(www.vknews.in) : ಶಾಲೆ ಮತ್ತು ಆಸ್ಪತ್ರೆ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಅಕ್ಷರಸ್ಥರಾಗಲಿ ಅಥವಾ ಅನಕ್ಷರಸ್ಥರಾಗಲಿ ಆಸ್ಪತ್ರೆಯ ಮುಖ ಜೀವನದಲ್ಲಿ ಒಮ್ಮೆಯಾದರೂ ನೋಡಿರುತ್ತಾರೆ. ಖಾಯಿಲೆ ವಿದ್ಯಾರ್ಹತೆ ಅಥವಾ ಅಸ್ತಿ ಅಂತಸ್ತು ನೋಡಿ ಬರುತ್ತದೆಯೇ ? ಇಲ್ಲ. ಹಳ್ಳಿಯವರಾಗಲಿ ಅಥವಾ ಪಟ್ಟಣದವರಾಗಲಿ ಎಲ್ಲರಿಗೂ ಸಮಸ್ಯೆಗಳು ಬರುವುದು ಸಹಜ. ಆದರೆ ಆ ಸಮಸ್ಯೆಗಳ ಪರಿಣಾಮ ಅತಿಯಾಗಿ ಪೀಡಿಸುವುದು ಬಡವರ್ಗದವರಿಗೆ. ಉದಾಹರೆಣೆಗೆ ಶಾಲೆ. ಹಳ್ಳಿಗಳಲ್ಲಿ ಶಾಲೆಗಳು ಹೇಗಿರುತ್ತವೆ ? ಎಲ್ಲರಿಗೂ ಗೊತ್ತಿರುವ ವಿಷಯವೆ. ಕೆಲವು ಮಕ್ಕಳು ಶಾಲೆಗೆ ಹೋಗಲು ಮೈಲುಗಟ್ಟಲೆ ನಡೆಯ ಬೇಕಾಗುತ್ತದೆ. ಮಳೆಗಾಲದಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ತಂದೆತಾಯಿಯ ಭಯದಿಂದಲೋ, ಓದಬೇಕು ಎಂಬ ಆಸೆಯಿಂದಲೋ ಅಥವಾ ಮಧ್ಯಾಹ್ನದ ಊಟ ಸಿಗುತ್ತದೆ ಎಂಬ ಕಾರಣದಿಂದಲೋ ಮಕ್ಕಳು ಶಾಲೆಗಳಿಗೆ ಹೋಗುತ್ತಾರೆ. ಶಾಲೆಗೆ ಬರುವ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆಯೇ ? ಶಿಕ್ಷಣ ಇರಲಿ ಕೆಲವು ಕಡೆ ಕುಳಿತುಕೊಳ್ಳಲು ಸಹ ಸರಿಯಾದ ವ್ಯವಸ್ಥೆ ಇಲ್ಲ. ನಾನು ಓದಿದ ಶಾಲೆ ೪೦ ವರ್ಷಗಳ ನಂತರವೂ ಅದೇ ಸ್ಥಿತಿಯಲ್ಲಿದೆ. ಅದೇ ಹಳೇ ಕಟ್ಟಡ. ಯಾವ ರೀತಿಯ ಬದಲಾವಣೆಯೂ ಆಗಿಲ್ಲ. ಇದರರ್ಥ ಒಂದು ಗಾದೆ ಮಾತಿನಲ್ಲಿ ಹೇಳುವುದಾದರೆ “ಬಡವ ನೀ ಮಡಗಿದಹಾಗಿರು”. ದೇಶಪ್ರೇಮಿಗಳಲ್ಲಿ ದೇಶ ಅಭಿವೃದ್ಧಿ ಆಗಬೇಕು ಎಂಬ ಆಸೆ, ಆದರೆ ದೇಶ ಅಭಿವೃದ್ಧಿಗಾಗಿ ಬೇಕಾದ ಮೂಲ ಸೌಕರ್ಯಗಳೇ ಇಲ್ಲ. ಪ್ರಶ್ನೆ ಕೇಳಿದರೆ, ಅಬ್ದುಲ್ ಕಲಾಂ ಹಳ್ಳಿಯಲ್ಲಿ ಓದಿ ಮಿಸೈಲ್ ಮಾಡಲಿಲ್ಲವೇ ..! ಎನ್ನುತ್ತಾರೆ. ೧೩೫ ಕೋಟಿ ಜನ ಎಲ್ಲರೂ ಅಬ್ದುಲ್ ಕಲಾಂ ಆಗಲು ಸಾಧ್ಯವೇ ?
ಇಂದಿನ ಹಳ್ಳಿಯ ಶಾಲೆಗಳ ಪರಿಸ್ಥಿತಿಯನ್ನು ತಿಳಿದು ಅವುಗಳ ಅಭಿವೃದ್ಧಿಗೆ ಬೇಕಾದ ಸವಲತ್ತುಗಳನ್ನು ಹೇಗೆ ಕಲ್ಪಿಸಬೇಕು ಎಂಬ ಚಿಂತನೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಒಂದು ಬಾಟಲಿ ಎಣ್ಣೆ, ಐನೂರು ರೂಗಳ ನೋಟು ಪಡೆದು, ಓಟು ಹಾಕುವುದು, ಅಷ್ಟೇ ಕೆಲಸ. ಯಾವುದರ ಬಗ್ಗೆಯೂ ಪ್ರಶ್ನೆ ಮಾಡಬಾರದು. ಪ್ರಶ್ನೆ ಮಾಡಿದರೆ ದೇಶದ್ರೋಹಿ. ಮಕ್ಕಳನ್ನು ಶಾಲೆಗಳ ಕಡೆಗೆ ಸೆಳೆಯಲು ಯಾವುದೇ ದೃಢ ಕಾರ್ಯಕ್ರಮಗಳಿಲ್ಲ. ಇದ್ದರೂ ಕಾರ್ಯರೂಪಕ್ಕೆ ಸಂಪೂರ್ಣವಾಗಿ ಬರುತ್ತಿಲ್ಲ. ದೇಶಕ್ಕೆ ಗೋಲ್ಡ್ ಮೆಡಲ್ ತರಬೇಕು, ದೇಶದ ಕೀರ್ತಿ ಹೆಚ್ಚಿಸಬೇಕು. ಆದರೆ ಆಟದ ಮೈದಾನ, ವಿವಿಧ ಸ್ಪರ್ಧೆಗಳಿಗೆ ಬೇಕಾದ ಸವಲತ್ತುಗಳನ್ನು ಮಾತ್ರ ಹಳ್ಳಿಯ ಶಾಲೆಗಳು ಕೇಳಬಾರದು. ಎಲ್ಲಾ ಮಕ್ಕಳು ಶಿಸ್ತಿನ ಸಿಪಾಯಿಗಳಾಗಿ ಹೋಗಬೇಕು.
ಆದರೆ ಅವರಿಗೆ ಶಿಸ್ತನ್ನು ಕಲಿಸುವ ಮನಸ್ಸುಗಳಿಲ್ಲ. ಮಾದಕ ವ್ಯಸನಗಳಿಗೆ ಮಕ್ಕಳು ಬಲಿಯಾಗಲು ಕಾರಣಗಳೇನು ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಲು ಸಾಧ್ಯವೇ. ಪ್ರತಿ ಸಮಸ್ಯೆಗೂ ಪರಿಹಾರ ಉಂಟು. ಪೋಷಕರಲ್ಲಿ, ಶಿಕ್ಷಕರಲ್ಲಿ, ಸಾಮಾಜಿಕ ಕಾರ್ಯಕರ್ತರಲ್ಲಿ, ರಾಜಕೀಯವ್ಯಕ್ತಿಗಳಲ್ಲಿ, ಸರ್ಕಾರಿ ಕರ್ಮಚಾರಿಗಳಲ್ಲಿ ಜಾಗೃತಿ ಮೂಡಬೇಕಾಗಿದೆ. ಬದಲಾವಣೆ ತರುವ ಛಲ ಹುಟ್ಟಬೇಕಾಗಿದೆ.
ಆಸ್ಪತ್ರೆಗಳಿಗೆ ಬೆಂಗಳೂರು ಕೇಂದ್ರ ಬಿಂದು. ಬೆರಳೆಣಿಕೆಯಷ್ಟು ಸರ್ಕಾರಿ ಆಸ್ಪತ್ರೆಗಳು. ಮಾನಸಿಕ ಖಾಯಿಲೆಗಳಿಗೆ ನಿಮ್ಹಾನ್ಸ್ ಒಂದೇ ಆಶಾ ಕಿರಣ. ಶಾಸಗಿ ಆಸ್ಪತ್ರೆಗಳು ಎಲುಬೆಗಳಂತೆ ಬೆಳೆಯುತ್ತಿವೆ. ಶಾಲಾಕಾಲೇಜುಗಳು ಮತ್ತು ಆಸ್ಪತ್ರೆಗಳು ಅತಿದೊಡ್ಡ ವ್ಯಾಪಾರೀ ಮರುಕಟ್ಟೆಗಳಾಗಿ ಬೆಳೆಯುತ್ತಿವೆ. ವೈದ್ಯದೇವೋಭವ ಎಂಬ ಬಿರುದು ಎಲ್ಲಾ ವೈದ್ಯರುಗಳಿಗೆ ಕೊಡಲು ಸಾಧ್ಯವಿಲ್ಲ. ಏಕೆಂದರೆ ಎಲ್ಲವೂ ವ್ಯಾಪಾರೀಕರಣವಾಗಿಹೋಗಿದೆ. ವ್ಯಾಪಾರ ಮಾಡಲಿ. ಪ್ಯಾಪಾರದಲ್ಲಿ ದುಡ್ಡು ಹಾಕಿದ್ದಾರೆ, ಸಂಪಾದನೆ ಮಾಡಲಿ. ವ್ಯಾಪಾರದಲ್ಲಿ ಮೋಸದ ಪ್ರಮಾಣ ಕಡಿಮೆಯಾದರೆ ಸಾಕು. ಔಷಧಿಗಳಲ್ಲಿ ಕಮಿಷನ್, ಅನಾವಶ್ಯಕ ಲ್ಯಾಬ್ ಟೆಸ್ಟುಗಳಲ್ಲಿ ಕಮಿಷನ್, ಸರ್ಜರಿಗಳಲ್ಲಿ ಕಮಿಷನ್, ಇಂಪ್ಲಾಂಟುಗಳಲ್ಲಿ ಕಮಿಷನ್, ಬ್ಲಡ್ ಬ್ಯಾಂಕುಗಳಲ್ಲಿ ಕಮಿಷನ್, ವೈದ್ಯರ ರೆಫೆರಲ್ಲುಗಳಲ್ಲಿ ಕಮಿಷನ್ – ಈ ರೀತಿ ಅನೇಕ ರೀತಿಗಳಲ್ಲಿ ಹಣ ಲೂಟಿ ಮಾಡುವ ಚಾಳಿ ಯಾರನ್ನು ಶ್ರೀಮಂತರನ್ನಾಗಿ ಮಾಡುತ್ತಿದೆ.? ಆಸ್ಪತ್ರೆಗೆ ಹೋಗುವವರೆಲ್ಲ ಶ್ರೀಮಂತರೇ ? ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ರೀತಿಯ ದೌರ್ಜನ್ಯಗಳು ನಡೆದರೆ ಖಾಸಗಿ ಆಸ್ಪತ್ರೆಗಳಲ್ಲಿ ಮತ್ತೊಂದು ರೀತಿಯ ದೌರ್ಜನ್ಯಗಳು ನಡೆಯುತ್ತಿವೆ.
ನ್ಯಾಯ ನೀತಿ ಧರ್ಮ – ಇವೆಲ್ಲ ಪುಸ್ತಕದ ಮಾತುಗಳಾಗಿ ಬಿಟ್ಟಿವೆ. ಪ್ರಕೃತಿ ಎಲ್ಲವನ್ನು ಗಮನಿಸುತ್ತಿದೆ. ಕರೋನ, ಭೂಕಂಪಗಳು, ಗಲಭೆಗಳು, ಯುದ್ಧಗಳು, ಪ್ರಾಕೃತಿಕ ವಿಕೋಪಗಳು ಮಾತ್ರ ನಮ್ಮ ರಾಜ್ಯಕ್ಕೆ, ದೇಶಕ್ಕೆ ಬರಬಾರದು. ಇದರ ಉತ್ತರ ಆತ್ಮಸಾಕ್ಷಿ ಸತ್ತಿರುವವರು ಕೊಡಲು ಸಾಧ್ಯವಿಲ್ಲ. ಅವರ ಬಳಿ ಅವರಿಗೆ ಬೇಕಾದ ಅನುಕೂಲಕರ ನೂರಾರು ಪ್ರತಿ ಉತ್ತರಗಳಿರುತ್ತವೆ. ಇದರ ಉತ್ತರ ವಿಧಿಯೇ ಕೊಡಬಲ್ಲದು. ಆದರೆ ಎಲ್ಲವನ್ನು ವಿಧಿಯ ಮೇಲೆ ಬಿಡುವುದು ಸರಿಯಲ್ಲ. ಇಡೀ ಪ್ರಪಂಚವನ್ನು ಬದಲಿಸಲು ಸಾಧ್ಯವಿಲ್ಲ. ನಮಗೆ ಸಾಧ್ಯವಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಬಹುದು.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.