ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಹಲವಾರು ವರ್ಷಗಳ ನಂತರ ಕೋಲಾರ ಜಿಲ್ಲೆಗೆ ಬಂದಿದ್ದ ಉತ್ತಮ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ , ಆಡಳಿತ ಪಕ್ಷವಾದ ಬಿಜೆಪಿಯವರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಕಿಡಿಕಾರಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು , ಡಿ.ಕೆ. ರವಿಯವರ ನಂತರ ಜಿಲ್ಲೆಗೆ ಡಾ.ಆರ್. ಸೆಲ್ವಮಣಿಯವರು ಓರ್ವ ಉತ್ತಮ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದರು , ಆದರೆ ಕೇವಲ ೧೦ ತಿಂಗಳಲ್ಲೇ ವರ್ಗಾವಣೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆ ಹಾಗೂ ನಗರದ ಅಭಿವೃದ್ಧಿ ಕುರಿತಂತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು , ಸೆಲ್ವಮಣಿ ಅವರ ವರ್ಗಾವಣೆ ಹಿ೦ದೆ ಕಾಣದ ಕೈಗಳು ಕೆಲಸ ಮಾಡಿರಬಹುದು ಎಂದು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರಾರು ಇಲ್ಲ.
ಇದಕ್ಕೆ ಸಂಸದರು ಮಾತ್ರ ಉತ್ತರ ನೀಡಬೇಕು , ಆಡಳಿತ ಪಕ್ಷದವರು ಓರ್ವ ಉತ್ತಮ ಡಿಸಿ ವರ್ಗಾವಣೆ ಸರಿಯೇ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಗರವನ್ನು ಸುಂದರಗೊಳಿಸುವ ಕನಸು ಹೊಂದಿದ್ದ ಡಿಸಿಯವರು ಇತ್ತೀಚೆಗೆ ಜಿಲ್ಲಾಸ್ಪತೆಗೆ ಮೂಲ ಸೌಲಭ್ಯಗಳ ಅಭಿವೃದ್ಧಿ ಕುರಿತಂತೆಯೂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದರು. ಇಂತಹ ಉತ್ತಮ ಅಧಿಕಾರಿಯನ್ನು ವರ್ಗಾವಣೆ ಮಾಡುವ ಮೂಲಕ ಜಿಲ್ಲೆಗೆ ದೋಹ ಬಗೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ .
ಕೋವಿಡ್ ನಿರ್ವಹಣೆ , ನಗರದ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಜನರ ಸಮಸ್ಯೆಗಳಿಗೆ ದಿಢೀರ್ ಸ್ಪಂದಿಸುತ್ತಿದ್ದ ಡಾ. ಆರ್. ಸೆಲ್ವಮಣಿ , ೧೦ ತಿಂಗಳ ಅಧಿಕಾರಾವಧಿಯಲ್ಲೇ ಜನರ ಮನಗೆದಿದರು ಎಂದು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯ ದುರಾದೃಷ್ಟವೋ ಏನೋ , ಇಲ್ಲಿಗೆ ಯಾರೇ ಉತ್ತಮ ಅಧಿಕಾರಿ ಬಂದರೂ ಹೆಚ್ಚು ಕಾಲ ಉಳಿಸುವುದಿಲ್ಲ . ಅದೇ ಜಿಲ್ಲೆಯ ಅಭಿವೃದ್ಧಿಗೆ ಶಾಪವಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಸಮಸ್ಯೆಗಳನ್ನು ಅರಿತು ಕ್ರಿಯಾಶೀಲರಾಗುವ ಮುನ್ನವೇ ಅವರ ವರ್ಗಾವಣೆ ಎಷ್ಟು ಸರಿ ಎಂದು ಪಶ್ನಿಸಿರುವ ಅವರು , ಕನಿಷ್ಟ ೨ ವರ್ಷವಾದರೂ ಅವರನ್ನು ಜಿಲ್ಲೆಯಲ್ಲಿ ಉಳಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಜಿಲ್ಲೆಯ ಜನಪ್ರತಿನಿಧಿಗಳು ಧ್ವನಿಯೆತ್ತಬೇಕು , ಅವರ ವರ್ಗಾವಣೆ ರದ್ದುಗೊಳಿಸಿ ಇಲ್ಲಿ ಕನಿಷ್ಠ ೨ ವರ್ಷವಾದರೂ ಮುಂದುವರೆಸುವ ಆಲೋಚನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.