(www.vknews.in): ನನ್ನ ಮಕ್ಕಳು ನಮ್ಮನ್ನು ಗೌರವಿಸುವುದಿಲ್ಲ. ಅವರ ದೃಷ್ಟಿಯಲ್ಲಿ ನಾವು ಲೆಕ್ಕಕ್ಕೇ ಇಲ್ಲ. ನಮ್ಮ ಭಾವನೆಗಳಿಗೆ ಬೆಲೆಯೇ ಕೊಡಲ್ಲ. ನಾವು ಬೇಡವಾದ ಔಟ್ ಡೇಟೆಡ್ ವಸ್ತುಗಳಾಗಿ ಹೋಗಿದ್ದೇವೆ – ಈ ರೀತಿಯ ಅನೇಕ ಮಾತುಗಳು ಹಿರಿಯರು ಹಿರಿಯರ ಗುಂಪುಗಳಲ್ಲಿ, ತನ್ನ ಸ್ನೇಹಿತರೊಂದಿಗೆ, ಆಪ್ತರೊಂದಿಗೆ, ಅಪರಿಚಿತರೊಂದಿಗೆ ಮಾತನಾಡುವುದನ್ನು ನಿಮ್ಮ ಗಮನಕ್ಕೆ ಬಂದಿರಬಹುದು. ಮನೆಯ ಹಿರಿಯರ ಅಸಹಾಯಕತೆಯ, ನೊಂದ ಮನುಸ್ಸುಗಳ ಮಾತುಗಳು ಸತ್ಯವೂ ಆಗಿರಬಹುದು.
ಮಕ್ಕಳು ಕಾಲ ಕಳೆದಂತೆ ಪೋಷಕರಿಂದ ಏಕೆ ದೂರವಾಗುತ್ತಾ ಹೋಗುತ್ತಾರೆ? ಮುಖ್ಯವಾಗಿ ವಯಸ್ಸಿನ ಅಂತರ, ಭಾವನೆಗಳ ಅಂತರ, ಅನುಭವಗಳ ಅಂತರ, ವಿದ್ಯಾಭ್ಯಾಸದ ಅಂತರ, ಸಂಸ್ಕೃತಿಯ ಅಂತರ ಇತ್ಯಾದಿ. ಕೇವಲ ೨೦ ವರ್ಷಗಳ ಹಿಂದಿದ್ದ ಬದುಕು ಈಗಿಲ್ಲ. ಜೀವನಶೈಲಿಯ ಪ್ರತಿಯೊಂದು ಹೆಜ್ಜೆಯಲ್ಲೂ ಬದಲಾವಣೆಗಳು ಬಂದಿವೆ. ಆ ಬದಲಾವಣೆಗಳ ಪ್ರಭಾವ ಯುವಪೀಳಿಗೆಯ ಮೇಲೆ ಆಗದೆ ಇರಲು ಸಾಧ್ಯವೆ? ಎಲ್ಲರೂ ತಮ್ಮ ಜೀವನದ ಜಂಜಾಟದಲ್ಲಿ ತೇಲಾಡುತ್ತಿದ್ದಾರೆ. ತಾವೇ ಸೃಷ್ಟಿಸಿಕೊಂಡಿರುವ ಜೀವನದ ಕೋಟೆಯಲ್ಲಿ ಸಿಲುಕಿ, ಅದಕ್ಕೆ ಜವಾಬ್ದಾರಿ ಎಂಬ ಹೆಸರು ಕೊಟ್ಟು, ಸಂಬಂಧಗಳನ್ನು, ಮೌಲ್ಯಗಳನ್ನು ಗಾಳಿಗೆ ತೂರಿ, ತನ್ನ ಜೀವನದ ಗುರಿ ಸಾಧಿಸಲು ಶ್ರಮ ಪಡುತ್ತಿದ್ದಾರೆ. ಹಿರಿಯರ ಗೋಳು ಒಂದು ರೀತಿಯಾದರೆ, ಕಿರಿಯರ ಟೀಕೆಗಳು ಮತ್ತೊಂದು ರೀತಿ – ಸಂಬಂಧಗಳನ್ನು ನಿಭಾಯಿಸಿಕೊಂಡು ಕುಳಿತರೆ, ಹಣ ಬರಲ್ಲ. ಹಣ ಇಲ್ಲದೆ ಹೆಣವೂ ಏಳಲ್ಲ. ಸುಸಂಸ್ಕೃತಿಯಿಂದ ಹೊಟ್ಟೆ ತುಂಬಲ್ಲ ಎನ್ನುತ್ತಾರೆ. ಪ್ರತಿಯೊಬ್ಬರ ಆಚಾರವಿಚಾರಗಳು ಬೇರೆ, ಜೀವನವನ್ನು ನೋಡುವ ದೃಷ್ಟಿಕೋನಗಳು ಬೇರೆ.
ನೆಂಟರಸ್ಥರಿಂದ ದೂರ, ಸ್ನೇಹಿತರಿಂದ ದೂರ, ಊರುಗಳಿಂದ ದೂರ, ಅವಿಭಕ್ತ ಕುಟುಂಬಗಳಿಂದ ದೂರವಾಗಿ, ವಿಭಕ್ತ ಕುಟುಂಬಗಳಲ್ಲಿ ಬದುಕಲು ಇಷ್ಟಪಡುತ್ತಾರೆ. ಆದರೆ ನನಗೆ ಬೇರೆಯವರ ಪ್ರೀತಿ ಸಿಗುತ್ತಿಲ್ಲ, ನನ್ನ ಕಷ್ಟಕಾಲದಲ್ಲಿ ಯಾರು ಕೇಳಲಿಲ್ಲ, ನನ್ನನ್ನು ಕಂಡರೆ ಅಸೂಯೆ ಪಡುತ್ತಾರೆ – ಈ ರೀತಿಯ ಅನೇಕ ಟೀಕೆಗಳನ್ನು ಮಾಡುತ್ತಾರೆ. ನಾವು ಬೇರೆಯವರಿಗೆ ಮನಸಾರೆ ಗೌರವ ಕೊಟ್ಟರೆ ತಾನೆ ನಮಗೆ ಗೌರವ ಸಿಗುವುದು. ಆದರೆ ನಮಗೆ ನಮ್ಮ ಬೆನ್ನು ಕಾಣುವುದೇ ಇಲ್ಲ. ಬೆಳಗಿನಿಂದ ಸಾಯಂಕಾಲದವರೆಗೆ ಎಷ್ಟು ಸ್ನೇಹಿತರ, ಸಂಬಂಧಿಕರ ಕಷ್ಟಸುಖಗಳಲ್ಲಿ ಭಾಗಿಯಾಗಿದ್ದೀರಿ ? ಕೊನೆಪಕ್ಷ ನೋವುನಲಿವುಗಳನ್ನು ಫೋನಿನಲ್ಲಿ ಎಷ್ಟು ಸಲ ವಿಚಾರಿಸಿಕೊಂಡಿದ್ದೀರಿ. ಮಾತನಾಡಿದರೆ ಎಲ್ಲಿ ಸಹಾಯ ಕೇಳಿಬಿಡುತ್ತಾರೋ, ಹಣ ಕೇಳಿಬಿಟ್ಟರೆ ಏನು ಮಾಡುವುದು – ಈ ರೀತಿಯ ಏನೇನೋ ಕಲ್ಪನೆಗಳನ್ನು ಮಾಡಿಕೊಂಡು ಎಲ್ಲರಿಂದ ದೂರ ಸರಿಯುತ್ತಾ ಹೋದರೆ, ಬೇರೆಯವರು ಸಹ ನಿಮ್ಮನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ. ಸಂಬಂಧಗಳಲ್ಲಿ ಬಿರುಕು ಹೆಚ್ಚಾಗುತ್ತಾ ಹೋಗುತ್ತದೆ. ಯುವ ಪೀಳಿಗೆಗೆ ದೂಷಿಸಿದರೆ ಏನು ಬರುತ್ತದೆ. ನಾವು ನಡೆದ ದಾರಿಯೇ ಅವರು ಸಹ ತುಳಿಯುವುದು. ಪೋಷಕರೇ ಮಕ್ಕಳ ಮೊದಲ ಗುರು.
ಮಕ್ಕಳು ತಂದೆತಾಯಿಯರನ್ನು ಗೌರವಿಸಬೇಕಾದರೆ ತಂದೆ ಅಥವಾ ತಾಯಿಯಾದವರು ಮಕ್ಕಳ ಮುಂದೆ ಸಭ್ಯತೆಯಿಂದ ನಡೆದುಕೊಳ್ಳಬೇಕು. ಮಕ್ಕಳ ಮುಂದೆ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಗೌರವ ಕೊಡಬೇಕು. ಮಕ್ಕಳ ಸುಪ್ತ ಮನುಸ್ಸುಗಳ ಮೇಲೆ ಮನೆಯ ವಾತಾವರಣ ಬಹಳ ಆಳವಾದ ಪ್ರಭಾವ ಬೀರುತ್ತದೆ. ಅವರ ಮುಂದಿನ ಜೀವನಕ್ಕೆ ಬುನಾದಿಯಾಗುವುದುಂಟು.
ಸಮಾಜದಲ್ಲಿ ನಾವು ಬೇರೆಯವರ ಬಗ್ಗೆ ಏನು ಊಹಿಸಿಕೊಳ್ಳುತ್ತೇವೋ, ಅದೇ ರೀತಿ ಬೇರೆಯವರು ಸಹ ನಮ್ಮ ಬೆಗ್ಗೆ ಕಲ್ಪನೆಗಳನ್ನು ಕಟ್ಟಿಕೊಳ್ಳುತ್ತಾರೆ. ನಾವು ಸಮಾಜಕ್ಕೆ ಏನು ಕೊಡುತ್ತೀವೋ ಅದೇ ನಮಗೂ ಸಿಗುವುದು. ನಾವು ಪಾರದರ್ಶಕರಲ್ಲ. ಒಳಗೊಂದು ಮನಸ್ಸು, ಹೊರಗೆ ತೋರಿಸುವ ಮುಖವಾಡವೇ ಬೇರೆ. ನಾವೇ ಸರಿಯಿಲ್ಲ ಎಂದ ಮೇಲೆ ಯಾವ ಆಶ್ರಮಕ್ಕೆ ಹೋದರೂ, ಯಾವ ಯೋಗ ಮಾಡಿದರೂ ಶಾಂತಿ ಸಿಗುವುದಿಲ್ಲ.
ನಾವು ಮಾಡಬೇಕಾಗಿರುವ ಮೊದಲ ಕೆಲಸ – ಆತ್ಮವಿಮರ್ಶೆ. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಮನಸ್ಸು. ಮುಕ್ತವಾಗಿ ಚರ್ಚಿಸಿ ಕ್ಷಮಿಸುವ ಗುಣ. ಮನಸಿನ ಸ್ಮಶಾನದಲ್ಲಿ ರಹಸ್ಯಗಳನ್ನು, ದ್ವೇಷಗಳನ್ನು, ಅಸೂಯೆಗಳನ್ನು, ಪಾಪಗಳನ್ನು ಹೂತು ಹಾಕಿ, ಪುನಃ ಕೆದಕದೆ, ಎಲ್ಲವನ್ನು ಮರೆತು ಹೋಗುವ ದೊಡ್ಡ ಮನಸ್ಸು. ಹೇಳುವುದು ಸುಲಭ. ಕಾರ್ಯರೂಪಕ್ಕೆ ತರುವುದು ಕಷ್ಟ. ಆದರೆ ಆರದ ಗಾಯಗಳನ್ನು ಪ್ರತಿದಿನ ಹಸಿ ಮಾಡಿಕೊಂಡು ಬದುಕುವುದು ಇನ್ನೂ ಕಷ್ಟ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.