ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಯರ್ರಗೋಳ್ ಜಲಾಶಯವನ್ನು ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು. ಇದರಿಂದ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತದೆ.
ಜಿಲ್ಲೆಯ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು.
ಇಂದು ಕೋಲಾರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕೋಲಾರ ಜಿಲ್ಲೆಗೆ ಅವಶ್ಯಕತೆಯಿರುವ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಜೆಟ್ನಲ್ಲಿ ಅನುದಾನ ಪಡೆಯಲಾಗುವುದು. ಸ್ಥಳೀಯ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಸಭೆ ನಡೆಸಲು ಸೂಚಿಸಲಾಗುವುದು.
ಆಗಸ್ಟ್ 15 ರೊಳಗೆ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಸಂವಿಧಾನ ಜಾರಿಗೆ ಬಂದ ದಿನ ಇಂದು.
ಈ ಎಲ್ಲ ಮಹನೀಯರ ಪಟ್ಟಿಗೆ ಕೋಲಾರ ಜಿಲ್ಲೆಯ ಮಣ್ಣಿನಿಂದ ಹುಟ್ಟಿ ಬಂದ ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಸಿ ರೆಡ್ಡಿ ಮತ್ತು ಕೆ . ಪಟ್ಟಾಭಿರಾಮನ್ ಅವರೂ ಸೇರಿದ್ದಾರೆ. ಕರ್ನಾಟಕ ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿಯಾದ ಕೆ.ಸಿ ರೆಡ್ಡಿ ಅವರು ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರರಾಗಿದ್ದಾರೆ.
ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ನೂತನ ಶಿಷ್ಯ ವೇತನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು .
ಕೋಲಾರ ಜಿಲ್ಲೆಯ ಕೋವಿಡ್ -19 ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಘನ ಸರ್ಕಾರದ ವತಿಯಿಂದ ಸಹಾಯ ಹಸ್ತವಾಗಿ 1.00 ಲಕ್ಷರೂಗಳ ಪರಿಹಾರ ಚೆಕ್ಗಳನ್ನು ಇದೇ ಜನವರಿ 7 ರಂದು ವಿತರಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆಕರ್ಷಕ ಪಥ ಸಂಚಲನವನ್ನು ನಡೆಸಲಾಯಿತು.
ಪಥ ಸಂಚಲನದಲ್ಲಿ ಆರ್.ಎಸ್.ಐ ಪದ್ಮನಾಭಯ್ಯ ಅವರ ನೇತೃತ್ವದಲ್ಲಿ ಡಿ.ಎ.ಆರ್ ಪೊಲೀಸ್ ತಂಡ , ಪಿ.ಎಸ್.ಐ ಹೇಮಂತ ಕುಮಾರ್ ಅವರ ನೇತೃತ್ವದಲ್ಲಿ ಮುಳಬಾಗಲು ಉಪ ವಿಭಾಗ ಪೋ ತಂಡ , ಪಿ.ಎಸ್.ಐ ವೇದಾವತಿ ಅವರ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಪೊಲೀಸ್ ತಂಡ , ಗೋವಿಂದರಾಜು ಅವರ ನೇತೃತ್ವದಲ್ಲಿ ಗೃಹ ರಕ್ಷಕರ ಪುರುಷ ತಂಡ , ತಿರುತವ್ ಮೇರಿ ಅವರ ನೇತೃತ್ವದಲ್ಲಿ ಗೃಹ ರಕ್ಷಕರ ಮಹಿಳಾ ತಂಡ , ಪಿ.ಎಸ್.ಐ ಕಿರಣ್ ಅವರ ನೇತೃತ್ವದಲ್ಲಿ ಕೋಲಾರ ಉಪ ವಿಭಾಗ ಪೊಲೀಸ್ ತಂಡ , ಎ.ಆರ್.ಎಸ್.ಐ ಶಿವಾನಂದ ಅವರ ನೇತೃತ್ವದಲ್ಲಿ ಡಿ.ಎ.ಆರ್ ಪೊಲೀಸ್ ವಾದ್ಯವೃಂದ ತಂಡಗಳು ಭಾಗವಹಿಸಿದ್ದರು.
ಕೋವಿಡ್ -19 1 ನೇ ಅಲೆ , 2 ನೇ ಅಲೆ ಮತ್ತು 3 ನೇ ಅಲೆಯಲ್ಲಿ ಅತ್ಯುತ್ತಮ ಸೇವೆಯನ್ನು ಒದಗಿಸಿದ ಸಾರ್ವಜನಿಕರ ಜೀವ ಉಳಿಸಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ಉತ್ತಮ ಸೇವೆ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಜಿಲ್ಲೆಯ ಎಲ್ಲಾ ಆರು ತಾಲ್ಲೂಕಿನ ಉತ್ತಮ ಸೇವೆ ಒದಗಿಸಿದ ಪೌರಕಾರ್ಮಿಕರನ್ನು ಸಹ ಸನ್ಮಾನಿಸಲಾಯಿತು. ಜಿಲ್ಲೆಯ 15 ವರ್ಷಗಳ ಸೇವೆಯಲ್ಲಿ ಅಪರಾಧ ರಹಿತ ಮತ್ತು ಅಪಘಾತ ರಹಿತ ಸೇವೆ ಸಲ್ಲಿಸಿರುವ ಕೆ.ಎಸ್.ಆರ್.ಟಿ.ಸಿ ವಾಹನ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ , ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ , ಗೋವಿಂದರಾಜು , ಎಂ.ಎಲ್.ಅನಿಲ್ ಕುಮಾರ್ , ಕೋಲಾರ ನಗರಸಭೆ ಅಧ್ಯಕ್ಷರಾದ ಆರ್.ಶ್ವೇತ ಶಬರೀಶ್ , ಮಾಜಿ ಸಚಿವ ಆರ್ ವರ್ತೂರು ಪ್ರಕಾಶ್ , ಜಿಲ್ಲಾಧಿಕಾರಿಗಳಾದ ವೆಂಕಟರಾಜು , ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯುಕೇಶ್ ಕುಮಾರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ದೇವರಾಜ್ , ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ , ತಹಶೀಲ್ದಾರರಾದ ವಿ.ನಾಗರಾಜ್ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.