(www.vknews.com) ; ಬದಲಾದ ಸನ್ನಿವೇಶದಲ್ಲಿ ದೇಶದ ಮುಸ್ಲಿಮರು ತಮ್ಮ ಕರ್ತವ್ಯಗಳನ್ನು ನಿಭಾಯಿಸದೇ ಕೇವಲ ಇತರರನ್ನು ದೂಷಿಸುತ್ತಲೇ ಕಾಲಕಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ದೇಶ ಕಟ್ಟುವ ಕಾಯಕದಲ್ಲಿ ಹೆಚ್ಚು ಹೆಚ್ಚು ತೊಡಗಿಸಿ ಕೊಳ್ಳುವುದರಿಂದ ಮುಸ್ಲಿಮರು ಮುಖ್ಯವಾಹಿನಿಯಲ್ಲಿ ಗುರುತಿಸಿ ಕೊಂಡು ಸ್ವಾಭಿಮಾನದ ಬದುಕು ಕಟ್ಟಿ ಬಲಿಷ್ಟವಾಗಲು ಸಾಧ್ಯವಾಗುತ್ತದೆ ಎಂದು ಮುಲ್ಕಿ ಜುಮಾ ಮಸೀದಿಯ ಖತೀಬ್ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಸಂವಿಧಾನ ದಿವಸ್ ಆಚರಿಸುವ ಈ ಸಂಧರ್ಭದಲ್ಲಿ ನಾವು ಆತ್ಮಾವಲೋಕನ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಸಂವಿಧಾನವನ್ನು ಜಾರಿಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಶಾಸಕಾಂಗದಲ್ಲಿ ಮುಸ್ಲಿಮರನ್ನು ವ್ಯವಸ್ಥಿತವಾಗಿ ತುಳಿಯಲಾಗುತಿದ್ದರೂ ನ್ಯಾಯಾಂಗ ಮತ್ತು ಕಾರ್ಯಾಂಗದಲ್ಲಿ ನಮಗೆ ವಿಫುಲ ಅವಕಾಶಗಳಿವೆ. ಆದಾಗ್ಯೂ ಅದನ್ನು ಸದುಪಯೋಗ ಪಡಿಸುವುದರಲ್ಲಿ ಸಮಾಜ ಹಿಂದೆ ಬಿದ್ದದ್ದನ್ನು ಒಪ್ಪಿ ಕೊಳ್ಳಲೇ ಬೇಕಿದೆ. ಅದರಂತೆ ಸಂವಿದಾನದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಟ್ಟ ಮೀಡಿಯಾ ಕ್ಷೇತ್ರದಲ್ಲೂ ಸಮಾಜದ ಪಾತ್ರ ನಗಣ್ಯವಾಗಿದೆ. ಇಂತಹದ್ದಕ್ಕೆ ಇತರ ಸಮಾಜವನ್ನು ದೂಷಿಸಿ ಸುಮ್ಮನಿರುವುದು ಹೊಣೆಗೇಡಿತನವಾಗಿದೆ ಎಂದ ಖತೀಬರು ಪ್ರತೀ ಕುಟುಂಬದಲ್ಲಿ ಒಬ್ಬ ಪೋಲೀಸನ್ನು ಮತ್ತು ಊರಿಗೊಬ್ಬ ಪತ್ರಕರ್ತನನ್ನು ನಮಗೆ ಯಾಕೆ ಸೃಷ್ಟಿ ಮಾಡಬಾರದು? ಇದಕ್ಕೆ ಇತರ ಜಾತಿಯವರು ಅಡ್ಡ ಬರುತ್ತಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದರು ಈ ನಿಟ್ಟಿನಲ್ಲಿ ನಮ್ಮ ಸಮಾಜದ ಧೋರಣೆ ಬದಲಾಗ ಬೇಕಿದೆ ಎಂದ ಅವರು ಸೈನ್ಯದಲ್ಲಿ,ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿಯನ್ನು ನಾವು ಬೆಳೆಸಿಕೊಂಡಿದ್ದೇವೆ ಎಂದಾದರೆ ನಮ್ಮನ್ನು ನಾವು ಉದ್ದಾರ ಮಾಡಲು ಹೇಗೆ ಸಾದ್ಯ? ತ್ಯಾಗ ,ಪರಿಶ್ರಮ ಇಲ್ಲದೇ ಎಲ್ಲವೂ ಕುಳಿತಲ್ಲಿಂದಲೇ ಪ್ರಾರ್ಥನೆಯ ಮೂಲಕ ಸರಿಯಾಗಬೇಕು ಎನ್ನುವುದು ಮೂರ್ಖತನವಲ್ಲವೇ ಎಂದರು.
ಇಂದಿನ ಖತುಬಾದಲ್ಲಿ ಹೇಳಿದಂತೆ ಕ್ಷಮೆ, ಸಹನೆ ತ್ಯಾಗ,ಪರಿಶ್ರಮದ ಮೂಲಕ ಉತ್ತಮ ಕೆಲಸ ಕಾರ್ಯ ಮಾಡಬೇಕು. ಆಗ ಮಾತ್ರ ಉತ್ತಮ ಪಲಿತಾಂಶ ದೊರೆಯುತ್ತದೆ. ರೋಗ ಶಮನವಾಗ ಬೇಕೆಂದರೆ ಕೆಲವೊಮ್ಮೆ ಕಹಿ ಔಷಧಿಯನ್ನು ಸೇವಿಸ ಬೇಕಾಗುತ್ತದೆ ಎಂದ ಖತೀಬರು ನಮ್ಮ ಯೋಜನೆ ಮತ್ತು ಯೋಚನೆಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸದಿದ್ದರೆ ನಾವು ಶೋಷಣೆಗೆ ಒಳಗಾಗುತ್ತಲೇ ಇರ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಾಜದ ಶ್ರೀಮಂತರು ಸ್ವಾಭಿಮಾನದ ಸಾಮಾಜಿಕ ಬದುಕನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ತಮ್ಮ ಹಣವನ್ನು ವಿನಿಯೋಗಿಸಬೇಕೇ ಹೊರತು ಹತ್ತು ತಲೆಮಾರಿಗಾಗುವಷ್ಟು ಹಣ ಕೂಡಿಟ್ಟರೆ ಅದರಿಂದೇನೂ ಲಾಭವಾಗದು. ಅದೇ ರೀತಿ ಶ್ರೀಮಂತರಿಂದ ಮತ್ತು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಉಲಮಾಗಳು ನಡೆಸುತ್ತಿರುವ ಧಾರ್ಮಿಕ ಸಂಸ್ಥೆಯಿಂದ ಕೇವಲ ಧಾರ್ಮಿಕ ಕಾರ್ಯಕರ್ತರನ್ನು ಮಾತ್ರ ಸೃಷ್ಟಿಸದೇ ದೇಶ ಕಟ್ಟುವಲ್ಲಿ ಪಾತ್ರ ವಹಿಸುವ ವಿವಿಧ ರೀತಿಯ ಅಧಿಕಾರಿ ವರ್ಗವನ್ನು ಹೊರತರುವುದು ಕಾಲದ ಬೇಡಿಕೆಯಾಗಿದೆ ಎಂದ ಅವರು ಲೆಕ್ಕವಿಲ್ಲದಷ್ಟು ಕುರಾನ್ ಹಾಫಿಝ್ ಗಳನ್ನು ಸಮಾಜಕ್ಕೆ ಅರ್ಪಿಸುವುದು ಪ್ರಾಯೋಗಿಕ ಕ್ರಮವಲ್ಲ ಎಂದು ವಿಶ್ಲೇಷಿಸಿದರು.
ಕ್ರೈಸ್ತ ಸಮುದಾಯವು ದೇಶದಲ್ಲಿ ಅಲ್ಪಸಂಖ್ಯೆಯ ಲ್ಲಿದ್ದರೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸುತ್ತಿದ್ದು ದೇಶದ ಎಲ್ಲಾ ಧರ್ಮೀಯರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇದನ್ನೇ ಮಾದರಿ ಯಾಗಿಟ್ಟು ಕೊಂಡು ಮುಸ್ಲಿಮರೂ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಕೆಲಸ ಕಾರ್ಯಗಳನ್ನು ಮಾಡಲು ಇಚ್ಚಾಶಕ್ತಿಯೊಂದಿಗೆ ಮುಂದೆ ಬರಬೇಕಿದೆ ಎಂದು ಸಲಹೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.