ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಅವಿಭಜಿತ ಜಿಲ್ಲೆಯ ೧೯೭ ಸೊಸೈಟಿಗಳ ಪೈಕಿ ಆಡಿಟ್ ಮುಗಿಸದ ೩ ಸೊಸೈಟಿಗಳ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ , ಮೈಗಳ್ಳತನ ಬಿಟ್ಟು ಜ .೧೯ ರೊಳಗೆ ಆಡಿಟ್ ಮುಗಿಸಿ ಎಂದು ತಾಕೀತು ಮಾಡಿದರು.
ನಗರದ ಬ್ಯಾಂಕ್ ಕಚೇರಿಯಲ್ಲಿ ಆಡಿಟ್ ಹಾಗೂ ಗಣಕೀಕರಣ ಕಾರ್ಯ ಮುಗಿಸದ ಪ್ಯಾಕ್ಗಳ ಅಧ್ಯಕ್ಷರು , ಸಿಇಒಗಳೊಂದಿಗೆ ಆನ್ಲೈನ್ನಲ್ಲಿ ಹಾಗೂ ದೂರವಾಣಿ ಮೂಲಕ ಮಾತನಾಡಿದರು.
೧೯೭ ಸೊಸೈಟಿಗಳ ಪೈಕಿ ಕೇವಲ ಮಾಲೂರು ತಾಲ್ಲೂಕಿನ ಟೇಕಲ್ , ಚಿಂತಾಮಣಿ ತಾಲ್ಲೂಕಿನ ಯಗವಕೋಟೆ , ಟಿ.ಗೊಲ್ಲಹಳ್ಳಿ ಸೊಸೈಟಿಗಳು ಮಾತ್ರವೇ ಆಡಿಟ್ ಮುಗಿಸಿಲ್ಲ. ಜವಾಬ್ದಾರಿಯಿಂದ ಸಿಇಒ ಮತ್ತು ಆಡಳಿತ ಮಂಡಳಿ ಕೆಲಸ ಮಾಡಿ ಎಂದು ಸೂಚಿಸಿದರು.
ದೇಶದಲ್ಲೇ ಪ್ಯಾಕ್ಸ್ಗಳ ಸಂಪೂರ್ಣ ಗಣಕೀಕರಣದ ಐತಿಹಾಸಿಕ ಕ್ರಮ ಡಿಸಿಸಿ ಬ್ಯಾಂಕಿನಿಂದಾಗಿದೆ . ಇಂತಹ ಸಾಧನೆ ಸುಲಭದ ಮಾತಲ್ಲ ಎಂದ ಅವರು . ೧೯೭ ಸೊಸೈಟಿಗಳ ಪೈಕಿ ಚಿಂತಾಮಣಿ ತಾಲ್ಲೂಕಿನ ಕುರುಬೂರು , ಬಾಗೇಪಲ್ಲಿ ತಾಲ್ಲೂಕಿನ ನಲ್ಲಪರಡಿಪಲ್ಲಿ , ಗೌರಿಬಿದನೂರು ತಾಲ್ಲೂಕಿನ ಕಡಬೂರು , ನ್ಯಾಮಗೊಂಡು , ನಗರಗರೆ ಸೊಸೈಟಿಗಳ ಗಣಕೀಕರಣ ಕಾರ್ಯ ಅಂತಿಮ ಹಂತದಲ್ಲಿದ್ದು , ಜ .೧೯ ರೊಳಗೆ ಮುಗಿಯಲಿದೆ ಎಂದರು.
ಇದನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲಾ ಸೊಸೈಟಿಗಳ ಗಣಕೀಕರಣ ಕಾರ್ಯ ಮುಗಿದಿದ್ದು , ಆನ್ಲೈನ್ ವಹಿವಾಟು ಆರಂಭಿಸಲಾಗಿದೆ ಎಂದು ತಿಳಿಸಿದರು.
ಹಬ್ಬ , ರಜೆ ಮರೆತು ಕೆಲಸ ಮುಗಿಸಿ
ಹಬ್ಬ , ಭಾನುವಾರದ ರಜೆ ಮರೆತು ಕೆಲಸ ಮಾಡಿ , ಸೊಸೈಟಿ ಸಂಬಳ ನೀಡಿದರೆ ಮಾತ್ರವೇ ಹಬ್ಬ ಎಂದು ಕಿವಿಮಾತು ಹೇಳಿ , ಸೊಸೈಟಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅನ್ನ ನೀಡುವ ಜಾಗ , ಬಡವರ ಕೆಲಸ ಮಾಡಿ ಮುಗಿಸಿ ನಿಮಗೆ ದೇವರು ಒಳ್ಳೇದು ಮಾಡುತ್ತಾನೆ ಎಂದರು.
ಸೊಸೈಟಿ , ಡಿಸಿಸಿ ಬ್ಯಾಂಕನ್ನು ನಂಬಿರುವ ರೈತರು , ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಅಗತ್ಯವಿದೆ , ನಿಮ್ಮ ವಹಿವಾಟು ಪಾರದರ್ಶಕವಾಗಿದ್ದರೆ ಮಾತ್ರ ಗ್ರಾಹಕರು ನಂಬುತ್ತಾರೆ ಇಲ್ಲವಾದಲ್ಲಿ ಮತ್ತೆ ೧೦ ವರ್ಷಗಳ ಹಿಂದಿನ ದಿವಾಳಿ ಇತಿಹಾಸ ಮರುಕಳಿಸೀತು ಎಂದು ಎಚ್ಚರಿಸಿದರು.
ಕಲವಾರು ಪ್ಯಾಕ್ಸ್ಗಳ ವಹಿವಾಟಿನ ಕುರಿತು ಮಹಿಳೆಯರು , ರೈತರಲ್ಲಿ ಅನುಮಾನಗಳಿವೆ , ಅಲ್ಲಿ ಉಳಿತಾಯ ಖಾತೆ ತೆರೆಯುವ ಧೈರ್ಯ ಮಾಡುತ್ತಿಲ್ಲ . ಸಾಲ ಮರುಪಾವತಿಗೂ ಹಿನ್ನಡೆಯಾಗುತ್ತಿದೆ . ಇದನ್ನು ತಪ್ಪಿಸಲು ಸೊಸೈಟಿಗಳ ಆಡಳಿತ ಪಾರದರ್ಶಕವಾಗಬೇಕು ಎಂದರು.
ಈ ನಿಟ್ಟಿನಲ್ಲಿ ಗಣಕೀಕರಣ ಒಂದು ಮೈಲಿಗಲ್ಲು , ಗಾಹಕರ ನಂಬಿಕೆ , ವಿಶ್ವಾಸಕ್ಕೆ ಭದ್ರಬುನಾದಿಯಾಗಲಿದೆ. ವಹಿವಾಟಿನ ಮಾಹಿತಿ ಕ್ಷಣಾರ್ಧದಲ್ಲಿ ಮೊಬೈಲ್ಗೆ ತಲುಪುವುದರಿಂದ ಮಹಿಳೆಯರು , ರೈತರು , ಧೈರ್ಯದಿಂದ ಪ್ಯಾಕ್ಗಳಲ್ಲಿ ವ್ಯವಹಾರ ಮಾಡುತ್ತಾರೆ ಎಂದು ತಿಳಿಸಿದರು.
ಗಣಕೀಕರಣದ ಹೊಣೆ ಹೊತ್ತ ಪಿ – ಸಾಫ್ಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು , ನೀವು ಮೊದಲು ಮಾತುಕೊಟ್ಟಂತೆ ಕೆಲಸ ಮುಗಿಸಿಕೊಡಿ , ನನಗೆ ನೆಪ ಹೇಳಬೇಡಿ , ಜ .೨೦ ಕ್ಕೆ ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ಯಾಕ್ಗಳ ಗಣಕೀಕರಣ ವಹಿವಾಟು ಉದ್ಘಾಟನೆಗೊಳ್ಳಬೇಕಿದೆ ಎಂದು ತಿಳಿಸಿದರು.
ಆನ್ಲೈನ್ನಲ್ಲಿ ಬ್ಯಾಂಕಿನ ಎಂಡಿ ಶಿವಕುಮಾರ್ ಮಾತನಾಡಿ , ಜಿಲ್ಲೆಯಲ್ಲಿ ಯಾವ ಯಾವ ಪ್ಯಾಕ್ಗಳು ಗಣಕೀಕರಣ ಕಾರ್ಯದಲ್ಲಿ ಹಿಂದೆ ಬಿದ್ದಿವೆ ಎಂಬ ಮಾಹಿತಿ ನೀಡಿ , ಶೀಘ್ರ ಮುಗಿಸಲು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಕೋಲಾರ ಶಾಖೆಯ ಅಮೀನಾ , ಆನ್ಲೈನ್ನಲ್ಲಿ ವಿವಿಧ ಪಾಕ್ಗಳ ಸಿಇಒಗಳು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.