ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಕೇರಳದ ಮಂಜೇಶ್ವರದ ಕುಂಜತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಒಂದು ಸಮಾಜ ಸೇವಾ ಸಂಸ್ಥೆ ಮೈ ಕಮ್ಯುನಿಟಿ ಫೌಂಡೇಶನ್. ಈ ಸಂಸ್ಥೆಯ ವತಿಯಿಂದ ಹತ್ತು ಅರ್ಹ ಕುಟುಂಬಗಳಿಗೆ ನಲವತ್ತು ಸೆಂಟ್ಸ್ ಜಾಗದಲ್ಲಿ ಸುಮಾರು ಎಂಬತ್ತೈದು ಲಕ್ಷ ರೂಗಳ ವೆಚ್ಚದಲ್ಲಿ ಹತ್ತು ಮನೆಗಳನ್ನು ನಿರ್ಮಿಸಿದ್ದು, ಅದರ ಉದ್ಘಾಟನಾ ಸಮಾರಂಭ ನಿನ್ನೆ ನಡೆಯಿತು. ಅಂದರೆ ಪ್ರತಿಯೊಬ್ಬ ಫಲಾನುಭವಿಗೆ 4ಸೆಂಟ್ಸ್ ಜಾಗದಲ್ಲಿ ಸುಮಾರು ಎಂಟೂವರೆ ಲಕ್ಷದ ಮನೆ. ಆಧುನಿಕ ಎಲ್ಲಾ ಸವಲತ್ತುಗಳನ್ನು ಹೊಂದಿ ಸುಂದರವಾಗಿ ತಲೆಯೆತ್ತಿ ನಿಂತಿರುವ ಆ ಹತ್ತು ಮನೆಗಳ ಉದ್ಘಾಟನೆ ಮಾತ್ರ ನಿನ್ನೆ ನಡೆಯಿತು. ಫಲಾನುಭವಿಗಳಿಗೆ ಕೀ ಹಸ್ತಾಂತರ ಮಾಡುವ ಯಾವುದೇ ಕಾರ್ಯಕ್ರಮ ನಡೆಯಲಿಲ್ಲ. ಕಾರ್ಯಕ್ರಮದ ನಿರೂಪಕನಾಗಿದ್ದ ನಾನು ಸಂಘಟಕರಲ್ಲಿ ಕೇಳಿದ್ದೆ. ಅದ್ಯಾಕೆ ನೀವು ಫಲಾನುಭವಿಗಳಿಗೆ ಕೀ ಹಸ್ತಾಂತರಿಸುವುದಿಲ್ಲ? . ಆಗ ಅವರು ನನಗೆ ಕೊಟ್ಟ ಉತ್ತರ ಕೇಳಿ ಅವರ ಬಗ್ಗೆ ಇದ್ದ ಗೌರವ ಮತ್ತು ಅಭಿಮಾನ ಇಮ್ಮಡಿಯಾಯಿತು. *”ಇವತ್ತು ಕೇವಲ ಮನೆಗಳ ಉದ್ಘಾಟನೆ ಮಾತ್ರ. ಫಲಾನುಭವಿಗಳಿಗೆ ಕೀಯನ್ನು ನಾವು ಗೌಪ್ಯವಾಗಿ ನೀಡುತ್ತೇವೆ. ತುಂಬಿದ ಸಭೆಯಲ್ಲಿ ಎಲ್ಲರ ಮುಂದೆ ವೇದಿಕೆಗೆ ಕರೆದು ಅವರ ಸ್ವಾಭಿಮಾನಕ್ಕೆ ಮತ್ತು ಗೌರವಕ್ಕೆ ನಾವು ಧಕ್ಕೆ ತರಲು ಬಯಸುವುದಿಲ್ಲ. ನಮ್ಮ ಯೋಜನೆ ಹೈಲೈಟ್ ಆದರೆ ಸಾಕು. ಫಲಾನುಭವಿಗಳು ಯಾರು ಎಂದು ಜಗಜ್ಜಾಹೀರು ಮಾಡುವುದು ನಮಗೆ ಇಷ್ಟವಿಲ್ಲ.”
ಅವರ ಈ ಮಾದರಿ ಕಾರ್ಯಕ್ರಮ ಸೇರಿದ ಎಲ್ಲರಿಗೂ ಬಹಳಷ್ಟು ಸ್ಫೂರ್ತಿಯನ್ನು ಕೊಟ್ಟಿತು. ಹೌದು! ಇದೇ ಉತ್ತಮ ಮತ್ತು ಸರಿಯಾದ ಕ್ರಮ ಎಂಬ ಭಾವನೆಯನ್ನು ಸೃಷ್ಟಿಸಿತು.
ಆಸ್ಪತ್ರೆಯಲ್ಲಿ ರೋಗಿಗಳಿಗೆ 4ಹಣ್ಣುಗಳನ್ನು ಕೊಡುವ ಸಂದರ್ಭದಲ್ಲಿ ಆ ರೋಗಿಗಳ ಮುಖವನ್ನು ತೋರಿಸಿ ಜಗಜ್ಜಾಹೀರು ಮಾಡುವ ಇವತ್ತಿನ ಕಾಲದಲ್ಲಿ ಇಷ್ಟೊಂದು ಲಕ್ಷದ ಕೊಡುಗೆಗಳನ್ನು ಕೊಡುವ ಸಂದರ್ಭದಲ್ಲಿ ಫಲಾನುಭವಿಗಳ ಸ್ವಾಭಿಮಾನ ಮತ್ತು ಘನತೆಯನ್ನು ಎತ್ತಿಹಿಡಿದ ಮೈ ಕಮ್ಯುನಿಟಿ ಫೌಂಡೇಶನ್ ಗೆ ನನ್ನದೊಂದು ಸಲಾಂ.
ಇದು ನಮಗೆಲ್ಲರಿಗೂ ಮಾದರಿಯಾಗಲಿ. ಪ್ರತಿಯೊಂದು ಸಂಘ ಸಂಸ್ಥೆ ತಾವು ಹಾಕಿಕೊಂಡ ಯೋಜನೆಯನ್ನು ಅಗತ್ಯವಿದ್ದರೆ ಹೈಲೈಟ್ ಮಾಡಿ ಪ್ರಚಾರ ಕೊಡಿರಿ. ಫಲಾನುಭವಿಗಳ ಫೋಟೋ ತೆಗೆದು, ವೀಡಿಯೋ ಮಾಡಿ ವೈರಲ್ ಮಾಡಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಯಾಗದಂತೆ ನೋಡಿಕೊಂಡರೆ ಅದು ಅತ್ಯುತ್ತಮ ರೂಪದ ದಾನವಾಗಲಿದೆ.
ಕುಂಜತ್ತೂರು ಆಸುಪಾಸಿನ ಸಮಾನ ಮನಸ್ಕ ಹತ್ತು ಮಂದಿ ಉದ್ಯಮಿ ಮಿತ್ರರು ಸೇವಾ ಮನೋಭಾವದಿಂದ 2018 ರಲ್ಲಿ ಸ್ಥಾಪಿಸಿದ ಸಂಸ್ಥೆ ಮೈ ಕಮ್ಯುನಿಟಿ ಫೌಂಡೇಶನ್. ಕೊರೋನಾ ಸಂಕಷ್ಟದ ಸಮಯದಲ್ಲಿ ಸಾವಿರ ಕ್ಕಿಂತಲೂ ಮಿಕ್ಕಿದ ರೇಷನ್ ಕಿಟ್ ಗಳನ್ನು ಜಾತಿ ಮತ ಭೇದವಿಲ್ಲದೆ ವಿತರಿಸಿ ಹಸಿವನ್ನು ತಣಿಸಿದ ಸಂಸ್ಥೆ ಮೈ ಕಮ್ಯುನಿಟಿ ಫೌಂಡೇಶನ್. ಪ್ರತಿ ತಿಂಗಳು ಮೂವತ್ತು ಕುಟುಂಬಗಳಿಗೆ ರೇಷನ್ ವಿತರಣೆ, ಕ್ಯಾನ್ಸರ್ ಕಿಡ್ನಿ ಮುಂತಾದ ಮಾರಕ ರೋಗಗಳಿಂದ ಬಳಲುತ್ತಿರುವ ಇಪ್ಪತ್ತೈದು ಮಂದಿ ರೋಗಿಗಳ ಚಿಕಿತ್ಸೆಗೆ ಪ್ರತಿ ತಿಂಗಳು ಸಹಾಯ ಧನ ವಿತರಿಸಲಾಗುತ್ತಿದೆ. ಸಂಸ್ಥೆಯ ಹುಟ್ಟಿನಿಂದಲೇ ಪ್ರಾರಂಭಗೊಂಡ ಈ ಯೋಜನೆ ಇವತ್ತಿಗೂ ಮುಂದುವರಿಯುತ್ತಿದೆ.
ಆರ್ಥಿಕವಾಗಿ ಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ವಿತರಣೆ, ಕೊರೋನಾ ಸಂಕಷ್ಟದ ಸಮಯದಲ್ಲಿ ಊರಿಗೆ ಬರಲಾಗದೆ ತೊಂದರೆಯಲ್ಲಿದ್ದ ಪ್ರಯಾಣಿಕರನ್ನು ದುಬಾಯ್ ನಿಂದ ಮಂಗಳೂರಿಗೆ ಚಾರ್ಟರ್ಡ್ ಫ್ಲೈಟ್ ಮೂಲಕ ಕರೆದುಕೊಂಡು ಬರುವ ವ್ಯವಸ್ಥೆಯನ್ನು ಮಂಗಳೂರಿನ ಎಂ ಫ್ರೆಂಡ್ಸ್ ಮೂಲಕ ಮಾಡಲಾಗಿದೆ. ಹಿದಾಯ ಫೌಂಡೇಶನ್ ನ ವೆಲ್ ನೆಸ್ ಯೋಜನೆಯ ಸಹಕಾರದಲ್ಲಿ ಆಕ್ಸಿಜನ್ ಕಿಟ್ ಸಿಲಿಂಡರ್ ಗಳನ್ನು ರೋಗಿಗಳಿಗೆ ವಿತರಿಸಲಾಗಿದೆ.
ಶೋಚನೀಯ ಸ್ಥಿತಿಯಲ್ಲಿರುವ ಕೆಲವಷ್ಟು ಮನೆಗಳನ್ನು ದುರಸ್ತಿ ಮಾಡಲಾಗಿದೆ ಹಾಗೂ ಇದೀಗ ಬೈತುಲ್ ಹಮ್ದ್ ಯೋಜನೆಯನ್ನು ಕೈಗೆತ್ತಿಕೊಂಡು ಹತ್ತು ಮಂದಿ ಅರ್ಹ ಕುಟುಂಬಗಳಿಗೆ ನೂತನ ಮನೆಯನ್ನು ನಿರ್ಮಿಸಲಾಗಿದೆ.
ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯೊಂದರ ಸ್ಥಾಪನೆ ಸಹಿತ ಇನ್ನಷ್ಟು ಹೊಸ ಹೊಸ ಯೋಜನೆಗಳೊಂದಿಗೆ ಹೆಚ್ಚು ಹೆಚ್ಚು ಸಮಾಜ ಸೇವಾ ಚಟುವಟಿಕೆಗಳನ್ನು ಮಾಡಬೇಕೆಂಬ ತುಡಿತ ಸಂಸ್ಥೆಯ ಅಧ್ಯಕ್ಷರ ಸಹಿತ ಎಲ್ಲಾ ಟ್ರಸ್ಟಿಗಳಿಗೆ ಇದೆ.
ಸರ್ವಶಕ್ತನಾದ ಅಲ್ಲಾಹನು ಮೈ ಕಮ್ಯುನಿಟಿ ಫೌಂಡೇಶನ್ ಗೆ ಇನ್ನಷ್ಟು ಉತ್ತಮ ಕಾರ್ಯಕ್ರಮ ಮಾಡುವ ಸೌಭಾಗ್ಯವನ್ನು ಕರುಣಿಸಲಿ. ಅದರ ಎಲ್ಲಾ ಟ್ರಸ್ಟಿಗಳಿಗೆ ಇನ್ನಷ್ಟು ಶಕ್ತಿಯನ್ನು, ಸಂಪತ್ತನ್ನು, ಆಯುಷ್ಯವನ್ನು, ಆರೋಗ್ಯವನ್ನು ಮತ್ತು ವಿಶಾಲ ಮನಸ್ಸನ್ನು ನೀಡಿ ಅನುಗ್ರಹಿಸಲಿ. ಆಮೀನ್.
✒️ರಫೀಕ್ ಮಾಸ್ಟರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.