(www.vknews.in).
ಬೆಂಗಳೂರು: ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡುತ್ತಾ ಬಂದಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಹೈಕಮಾಂಡ್ ‘ಲಕ್ಷ್ಮಣ ರೇಖೆ’ ದಾಟದಂತೆ ಎಚ್ಚರಿಕೆ ನೀಡಿರುವ ಹಿಂದೆ ಕಾಂಗ್ರೆಸ್ ಒಂದು ಬಣದ ಒತ್ತಡ ಇದೆ ಎನ್ನಲಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಬಣವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆಯೂ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಕ್ಕಲಿಗರ ಬೆಂಬಲ ಕೋರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಜಮೀರ್ ಅಹ್ಮದ್ ಖಾನ್ ಇದನ್ನು ವಿರೋಧಿಸಿದ್ದರು. ಅಷ್ಟೇ ಅಲ್ಲ, ಒಕ್ಕಲಿಗ ಒಂದೇ ಸಮುದಾಯದ ಬೆಂಬಲದಿಂದ ಸಿಎಂ ಆಗಲು ಯಾರಿಗೂ ಸಾಧ್ಯವಿಲ್ಲ ಎಂದಿದ್ದರು. ಜೊತೆಗೆ ನಾನೂ ಸಿಎಂ ಆಕಾಂಕ್ಷಿ ಆದರೆ ಜನರಿಗೆ ಒಳ್ಳೆಯದಾಗಬೇಕಾದರೆ ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂದು ಹೇಳಿದ್ದರು.
ಈ ಹೇಳಿಕೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಜಮೀರ್ಗೆ ಎಚ್ಚರಿಕೆಯ ನೋಟಿಸ್ ಕೊಟ್ಟಿದ್ದಾರೆ. ಜಮೀರ್ಗೆ ಹೈಕಮಾಂಡ್ ನೀಡಿರುವ ಎಚ್ಚರಿಕೆ ಸಿದ್ದರಾಮಯ್ಯ ಬಣವನ್ನು ಕೆರಳಿಸಿದೆ. ಈ ಬಗ್ಗೆ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲೂ ಕೇಳಿದ್ದ ಪ್ರಶ್ನೆಗೆ ಸಿದ್ದರಾಮಯ್ಯ ಗರಂ ಆಗಿದ್ದರು. ಸ್ಪಷ್ಟ ಉತ್ತರ ಕೊಡದೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದಿದ್ದರು. ಹೈಕಮಾಂಡ್ ಎಚ್ಚರಿಕೆಯ ಸೂಚನೆಯ ಹಿಂದೆ ರಾಜ್ಯದ ಕೆಲವು ಮುಖಂಡರ ಒತ್ತಡ ಕೆಲಸ ಮಾಡಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಹೀಗೆ ಶಿಸ್ತು ಉಲ್ಲಂಘನೆ ಹೆಸರಿನಲ್ಲಿ ಸಿದ್ದರಾಮಯ್ಯ ಬಣಕ್ಕೆ ನೋಟಿಸ್ ಹಾಗೂ ಎಚ್ಚರಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೆಪಿಸಿಸಿ ವಕ್ತಾರರಾಗಿದ್ದ ವಿ.ಎಸ್ ಉಗ್ರಪ್ಪ ಅವರಿಗೂ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಮಾಧ್ಯಮ ಸಂಯೋಜಕ ಸಲೀಂ ಜೊತೆಗಿನ ಮಾತುಕತೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಉಗ್ರಪ್ಪ ಅವರಿಗೆ ನೋಟಿಸ್ ನೀಡಿತ್ತು. ಈ ಮಾತುಕತೆಯಲ್ಲಿ ಡಿಕೆಶಿ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂದು ಆರೋಪ ಮಾಡಲಾಗಿತ್ತು.
ಉಗ್ರಪ್ಪ ಅವರು ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿ ಕೊಂಡವರಾಗಿದ್ದಾರೆ. ಉಗ್ರಪ್ಪ ನೋಟಿಸ್ ನೀಡಿರುವುದು ಸಿದ್ದರಾಮಯ್ಯ ಬಣವನ್ನು ಕೆರಳಿಸಿತ್ತು. ಸಿದ್ದರಾಮಯ್ಯ ಜೊತೆಗಿರುವವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಅಭಿಪ್ರಾಯಗಳು ಪಕ್ಷದಲ್ಲಿ ವ್ಯಕ್ತವಾಗಿದ್ದವು. ಇದೀಗ ಜಮೀರ್ಗೆ ಎಚ್ಚರಿಕೆ ಕೊಡಲಾಗಿದೆ. ಆದರೆ ಡಿಕೆಶಿ ಪರವಾಗಿ ಮಾತನಾಡಿದವರಿಗೆ ಏಕೆ ನೋಟಿಸ್ ನೀಡುತ್ತಿಲ್ಲ? ಅಥವಾ ಅವರ ವಿರುದ್ಧ ಏಕೆ ಕ್ರಮ ಆಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಸಿದ್ದರಾಮಯ್ಯ ಬಣ ಕೆಲವರು ಆಂತರಿಕವಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಣದ ಮುಂದಿನ ನಡೆ ಏನು? ಜಮೀರ್ಗೆ ಹೈಕಮಾಂಡ್ ಎಚ್ಚರಿಕೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಮಟ್ಟದಲ್ಲಿ ಹಿನ್ನಡೆ ಎಂದೇ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ನೋಟಿಸ್ಗೆ ಸಿದ್ದರಾಮಯ್ಯ ಬಣ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುವುದು ಕುಡಾ ಅಷ್ಟೇ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಇದಕ್ಕೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ ನಿರಾಕರಣೆ ಮಾಡಿದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.