ಬಕ್ರೀದ್ ಹಬ್ಬವನ್ನು ಯಾಕೆ ಆಚರಿಸುತ್ತಾರೆ..?
(www.vknews.in) : ಬೆಂಗಳೂರಿಂದ ಸುಮಾರು ನಾಲ್ಕು ಸಾವಿರ ಕಿ.ಮೀ. ದೂರದಲ್ಲಿ ಸೌದಿ ಅರೇಬಿಯಾ ದೇಶದ ಒಂದು ಪಟ್ಟಣದ ಹೆಸರು ಮಕ್ಕಾ. ಮುಸಲ್ಮಾನರ ಪವಿತ್ರ ಸ್ಥಳ. ಮಕ್ಕಾದಲ್ಲಿ ಇಂದು ಬಹಳ ವಿಶಾಲವಾದ ಒಂದು ಮಸೀದಿ ಇದೆ. ಒಮ್ಮೆಗೆ ಸುಮಾರು ೨೬ ಲಕ್ಷ ಜನರು ನಮಾಜ್ ಸಲ್ಲಿಸಬಹುದಾಗಿದೆ. ಅದರ ಹೆಸರೇ “ಮಸ್ಜಿದ್ ಅಲ್ ಹರಮ್”. ಅದರಲ್ಲಿರುವ ಭವನ “ಕಾಬಾ”. ದೇವರ ಮನೆ. ಇಡೀ ವಿಶ್ವದ ಮುಸಲ್ಮಾನರ ಕೇಂದ್ರ ಬಿಂದು. ಮುಸಲ್ಮಾನರು ಪ್ರಪಂಚದ ಯಾವುದೇ ಮೂಲೆಯಿಂದಾದರೂ ನಮಾಜ್ ನೆರೆವೇರಿಸಲಿ, ಅವರು ಕಾಬಾ ಇರುವ ದಿಕ್ಕಿನಲ್ಲೇ ಮುಖ ಮಾಡಿ ನಮಾಜ್ ಸಲ್ಲಿಸಬೇಕಾಗುತ್ತದೆ. ಆದುದರಿಂದಲೇ ಮಸೀದಿಗಳನ್ನು ಕಟ್ಟುವ ಮುನ್ನ ಸಂಬಂಧಪಟ್ಟ ಇಂಜಿನಿಯರುಗಳಿಗೆ ಕರೆಸಿ ದಿಕ್ಸೂಚಿ ಉಪಕರಣದಿಂದ ಕಾಬಾದ ದಿಕ್ಕನ್ನು ಗುರುತಿಸಿಕೊಂಡು, ಮಸೀದಿಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಕಾಬಾ ಇರುವ ದಿಕ್ಕಿನತ್ತ ಮೂತ್ರ ವಿಸರ್ಜನೆ ಮಾಡಬಾರದು, ಆ ದಿಕ್ಕಿನತ್ತ ಉಗಿಯಬಾರದು, ಆ ದಿಕ್ಕಿನತ್ತ ಕಾಲು ಚಾಚಿ ಮಲಗಬಾರದು. ಕಾಬಾದ ಗೌರವಾರ್ಥದ ಸಂಕೇತವಾಗಿ ಮುಸಲ್ಮಾನರ ಎಲ್ಲಾ ಮನೆಗಳಲ್ಲಿ ಶೌಚಾಲಯದ ದಿಕ್ಕು ಕಾಬಾದ ಕಡೆಗೆ ಇರಿಸಲಾಗುವುದಿಲ್ಲ. ಮಲಗುವ ಕೋಣೆಗಳಲ್ಲಿ ಮಂಚವನ್ನು ಕಾಬಾದ ದಿಕ್ಕನ್ನು ಗಮನದಲ್ಲಿಟ್ಟುಕೊಂಡು ಹಾಕಲಾಗುತ್ತದೆ. ಕಾಬಾದ ಕಡೆಗೆ ಕಾಲು ಚಾಚದ ಹಾಗೆ ಎಚ್ಚರಿಕೆ ವಹಿಸಲಾಗುತ್ತದೆ. ಮುಸಲ್ಮಾನರನ್ನು ಕಬರಸ್ಥಾನದಲ್ಲಿ ಮಣ್ಣು ಮಾಡುವಾಗ ಸಹ ಕಾಬಾದ ದಿಕ್ಕನ್ನು ಬಿಡುವುದಿಲ್ಲ. ಶವದ ಮುಖ ಕಾಬಾದ ದಿಕ್ಕಿನತ್ತ ಮಾಡಿ ಮಲಗಿಸಲಾಗುತ್ತದೆ. ಅಂದರೆ ಭಾರತದಲ್ಲಿ, ಶವವನ್ನು ಹೂಳುವಾಗ ಮುಖ ಪಶ್ಚಿಮ ದಿಕ್ಕಿನತ್ತ ಮಾಡಿ, ತಲೆ ಉತ್ತರ ಮತ್ತು ಕಾಲು ದಕ್ಷಿಣ ದಿಕ್ಕಿನತ್ತ ಮಾಡಿ, ಬಲಗಡೆ ತಿರುಗಿ ಮಲಗಿದ ಹಾಗೆ ಮಲಗಿಸಿಲಾಗುತ್ತದೆ.
ಪ್ರವಾದಿ ಜೀಸಸ್, ಪ್ರವಾದಿ ಮೊಸಸ್, ಪ್ರವಾದಿ ಡೇವಿಡ್, ಪ್ರವಾದಿ ಅಬ್ರಹಾಂ – ಇನ್ನೂ ಅನೇಕ ಪ್ರವಾದಿಗಳ ಹೆಸರುಗಳನ್ನು ನಾವು ಕೇಳಿರುವುದುಂಟು. ಮುಸಲ್ಮಾನರು ಪ್ರವಾದಿ ಅಬ್ರಹಾಂ ರವರನ್ನು ಪ್ರವಾದಿ ಇಬ್ರಾಹೀಮ್ ಎಂದು ಕರೆಯುತ್ತಾರೆ. ಸುಮಾರು ನಾಲ್ಕು ಸಾವಿರ ವರುಷಗಳ ಹಿಂದೆ ಅವರು ಮತ್ತು ಅವರ ಮಗ ಇಸ್ಮಾಯೀಲ್ ಜಬೀವುಲ್ಲಾ (ಅ) ಸೇರಿ ದೇವರ ಅಪ್ಪಣೆಯ ಮೇರೆಗೆ ಕಾಬಾದ ಪುನರ್ನಿರ್ಮಾಣ ಮಾಡಿದರು.
ಹಜ್ರತ್ ಇಬ್ರಾಹೀಮ್ (ಅ) ರವರ ಪೋಷಕರು ಮೂರ್ತಿಗಳ ವ್ಯಾಪರಸ್ಥರಾಗಿದ್ದರು. ಹಜ್ರತ್ ಇಬ್ರಾಹೀಮ್ ರವರಿಗೆ ಕುತೂಹಲ ಮೂಡಿ, ಪೋಷಕರಿಗೆ ಈ ಮೂರ್ತಿಗಳು ದೇವರಾಗಲು ಹೇಗೆ ಸಾಧ್ಯ ? ಎಂಬ ಪ್ರಶ್ನೆ ಕೇಳಿ ವಿವಾದಕ್ಕೀಡಾದರು. ಅವರಿಗೆ ಮನೆಯಿಂದ ಹೊರಹಾಕಲಾಯಿತು. ದಯಾನಂದ ಸರಸ್ವತಿ ಸಹ ಇದೇ ಪ್ರಶ್ನೆಯನ್ನು ತನ್ನ ತಂದೆಯವರಿಗೆ ಕೇಳಿ, ಉತ್ತರ ಸಿಗದಿದ್ದಾಗ, ಮನೆ ಬಿಟ್ಟು ದೇವರ ಹುಡುಕಾಟ ಪ್ರಾರಂಭಿಸಿದ್ದು. ಪ್ರವಾದಿ ಇಬ್ರಾಹೀಮ್ ರವರ ಮೂರ್ತಿಗಳ ತಿರಸ್ಕಾರ ಮನೆಮಾತಾಗಿ ಹೋಯಿತು. ಬಾದಷಾಹ ನಂರೂದ್ ಕೋಪಕ್ಕೆ ಹಜ್ರತ್ ಇಬ್ರಾಹೀಮ್ ರವರು ಗುರಿಯಾಗಬೇಕಾಯಿತು. ಪ್ರವಾದಿ ಇಬ್ರಾಹೀಮರಿಗೆ ಸುಡು ಬೆಂಕಿಯಲ್ಲಿ ಹಾಕಲಾಯಿತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಬೆಂಕಿ ಅವರನ್ನು ಸುಡಲಿಲ್ಲ. ಆದರೆ ಊರು ಬಿಡಬೇಕಾಗಿಯಿತು.
ಮದುವೆಯಾಗಿ ಸುಮಾರು ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ತನ್ನ ವಯಸ್ಸಿನ ೯೦ರ ಹಂತದಲ್ಲಿ ದೇವರು ಓರ್ವ ಸುಪುತ್ರನನ್ನು ದಯಪಾಲಿಸಿದನು. ಇಲ್ಲಿಂದ ಪ್ರವಾದಿ ಇಬ್ರಾಹೀಮರಿಗೆ ಇನ್ನೂ ಕಠಿಣ ಪರೀಕ್ಷೆಗಳು ಪ್ರಾರಂಭವಾದವು. ದೇವರ ವತಿಯಿಂದ ಅವರಿಗೆ ಕನಸುಗಳು ಬರತೊಡಗಿದವು. ಹೆಂಡತಿ ಮತ್ತು ಮಗನಿಂದ ಅಗಲಬೇಕು ಎಂಬ ಸಂದೇಶ ಸಿಕ್ಕಿತು. ಅದರ ಮೇರೆಗೆ ತನ್ನ ನವಶಿಸು ಮತ್ತು ಮಡದಿಯನ್ನು ಒಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಅಲ್ಲಿಯೇ ಅವರನ್ನು ಬಿಟ್ಟು ಬರತೊಡಗಿದರು. ಆಗ ಅವರ ಹೆಂಡತಿ ಹಾಜಿರಾ(ಅ) ಪ್ರವಾದಿವರ್ಯರು ದೇವರ ಅಪ್ಪಣೆ ಇಲ್ಲದೆ ಏನೂ ಮಾಡುವುದಿಲ್ಲ, ಇದು ದೇವರ ಅಪ್ಪಣೆಯ ಮೇರೆಗೆ ಮಾಡುತ್ತಿರುವಿರೋ ? ಎಂದು ಕೇಳಿದಾಗ, ಹೌದು ಎಂದು ಹೇಳಿ ಅಲ್ಲಿಂದ ಹೊರಟು ಹೋದರು. ಆ ನಿರ್ಜನ ಮರುಭೂಮಿಯಲ್ಲಿ ಬೆಟ್ಟ ಗುಡ್ಡಗಳ ನಡುವೆ ದೇವರ ಆಸರೆ ಬಿಟ್ಟರೆ ಬೇರಾವ ಆಸರೆಯೂ ಇರಲಿಲ್ಲ. ತಂದಿದ್ದ ಖರ್ಜೂರ ಮತ್ತು ನೀರು ಖಾಲಿಯಾಗಿ ಹೋದವು. ತನ್ನ ಶಿಶುವಿನ ದಾಹ ತೀರಿಸಲು ಆ ನಿರ್ಜನ ಪ್ರದೇಶದಲ್ಲಿ ಸಫಾ ಮತ್ತು ಮರ್ವಾ ಎಂಬ ಬೆಟ್ಟಗಳ ನಡುವೆ ನೀರಿಗಾಗಿ ಅಮ್ಮ ಹಾಜಿರಾ ಓಡಾಡಿದರು. ಏನೂ ಸಿಗಲಿಲ್ಲ. ದೇವರಲ್ಲಿ ಮೊರೆ ಹೋದರು. ಮಗು ಇಸ್ಮಾಯೀಲ್ ಹಿಮ್ಮಡಿಗಳನ್ನು ಹೊಡೆಯುತ್ತಿದ್ದ ಜಾಗದಲ್ಲಿ ನೀರಿನಿ ಚಿಲುಮೆ ಪ್ರಾರಂಭವಾಯಿತು. ಆ ಸಿಹಿ ನೀರಿನ ಬಾವಿ ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ನೀರನ್ನು ನಿರಂತರವಾಗಿ ಕೊಡುತ್ತಲೇ ಬಂದಿದೆ. ಕೋಟ್ಯಂತರ ಜನರ ದಾಹವನ್ನು ತೀರಿಸುತ್ತಲೇ ಇದೆ. ಆ ನೀರಿನ ಹೆಸರೇ ಜಮ್ ಜಮ್.
ಪುನಃ ಪ್ರವಾದಿ ಇಬ್ರಾಹೀಮರಿಗೆ ಕನಸು ಬಿತ್ತು. ಕನಸಿನಲ್ಲಿ ಪ್ರವಾದಿ ಇಬ್ರಾಹೀಮರವರು ತನ್ನ ಸ್ವಂತ ಮಗನ ಕತ್ತನ್ನು ಕೊಯ್ಯುತ್ತಿದ್ದಾರೆ. ಕನಸು ಅರ್ಥವಾಗಲಿಲ್ಲ. ಬಹುಶಃ ಜಾನುವಾರುಗಳನ್ನು ದೇವರ ಹೆಸರಿನಲ್ಲಿ ಕೊಡಬೇಕೇನೋ ಎಂದು ಊಹಿಸಿ, ಜಾನುವಾರುಗಳನ್ನು ಕೊಟ್ಟರು. ಆದರೆ ನಾಲ್ಕನೆ ರಾತ್ರಿಯೂ ಅದೇ ಕನಸು. ಓಹೋ ದೇವರು ನನ್ನ ಮಗನನ್ನು ಬಯಸಿದ್ದಾನೆ ಎಂದು ಅರಿತುಕೊಂಡು, ತನ್ನ ಮಗ ಮತ್ತು ಹೆಂಡತಿಯನ್ನು ಹುಡುಕಿಕೊಂಡು ಬಂದರು. ಆಗ ಮಗನಿಗೆ ಸುಮಾರು ಹತ್ತು ವರ್ಷಗಳು ತುಂಬಿದ್ದವು. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯ ಅಗ್ನಿ ಪರೀಕ್ಷೆಗಳನ್ನು, ತ್ಯಾಗ ಬಲಿದಾನಗಳನ್ನು ನಾವು ನೀವು ಊಹಿಸಲೂ ಸಾಧ್ಯವಿಲ್ಲ. ಪದಗಳಲ್ಲಿ ಬಂಧಿಸಲೂ ಸಾಧ್ಯವಿಲ್ಲ.
ತನ್ನ ಕನಸಿನ ಬಗ್ಗೆ ಮಗನ ಬಳಿ ಹೇಳಿದರು. ತಂದೆಯಂತೆ ಮಗ. ದೇವರ ಅಪ್ಪಣೆ ಎಂದಾದರೂ ಮೀರುವುದುಂಟೆ. ಬೇಗ ತನ್ನ ಕಾರ್ಯವನ್ನು ಮುಗಿಸಿ ಕೃತಾರ್ಥರಾಗಿ ಅಪ್ಪಾಜಿ ಎಂದರು. ಚೂರಿಯನ್ನು ಚೆನ್ನಾಗಿ ಹರಿತ ಮಾಡಿಕೊಳ್ಳಿ. ನನ್ನ ಮತ್ತು ನಿಮ್ಮ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಳ್ಳಿ. ನನ್ನ ಕೈಕಾಲನ್ನು ಕಟ್ಟುಬಿಡಿ. ತಂದೆ ಮಗುವಿನ ವಾತ್ಸಲ್ಯ ದೇವರ ಅಪ್ಪಣೆ ನೆರವೇರಿಸಲು ಅಡ್ಡಿ ಉಂಟು ಮಾಡಬಾರದು ಎಂದು ಮಗ ಇಸ್ಮಾಯೀಲ್ ತಂದೆಯೊಂದಿಗೆ ಬೇಡಿಕೊಂಡರು. ಹಜ್ರತ್ ಇಬ್ರಾಹೀಮ್ ಹಾಗೆಯೇ ಮಾಡಿದರು. ಆದರೆ ಚೂರಿ ಹರಿತವಾಗಿದ್ದರೂ ಕತ್ತು ಕೊಯ್ಯಲಾಗಲಿಲ್ಲ. ದೇವರ ಪರೀಕ್ಷೆಯಲ್ಲಿ ತಂದೆ ಮಗ ಉತ್ತೀರ್ಣರಾಗಿ ದೇವರ ಮೆಚ್ಚುಗೆಗೆ ಪಾತ್ರರಾದರು. ಮಗನ ಸ್ಥಾನ ಟಗರು ತುಂಬಿಕೊಂಡಿತು. ದೇವರ ಕೃಪೆಯಿಂದ ಉತ್ಪತ್ತಿಯಾದ ಆ ನೀರಿನ ಹತ್ತಿರ ದೇವರ ಅಪ್ಪಣೆಯ ಮೇರೆಗೆ ತಂದೆ ಮತ್ತು ಮಗ ಸೇರಿ ದೇವರ ಭವನ “ಕಾಬಾ”ದ ನಿರ್ಮಾಣ ಮಾಡಿದರು.
ಸಾವಿರಾರು ವರ್ಷಗಳ ನಂತರ ಆ ಭವನಕ್ಕೆ ನಿಜವಾದ ಸ್ಥಾನ ಮನ ಕಲ್ಪಿಸಿದ್ದು ಪ್ರವಾದಿ ಮುಹಮ್ಮದ್(ಸ). ಶ್ರೀಮಂತ ಮುಸಲ್ಮಾನರು ತನ್ನ ಜೀವಾವಧಿಯಲ್ಲಿ ಒಮ್ಮೆಯಾದರೂ ಕಾಬಾ ನೋಡುವುದು ಕಡ್ಡಾಯವಾಯಿತು. ಪ್ರವಾದಿ ಇಬ್ರಾಹೀಮರವರ ತ್ಯಾಗ ಬಲಿದಾನಗಳನ್ನು ನೆನೆಯುತ್ತ, ಅವರ ಜ್ಞಾಪಕಾರ್ಥವಾಗಿ ಜಾನುವಾರುಗಳನ್ನು ವಧೆ ಮಾಡಬೇಕು. ಅಮ್ಮ ಹಾಜಿರಾ ರವರ ಜ್ಞಾಪಕಾರ್ಥವಾಗಿ ಸಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ಓಡಾಡಬೇಕು. ಶರಿಯತ್ ಪ್ರಕಾರ ಹಾಜಿಗಳು ಹಜ್ಜಿನ ಎಲ್ಲಾ ಆಚರಣೆಗಳನ್ನು ಮಾಡತಕ್ಕದ್ದು. ಶರಿಯತ್ ಎಂದರೆ ಪ್ರವಾದಿವರ್ಯರ ನಡೆನುಡಿ. ಮಕ್ಕಾ ಪಟ್ಟಣದ ಪವಿತ್ರ ಯಾತ್ರೆಗೆ “ಹಜ್” ಎನ್ನುತ್ತಾರೆ. ಅಲ್ಲಿಗೆ ಹೋಗಿ ಬಂದವರಿಗೆ “ಹಾಜಿ” ಎಂಬ ಬಿರುದು ಬರುತ್ತದೆ. “ಜಮ್ ಜಮ್” ನೀರೇ ಪವಿತ್ರ ತೀರ್ಥ. ಪ್ರತಿ ವರ್ಷ ಸುಮಾರು ೩೦ ಲಕ್ಷ ಜನರು ಪ್ರಪಂಚದ ನಾನಾ ಭಾಗಗಳಿಂದ ಮಕ್ಕಾ ಪಟ್ಟಣದಲ್ಲಿ ಹಜ್ ಮಾಡಲು ಸೇರುತ್ತಾರೆ. ಪ್ರತಿ ಹಜ್ ಯಾತ್ರಿಗಳು ಮನೆಗಳಿಗೆ ಹಿಂತಿರುಗುವಾಗ ೫ ಲೀಟರ್ ಜಮ್ ಜಮ್ ನೀರನ್ನು ತರಬಹುದು. ಬಂಧು ಬಳಗಕ್ಕೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ಆ ನೀರನ್ನು ಬೇರೆ ನೀರಿನೊಂದಿಗೆ ಬೆರೆಸಿ, ಅದರ ಪ್ರಮಾಣ ಹೆಚ್ಚು ಮಾಡಿ ಕುಡಿಯಲಾಗುತ್ತದೆ. ಜೋಪಾನವಾಗಿ ಮನೆಯಲ್ಲಿ ಇಡಲಾಗುತ್ತದೆ. ಯಾರಾದರೂ ಕೊನೆಯುಸಿರು ಎಳೆಯುತ್ತಿರುವಾಗ ಶುದ್ಧ ಜಮ್ ಜಮ್ ನೀರನ್ನು ಹಾಕಲಾಗುತ್ತದೆ.
ಜಾನುವಾರುಗಳ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಬೇಕಾಗುತ್ತದೆ. ಬಡವರಿಗೊಂದು ಭಾಗ. ನೆಂಟರಸ್ಥರಿಗೆ ಒಂದು ಭಾಗ. ಸ್ವಂತಕ್ಕೆ ಒಂದು ಭಾಗ. ನಮ್ಮ ದೇಶದ ಮಾರವಾಡಿಗಳು ಬಟ್ಟೆಗಳನ್ನು ಮಾರಲು ರಂಜಾನ್ ಹಬ್ಬ ಕಾಯುವ ಹಾಗೆ, ರೈತರು ತಮ್ಮ ಜಾನುವಾರುಗಳನ್ನು ಮಾರಿ ಹಣ ಸಂಪಾದನೆ ಮಾಡಲು ಬಕ್ರೀದ್ ಹಬ್ಬ ಅಂದರೆ ಬಕರ(ಕುರಿ) ಈದ್(ಹಬ್ಬ) ಕಾಯುತ್ತಿರುತ್ತಾರೆ. ದೇಶದಲ್ಲಿ ನಿರುದ್ಯೋಗ ದರ ೭.೮೦%. ೧.೩ ಕೋಟಿ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಕೋಟ್ಯಂತರ ಕೃಷಿ ಕೂಲಿಗಾರರು ಮತ್ತು ಕಾರ್ಮಿಕರು ನಿರುದ್ಯೋಗದ ಸುಳಿಗೆ ಸಿಲುಕಿದ್ದಾರೆ.
೧೦ರಿಂದ ೫೦ ಸಾವಿರ ಬೆಲೆಯ ಆಡುಗಳು / ಕುರಿಗಳು ಬಕ್ರೀದ್ ಹಬ್ಬಕ್ಕೆ ಮುಸಲ್ಮಾನರು ಖರೀದಿಸುತ್ತಾರೆ. ಪ್ರತಿ ಪ್ರಾಣಿಗೆ ಸರಾಸರಿ ೨೦ ಸಾವಿರ ಬೆಲೆ ಅಂತ ಅಂದುಕೊಂಡರೂ ೨ ಕೋಟಿ ಜನ ರೂ ೨೦ ಸಾವಿರ ಕೊಟ್ಟರೆ ಅದು ೪೦೦,೦೦೦,೦೦೦,೦೦೦ 4 ಲಕ್ಷ ಕೋಟಿ ರೂಪಾಯಿಯ ಬೃಹತ್ ವ್ಯವಹಾರ…! ಒಂದು ರಾಜ್ಯದ ಬಜೆಟ್…!
ಜಾನುವಾರುಗಳ ಮಾಂಸ ಮನುಷ್ಯ ಸೇವಿಸಿ ಬಿಡುತ್ತಾನೆ. ದೇವರಿಗೆ ಅದರಿಂದ ಏನು ಲಾಭ…? ದೇವರು ಪರೀಕ್ಷಿಸುವುದು ನಮ್ಮ ಆಂತರಿಕ ನಿಯ್ಯತ್ತು ಮಾತ್ರ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.