ಮಂಗಳೂರು (www.vknews.com) : ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಹಾಗೂ ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಾರಂಭಿಸಿದ ಬೈಕಾಡಿ ಪ್ರತಿಷ್ಠಾನದ ವತಿಯಿಂದ ದಿನಾಂಕ 05.01.2022ರಂದು 2021-22ನೇ ಸಾಲಿನ “ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ”ಯನ್ನು ಶಿಕ್ಷಣ ಹಾಗೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸೇವೆ ಗೈದ ಹಿರಿಯ ಶಿಕ್ಷಕ ದಂಪತಿಗಳಾದ ಶ್ರೀ ಬಿ. ಶ್ರೀನಿವಾಸ ರಾವ್ ಮತ್ತು ಶ್ರೀಮತಿ ಸಾವಿತ್ರಿ ಎಸ್. ರಾವ್ ಇವರಿಗೆ ಅವರ ಸ್ವಗೃಹದಲ್ಲಿ ನೀಡಲಾಯಿತು. ಪ್ರಶಸ್ತಿ ಪ್ರದಾನವನ್ನು ಮಾಡಿದ ಹಿರಿಯ ಸಾಹಿತಿ ಹಾಗೂ ಸ್ತ್ರೀ-ಪರ ಚಿಂತಕಿ ಶ್ರೀಮತಿ ಬಿ. ಎಂ. ರೋಹಿಣಿಯವರು, ಶಿಕ್ಷಣ ಕ್ಷೇತ್ರ ಹಾಗೂ ಸಾಹಿತ್ಯ ಕ್ಷೇತ್ರದೊಂದಿಗೆ ಬೈಕಾಡಿ ಜನಾರ್ದನ ಆಚಾರ್ರವರ ನಂಟು ಹಾಗೂ ಕಲಾಚಟುವಟಿಕೆಗಳಿಗೆ ಬೈಕಾಡಿಯವರ ಕೊಡುಗೆಯನ್ನು ವಿವರಿಸಿದರು.
ಪ್ರಶಸ್ತಿ ಸ್ವೀಕರಿಸಿದ ದಂಪತಿಗಳು ಮಾತನಾಡಿ ನಮ್ಮ ಸ್ವಗೃಹದಲ್ಲಿ ಇಂತಹ ಒಂದು ಸನ್ಮಾನ ಕಾರ್ಯಕ್ರಮ ನಡೆದದ್ದು ಬಹು ದೊಡ್ಡ ಗೌರವದ ವಿಚಾರ, ನಾವು ನಮ್ಮ ಜೀವನವನ್ನೇ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಮೀಸಲಾಗಿರಿಸಿದ್ದೇವೆ ಈ ಸನ್ಮಾನದಿಂದ ಅದರಲ್ಲಿ ಸಾರ್ಥಕತೆ ಕಂಡಿದ್ದೇವೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪರಮಪೂಜ್ಯ ಸ್ವಾಮಿ ಏಕಗಮ್ಯಾನಂದಜೀಯವರು ಸಮಾಜಕ್ಕೆ ಬೈಕಾಡಿ ಜನಾರ್ದನ ಆಚಾರ್ ಇವರ ಕೊಡುಗೆಗಳನ್ನು ಹಾಗೂ ಬೈಕಾಡಿಯವರಿಗೂ ರಾಮಕೃಷ್ಣ ಮಠಕ್ಕೂ ಇದ್ದ ನಂಟನ್ನು ನೆನಪಿಸಿದರು. ಸನ್ಮಾನ ಸ್ವೀಕರಿಸಿದ ಹಿರಿಯ ಶಿಕ್ಷಕ ದಂಪತಿಗಳ ಕಾರ್ಯಚಟುವಟಿಕೆಗಳ ಹಾಗೂ ಮಕ್ಕಳ ಸಾಹಿತ್ಯ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಶ್ಲಾಘಿಸಿದರು.
ಸಾಧಕ ದಂಪತಿಗಳ ಪರಿಚಯವನ್ನು ಶ್ರೀ ದಾಮೋದರ್ ಚೆಟ್ಟಿಯಾರ್ ಮಾಡಿದರು ಹಾಗೂ ಶಿಕ್ಷಕ ದಂಪತಿಗಳ ಶಿಷ್ಯೆ ಜ್ಯೇಷ್ಠಲಕ್ಷ್ಮಿ ಮಾತನಾಡಿ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದರು.
ಶ್ರೀಮತಿ ರಜನಿ ಮಲ್ಯ ಇವರ ಗಾಯನದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಶ್ರೀಮತಿ ಮಾಧುರಿ ಶ್ರೀರಾಮ್ ನಿರ್ವಹಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಶ್ರೀಮತಿ ರತ್ನಾವತಿ ಜೆ ಬೈಕಾಡಿ, ಅಕ್ಷತಾ ಬೈಕಾಡಿ, ಭರತ್ ರಾಜ್ ಬೈಕಾಡಿ ಹಾಗೂ ಶ್ರೀಮತಿ ರೇಖಾ ಬಿ. ಬೈಕಾಡಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.