(www.vknews.com) : ಕುಂದಾಪುರ ತಾಲೂಕು ತ್ರಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ನಿವಾಸಿಯಾದ ಮೊಹಮ್ಮದ್ ಇಬ್ರಾಹಿಂರವರು ತನ್ನ ಗೆಳೆಯ ಫ್ರಾನ್ಸಿಸ್ ಉಚಿತವಾಗಿ ನೀಡಿದ ಕರುವನ್ನು ಸಾಕಲೆಂದು ಮನೆಗೆ ತಂದಿದ್ದರು. ಇಬ್ರಾಹಿಂ ರವರ ಮನೆಯ ಹಟ್ಟಿಯಲ್ಲಿ ದನದ ಕರು ಇರುವುದನ್ನು ಗಮನಿಸಿದ ಪಿಎಸ್ಐ ನಂಜನಾಯ್ಕ ಮತ್ತು ಇತರ ಸಿಬ್ಬಂದಿಗಳು ಇಬ್ರಾಹಿಂ ಮನೆಗೆ 26-12-2021 ರ ಸಂಜೆ 6 ಗಂಟೆಯ ಹೊತ್ತಿಗೆ ಬಂದು ಕರುವಿನ ಬಗ್ಗೆ ವಿಚಾರಿಸಿದ್ದಾರೆ, ಇಬ್ರಾಹಿಂರವರು ಇದನ್ನು ಸಾಕಲೆಂದು ತಂದಿರುವುದಾಗಿ ಹೇಳಿದಾಗ ಪಿಎಸ್ಐ ನಾನು ಒಂದು ವರ್ಷ ಬಿಟ್ಟು ಬಂದು ವಿಚಾರಿಸುವಾಗಲೂ ಇದು ಇಲ್ಲಿ ಇರಬೇಕು ಎಂದು ಗದರಿಸಿ ಆ ಕರುವಿನೊಂದಿಗೆ ಇಬ್ರಾಹಿಂನ ಫೋಟೋ ತೆಗೆದು ಮರಳಿ ಹೋಗಿರುತ್ತಾರೆ. ನಂತರ ಸಹಿ ಹಾಕಲು ಠಾಣೆಗೆ ಬರಬೇಕು, ಈ ವಿಚಾರವನ್ನು ಯಾರ ಬಳಿಯೂ ಹೇಳಬಾರದು. ಒಂದು ವೇಳೆ ಹೇಳಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗದರಿಸಿ ಠಾಣೆಗೆ ಕರೆಸಿಕೊಂಡಿದ್ದಾರೆ, ಅಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿದ್ದಾರೆ.
ಇಬ್ರಾಹಿಂಗೆ ದನವನ್ನು ನೀಡಿದ್ದ ಫ್ರಾನ್ಸಿಸ್ ನನ್ನು ರಾತ್ರಿ ಎಂಟು ಗಂಟೆ ಹೊತ್ತಿಗೆ ಠಾಣೆಗೆ ಕರಿಸಿ ಅವರಿಂದ ವಿವರಣೆಯನ್ನು ಪಡೆದಿದ್ದರೂ ಸಹ ಇಬ್ರಾಹಿಂನನ್ನು ರಾತ್ರಿಯಿಡೀ ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದರು. ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ಇಬ್ರಾಹಿಂ ಮನೆಗೆ ಹೋದ ಪೊಲೀಸರು ಮನೆಯಲ್ಲಿದ್ದ ಇಬ್ರಾಹಿಂ ಪತ್ನಿಯನ್ನು ಬೆದರಿಸಿ ಕರುವನ್ನು ಠಾಣೆಗೆ ಸಾಗಿಸಿದ್ದರು.
ಮರುದಿನ 27-12-2021 ರ ಬೆಳಿಗ್ಗೆ ಜನಸಂಚಾರ ಕಡಿಮೆ ಇರುವ ಮಂಕಿ ಕ್ರಾಸ್ ಬಳಿ ಇಬ್ರಾಹಿಂನನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿ ಜೀಪಿನಿಂದ ಇಳಿದು ಓಡುವಂತೆ ಬಲವಂತಪಡಿಸಲಾಗಿದೆ. ಇಬ್ರಾಹಿಂ ಓಡಲು ನಿರಾಕರಿಸಿದಾಗ ಅವರ ತಲೆಗೆ ರಿವಾಲ್ವರ್ ಇಟ್ಟು “ನಾನು ಶಿರಸಿ ಹಾಗೂ ಇತರ ಕಡೆಗಳಲ್ಲಿ ಎನ್ಕೌಂಟರ್ ಮಾಡಿ ಬಂದವನು ನನ್ನ ಬಗ್ಗೆ ನಿನಗೆ ಗೊತ್ತಿಲ್ಲ, ನಿನ್ನನ್ನು ಎನ್ಕೌಂಟರ್ ಮಾಡಿ ಸಾಯಿಸುತ್ತೇನೆ” ಎಂದು ಬೆದರಿಕೆ ಒಡ್ಡಲಾಗಿದೆ. ಭಯಭೀತನಾದ ಇಬ್ರಾಹಿಂ ಎಸ್ಐ ನಂಜನಾಯಕನ ಕಾಲಿಗೆ ಬಿದ್ದು ನನಗೆ ಏನೂ ಮಾಡಬೇಡಿ ಎಂದು ಬೇಡಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಆ ದಾರಿಯಲ್ಲಿ ಕೆಲವು ವಾಹನಗಳು ಸಂಚರಿಸುವುದನ್ನು ಕಂಡು ಅವರನ್ನು ಜೀಪಿನಲ್ಲಿ ಕುಳ್ಳಿರಿಸಿ ಸ್ವಲ್ಪ ಮುಂದೆ ಕರೆದುಕೊಂಡು ಹೋಗಿ ಅಲ್ಲಿಗೆ ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು (ಅದರಲ್ಲಿ ಒಬ್ಬನ ಹೆಸರು ಮಹೇಶ್) ಕರೆಸಿ ಒಂದು ಪ್ಲಾಸ್ಟಿಕ್ಕನ್ನು ಹಾಸಿ ಅವರು ಚೀಲದಲ್ಲಿ ತಂದಿದ್ದ ಕತ್ತಿ, ತಲವಾರು, ಇತರ ಸಾಧನಗಳನ್ನು ಅದರ ಮೇಲೆ ಹಾಕಿ ಇವರು ಇಲ್ಲಿ ದನ ಕಡಿಯಲು ಪ್ರಯತ್ನಿಸುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು ಎಂದು ಬಿಂಬಿಸಿ ಇಬ್ರಾಹಿಂರ ಮೇಲೆ ಸುಳ್ಳು ಕೇಸು ಹಾಕಿ ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ತನ್ನ ಮೇಲಾದ ದೌರ್ಜನ್ಯ ವನ್ನು ಸಂತ್ರಸ್ತ ಯುವಕ ಇಬ್ರಾಹಿಂ ಪತ್ರಿಕಾಗೋಷ್ಠಿ ಮೂಲಕ ತಿಳಿಸಿರುತ್ತಾರೆ.
ಪೊಲೀಸರು ದಾಖಲಿಸಿರುವ F I R ನಲ್ಲಿ ದಿನಾಂಕ 27-12-2021ರ ಬೆಳಿಗ್ಗೆ 8:15 ರ ಹೊತ್ತಿಗೆ ದನ ವಧೆ ಮಾಡುವ ಸಂದರ್ಭದಲ್ಲಿ ದಾಳಿ ನಡೆಸಿ ಇಬ್ರಾಹಿಂ ರನ್ನು ಬಂಧಿಸಿರುವುದಾಗಿ ನಮೂದಿಸಲಾಗಿದೆ. ಆದರೆ 26-12- 2021ರ ಸಂಜೆಯಿಂದಲೇ ಇಬ್ರಾಹಿಂ ಠಾಣೆಯಲ್ಲಿ ಇರುವುದಕ್ಕೆ ದಾಖಲೆಗಳಿವೆ. ಆದ್ದರಿಂದ ಅಮಾಯಕ ಇಬ್ರಾಹಿಂ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದಲ್ಲದೆ ಅವರನ್ನು ಎನ್ಕೌಂಟರ್ ಮಾಡಿ ಕೊಲೆ ಮಾಡುವ ಪ್ರಯತ್ನ ನಡೆದಿದೆವೆಂಬುದು ಇದರಿಂದ ಸ್ಪಷ್ಟವಾಗುತ್ತದೆ .
ಪಿಎಸ್ಎ ನಂಜನಾಯ್ಕ ವಿರುದ್ಧ ಇಂತಹ ಹಲವಾರು ಆರೋಪಗಳಿವೆ. ಕೆಲಸಮಯದ ಹಿಂದೆ ನಿರೀಕ್ಷಣಾ ಜಾಮೀನು ಪಡೆದಿದ್ದ ಇಬ್ಬರು ಯುವಕರನ್ನು ಠಾಣೆಗೆ ಕರೆಸಿ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದಂತಹ ಘಟನೆ ಸಹ ನಡೆದಿವೆ.ಈ ಎಲ್ಲ ಘಟನೆಗಳಿಂದ ನಮಗೆ ತಿಳಿದುಬರುವುದೇನೆಂದರೆ ನಂಜನಾಯ್ಕರವರು ಪೂರ್ವಗ್ರಹಪೀಡಿತರಾಗಿ ಸಮಾಜದ ಒಂದು ವಿಭಾಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಪುನರಾವರ್ತಿತವಾಗಿ ಇಂತಹ ಘಟನೆಗಳು ನಡೆಯುತ್ತಿರುವುದು ಇದನ್ನು ಸಾಬೀತುಪಡಿಸುತ್ತದೆ. ಆದ್ದರಿಂದ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ನಂಜನಾಯಕನನ್ನು ಕೆಲಸದಿಂದ ವಜಾ ಮಾಡಿಕೊಳ್ಳಬೇಕೆಂದು SDPI ಉಡುಪಿ ಜಿಲ್ಲಾ ನಿಯೋಗ ಮನವಿಯನ್ನು ಸಲ್ಲಿಸಿತು.ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ನಜೀರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷರಾದ ಶಾಹಿದ್ ಅಲಿ ಮತ್ತು ಜುರೈ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.