ್ಯ ಹಾಡಿರುವ ಅನೇಕ ಜೀವಂತ ಘಟನೆಗಳು ನಮ್ಮ ಕಣ್ಣ ಮುಂದಿವೆ.
ಮಕ್ಕಳನ್ನು ಇರುವುದರ ನಡುವೆ ಬದುಕಲು ಕಲಿಸಿ
ಮಕ್ಕಳಿಗೆ ಕೊಡಬಹುದಾದ ಅತ್ಯಂತ ಉತ್ತಮ ಉಡುಗೊರೆ ಅಂದರೆ ಆ ಮಗುವನ್ನು ಇರುವುದರ ನಡುವೆ ಬದುಕಲು ಕಲಿಸುವುದು. *ಆಗ ಆ ಮಗು ಯಾವುದೇ ಪ್ರತಿಕೂಲ ಸನ್ನಿವೇಶದಲ್ಲೂ ಬದುಕುವ ಗುಣವನ್ನು ಪಡೆಯುತ್ತದೆ. ಹೊಂದಾಣಿಕೆಯ, ಹೋರಾಟದ ಸ್ವಭಾವವನ್ನು ರೂಢಿ ಮಾಡಿಕೊಳ್ಳುತ್ತವೆ. ಇಲ್ಲದೇ ಹೋದರೆ ತಾನು ಎನಿಸಿದಂತೆ ಈ ಪ್ರಪಂಚ ಇಲ್ಲ ಎಂಬ ಕಾರಣಕ್ಕಾಗಿ ನೊಂದುಕೊಂಡು ಜೀವ ಕಳೆದುಕೊಳ್ಳುವ ಹಂತಕ್ಕೆ ಬರುತ್ತವೆ.
ಒಂದು ಸರ್ಕಸ್ ಕಂಪೆನಿಯಲ್ಲಿ ಬಹಳಷ್ಟು ಪ್ರಾಣಿಗಳಿದ್ದವು. ಅಲ್ಲಿ ಸಿಂಹಗಳು ಇದ್ದವು. ಆ ಸರ್ಕಸ್ ಕಂಪೆನಿಗೆ ಕಾಲಕ್ರಮೇಣ ನಷ್ಟವುಂಟಾಗಿ ಮುಚ್ಚುವ ಹಂತಕ್ಕೆ ಬಂತು. ಅಲ್ಲಿದ್ದ ಸಿಂಹಗಳನ್ನು ದಟ್ಟ ಅರಣ್ಯಕ್ಕೆ ಬಿಡಲಾಯಿತು. ಆ ಸಿಂಹಗಳನ್ನು ಕಾಡಿನಲ್ಲಿರುವ ಬೇಟೆನಾಯಿಗಳು ಕೊಂದು ಹಾಕಿದವು. ಕಾಡಿನ ರಾಜನಾದ ಸಿಂಹಗಳಿಗೆ ಈ ಪರಿಸ್ಥಿತಿ ಯಾಕೆ ಬಂತು.?
ಯಾಕಂದರೆ ಸರ್ಕಸ್ ನಲ್ಲಿದ್ದ ಆ ಸಿಂಹಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ ಸಿಗುತ್ತಿತ್ತು. ತಿನ್ನುವುದು, ಸರ್ಕಸ್ ಮಾಡುವುದು ಮತ್ತು ನಿದ್ರಿಸುವುದು ಮಾತ್ರ ಅದರ ಜೀವನವಾಗಿತ್ತು. ಬೇಟೆಯಾಡುವುದು, ಓಡುವುದು, ಬೆನ್ನಟ್ಟುವುದು, ಗರ್ಜಿಸುವುದು ಎಲ್ಲಾ ಮರೆತುಹೋಗಿತ್ತು. ಇದರಿಂದ ಸಿಂಹಕ್ಕೆ ತಾನು ಯಾರು? ತನ್ನ ತಾಕತ್ತು ಏನು? ತನ್ನ ಪ್ರತಿಭೆ ಏನು? ಹೀಗೆ ಎಲ್ಲವೂ ಮರೆತು ಹೋಗಿತ್ತು. ಬೇಟೆಯಾಡುವುದು ಸಹ ಮರೆತುಹೋಯ್ತು.
ನಮ್ಮ ಮಕ್ಕಳನ್ನು ಶಿಕಾರ್ ಕಾ ಶೇರ್ ಮಾಡಬೇಕೆ ಹೊರತು ಸರ್ಕಸ್ ಕಾ ಶೇರ್ ಮಾಡಬಾರದು . ಅವರ ಬೇಟೆಯನ್ನು ಅವರೇ ಆಡಬೇಕು. ಅವರ ಬದುಕನ್ನು ಅವರೇ ರೂಪಿಸಿಕೊಳ್ಳಬೇಕು. ಅವರಲ್ಲಿ ಸಾಧನೆಯ ಛಲ, ಬದುಕಿನ ಗುರಿ ಎಲ್ಲ ಸ್ವಯಂ ಆಗಿ ಹುಟ್ಟಿಕೊಳ್ಳಬೇಕು. ಅವರು ಕೇಳಿದ್ದನ್ನೆಲ್ಲ ಕೊಡುತ್ತ ಹೋದರೆ? ಅವರು ಮಾಡಬೇಕಾದ ಕೆಲಸವನ್ನೆಲ್ಲ ನಾವೇ ಮಾಡುತ್ತಾ ಹೋದರೆ? ನನಗೇನೂ ತೊಂದರೆಯಿಲ್ಲ, ಎಲ್ಲಾ ಅಪ್ಪ ಬೇಕಾದಷ್ಟು ಮಾಡಿಟ್ಟಿದ್ದಾರೆ ಎಂಬ ಭಾವನೆ ಮೂಡಿಸಿದರೆ? ಅವರು ಸರ್ಕಸ್ ಕಾ ಶೇರ್ ಆಗಿ ಬಿಡುತ್ತಾರೆ.
ನಮ್ಮ ಮಕ್ಕಳು ಶಿಕಾರ್ ಕಾ ಶೇರ್ ಆಗಲು ಬೇಕಾದ ಜ್ಞಾನ, ಆತ್ಮವಿಶ್ವಾಸ,ಪರಿಸರ, ಸಂಪನ್ಮೂಲ, ಪ್ರೀತಿ, ಆಸರೆ ಎಲ್ಲವನ್ನು ಗರಿಷ್ಠವಾಗಿ ಹೆತ್ತವರು ಕೊಡಬೇಕು.
ಒಬ್ಬ ತಂದೆ ಮತ್ತು ತಾಯಿ ತನ್ನ ಮಕ್ಕಳಿಗೆ ಕೊಡಬಹುದಾದ ಅತ್ಯಂತ ಶ್ರೇಷ್ಠ ಉಡುಗರೆ ಅಂದರೆ ತನ್ನ ಮಕ್ಕಳನ್ನು ಸ್ವತಂತ್ರವಾಗಿ ಅವರ ಕಾಲುಗಳಲ್ಲಿ ನಿಲ್ಲುವಂತೆ ಮಾಡುವುದು. ಅವರಲ್ಲಿ ಯೋಚನೆಗಳನ್ನು ಮತ್ತು ಸೃಜನಶೀಲತೆಯನ್ನು ಬೆಳೆಸುವುದು.ಅವರಲ್ಲಿ ದೇವಭಯ (ತಖ್ವಾ), ತಾಳ್ಮೆ, ಪರೋಪಕಾರ, ಗೌರವ, ನ್ಯಾಯ, ನೀತಿ, ಸತ್ಯ, ಧರ್ಮದ ಮೌಲ್ಯಗಳನ್ನು ಅವರ ಜೀವನದಲ್ಲಿ ಅಂತರ್ಗತವಾಗುವಂತೆ ಮಾಡುವುದು.
ನಮ್ಮ ಮಗುವಿನ ಜೀವ ಅತ್ಯಂತ ಅಮೂಲ್ಯ. ಮಕ್ಕಳ ಭಾವನೆಗಳನ್ನು ಗೌರವಿಸೋಣ. ಅವರ ಗೆಲುವಿನ ಜತೆಗೆ ಸೋಲನ್ನು ಸಂಭ್ರಮಿಸೋಣ. ಜೀವದ ಬೆಲೆಯನ್ನು ತಿಳಿಸಿಕೊಡೋಣ. ಮಗುವನ್ನು ಇದ್ದಂತೆ ಇದ್ದಹಾಗೆ ಸ್ವೀಕರಿಸೋಣ.
ಫೇಲಾದರೆ ಮತ್ತೆ ಪಾಸಾಗಬಹುದು .ಸೋಲಾದರೆ ಮತ್ತೆ ಗೆಲ್ಲಬಹುದು.ನಷ್ಟವಾದರೆ ಮತ್ತೆ ಲಾಭ ಪಡೆಯಬಹುದು.ಬಿದ್ದರೆ ಮತ್ತೆ ಎದ್ದು ನಿಲ್ಲಬಹುದು.ಆದರೆ ಪ್ರಾಣ ಹೋದರೆ ಮತ್ತೆ ಬರಲಾರದು.
ನಮ್ಮೆಲ್ಲರ ಮಕ್ಕಳನ್ನು ಆ ಸರ್ವಶಕ್ತನು ಕಾಪಾಡಲಿ. ಆಮೀನ್
✒️ ರಫೀಕ್ ಮಾಸ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.