ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರ್ಕಾರದ ಅಡುಗೆ ಅನಿಲದ ಸಿಲಿಂಡರ್ ದರ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ನಗರದ ಸುಲ್ತಾನ್ ಪಾಳ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ತಾಹಿರ್ ಹುಸೇನ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಜನಸಾಮಾನ್ಯ ಕಂಗಾಲಾಗಿದ್ದು, ಕೇಂದ್ರ ಸರ್ಕಾರ ಮೇಲಿಂದ ಮೇಲೆ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಿಸುತ್ತ ಗಾಯದ ಮೇಲೆ ಬರೆ ಎಳೆಯುತ್ತಿದೆ. ಜನವಿರೋಧಿ ನೀತಿಗಳ ವಿರುದ್ಧ ಜನತೆ ಪ್ರಬಲ ಹೋರಾಟ ಬೆಳೆಸಬೇಕಿದೆ ಎಂದು ದೂರಿದರು.
ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ 1055.55 ರೂ. ದರ ಮೀರಿದ್ದು, ಮತ್ತೆ 50 ರೂ. ದರ ಏರಿಕೆ ಮಾಡಿರುವ ಕ್ರಮ ಜನವಿರೋಧಿಯಾಗಿದೆ. ಉಜ್ವಲ ಯೋಜನೆ ಹೆಸರಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಸರ್ಕಾರ ಸಾಂಪ್ರದಾಯಿಕ ಹಾಗೂ ವೆಚ್ಚ ರಹಿತ ಉರುವಲು ಬಳಕೆ ನಾಶಮಾಡಿ, ಬಡವರೂ ಅಡಿಗೆಗೆ ಎಲ್ಪಿಜಿ ಸಿಲಿಂಡರ್ ಬಳಸುವಂತೆ ಮಾಡಿ, ಅನಿವಾರ್ಯತೆ ಸೃಷ್ಟಿಸಲಾಗುತ್ತಿದೆ ಎಂದು ಹರಿಹಾಯ್ದರು.
ಕೋವಿಡ್ ಸಂಕಷ್ಟದ ಹೊಡೆತದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ದೇಶದ ಜನರಿಗೆ ಸರ್ಕಾರ ಬೆಲೆ ಏರಿಕೆಯ ಭಾರ ಹೇರುತ್ತಿದೆ. ಬಂಡವಾಳಿಗರ ಸೇವೆ ಮಾಡುವ ನಮ್ಮ ಆಳ್ವಿಕರು, ಅವರ ಲಾಭ ಹೆಚ್ಚಿಸಲು ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಕಳೆದ 8 ವರ್ಷಗಳಲ್ಲಿ ಕಾರ್ಪೋರೇಟ್ ಕುಟುಂಬಗಳ 10.7 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಶೇ.33 ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ. 22ಕ್ಕೆ ಇಳಿಸಿದೆ.ಆರ್ಥಿಕ ಹಿಂಜರಿತ, ಕೊರೊನಾದಿಂದಾಗಿ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ಮೂಲಭೂತ ಅವಶ್ಯಕತೆಯಾದ ಎಲ್ಪಿಜಿ ದರವನ್ನು ಏರಿಸಿ ಜನಸಾಮಾನ್ಯರು ಅರೆಹೊಟ್ಟೆಯಲ್ಲಿ ಬದುಕುವಂತೆ ಮಾಡ ಹೊರಟಿರುವ ಸರ್ಕಾರದ ಈ ನಿರ್ಧಾರ ನಾಚಿಕೆಗೇಡಿನ ಕ್ರಮ. ಜನ ವಿರೋಧಿ ಆಡಳಿತದ ವಿರುದ್ಧ ಜನರು ಬೀದಿಗೆ ಇಳಿದು ಹೋರಾಟ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸಫಿರ್ ಆಸೀಫ್, ಪ್ರಧಾನ ಕಾರ್ಯದರ್ಶಿ ಫಝಲ್ ಅಹ್ಮದ್, ಕಾರ್ಯದರ್ಶಿ ಮೊಹಮ್ಮದ್ ಇಲ್ಯಾಸ್, ಅಕ್ಬರ್ ಪಾಶ ಮತ್ತು ಪಕ್ಷದ ಇತರೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.