(ವಿಶ್ವ ಕನ್ನಡಿಗ ನ್ಯೂಸ್) : ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದಾಗಿದೆ. 2004 ರಲ್ಲಿ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗನಲ್ಲಿ ಈ ಆಚರಣೆ ಆರಂಭವಾಯಿತು. 2022ನೇ ವರುಷದ ಈ ಆಚರಣೆಯ ಧ್ಯೇಯ ವಾಕ್ಯ “ರಕ್ತದಾನ ಮಾಡುವುದು ಒಗ್ಗಟ್ಟಿನ ಸಂಕೇತ. ಎಲ್ಲರೂ ಒಟ್ಟು ಸೇರಿ ಜೀವ ಉಳಿಸಿ” ಎಂಬುದಾಗಿದೆ. (Donating blood is an act of soldiarity, Join the effort and save lives) ರಕ್ತದ ಗುಂಪುಗಳನ್ನು 1900 ರಲ್ಲಿ ಕಂಡು ಹಿಡಿದ ಆಸ್ಟ್ರೀಯ ದೇಶದ ವೈದ್ಯ ವಿಜ್ಞಾನಿ ಕಾಲ್ನ ಲ್ಯಾಂಡ್ ಸ್ಟೈನರ್ ಅವರು ಹುಟ್ಟಿದ ದಿನ ಜೂನ್ 14, 1868. ಇದರ ಸವಿನೆನಪಿಗಾಗಿ ಮತ್ತು ಅವರ ಮಹಾನ್ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನ ಎಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಆತನನ್ನು ರಕ್ತಪೂರಣ ವೈದ್ಯ ವಿಜ್ಞಾನದ ಪಿತಾಮಹ ಎಂದೂ ಕರೆಯುತ್ತಾರೆ. ಈ ಸಾಧನೆಗಾಗಿ ಅವರಿಗೆ 1930 ರಲ್ಲಿ ವೈದ್ಯ ವಿಜ್ಞಾನಕ್ಕೆ ನೀಡುವ ನೊಬೆಲ್ ಪ್ರಶಸ್ತಿ ಕೂಡಾ ನೀಡಲಾಗಿದೆ.
ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದಕ್ಕೆ “ರಕ್ತದಾನ” ಎನ್ನುವರು. ರಕ್ತಕ್ಕೆ ವರ್ಷವಿಡಿ ನಿರಂತರವಾಗಿ ಬೇಡಿಕೆ ಇರುತ್ತದೆ. ಯಾಕೆಂದರೆ ಹೆರಿಗೆ, ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಗಳು ರಕ್ತದ ಅವಶ್ಯಕತೆ ಒದಗುತ್ತಲೇ ಇರುತ್ತದೆ. ಜೊತೆಯಲ್ಲಿ ಅರ್ಬುಧ ರೋಗಿಗಳು, ಥಾಲಸೇಮಿಯಾ, ಹಿಮೋಫಿಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಭಿಸಿರುತ್ತಾರೆ. ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ರಿಂದ 40 ದಿನಗಳ ವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. ಆ ಬಳಿಕ ಅದು ಉಪಯೋಗಕ್ಕೆ ಬರುವುದಿಲ್ಲ. ಅದ್ದರಿಂದ ಜನತೆ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ನಿರಂತರವಾಗಿ ಅವಶ್ಯಕತೆ ಇರುವವರಿಗೆ ರಕ್ತನೀಡಿ, ಜೀವ ಉಳಿಸಲು ಸಾಧ್ಯವಾಗುತ್ತದೆ.
ನಿಮಗಿದು ತಿಳಿದಿರಲಿ. . . . . ರಕ್ತಕ್ಕೆ ಪರ್ಯಾಯವಾದ (ಬದಲಿಯಾದ) ವಸ್ತುವಿಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು. ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ, ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿಯಾಗಿ 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ. ಒಂದೆರಡು ವಾರಗಳಲ್ಲಿ ರಕ್ತದ ಎಲ್ಲಾ ಅಂಶಗಳು ದಾನಿಯ ರಕ್ತದಲ್ಲಿ ಸಂಪೂರ್ಣವಾಗಿ ತುಂಬಿಕೊಳ್ಳುತ್ತದೆ. ರಕ್ತದಾನ ಮಾಡುವಾಗ, ಒಂದು ಚುಚ್ಚುಮದ್ದು ತೆಗೆದುಕೊಂಡಷ್ಟೇ ನೋವಿರುತ್ತದೆ. ರಕ್ತದಾನಮಾಡಲು ಮತ್ತು ಸುಧಾರಿಸಿಕೊಳ್ಳಲು ಕೇವಲ 20 ನಿಮಿಷ ಮಾತ್ರ ಸಾಕು. ರಕ್ತದಾನ ಮಾಡುವಾಗ ಒಮ್ಮೆಗೆ 350mಟ ರಕ್ತ ಮಾತ್ರ ತೆಗೆಯಲಾಗುವುದು. ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ 5 ರಿಂದ 6 ಲೀಟರ್ ರಕ್ತ ಇರುತ್ತದೆ.
ಯಾರು ರಕ್ತದಾನ ಮಾಡಬಹುದು ? ಹೆಣ್ಣು ಗಂಡೆಂಬ ಬೇಧ ಭಾವವಿಲ್ಲದೆ 18 ರಿಂದ 65 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಗಂಡಸರು 3 ತಿಂಗಳಿಗೆ ಒಮ್ಮೆ ಮತ್ತು ಹೆಂಗಸರು 4 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು. ರಕ್ತದಾನಿಯ ತೂಕ ಕನಿಷ್ಠ 45 ಕೆ.ಜಿ ಗಿಂತ ಜಾಸ್ತಿ ಇರಬೇಕು. ರಕ್ತದಾನಿಯ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು. ರಕ್ತದಾನಿಯ ರಕ್ತದೊತ್ತಡ ನಿಯಂತ್ರಣದಲ್ಲಿರಬೇಕು ಸಿಸ್ಟೋಲಿಕ್ ರಕ್ತಡೊತ್ತಡ 120 ರಿಂದ 140 ಮತ್ತು ಡಯಾಸ್ಟೋಲಿಕ್ ರಕ್ತದೊತ್ತಡ 80 ರಿಂದ 90 ಇರಬೇಕು.
ಯಾರು ರಕ್ತದಾನ ಮಾಡಬಾರದು ? • ಅಧಿಕ ಅನಿಯಂತ್ರಿತ ರಕ್ತದೊತ್ತಡ ಮತ್ತು ಅನಿಯಂತ್ರಿತ ಸಕ್ಕರೆ ಕಾಯಿಲೆಯಿಂದ ಬಳಲುವವರು ರಕ್ತದಾನ ಮಾಡಬಾರದು. • ಮಧ್ಯಪಾನ ಮತ್ತು ಮಾಧಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು. • ಮಹಿಳೆಯರು ತಿಂಗಳ ಮುಟ್ಟಿನ ಸಮಯದಲ್ಲಿ , ಗರ್ಭಿಣಿಯಾಗಿದ್ದಾಗ, ಎದೆಹಾಲು ಉಣಿಸುತ್ತಿರುವಾಗ ಮತ್ತು ಹೆರಿಗೆಯ ನಂತರ 6 ತಿಂಗಳು ರಕ್ತದಾನ ಮಾಡಬಾರದು. • ಯಾವುದೇ ವ್ಯಕ್ತಿ ಕಾಯಿಲೆಯ ವಿರುದ್ಧ ಲಸಿಕೆ ಪಡೆದಿದ್ದರೆ, ಅಂತವರು ಲಸಿಕೆ ಪಡೆದ 4 ವಾರಗಳವರೆಗೆ ರಕ್ತದಾನ ಮಾಡಬಾರದು. • ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ, ಚಿಕಿತ್ಸೆ ಪಡೆದ ನಂತರದ 3 ತಿಂಗಳು ರಕ್ತದಾನ ಮಾಡಬಾರದು. • ಹಿಂದಿನ 3 ತಿಂಗಳಲ್ಲಿ ತಾವೇ ಯಾವುದೇ ರಕ್ತ ಅಥವಾ ರಕ್ತದ ಅಂಶ ಪಡೆದಿದ್ದರೆ ಅಂತಹವರು ರಕ್ತದಾನ ಮಾಡಬಾರದು. • ಕಾಮಾಲೆ , ಹೆಚ್.ಐ.ವಿ. ಮತ್ತು ಯಾವುದೇ ಲೈಂಗಿಕ ರೋಗವಿರುವವರು ರಕ್ತದಾನ ಮಾಡಬಾರದು. • ಯಾವುದೇ ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಅಂತಹವರು ಮುಂದಿನ 6 ತಿಂಗಳವರೆಗೆ ಮತ್ತು ಚಿಕ್ಕ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾದವರು ಮುಂದಿನ 3 ತಿಂಗಳವರೆಗೆ ರಕ್ತದಾನ ಮಾಡಬಾರದು. • ಅರ್ಬುದ ರೋಗ, ಹೃದಯ ಸಂಬಂಧಿ ಕಾಯಿಲೆ, ಅಸಹಜ ರಕ್ತಸ್ತ್ರಾವ, ಮಧುಮೇಹ, ಮೂತ್ರಪಿಂಡದಕಾಯಿಲೆ ಮತ್ತು ಯಕೃತ್, ಲಿವರ್ಗೆ ಸಂಬಂಧಿಸಿದ ಕಾಯಿಲೆ ಇರುವವರು, ಹೆಪಟೈಟಿನ್ ‘ಬಿ’ ಮತ್ತು ‘ಸಿ’ ಕಾಯಿಲೆಯಿರುವವರು ರಕ್ತದಾನ ಮಾಡಬಾರದು.
ಪರೀಕ್ಷೆಗೆ ಒಳಪಡದ ರಕ್ತದ ಮೂಲಕ ಹರಡಬಹುದಾದ ರೋಗಗಳು : • ಮಲೇರಿಯಾ • ಲೈಂಗಿಕ ಸಂಪರ್ಕದ ರೋಗಗಳು – ಸಿಫಿಲಿಸ್ ಇತ್ಯಾದಿ. • ಹೆಪಟೈಟಿನ್ ‘ಬಿ’ ಮತ್ತು ‘ಸಿ’ ಸೋಂಕಿನಿಂದುಂಟಾಗುವ ಕಾಮಾಲೆ ರೋಗ. • ಹೆಚ್.ಐ.ವಿ ಸೋಂಕು ಮತ್ತು ಏಡ್ಸ್ ರೋಗ.
ರಕ್ತವನ್ನು ಯಾವುದೇ ವ್ಯಕ್ತಿಗೆ ನೀಡುವ ಮೊದಲು ರಕ್ತದ ಮೇಲಿನ ಎಲ್ಲಾ ರೋಗಗಳಿಂದ ಮುಕ್ತವಾಗಿದೆ ಎಂದು ತಿಳಿಯಲು ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗುತ್ತದೆ. ಈ ಕಾರಣಕ್ಕಾಗಿಯೇ ಬದಲಿ ರಕ್ತ ನೀಡಿದರೂ ಒಂದು ಬಾಟಲ್ ಅಥವಾ ಯುನಿಟ್ ರಕ್ತಕ್ಕೆ ಕನಿಷ್ಠ 300 ರಿಂದ 400 ರೂಪಾಯಿ ವೆಚ್ಚ ತಗಲುತ್ತದೆ.
ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಪ್ರಯೋಜನಗಳು : (1) ರಕ್ತದಾನ ಮಾಡುವುದರಿಂದ ದಾನಿಯ ರಕ್ತದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಸಿಗುತ್ತದೆ. (2) ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯತತ್ಪರತೆ, ಜಾಪಕ ಶಕ್ತಿ ವೃದ್ಧಿಯಾಗುತ್ತದೆ. (3) ದೇಹದಲ್ಲಿ ಕೊಬ್ಬಿನ ಅಂಶ (ಕೊಲೆಸ್ಟ್ರಾಲ್) ಕಡಿಮೆ ಮಾಡಲು ಸಹಾಯವಾಗುತ್ತದೆ. (4) ಹೃದಯಾಘಾತವನ್ನು ಶೇ 80ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ. (5) ರಕ್ತದ ಒತ್ತಡ, ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ. (6) ಎಲ್ಲಕ್ಕಿಂತ ಮಿಗಿಲಾಗಿ ಒಂದು ‘ಜೀವ’ ಉಳಿಸಿದಂತಾಗುತ್ತದೆ.
ಕೊನೆಮಾತು: ರಕ್ತದಾನ ಮಹಾದಾನ , ರಕ್ತದಾನಕ್ಕಿಂತ ಮಿಗಿಲಾದ ದಾನ ಬೇರೊಂದಿಲ್ಲ. ರಕ್ತದಾನ ಮಾಡಿ ಜೀವದಾನ ನೀಡಿ. ರಕ್ತದಾನ ಮಾಡುವುದರಿಂದ ಮಾನವೀಯತೆ ಅರಳುತ್ತದೆ. ಬೆಳೆಯುತ್ತದೆ. ರಕ್ತದಾನದ ಬಗ್ಗೆ ಸಂಶಯಗಳು ಹಾಗೂ ಅಪನಂಬಿಕೆಗಳು ತೊಡೆದು ಹೋಗಿ, ಜಾಗೃತಿ ಮೂಡುತ್ತದೆ. ನಿರಂತರ ರಕ್ತದಾನದಿಂದಲೇ ಸುದೃಢ, ಸುಬೀಕ್ಷ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಆಗುತ್ತದೆ.
– ಡಾ|| ಮುರಲೀ ಮೋಹನ್ಚೂಂತಾರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.