ಧಾರವಾಡ(ವಿಶ್ವಕನ್ನಡಿಗ ನ್ಯೂಸ್): ಜೀವನ ವಿಧಾನದ ದ್ವಂದ್ವ-ಗೊಂದಲಗಳಿಗೆ ಕಾರಣವಾಗುವ ಭೌತಿಕ ಸಂಪತ್ತಿನ ಸಂಪಾದನೆಗಿಂತ ಎಲ್ಲ ದ್ವಂದ್ವ-ವೈರುಧ್ಯಗಳಿಂದ ಮುಕ್ತವಾದ ಜೀವನ್ಮುಕ್ತಿ ಹೊಂದುವುದೇ ಮಾನವನ ಬದುಕಿನ ಗುರಿಯಾಗಲಿ ಎಂದು ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಶನಿವಾರ ಪ್ರಸಕ್ತ ವರುಷದ ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಶಿವಶರಣಿ ಹೇಮರಡ್ಡಿ ಮಲ್ಲಮ್ಮನ ಪುರಾಣ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಗಿ ಮಾತನಾಡುತ್ತಿದ್ದರು. ನೋವು-ನಲಿವು, ಅದು-ಇದು, ಸುಖ-ದುಃಖ, ಅವರು-ಇವರು, ಬೇಕು-ಬೇಡ ಎಂಬೆಲ್ಲ ನೂರಾರು ದ್ವಂದ್ವಗಳನ್ನಳಿದು ಭಗವತ್ ಸಾನ್ನಿಧ್ಯದ ಮಹಾಬೆಳಗಿನಲ್ಲಿ ಶಾಶ್ವತವಾದ ಸುಖದ ಸೋಪಾನದ ಸಂಪಾದನೆಯೇ ಜೀವನ್ಮುಕ್ತಿಯಾಗಿದೆ ಎಂದೂ ಸ್ವಾಮೀಜಿ ನುಡಿದರು.
ಉಪದೇಶಾಮೃತ ನೀಡಿದ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಧರ್ಮದ ಮೂಲವಾಹಿನಿಯ ಸೈದ್ಧಾಂತಿಕ ವಿಚಾರಗಳನ್ನು ಎಲ್ಲರೂ ಅರಿಯಬೇಕಾಗಿದೆ. ಧರ್ಮದ ಚಿಂತನೆ ಮತ್ತು ಆಚರಣೆಗಳು ಮನುಷ್ಯನಲ್ಲಿ ಸಾತ್ವಿಕ ಚೈತನ್ಯವನ್ನು ತುಂಬುತ್ತವೆ. ತನ್ಮೂಲಕ ಆಧ್ಯಾತ್ಮಿಕ ಆಶಯ ಅಧಿಕವಾಗಿ ಬದುಕಿನ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಇದಕ್ಕೆಲ್ಲ ಶ್ರಾವಣ ಮಾಸಾಚರಣೆ ಒಂದು ಶ್ರೇಷ್ಠ ಸಾಧನೆಯ ವೇದಿಕೆಯಾಗಿದೆ ಎಂದರು.
‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಜಂಟಿ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಬಸವಪೂರ್ವ ಯುಗದಿಂದಲೂ ಧರ್ಮ ಜಾಗೃತಿಯ ಕೈಂಕರ್ಯವನ್ನು ಮಾಡಿರುವ ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿ ಪ್ರತೀ ವರ್ಷವೂ ಶ್ರಾವಣ ಮಾಸಾಚರಣೆಗೆ ವಿಶೇಷತೆ ಮೈಗೂಡಿರುತ್ತದೆ ಎಂದರು.
ಮಂಡಳ ಪಂಚಾಯತಿ ಮಾಜಿ ಸದಸ್ಯ ವಿರೂಪಾಕ್ಷಪ್ಪ ಜಕ್ಕಣ್ಣವರ, ಕಿತ್ತೂರ ರಾಣಿ ಚೆನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಂಕಿನ ಇನಾಂಹೊಂಗಲ ಶಾಖೆಯ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ, ಭಕ್ತ ಬಳಗದ ಬಿ.ಸಿ. ಕೊಳ್ಳಿ, ವ್ಹಿ.ಬಿ. ಕೆಂಚನಗೌಡರ, ಶಿವಪ್ಪ ಹೂಲಿ, ಈರಣ್ಣ ಕುಸೂಗಲ್ಲ, ಬಸಪ್ಪ ಯಡಳ್ಳಿ, ಗೂಳೇಶಪ್ಪ ಪೂಜಾರ, ವಿಜಯಕುಮಾರ ಇಟಿಗಿ, ಪ್ರಭು ಯಡಳ್ಳಿ, ಶಿವಾನಂದ ತಡಕೋಡ, ನಾಗಮ್ಮ ಕುಶಲಾಪೂರ, ಚೆನ್ನಮ್ಮ ಮಡಿವಾಳರ, ನೀಲಮ್ಮ ಕಟಿಗಿ, ನಾಗಮ್ಮ ಇಟಿಗಿ ಇತರರು ಇದ್ದರು.
ಸೋಮಲಿಂಗಶಾಸ್ತ್ರಿ ಗುಡ್ಡದಮಠ ಸ್ವಾಗತಿಸಿದರು. ವಿನಾಯಕ ಹಿರೆಮಠ ವಂದಿಸಿದರು. ಸುಜಾತಾ ವಿಶ್ವನಾಥ ಆರಾಧ್ಯಮಠ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.