ಶ್ರೀನಿವಾಸಪುರ(ವಿಶ್ವಕನ್ನಡಿಗ ನ್ಯೂಸ್): ಶಾಸಕ ರಮೇಶ್ ಕುಮಾರ್ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವು ಜೆಡಿಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಾಗರಿಕರಿಗೆ ತೊಂದರೆ ಉಂಟುಮಾಡಿದ್ದಾರೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.
ಪಟ್ಟಣದ ಪಿಎಲ್ಡಿ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ , ತಾಲ್ಲೂಕಿನ ಪಾತಬಲ್ಲಪಲ್ಲಿ ಗ್ರಾಮದ ಕೆಲವರು ಒಂದು ನಿರ್ದಿಷ್ಟ ಕುಟುಂಬವನ್ನು ಗುರಿಯಾಗಿರಿಸಿಕೊಂಡು ವಿನಾಕಾರಣ ಕಿರುಕುಳ ನೀಡುತ್ತಿದ್ದರು.
ಆ ಕುಟುಂಬದ ಸದಸ್ಯರ ಮೇಲೆ ಹಲವು ಸಲ ಹಲ್ಲೆ ಮಾಡಿದ್ದರು. ಗುರುವಾರ ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಈ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಿದ್ದರು. ನೊಂದ ಕುಟುಂಬದ ಸದಸ್ಯರು ಮಾಡಿಕೊಂಡ ಮನವಿಯ ಮೇರೆಗೆ ಶಾಸಕ ರಮೇಶ್ ಕುಮಾರ್ ಅವರು ಘಟನೆ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗೆ ಹೋಗಬೇಕಾಯಿತು ಎಂದು ಹೇಳಿದರು. ಅದೇ ಸಮಯಕ್ಕೆ ಸರಿಯಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಅವರು ಇದೇ ಘಟನೆಗೆ ಸಂಬಂಧಿಸಿದಂತೆ ವಿಚಾರಿಸಲು ಠಾಣೆಯಲ್ಲಿದ್ದರು.
ಶಾಸಕರನ್ನು ಕಂಡು ತಕ್ಷಣ ಎದ್ದು ನಿಂತು ನಮಸ್ಕಾರ ಮಾಡಿದರು. ಅದಕ್ಕೆ ಶಾಸಕರು ಪ್ರತಿ ನಮಸ್ಕಾರ ಮಾಡಿ , ‘ ನೀವಿನ್ನು ಹೊರಡಿ , ಪೊಲೀಸರೊಂದಿಗೆ ನಾನೂ ಸ್ವಲ್ಪ ಮಾತನಾಡಬೇಕಾಗಿದೆ ‘ ಎಂದರು.
ಈ ಮಾತಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡು ಕೆಲವು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ರಮೇಶ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ , ಇಂಥ ಘಟನೆ ನಡೆದಿರುವುದು ದುರದೃಷ್ಟಕರ . ಶಾಸಕರಿಗೆ ತೊಂದರೆಗೆ ಒಳಗಾದ ನಾಗರಿಕರ ನೆರವಿಗೆ ಹೋಗಬೇಕಾದ ಜವಾಬ್ದಾರಿ ಇರುತ್ತದೆ.
ತೂಪಲ್ಲಿ ಆರ್. ನಾರಾಯಣಸ್ವಾಮಿ ಒಬ್ಬ ಸಾಧು ಸ್ವಭಾವದ ವ್ಯಕ್ತಿ , ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಉಳ್ಳವರು. ಧರಣಿ ನಡೆಸದಂತೆ ಅವರೇ ಕಾರ್ಯಕರ್ತರಿಗೆ ಹೇಳಿದ್ದಾರೆ. ಆದರೂ ಕೆಲವರು ಜಿದ್ದಿಗೆ ಬಿದ್ದವರಂತೆ ಶಾಸಕರನ್ನು ನಿಂದಿಸಿ , ಪ್ರತಿಭಟನೆ ನಡೆಸಿದ್ದಾರೆ .
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು , ರಾಯಲ್ಪಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ , ಮುಖಂಡರಾದ ಅಯ್ಯಪ್ಪ , ವೆಂಕಟರೆಡ್ಡಿ , ದರ್ಶನ್ , ಶಿವರಾಜು , ಹರೀಶ್ ಯಾದವ್ , ಎನ್.ಆರ್.ನಾಗರಾಜ್ , ಮುನಿರಾಜು , ವೆಂಕಟೇಶ್ , ಆಂಜಿ ಇದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.