(www.vknews.in) : ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ‘ಕನ್ನಡ-ಬ್ಯಾರಿ ಲೇಖಕಿಯರ ಸಾಹಿತ್ಯ ಕೂಟ’ ವಾಟ್ಸಪ್ ಬಳಗವು ರಮೀಝ ಯಂ.ಬಿ ಅವರ ಸುಂದರ ನಿರ್ವಹಣೆಯಲಿ ನಡೆಸಿದ ಹನಿಗವನ ಚಟುವಟಿಕೆಯಲ್ಲಿ ಕವಯತ್ರಿಗಳು “ಬಲಿ-ಪೆರ್ನಾಳ್” ಎಂಬ ಶೀರ್ಷಿಕೆಯಡಿಯಲ್ಲಿ ಬಹಳ ಚೆಂದದ ಹನಿಗವನ ರಚಿಸಿದ್ದಾರೆ.
– ಹಫ್ಸಾ ಬಾನು ಬೆಂಗಳೂರು
“ಬಲಿ ಪೆರ್ನಾಳ್” – ಹನಿಗವನ
ಖಲೀಲುಲ್ಲಾಹ್ ರಿಗೆ ಅಲ್ಲಾಹನ ಸತ್ಯನಿಷ್ಠೆಯ ಪರೀಕ್ಷೆ ಪಿತೃವಾತ್ಸಲ್ಯದ ಪ್ರತೀಕವ ಬಲಿ ನೀಡಬೇಕೆಂಬ ಅಪೇಕ್ಷೆ
ಝಬೀವುಲ್ಲಾಹ್ ವಿಧೇಯತೆ ಮನುಕುಲಕ್ಕೆ ಮಾದರಿನಕ್ಷೆ ಬಲಿದಾನದ ಆಶಯದಲ್ಲಿ ಪರಮದಯಾಮಯನ ರಕ್ಷೆ
ಹಜ್ಜಾಜಿಗಳು ಸಜ್ಜು, ಮಿನಾ-ಅರಫಾ ಪುಣ್ಯ ಕಾರ್ಯಕ್ಕಾಗಿ ಇಬ್ರಾಹಿಂ(ಅ.ಸ) ಕರೆಗೆ ಓಗೊಟ್ಟು ತವಾಫ್ ನಲ್ಲಿ ಭಾಗಿ
ಎಡೆಬಿಡದ ತಕ್ಬೀರ್ ಜಪ ಸೃಷ್ಟಿಕರ್ತನ ಸಂಪ್ರೀತಿಗಾಗಿ ಆಚರಿಸುವ ಭಾತೃತ್ವ-ಸಮರ್ಪಣೆಯ, ಹಬ್ಬದ ಸಂದೇಶವಾಗಿ
✍🏻 ರಮೀಝ ಯಂ.ಬಿ, ಕುಕ್ಕಾಜೆ
ಆಝಾನ್ ನೊಂದಿಗೆ ಮೊಳಗುತಿದೆ ತಕ್ಬೀರ್ ನಿನಾದ ಮನೆ-ಮನಗಳಲ್ಲಿ ಬಕ್ರೀದ್ ಹಬ್ಬದ ಸಂಭ್ರಮ
ಇಬ್ರಾಹಿಂ ನಬಿ(ಅ)ರ ತ್ಯಾಗದ ಮೈನವಿರೇಳಿಸುವ ಸ್ಮರಣೆ ಮಕ್ಕಾದಲ್ಲಿ ಹಜ್ಜಾದಿಗಳ ಆತ್ಮಾರ್ಥ ಪ್ರಾರ್ಥನೆ …
ಕುರ್ಬಾನಿಯಿಂದ ಬಡವರ ಮನೆಯಲ್ಲೂ ಮಾಂಸದೂಟ ಬಲಿಪೆರ್ನಾಲ್ ಕಲಿಸುತಿದೆ ಸಹಬಾಳ್ವೆಯ ಪಾಠ
ಬಕ್ರೀದ್ ಎಂದರೆ ಬರಿ ಹಬ್ಬವಲ್ಲ ತ್ಯಾಗ-ಬಲಿದಾನ ಅಲ್ಲಾಹನ ಮೇಲಿರುವ ಪ್ರೀತಿ-ಭಕ್ತಿಯ ಸಮ್ಮಿಲನ
✍️ ರಹ್ಮತ್ ಪುತ್ತೂರು
ಬಲಿ ಪೆರ್ನಾಲಿನ ಆಗಮನ ಎಲ್ಲೆಡೆ ಸಂತಸವ ಹರಡೋಣ
ಮನೆ ಮನೆಯಲ್ಲೂ ದಮ್ಮ್ ಬಿರಿಯಾನಿಯ ದೌಲತ್ತು ಅಲ್ಲಲ್ಲಿ ಕುರ್ಬಾನಿಯ ಕಸರತ್ತು…
ನೆರೆಮನೆಯ ಕಲರ್ಫುಲ್ ಶರಬತ್ತು ನನ್ನೇ ಕೈ ಬೀಸಿ ಕರೆದಿತ್ತು ..
ಬಣ್ಣದ ಬಟ್ಟೆ,ಗೆಳೆತಿಯರ ಗುಂಪು ಹರಟೆ ಜೊತೆಗೂಡಿ ಇಬಾದತ್ತಿಗೆ ಹೊರಟೆ…
✍️ ನಸೀಬ@ಗಡಿಯಾರ್
ಎಲ್ಲೆಡೆಯು ಸಂಭ್ರಮ ಸಡಗರ ಇಬ್ರಾಹಿಂ ಇಸ್ಮಾಯಿಲ್ ನೆಬಿಯರ
ತ್ಯಾಗದ ನೆನಪನ್ನು ಸಾರುತಾ ಸಹೋದರತೆಯ ಎಲ್ಲೆಡೆ ಹಂಚುತ್ತಾ
ಉಳ್ಳವನು ತಾನೊಬ್ಬನೇ ತಿನ್ನದೇ ಬಡಬಗ್ಗರಿಗೂ ದಾನ ಧರ್ಮದಿ
ಪ್ರೀತಿಯ ಹಂಚುವ ಬಲಿಪೆರ್ನಾಳ್ ಸಮಾನತೆ ಸಾರುವ ಬಲಿಪೆರ್ನಾಳ್
✍🏻 ರಮ್ಲತ್ ಎ.
ಬಡವನ ಮನೆಯಲ್ಲೂ ಇರಲಿ ಸಂಭ್ರಮ ಬಲಿ ಪೆರ್ನಾಲ್ ದಿನ ಬಟ್ಟಲಲ್ಲಿ ಘಮ ಘಮ
ರಸೂಲರ ನೀತಿ ಪಾಠದಿ ಮುಕ್ತವಾಯಿತು ಹಸಿವು ಉಂಡವನಿಗಿರಲಿ ಖಾಲಿ ಹೊಟ್ಟೆಯ ಸಂಕಟದ ಅರಿವು
ಕಡ್ಡಾಯ ನೀಡಲೆಂದು ಸೂಚಿಸಿದರು ಬಲ್ಲಿದನಿಗೆ ಕೊರಗದಿರು ನೀನೆಂದು ಸಂತೈಸಿದರು ಬಡವನಿಗೆ
ನೀಡಿರೆಂದರು ನಬಿ ವರುಷಕ್ಕೊಂದು ಕುರಿ ಮಾಸಬಹುದು ಹೃದಯದಲ್ಲಿ ಪಸರಿಸಿದ ಕರಿ
~ ಸಾರಾಅಲಿ ಪರ್ಲಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.